ಯಾಕೋ ಸಂಸ್ಕೃತಿಗೂ ರಾಜಕೀಯ ಮೇಲಾಟದ ವ್ಯಕ್ತಿಗಳಿಗೂ ಸದಾ ತಳುಕು ಬೀಳುವುದೇ ಇಲ್ಲ. ಈ ಮಾತಿಗೆ ತಕ್ಕ ದೃಷ್ಟಾಂತವಾಗಿದೆ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕೆ.ಎ. ದಯಾನಂದ್ ಅವರ ಎತ್ತಂಗಡಿ.
ಸದಾ ಹಸನ್ಮುಖಿ, ಜನಪರ ಕಾಳಜಿ ಮತ್ತು ಕರ್ತವ್ಯ ನಿಷ್ಠೆಯ ಅಪರೂಪದ ಅಧಿಕಾರಿ ಕೆ.ಎ. ದಯಾನಂದ್.
ಒಬ್ಬ ಜಿಲ್ಲಾಧಿಕಾರಿ ಆಡಳಿತದಲ್ಲಿ ದಕ್ಷತೆ ತೋರಿ ಜನಮನ ಗೆಲ್ಲುವುದನ್ನು ಆಗೊಮ್ಮೆ ಈಗೊಮ್ಮೆ ನೋಡಿದ್ದೇವೆ. ಆದರೆ ದಯಾನಂದ್ ನಮಗೆ ಆಪ್ತರಾಗುವುದು ಆಡಳಿತ ಒಂದೇ ಅಲ್ಲ ನಮ್ಮ ಸಂಸ್ಕೃತಿಯ ಬಗ್ಗೆ ಅವರು ತಾಳಿರುವ ಅಪಾರ ಪ್ರೀತಿ ಹಾಗೂ ಅಭಿಮಾನದ ಬಗ್ಗೆ.
ಆಡಳಿತದಲ್ಲಿ ಜಿಲ್ಲಾಧಿಕಾರಿಗಳು ಜಬರ್ದಸ್ತ್ ಆಗಿ ಕೆಲಸ ಮಾಡುತ್ತಾರೆ. ಹೆಸರು ಮಾಡುತ್ತಾರೆ. ನಂತರ ಈ ಪ್ರಕ್ರಿಯೆಯಲ್ಲಿ ಜನಾನುರಾಗಿಗಳಾಗುತ್ತಾರೆ. ಈ ಜನಪ್ರಿಯತೆಯನ್ನು ರಾಜಕೀಯ ನೇತಾಗಳು ಸಹಿಸದೇ ತಕ್ಷಣ ವರ್ಗ ಮಾಡಿಸುತ್ತಾರೆ.
ಇನ್ನೂ ಬಂದು ಒಂದು ವರ್ಷವಾಯಿತಷ್ಟೆ. ಅಲ್ಪ ಅವಧಿಯಲ್ಲೇ ಮಾನ್ಯ ದಯಾನಂದ್ ಅವರು ಸಾಮಾನ್ಯರ ಕಣ್ಮಣಿಗಳಾಗಿ ಕೆಲಸ ಮಾಡಿದ್ದಾರೆ. ಅವರ ಕಾರ್ಯಾಲಯದ ಬಾಗಿಲನ್ನು ಹಳ್ಳಿ ಬೋರೇಗೌಡ ನಿಂತು ಕಾಯುವ ಹಾಗಿಲ್ಲ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಬಾಗಿಲು ಸದಾ ತೆರೆದಿಡಲಾಗಿತ್ತು. ಇನ್ನು ಮುಂದೆ ಹೇಗೋ ಗೊತ್ತಿಲ್ಲ.
ಅವರದು ಸದಾ ತೆರೆದ ಮನಸ್ಸು. ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ವ್ಯಾಸಂಗ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಸಾಧಕರು. ಭೇಟಿಯಾದಾಗ ಅವರು ತಮ್ಮ ಕೈ ತೋರಿಸಿ ಇದು ಮಣ್ಣಿನೊಂದಿಗೆ ಕೆಲಸ ಮಾಡಿದ ಕಾರ್ಮಿಕರ ಕೈ. ಈಗಲೂ ನಾನು ದಿನಾ ಬೆಳಿಗ್ಗೆ ಪಿಕಾಸಿ ಹಿಡಿದು ತಮ್ಮ ಕೈತೋಟದಲ್ಲಿ ತರಕಾರಿ, ಹೂವು ಗಿಡಗಳ ಒಡನಾಟದಲ್ಲಿರುವುದು ನನ್ನ ದಿನಚರಿ ಎಂದಿದ್ದರು.
ಜಿಲ್ಲಾಧಿಕಾರಿಗಳಿಗೆ ಅತ್ಯಂತ ಸಂಕಷ್ಟ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ಚುನಾವಣೆ ನಿರ್ವಹಣೆ ಪ್ರಮುಖವಾದದ್ದು.
ಈ ವರ್ಷದ ಲೋಕಸಭಾ ಚುನಾವಣೆಯನ್ನು ಅತ್ಯಂತ ದಕ್ಷವಾಗಿ ನಿರ್ವಹಿಸಿದ ಕೀರ್ತಿಗೆ ಇವರು ಭಾಜನರಾಗಿದ್ದಾರೆ.
ಈ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯನ್ನು ಹೆಚ್ಚಿಸುವಲ್ಲಿ ಮತದಾರರ ಜಾಗೃತಿ ಬಹಳ ಮುಖ್ಯ. ಶೇಕಡಾವಾರು ಮತದಾನ ಜಾಸ್ತಿಯಾಗಬೇಕು ಎಂಬುದು ಚುನಾವಣಾ ಆಯೋಗದ ಒಂದು ಪ್ರಬಲ ಆಕಾಂಕ್ಷೆಯೂ ಆಗಿದೆ. ಆದರೆ ಇದು ನಿಷ್ಪಕ್ಷವಾಗಿಯೂ ನಡೆಯಬೇಕು. ಇದೂ ಕೂಡ ಬಹಳ ಸೂಕ್ಷ್ಮವಾದ ಸಂಗತಿ.
ಇಂತಹ ಗಹನವಾದ ವಿಚಾರವನ್ನು ಅಷ್ಟೇ ಸರಳವಾಗಿ ಜನಸಮುದಾಯದಲ್ಲಿ ಮನಮುಟ್ಟುವಂತೆ ಮಾಡಬೇಕು. ಈ ದಿಸೆಯಲ್ಲಿ ಶ್ರೀದಯಾನಂದ್ ಅವರು ಸ್ಥಳೀಯ ಕಲಾವಿದರು, ಸ್ವಯಂಸೇವಾ ಸಂಘ ಸಂಸ್ಥೆಗಳು, ಜನಾಭಿಪ್ರಾಯ ಮುಖಂಡರು ಇತ್ಯಾದಿ ಎಲ್ಲರ ಸಹಕಾರ ಪಡೆದು ಮತದಾರ ಜಾಗೃತಿ ಆಂದೋಲನವನ್ನೇ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಮಾಡಿದರು.
ಅವರ ಕಿರೀಟಕ್ಕೆ ಮತ್ತೊಂದು ಗರಿ, ಸಹ್ಯಾದ್ರಿ ಉತ್ಸವ. ಬಹಳ ವರ್ಷಗಳಿಂದ ನಡೆಸಲಾಗದೇ ನೆನೆಗುದಿಗೆ ಬಿದ್ದಿದ್ದ ಸಹ್ಯಾದ್ರಿ ಉತ್ಸವವನ್ನು ಈ ಬಾರಿ ಹಮ್ಮಿಕೊಂಡಿದ್ದು ಅವರ ನಿಶ್ವಲಿತ ಸಂಕಲ್ಪಕ್ಕೆ ಒಂದು ಉದಾಹರಣೆ.
ವೈವಿಧ್ಯಮಯ ಮತ್ತು ವರ್ಣಮಯ ಹಬ್ಬವನ್ನು ಆಚರಿಸಿ ಜಿಲ್ಲೆಯಾದ್ಯಂತ ಹೊಸ ಸಂಚಲನವನ್ನೇ ತಂದರು. ಬಹಳ ಮಂದಿ ಈ ಉತ್ಸವದ ನೆಪದಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರದಿಂದ ದೊಡ್ಡ ಬಜೆಟನ್ನೇ ಮಂಜೂರು ಮಾಡಿಸಬೇಕಾಗುತ್ತದೆ. ಈಗ ಅದೆಲ್ಲಿ ಸಾಧ್ಯ? ಅದೂ ಅಲ್ಲದೇ ಮಂಗನ ಕಾಯಿಲೆಯಿಂದ ಜಿಲ್ಲೆಯ ಮಂದಿ ತುತ್ತಾಗಿದ್ದಾರೆ. ಈ ಸೂತಕದ ಸನ್ನಿವೇಶದಲ್ಲಿ ಉತ್ಸವ, ಆಚರಣೆ ಸೂಕ್ತವಲ್ಲ ಎಂಬ ಅಪಸ್ವರವೂ ಬಲವಾಗಿ ಕೇಳಿಬಂತು.
ಜಿಲ್ಲಾ ಉತ್ಸವ ಎಂದರೆ ಜಿಲ್ಲೆಯ ಹಬ್ಬ. ನಮ್ಮ ಎಷ್ಟೇ ಕಷ್ಟಗಳಿದ್ದರೂ ನಾವು ನಮ್ಮ ಮನೆಯ ಹಬ್ಬ ಆಚರಿಸದೇ ಇರುತ್ತೇವೆಯೆ? ಹೇಗೋ ನಮ್ಮ ಇತಿಮಿತಿಯಲ್ಲಿ ನಡೆಸುತ್ತೇವೆ ಎನ್ನುವುದು ಅವರ ತಾರ್ಕಿಕವಾದ.
ಈ ವಾದಕ್ಕೆ ಪುಷ್ಠಿ ಕೊಟ್ಟಂತೆ ಅವರು ಹೇಳುವ ಮಾತಿದೆ.ಈ ರೀತಿಯಾಗಿಯೇ ನಾನು ಬೇರೆಡೆ ಜಿಲ್ಲಾಧಿಕಾರಿಯಾಗಿದ್ದಾಗ ಯೋಚಿಸುತ್ತಿದ್ದೆ. ಆದರೆ ಒಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾದ ಮೇಲೆ ನನ್ನ ಲಹರಿಯೇ ಬದಲಾಯಿತು ಎನ್ನುತ್ತಾರೆ. ತಾವು ಯಾವತ್ತೂ ಇಂತಹ ಉತ್ಸವಗಳ ಪರವಾಗಿಯೇ ನಿಲ್ಲುವ ಮನಸ್ಸು ಹೊಂದಿದ್ದೇನೆ ಎಂಬ ನಿಚ್ಚಳ ನಿರ್ಧಾರ ಅವರದ್ದು.
ಅವರ ಕೌಶಲವೆಂದರೆ ಕರ್ತೃತ್ವ ಶಕ್ತಿಯಿರುವವರನ್ನು ಗುರುತಿಸಿ ಅವರಿಂದಲೇ ಕೆಲಸ ಮಾಡಿಸುವ ಕಲಾವಂತಿಕೆ.
ಸಹ್ಯಾದ್ರಿ ಉತ್ಸವದಲ್ಲಿ ದಯಾನಂದ್ ಅವರು ಒಬ್ಬರೇ ಏಕಮೇವರಂತೆ ಮೆರೆಯಲಿಲ್ಲ. ಬದಲಾಗಿ ಕ್ರಿಯಾಶೀಲರನ್ನು ಮುನ್ನೆಲೆಗೆ ತಂದರು. ಎಲ್ಲೂ ದೊಡ್ಡ ದೊಡ್ಡ ಬ್ಯಾನರ್, ಫೋಟೋಗಳಿಗೆ ಮುಖತೋರಗೊಡಲಿಲ್ಲ ಮತ್ತೂ ಒಂದು ಜಾಣತನವೆಂದರೆ ಅವರು ದೊಡ್ಡ ಬಜೆಟ್’ಗೆ ಹೋಗದೇ ಜಿಲ್ಲಾ ಮಟ್ಟದಲ್ಲಿ ಖರ್ಚಾಗದೇ ಮಿಕ್ಕಿದ್ದ ಹಣದಲ್ಲೇ ಸಂಪೂರ್ಣ ಉತ್ಸವವನ್ನು ಸಾಂಗವಾಗಿ ಸಮಾರೋಪಗೊಳಿಸಿದ ಕೀರ್ತಿ ಅವರದ್ದಾಗಿದೆ.
ಇಂತಹ ದಕ್ಷ, ಜನಪರ ಹಾಗೂ ಹೃದಯವಂತ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಅವರನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಡುವ ಸಮಯ ಬಂದಿದೆ.
ಇಂತಹ ಶ್ರೀದಯಾನಂದ್ ಈಗ ಶಿವಮೊಗ್ಗ ಬಿಟ್ಟು ಬೇರೆಡೆಗೆ ವರ್ಗವಾಗಿ ಹೋಗುತ್ತಿದ್ದಾರೆ. ನಮ್ಮ ಜಿಲ್ಲೆಗೆ ಕ್ರಿಯಾಶೀಲ ಮತ್ತು ಜನಸ್ಪಂದನವುಳ್ಳ ಅಧಿಕಾರಿಯನ್ನು ಕಳಕೊಂಡ ನಷ್ಟ. ಆದರೆ ಬೇರೆ ಇಲಾಖೆಗೆ ಅದು ಭರಪೂರ ಲಾಭ.
Kudos ದಯಾನಂದ್ Sir
ಪ್ರಮುಖರು ಹೇಳಿದ್ದು…
ಸರಳ ಸಜ್ಜನಿಕೆಯ ವ್ಯಕ್ತಿ. ಆಡಳಿತದಲ್ಲಿ ಸದಾ ನಿರತ ಮತ್ತು ಸಂಸ್ಕೃತಿವಂತ ಸಹೃದಯಿ ಜಿಲ್ಲಾಧಿಕಾರಿ.
-ಲಕ್ಷ್ಮೀನಾರಾಯಣ ಕಾಶಿ,
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರು
ಉತ್ತಮ ಆಡಳಿತಗಾರ ಹಾಗೂ ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಪರಿಹರಿಸುತ್ತಿದ್ದ. ಕರ್ತವ್ಯನಿಷ್ಠ ಜಿಲ್ಲಾಧಿಕಾರಿ ಮಾನ್ಯ ದಯಾನಂದ್.
-ಕೆ.ಜಿ. ಮಂಜುನಾಥ ಶರ್ಮ
ರಿಟೈರ್ಡ್ ತಹಶಿಲ್ದಾರ್, ಶಿವಮೊಗ್ಗ
ಲೇಖನ: ಡಾ.ಚನ್ನಗಿರಿ ಸುಧೀಂದ್ರ
Discussion about this post