ಸಾಂಪ್ರದಾಯಿಕ ಮನೋಭಾವದ, ಕ್ಲಾಸ್ ಪ್ರೇಕ್ಷಕರು ಮೆಚ್ಚಿಕೊಳ್ಳುವ ಯಕ್ಷಗಾನದ ಅಗ್ರಗಣ್ಯ ಸ್ತ್ರೀವೇಷ ಕಲಾವಿದರು, ಯಕ್ಷಗುರು ಎಂ.ಕೆ. ರಮೇಶ್ ಆಚಾರ್ಯರು. ಸ್ತ್ರೀವೇಷಗಳ ಭಾವಪೂರ್ಣ ಪ್ರಸ್ತುತಿಯಿಂದ ಯಕ್ಷಮೋಹಿನಿ ಎಂದೇ ಖ್ಯಾತರಾದ ಎಂಕೆ ರಮೇಶ್ ಆಚಾರ್ಯ ತೆಂಕು ಬಡಗು ಉಭಯ ತಿಟ್ಟುಗಳ ಪರಿಪೂರ್ಣ ಕಲಾವಿದ. ತನ್ನ ಭಾವಪೂರ್ಣ ಅಭಿನಯದ ಮೂಲಕ ಎಂತಹುದೇ ಪಾತ್ರಗಳಿಗೆ ಜೀವತುಂಬಬಲ್ಲ ಅಪಾರ ಸಾಮರ್ಥ್ಯವುಳ್ಳ ಎಂ.ಕೆ. ಅನೂಹ್ಯವಾದ ಪೌರಾಣಿಯ, ಐತಿಹಾಸಿಕ ಜ್ಞಾನ ಹಾಗೂ ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಹಾಗಾಗಿಯೇ ಯಕ್ಷಗಾನದ ದಶಾವತಾರಿ ಎಂದೇ ಇವರು ಚಿರಪರಿಚಿತರು.
ಸ್ತ್ರೀ ಪಾತ್ರಗಳಲ್ಲದೇ ಪುರುಷ ಪಾತ್ರಗಳನ್ನೂ ನ್ಯಾಯೋಚಿತವಾಗಿ ನಿರ್ವಹಿಸಿದವರು ಆಚಾರ್ಯರು. ಆದ್ರೆ ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿದ್ದು ಸ್ತ್ರೀ ಪಾತ್ರಗಳೇ. ನಳದಮಯಂತಿ ಪ್ರಸಂಗದ ದಮಯಂತಿ, ಕರುಣ ರಸವನ್ನು ಬಿಂಬಿಸುವ ಸತ್ಯಹರಿಶ್ಚಂದ್ರ ಪ್ರಸಂಗದ ಚಂದ್ರಮತಿ, ದ್ರೌಪದೀ ವಸ್ತ್ರಾಪಹರಣದ ದ್ರೌಪದಿ, ಪಾಪಣ್ಣ ವಿಜಯ ಪ್ರಸಂಗದ ಗುಣ ಸುಂದರಿ ಸತಿ ಶೀಲವತಿಯಲ್ಲಿ ಗುಣವತಿ, ಮಂಡೋದರಿ, ದೇವಯಾನಿ, ಕುಂತಿ ಕನ್ಯಾಕುಮಾರಿ, ರೂಪರೇಖಾ, ಶಾಂತಲೆ, ಚಿತ್ರಾಂಗದೆ, ಪ್ರಮೀಳೆ, ತಾರೆ, ಸತ್ಯಭಾಮೆ ಸೀತೆ, ರುಕ್ಮಿಣಿ, ಯಶೋಮತಿ ಮಯೂರಿ ಮಾಲಿನಿ, ಮೊದಲಾದ ಪಾತ್ರಗಳಲ್ಲಿ ವಿವಿಧ ರಸಾಭಿವ್ಯಕ್ತಿಯನ್ನು ರಂಗೋಚಿತವಾಗಿ ಪ್ರವಹಿಸಿದವರು.
1976ರಲ್ಲಿ ತೆಂಕು ತಿಟ್ಟಿನ ಸುರತ್ಕಲ್ ಮೇಳಕ್ಕೆ ಎರಡನೇ ಸ್ತ್ರೀ ವೇಷಧಾರಿಯಾಗಿ ಸೇರ್ಪಡೆಯಾಗಿದ್ದು ಇವರ ಕಲಾ ಜೀವನಕ್ಕೆ ಬಿಗ್ ಬ್ರೇಕ್ ನೀಡಿತು ಎಂದೇ ಹೇಳಬಹುದು. ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಕೊಕ್ಕಡ ಆನಂದ ಭಟ್ಟರ ವಿದಾಯದ ಬಳಿಕ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡರು. ಆ ಕಾಲದಲ್ಲಿ ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ತೆಕ್ಕಟೆ ಆನಂದ ಮಾರ್ಸ್ತ, ವೇಣೂರು ಸುಂದರ ಆಚಾರ್ಯ, ಶಿವರಾಮ ಜೋಗಿ ಮೊದಲಾದ ದಿಗ್ಗಜರ ಸಮಕಾಲೀನರಾಗಿ ವೇದಿಕೆಯನ್ನು ಹಂಚಿಕೊಂಡರು. ಸುರತ್ಕಲ್ ಮೇಳದಲ್ಲಿ ಶೇಣಿ, ತೆಕ್ಕಟೆ, ಗೋಪಾಲಕೃಷ್ಣ ಭಟ್ಟ,ಬಡಗಿನಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಜೋಡಿಯಾಗಿ ಸ್ತ್ರೀ ಪಾತ್ರಗಳಲ್ಲಿ ಮಿಂಚಿದವರಿವರು.
ಯಕ್ಷಕವಿ ರಮೇಶ್ ಆಚಾರ್ಯ
ರಮೇಶ್ ಆಚಾರ್ಯರು ರಂಗದ ಮೇಲಿನ ಪಾತ್ರಧಾರಿ, ಯಕ್ಷಗುರು, ಯುವ ಕಲಾವಿದರ ಮಾರ್ಗದರ್ಶಕ ಮಾತ್ರವಲ್ಲ, ಯಕ್ಷಕವಿಯೂ ಹೌದು. 75ಕ್ಕೂ ಮಿಕ್ಕಿ ಪ್ರಸಂಗಗಳಿಗೆ ಪಾಂಡಿತ್ಯಪೂರ್ಣ ಸಾಹಿತ್ಯ ಒದಗಿಸಿರುವ ಹಿರಿಮೆ ಇವರದು. ಕ್ಷೇತ್ರ ಮಹಾತ್ಮೆಗಳಾದ ಕಿಗ್ಗ ಕ್ಷೇತ್ರ ಮಹಾತ್ಮೆ, ಶೃಂಗೇರಿ ಕ್ಷೇತ್ರ ಮಹಾತ್ಮೆ, ಕಳಸ ಕ್ಷೇತ್ರ ಮಹಾತ್ಮೆ, ಕೋಡೂರು ಕ್ಷೇತ್ರ ಮಹಾತ್ಮೆ, ಬರ್ಗಿ ಕ್ಷೇತ್ರ ಮಹಾತ್ಮೆ, ನಿಟಿಲಾ ಪುರ ಕ್ಷೇತ್ರ ಮಹಾತ್ಮೆ, ಸೋಮವಾರ ಸಂತೆ ಕ್ಷೇತ್ರ ಮಹಾತ್ಮೆ, ಗುತ್ಯಮ್ಮ ಕ್ಷೇತ್ರ ಮಹಾತ್ಮೆ, ಎಡಹಳ್ಳಿ ಕ್ಷೇತ್ರ ಮಹಾತ್ಮೆ, ಬೊಮ್ಮನ ಹಳ್ಳಿ ಕ್ಷೇತ್ರ ಮಹಾತ್ಮೆ, ಅಲಸೆ ಕ್ಷೇತ್ರ ಮಹಾತ್ಮೆ, ಕೌದಳ್ಳಿ ಕ್ಷೇತ್ರ ಮಹಾತ್ಮೆ ಸೇರಿದಂತೆ ಇನ್ನೂ ಅನೇಕ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಪ್ರದರ್ಶನ ಕಂಡು ಜನ ಮಾನಸದಲ್ಲಿ ನೆಲೆಯಾಗಿವೆ.
ಪೌರಾಣಿಕ ಪ್ರಸಂಗಗಳಾದ, ಮಹಾಮಾತೆ ಕುಂತಿ, ಸಮಗ್ರ ವಿಶ್ವಾಮಿತ್ರ, ಶ್ರೀ ಕೃಷ್ಣ ತುಲಾಭಾರ, ಅನುಸೂಯೋಪಾಖ್ಯಾನ, ಸುರತ ಚಿತ್ರಾಂಗದಾ, ಕರ್ಣ ವೃಷಾಲಿ, ರುರು ಪ್ರಮಧ್ವರ ಕೃತಿಗಳು ಇವರ ಸಾಹಿತ್ಯದಲ್ಲಿ ಮೂಡಿ ಬಂದಿವೆ. ಛತ್ರಪತಿ ಶಿವಾಜಿ, ನಗರ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಸೇರಿದಂತೆ ಇನ್ನೂ ಹಲವು ಐತಿಹಾಸಿಕ ಪ್ರಸಂಗಗಳಿಗೆ ರಂಗಪ್ರಯೋಗ ಕಾಣಿಸಿದವರು. ಕಾಲ್ಪನಿಕ ಪ್ರಸಂಗಗಳಾದ ಯಕ್ಷಗಾನ ರಸರಂಗ ಚಕ್ರವರ್ತಿ ಮನೋಹರ್ ಕುಮಾರ್ ವಿರಚಿತ ಪ್ರಸಂಗಗಳಾದ ಕದಿರೆದ ಕಾಂಚನ, ಕದಿರೆದ ಗರುಡೆ, ಮಾಯಾ ಮನೋಹರ ಪ್ರಸಂಗಗಳಿಗೆ ಪದ್ಯ ಸಾಹಿತ್ಯ ನೀಡಿದವರು. ಹೀಗೆ ಇವರ ರಚನೆಯ ಪ್ರಸಂಗಗಳನ್ನು ಲೆಕ್ಕ ಹಾಕುತ್ತಾ ಹೋದರೆ 75ಕ್ಕೂ ಮಿಕ್ಕಿ ಪ್ರಸಂಗಗಳ ಕೊಡುಗೆ ಸಾರಸ್ವತ ಲೋಕಕ್ಕೆ ಸಂದಿವೆ.
ಪೆರ್ಡೂರು, ಸಾಲಿಗ್ರಾಮ, ಧರ್ಮಸ್ಥಳ, ಸುರತ್ಕಲ್, ಕರ್ನಾಟಕ ಸೇರಿದಂತೆ ಅನೇಕ ಮೇಳಗಳಲ್ಲಿ ಸೇವೆ ಸಲ್ಲಿಸಿರುವ ರಮೇಶ್ ಆಚಾರ್ಯರು, ಪ್ರಸ್ತುತ ತೆಂಕುತಿಟ್ಟಿನ ಗಜಮೇಳ ಹನುಮಗಿರಿಯಲ್ಲಿ ಹಿರಿಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ, ಗುರುಸ್ಥಾನದಲ್ಲಿ ನಿಂತು ಅನೇಕ ಕಲಾವಿದರನ್ನು ಬೆಳೆಸುತ್ತಿದ್ದಾರೆ.
ಈಗಿನ ತಲೆಮಾರಿನ ತಾರಾ ಮೌಲ್ಯದ ಕಲಾವಿದರಾದ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಸಂಜಯ್ ಗೋಣಿ ಬೀಡು, ಉಜ್ರೆ ರಾಜ, ಸುಧೀರ್ ಉಪ್ಪೂರು ಮೊದಲಾದವರು ಇವರ ಮಾರ್ಗದರ್ಶನದಲ್ಲೇ ಬೆಳೆದು ಬಂದವರು. ಯಕ್ಷಗಾನದಲ್ಲಿ ನಿನ್ನೆ ಮೊನ್ನೆ ಹೆಜ್ಜೆ ಕಲಿತ ಹಾಡಲು ಕಲಿತ ಇನ್ನೂ ಸಾಧಿಸಲು ಬಹಳಷ್ಟಿರುವ ಯುವ ಕಲಾವಿದರು ತಾವೇ ಸರ್ವವನ್ನೂ ಬಲ್ಲವರೆಂದು ಬೀಗುವವರ ನಡುವೆ, ಯಾವುದೇ ಅಹಂ ಬಿಗುಮಾನಗಳಿಲ್ಲದೆ, ಸಣ್ಣವರೊಂದಿಗೂ ಸಮಾಲೋಚನೆಗೆ ಮುಂದಾಗುವ ಆದರ್ಶಪ್ರಾಯರು ಎಂ ರಮೇಶ್ ಆಚಾರ್ಯರು.
ಯಕ್ಷಗಾನದಲ್ಲಿ ತೊಡಗಿಸಿ ಕೊಂಡು 5 ವರ್ಷ, 10 ವರ್ಷ, 13 ವರ್ಷ, 15 ವರ್ಷ 25 ವರ್ಷಕ್ಕೆಲ್ಲಾ ಸಂಭ್ರಮಾಚರಣೆ ಮಾಡಿಕೊಳ್ಳುವ ಕಲಾವಿದರ ಮಧ್ಯೆ 55 ವರ್ಷಗಳ ಕಾಲ ಸಾವಿರಾರು ರಂಗಪ್ರದರ್ಶನ, 75ಕ್ಕೂ ಮಿಕ್ಕಿ ಪ್ರಸಂಗಕ್ಕೆ ಸಾಹಿತ್ಯ ಒದಗಿಸುವ ಮೂಲಕ ಯಕ್ಷಕವಿ ಎನಿಸಿಕೊಂಡರೂ ಪ್ರಚಾರದ ಬೆನ್ನು ಬೀಳದೆ ತನ್ನ ಪಾಡಿಗೆ ಕಲಾಸೇವೆಯಲ್ಲಿ ನಿರತರಾಗಿರುವ ಎಂಕೆ ತೀರಾ ಅಪರೂಪದವರೆನಿಸಿಕೊಳ್ಳುತ್ತಾರೆ.
ಒಬ್ಬ ವ್ಯಕ್ತಿ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಬಹುದು. ಆ ಸಾಧನೆಗಳ ಜೊತೆಗೆ ವ್ಯಕ್ತಿಯೊಬ್ಬ ತಾನು ಬೆಳೆಸಿಕೊಳ್ಳುವ ವ್ಯಕ್ತಿತ್ವ ಆತನನ್ನು ಜನ ಪ್ರೀತಿಸುವಂತೆ ಅಥವಾ ತಿರಸ್ಕರಿಸುವಂತೆ ಮಾಡುತ್ತವೆ. ಯಕ್ಷಗಾನದ ದೀರ್ಘಕಾಲದ ಸಾಧನೆಗಳ ಜೊತೆಗೆ ಜನ ಪ್ರೀತಿಸುವ ವ್ಯಕ್ತಿತ್ವ ಹೊಂದಿರುವ ಅಪರೂಪದ ಚೇತನ ರಮೇಶ್ ಆಚಾರ್ಯ. ಇದರಿಂದಾಗಿ ತಾನು ದುಡಿಯುವ ಮೇಳದಲ್ಲಿ ಸಹಕಲಾವಿದರಿಗೆ ಗುರು ಸಮಾನ ಎನಿಸಿಕೊಂಡವರು. ಸಮಕಾಲೀನ ಕಲಾವಿದರಿಗೆ ಮಾರ್ಗದರ್ಶಕರು, ಅಭಿಮಾನಿಗಳ ಪಾಲಿಗೆ ಸೌಜನ್ಯ ತುಂಬಿ ಮಾತನಾಡಿಸುವ ಆತ್ಮೀಯರು ಎನಿಸಿಕೊಂಡವರು.
ಪ್ರಶಸ್ತಿಯೊಂದೇ ಯಶಸ್ಸಿನ ಮಾನದಂಡವಲ್ಲ. ನಾವು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಕಂಡುಕೊಂಡರೆ ಅದುವೇ ನಿಜವಾದ ಯಶಸ್ಸು ಎಂದು ಸಾರ್ಥಕತೆಯಿಂದ ನುಡಿಯುವ, ಐದು ದಶಕಗಳ ಯಕ್ಷಗಾನದ ಅನುಭವವುಳ್ಳ ಮೇರು ಪರ್ವತ ರಮೇಶ್ ಆಚಾರ್ಯರು. ಸಮಕಾಲೀನರೊಂದಿಗೆ, ಕಿರಿಯರೊಂದಿಗೆ, ಯುವ ಕಲಾವಿದರೊಂದಿಗೆ ಆತ್ಮೀಯತೆಯಿಂದಲೇ ಬೆರೆತು, ಸಲಹೆ ಸೂಚನೆಗಳನ್ನು ಕೇಳಿ ಬರುವವರಿಗೆ ಮಾರ್ಗದರ್ಶಕರಾಗಿ ಯಕ್ಷಗಾನದ ಪರಂಪರೆ, ತನ್ನ ಅನುಭವಗಳನ್ನು ತಿಳಿಸಿ ಕೊಡುವ ಸ್ನೇಹಜೀವಿ ದೊಡ್ಡಣ್ಣನಂತೆ ಗುರುತಿಸಿಕೊಂಡಿದ್ದಾರೆ. ಯಾರೇ ಕಲಾವಿದ, ಯಾವುದೇ ಹೊತ್ತಲ್ಲಿ ಕರೆ ಮಾಡಿ ಯಾವ ಪ್ರಸಂಗದ ಪ್ರಸಂಗದ ಬಗ್ಗೆ ಅನುಮಾನಗಳನ್ನು ಕೇಳಿಕೊಂಡರೂ ಅದನ್ನು ಬೇಸರಿಸಿಕೊಳ್ಳದೇ ಪರಿಹರಿಸುವ, ಸಲಹೆ ನೀಡುವ ಔದಾರ್ಯ ಇವರದು.
ಹಾಗಾಗಿಯೇ ಪ್ರಸಂಗದ ನಡೆಗಳ ಬಗ್ಗೆ ಯಾವುದೇ ಕಲಾವಿದನಿಗೆ ಗೊಂದಲಗಳಿದ್ದರೂ ಮೊದಲು ನೆನಪಾಗೋದು ರಮೇಶ್ ಆಚಾರ್ಯರು. ಇದೇ ಔದಾರ್ಯ ಅವರ ಜೀವನದಲ್ಲಿ ಕಹಿ ಅನುಭವಗಳನ್ನು ತಂದಿದ್ದೂ ಇವೆ. ಅದೆಷ್ಟೋ ಬಾರಿ ಅವರಿಂದಲೇ ಅನುಭವ ಪಡೆದು ಕಡೆಗಣಿಸಿದಾಗ ಆಗುವ ನೋವುಗಳಿದ್ದರೂ ಅದನ್ನೂ ಸಮಚಿತ್ತದಿಂದಲೆ ಸ್ವೀಕರಿಸಿ, ತಾನೊಬ್ಬ ಅಜಾತಶತ್ರುವಾಗಿ ಬದುಕುತ್ತಿರುವವರು.
ರಾಜ್ಯೋತ್ಸವ ಪ್ರಶಸ್ತಿ ಅಭಿಮಾನಿಗಳ ಒತ್ತಾಯ
ಯಕ್ಷಗಾನದಲ್ಲಿ ಗಮನಾರ್ಹ ದಾಖಲಾರ್ಹ, ಸ್ಮರಣೀಯ ಸಾಧನೆ ಮಾಡಿರುವ ಕಲಾವಿದನಿಗೆ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿಲ್ಲ ಎನ್ನುವ ನೋವು ಅವರ ಅಭಿಮಾನಿಗಳದ್ದು. ಅವರ ಶಿಷ್ಯ ವರ್ಗದ್ದು. ಪ್ರಶಸ್ತಿಗಳ ವ್ಯಾಮೋಹ ಇಲ್ಲದ ಕಲಾವಿದನಿಗೆ ಎಂಥದ್ದೇ ಪ್ರಶಸ್ತಿಗಳು ನಗಣ್ಯ, ಅವು ಅವರನ್ನು ಪ್ರೋತ್ಸಾಹಿಸುವುದೂ ಇಲ್ಲ, ಪ್ರಶಸ್ತಿ ಸಿಗಲಿಲ್ಲ ಎಂದು ಕುಗ್ಗುವಂತೆಯೂ ಮಾಡಲಾರವು ಎನ್ನುವುದಕ್ಕೆ ರಮೇಶ್ ಆಚಾರ್ಯರ ಬದುಕೇ ಒಂದು ದೃಷ್ಟಾಂತ.
ರಮೇಶ್ ಆಚಾರ್ಯರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶೇಣಿ ಸಂಸ್ಮರಣಾ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಕುರಿಯ ಶ್ರೀ ವಿಠಲ ಶಾಸ್ತ್ರಿ ಶತಮಾನೋತ್ಸವ ಪ್ರಶಸ್ತಿ, ಪ್ರಸಂಗ ರಚನೆಗಾಗಿ ಸ್ಕಂದ ಪುರಸ್ಕಾರ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಕಲ್ಕೂರ ಶೇಣಿ ಕಲೋತ್ಸವ ಪ್ರಶಸ್ತಿ, 2016ನೇ ಸಾಲಿನ ಅಗರಿ ಪ್ರಶಸ್ತಿ, ಸೇರಿದಂತೆ ಹಲವಾರು ಮಾನ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಇತ್ತೀಚಿಗೆ ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಶ್ರೀಯುತರಿಗೆ ದೇವಸ್ಥಾನದ ಮೊಕ್ತೇಸರರರಾದ ಭೀಮೇಶ್ವರ ಜೋಷಿ ದಂಪತಿಗಳಿಂದ ಗೌರವ ಪುರಸ್ಕಾರ ಸಂದಿದೆ.
ಶ್ರೀಯುತರ ವೈಯಕ್ತಿಕ ಬದುಕು
ರಮೇಶ್ ಆಚಾರ್ಯರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಗಳಗಾರ್ ಗ್ರಾಮದಲ್ಲಿ. ಇವರ ತಂದೆ ಕೃಷ್ಣಾಚಾರ್ಯ ತಾಯಿ ರುಕ್ಮಿಣಿಯಮ್ಮ. ರಮೇಶ ಆಚಾರ್ಯ ಅವರ ತಂದೆ ಕೃಷ್ಣಾಚಾರ್ಯ ಅಂದಿನ ಕಾಲದಲ್ಲೇ ಪ್ರಸಿದ್ಧ ವೇಷಧಾರಿ ಮತ್ತು ಅರ್ಥಧಾರಿಗಳಾಗಿದ್ದರು. ಹೀಗಾಗಿ ಕಲೆ ಆಚಾರ್ಯರಿಗೆ ರಕ್ತಗತವಾಗಿಯೇ ಹರಿದುಬಂತು. ರಮೇಶ್ ಆಚಾರ್ಯರ ಮೊದಲ ರಂಗಪ್ರವೇಶವಾಗಿದ್ದು ತಂದೆ ಮತ್ತು ದೊಡ್ಡಪ್ಪ ಜಂಟಿಯಾಗಿ ಕಟ್ಟಿ ಬೆಳೆಸಿದ ಮೇಳ ಶ್ರೀ ಜಗದಾಂಬ ಯಕ್ಷಗಾನ ಮಂಡಳಿ ಮೂಲಕವೇ.
ತಂದೆಯೇ ಯಕ್ಷಗಾನಕ್ಕೆ ಮೂಲ ಪ್ರೇರಣೆಯಾದರೆ, ಮೊದಲ ಯಕ್ಷಗಾನದ ಗುರುಗಳು ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದ ವೀರಭದ್ರನಾಯಕ್ ಮತ್ತು ಶ್ರೀ ನರಸಿಂಹಾಚಾರ್ಯ. ಆದಿಯಲ್ಲಿ ಬಡಗುತಿಟ್ಟನ್ನೇ ಅಭ್ಯಾಸ ಮಾಡಿದ್ರೂ ತೆಂಕುತಿಟ್ಟಿನ ಯಕ್ಷಗಾನದ ಪಟ್ಟುಗಳನ್ನೂ ಕರತಲಾಮಲಕ ಮಾಡಿಕೊಂಡವರು. ಅಂದ ಹಾಗೆ ತೆಂಕುತಿಟ್ಟಿನ ನಾಟ್ಯಗಾರಿಕೆ ತಿಳಿಸಿಕೊಟ್ಟ ಗುರುಗಳು ಕುರಿಯ ವಿಠಲಶಾಸ್ತ್ರಿಗಳು. ತಮ್ಮ 13 ನೆಯ ವಯಸ್ಸಿಗೆ ಯಕ್ಷಗಾನಕ್ಕೆ ಬಣ್ಣಹಚ್ಚಿದ ಆಚಾರ್ಯರು 55 ವರ್ಷಗಳ ಕಾಲ ಕಲೆಯನ್ನೇ ತಪಸ್ಸನ್ನಾಗಿ ಸ್ವೀಕರಿಸಿಕೊಂಡ ದಾರ್ಶನಿಕರು. ಇಂದು ಕಲಾವಿದರಿಗೆ ಅವರ ಪಾತ್ರ ಮುಗಿಸಿ ಮನೆ ಮಠಗಳಿಗೆ ತೆರಳುವ ಅವಕಾಶವಿದೆ. ಆದರೆ ಆ ಕಾಲದಲ್ಲಿ ಈಗಿನಂತೆ ಅನುಕೂಲತೆಗಳಿರಲಿಲ್ಲ. ಮನೆ ಮಠ ಬಿಟ್ಟು ಮೇಳ ಸೇರಿದ ಅಂದಿನ ಕಲಾವಿದರಿಗೆ ಆರು ತಿಂಗಳ ಕಾಲ ತಿರುಗಾಟದ ಮೇಳವೇ ಮನೆ ಕುಟುಂಬವಾಗಿತ್ತು. ಅದೇ ಪದ್ಧತಿ ಆಚಾರ್ಯರ ಜೀವನದಲ್ಲಿ ಇಂದಿಗೂ ಮುಂದುವರೆದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅಂದರೆ ಪ್ರವಾಸದಲ್ಲಿರುವಾಗ ಪ್ರತಿದಿನವೂ ಮನೆ ಸಂಬಂಧಿಕರ ಮನೆ ಎಂದು ಹೋಗಿ ಬರುವವರಲ್ಲ ಆಚಾರ್ಯರು. ಯಕ್ಷಗಾನದ ಪ್ರದರ್ಶನದ ಸ್ಥಳಗಳಲ್ಲಿ ಮೇಳ ಉಳಿದುಕೊಳ್ಳಲು ಒದಗಿಸುವ ವ್ಯವಸ್ಥೆಯಲ್ಲೇ ಉಳಿದುಕೊಂಡು ಪಾತ್ರ ನಿರ್ವಹಿಸಿ, ಬಿಡುವಿನ ವೇಳೆಯಲ್ಲಿ ಕೃತಿ ರಚನೆ, ಕಿರಿಯರಿಗೆ ಮಾರ್ಗದರ್ಶನ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ವಯಸ್ಸಾದ ಕಾರಣದಿಂದ ಕೆಲವೊಮ್ಮೆ ಮೇಳದ ವ್ಯವಸ್ಥಾಪಕರೇ ಒತ್ತಾಯದಿಂದ ಮನೆಗೆ ತಲುಪಿಸುವ ಮತ್ತು ಕರೆದುಕೊಂಡು ಬರುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
2018-19 ನೆಯ ಸಾಲಿನ ಗಿಗಾಂಟಿಕ್ ಹಿಟ್ ಪ್ರಸಂಗ ಛತ್ರಪತಿ ಶಿವಾಜಿಯ ಸೂತ್ರಧಾರ
ಪ್ರಸಕ್ತ ವರ್ಷದ ತಿರುಗಾಟದಲ್ಲಿ ದೇಂತಡ್ಕ ಮೇಳದವರು ಪ್ರದರ್ಶಿಸಿದ ಐತಿಹಾಸಿಕ ಪ್ರಸಂಗ ಛತ್ರಪತಿ ಶಿವಾಜಿ, ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಮೂಲಕ ಕರಾವಳಿ ಯಕ್ಷಗಾನದಲ್ಲಿ ಗಿಗಾಂಟಿಕ್ ಹಿಟ್ ಎನಿಸಿಕೊಂಡಿತ್ತು. ಜನ ಮೆಚ್ಚುಗೆ ಗಳಿಸಿ ಉತ್ತಮ ಪ್ರದರ್ಶನ ಕಂಡ ಈ ಪ್ರಸಂಗದ ಪ್ರಸಂಗಕರ್ತರು ರಮೇಶ್ ಆಚಾರ್ಯರು. (ನರೇಂದ್ರ ಮೋದಿ ಮತ್ತು ಗೋಹತ್ಯೆಯ ವಿಚಾರವನ್ನು ಸಂಭಾಷಣೆಯಲ್ಲಿ ಬಳಸಿಕೊಳ್ಳುವುದರ ಮೂಲಕ ಈ ಪ್ರಸಂಗ ವಿವಾದಕ್ಕೂ ಕಾರಣವಾಗಿತ್ತು.) ಎಂಕೆ ಅವರ ಲೇಖನಿಯಿಂದ ಈ ವರ್ಷ ಇನ್ನಷ್ಟು ಪ್ರಸಂಗಗಳು ಮೂಡಿಬರಲಿದ್ದು ಅವುಗಳಲ್ಲಿ ಪ್ರಮುಖವಾದದ್ದು, ಸಾಮಾಜಿಕ ಪಿಡುಗಾಗಿರುವ ಬಂಜೆತನದ ಕುರಿತಾಗಿ ಕಥೆಯುಳ್ಳ ಗರ್ಭ ಗುಡಿ, ಪೌರಾಣಿಕ ಕಥಾಹಂದರವುಳ್ಳ ಕರ್ಣ ವೃಷಾಲಿ, ರುರು ಪ್ರಮಧ್ವರ ಸೇರಿದಂತೆ ಮತ್ತಷ್ಟು ಪ್ರಸಂಗಗಳು ಕುತೂಹಲದಿಂದ ಕಾಯುವಂತೆ ಮಾಡಿವೆ.
Discussion about this post