ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ವೇದಗಳನ್ನು ಆಧರಿಸಿ ಬದುಕು ಕಟ್ಟಿಕೊಂಡವನು ವೈದಿಕ. ಅದಲ್ಲದಿದ್ದವನು ಅವೈದಿಕ. ಗೃಹಸ್ಥರು ಪ್ರತಿಯೊಬ್ಬರೂ ನಿತ್ಯ ವೇದಾಧ್ಯಯನ ಮಾಡಬೇಕು ಎನ್ನುವುದು ಶಂಕರರ ಅನುಜ್ಞೆ. ವೈದಿಕರು ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಪ್ರವರ್ತಕರಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ #Raghaveshwara Shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 44ನೇ ದಿನವಾದ ಸೋಮವಾರ ನಡೆದ ವೈದಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದರು. ವೇದಗಳು ತೋರುವ ದಾರಿಯಲ್ಲಿ ಮುನ್ನಡೆಬೇಕು. ಆ ಮೂಲಕ ನಾವು ಬದುಕು ಕಟ್ಟಿಕೊಳ್ಳಬೇಕು. ಅದನ್ನು ಚಾಚೂ ತಪ್ಪದೇ ಆಚರಿಸುವುದು ಈಶ್ವರನ ಸೇವೆ. ವೈದಿಕರು ಗೃಹಸ್ಥರಲ್ಲಿ ಧಾರ್ಮಿಕ ಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಬಣ್ಣಿಸಿದರು.

ವೇದವೃತ್ತಿ ಬಗ್ಗೆ ಹೆಮ್ಮೆ ಇರಲಿ. ಜೀವನಗಳನ್ನು ದೇವರ ಜತೆ ಸಂಪರ್ಕಿಸುವ ಸೇತುಗಳು ನೀವು. ಇದು ದೇಶಕ್ಕೆ ನೀಡುವ ಅತಿದೊಡ್ಡ ಕೊಡುಗೆ. ಹೆಚ್ಚಿನ ಶ್ರದ್ಧೆಯಿಂದ ಇವುಗಳನ್ನು ಮಾಡಿ. ಸಮಗ್ರ ಅಧ್ಯಯನ ಮಾಡಿ, ಕರ್ಮಜ್ಞಾನಿಗಳಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿ ಎಂದು ವೈದಿಕರಿಗೆ ಕರೆ ನೀಡಿದರು. ವೈದಿಕರು ಇದಕ್ಕೆ ಬೇಕಾದ ಜ್ಞಾನ ಹಾಗೂ ನಿಷ್ಠೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಗುರುಪೀಠಕ್ಕೂ- ವೈದಿಕರ ನಡುವೆ ದೃಢಬಾಂಧವ್ಯ ಅನಾದಿ ಕಾಲದಿಂದಲೂ ಇದೆ. ವೈದಿಕರು ಗುರುಪೀಠದ ಮೇಲೆ ಅಪಾರ ಶ್ರದ್ಧೆ, ಭಕ್ತಿ ಇರಿಸಿಕೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸಮಾಜದಲ್ಲಿ ವೇದಗಳ ಬೆಳಕು ಜನರ ಬದುಕನ್ನು ಬೆಳಗಿಸಬೇಕು ಎಂದು ಆಶಿಸಿದರು.

ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಅಮಾವಾಸ್ಯೆ ಆಧ್ಯಾತ್ಮಕ್ಕೆ ಅತ್ಯಂತ ಪ್ರಶಸ್ತ ಕಾಲ. ಅಂದು ಸೂರ್ಯಚಂದ್ರರ ಸಮಾಗಮವಾಗುತ್ತದೆ. ಅಮಾವಾಸ್ಯೆ ಎಂದ ಮಾತ್ರಕ್ಕೆ ಕೆಟ್ಟದು ಎಂಬ ಭಾವನೆ ಬೇಡ. ಪ್ರಕೃತಿ ಮತ್ತು ಪುರುಷನ ಸಮಾಗಮದ ಸಂಕೇತ ಅದು ಎಂದು ವಿವರಿಸಿದರು.
ಕೋಪ, ಗಾಬರಿ, ಶೋಕದಿಂದ ಮನೋರೋಗಗಳು ಬರಬಹುದು. ಆದಿಯಿಂದ ವ್ಯಾಧಿ. ಆದಿ ಎಂದರೆ ಮನಸ್ಸು. ಮನಸ್ಸಿನ ತುಮುಲ ಹಲವು ರೋಗಗಳಿಗೆ ಕಾರಣವಾಗುತ್ತದೆ. ರಾಜಸಭಾವಗಳು ತೀವ್ರವಾದಾಗ ರೋಗವಾಗಿ ಮುಕ್ತಾಯವಾಗುತ್ತದೆ. ಪ್ರೀತಿ, ದಯೆ, ಶಾಂತಿ, ತ್ಯಾಗಗಳು ಸಾತ್ವಿಕ ಭಾವಗಳಾಗಿದ್ದು, ಇವು ನಮಗೆ ಶಕ್ತಿ ತುಂಬುತ್ತವೆ ಎಂದು ವಿಶ್ಲೇಷಿಸಿದರು.
ಆಗಂತುಕ ರೋಗಗಳು ಶಾಪ, ಅಭಿಚಾರ, ಘಾತಾದಿಗಳಿಂದ ಬರಬಹುದು. ಷಷ್ಠಗ್ರಹದಿಂದ ಇದನ್ನು ಚಿಂತನೆ ಮಾಡಬಹುದು. ಒಬ್ಬರ ತೀವ್ರವಾದ ನೋವು ಕೂಡಾ ಶಾಪವಾಗುತ್ತದೆ. ಮುನಿಗಳೇ ಶಾಪ ಕೊಡಬೇಕೆಂದೇನಿಲ್ಲ. ಒಂದು ಪ್ರಾಣಿಗೆ ನಾವು ನೋವು ನೀಡಿದರೆ, ಅದು ಶಾಪವಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದರು. ಅಭಿಚಾರ ಅಥವಾ ಮಾಟ ಕೂಡಾ ಕೆಲವೊಮ್ಮೆ ರೋಗಕ್ಕೆ ಕಾರಣವಾಗಬಹುದು. ಆತ್ಮಹಿತಕ್ಕಾಗಿ, ಪರಹಿತಕ್ಕಾಗಿ ಮತ್ತು ಪರಪೀಡೆಗಾಗಿಯೂ ಉಪಾಸನೆಗಳನ್ನು ಮಾಡಬಹುದು. ಪರಪೀಡನೆಗೆ ಮಾಡುವ ಉಪಾಸನೆ ಒಳ್ಳೆಯದಲ್ಲ. ಇದರಲ್ಲೂ ಮಹಾಭಿಚಾರ ಮತ್ತು ಕ್ಷುದ್ರಾಭಿಚಾರ ಎಂಬ ಎರಡು ವರ್ಗಗಳಿವೆ. ದೇವತೆಗಳನ್ನು ಕೆಟ್ಟ ವಿಚಾರಕ್ಕಾಗಿ ಉಪಾಸನೆ ಮಾಡುವುದು ಮಹಾಭಿಚಾರ ಎನಿಸುತ್ತದೆ. ಕೆಡುಕು ಉಂಟುಮಾಡುವ ಕ್ಷುದ್ರದೇವತೆಯ ಉಪಾಸನೆ ಕ್ಷುದ್ರಾಭಿಚಾರ ಎನಿಸಿಕೊಳ್ಳುತ್ತದೆ ಎಂದರು.
ಕರ್ನಾಟಕ ರಾಜ್ಯ ಸಂಸ್ಕøತ ವಿವಿಯಿಂದ ಗೌರವ ಡಾಕ್ಟರೇಟ್ಗೆ ಭಾಜನರಾದ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳನ್ನು ಹವ್ಯಕ ಮಹಾಮಂಡಲ ವತಿಯಿಂದ ಸನ್ಮಾನಿಸಲಾಯಿತು. ಅವರನ್ನು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣೀಯಮ್ ಸಹಿತ ವಿವಿಧ ಸ್ತೋತ್ರಗಳನ್ನು ಆನ್ಲೈನ್ ಮೂಲಕ ನಿರಂತರವಾಗಿ ಕಲಿಸುತ್ತಾ ಬಂದಿರುವ ಬೆಳ್ಳಾರೆಯ ಮಹಾಲಿಂಗ ಭಟ್ ಕುರುಂಬುಡೇಲು ಅವರ ವ್ಯಕ್ತಿತ್ವವನ್ನು ಮೊಡಪ್ಪಾಡಿ ರಾಮಚಂದ್ರ ಭಟ್ ಅನಾವರಣಗೊಳಿಸಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ 400ಕ್ಕೂ ಹೆಚ್ಚು ವೈದಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವೈದಿಕ ಪ್ರಧಾನ ಮಹೇಶ್ ಭಟ್ ಚೂಂತಾರು, ಧರ್ಮಕರ್ಮ ವಿಭಾಗದ ರಾಮಕೃಷ್ಣ ಭಟ್ ಕೂಟೇಲು, ಕೇಶವ ಭಟ್ ಕೂಟೇಲು, ಅಮೈ ಶಿವಪ್ರಸಾದ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post