ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ನಗರದ ಶ್ರೀ ಅನಂತರಾವ್ ಕಲಾಲಬಂಡಿಯವರ ಮನೆಯಲ್ಲಿ ಶ್ರೀರಾಮದಾಸರ ಆರಾಧನೆ ನಿಮಿತ್ಯ ರಾಮದಾಸರ ಕೃತಿಗಳ ಗಾಯನ ಕಾರ್ಯಕ್ರಮ ಜರುಗಿತು.
ಶ್ರೀರಾಮದಾಸರು ಅಪರೂಪದ ಹರಿದಾಸರು. ಇಸ್ಲಾಂ ಧರ್ಮಕ್ಕೆ ಸೇರಿದ ಇವರು ’ದ್ವೈತ ಸಿದ್ಧಾಂತಕ್ಕನುಗುಣವಾಗಿ ಸಾಹಿತ್ಯ ರಚನೆ ಮಾಡುವದರ ಮೂಲಕ ಧಾರ್ಮಿಕ ಭಾವೈಕ್ಯದ ಹರಿಕಾರರು. ಆಧುನಿಕ ಹರಿದಾಸ ಸಾಹಿತ್ಯಕ್ಕೆ ತಮ್ಮ ಕೀರ್ತನೆ ಉಗಾಭೋಗ, ಶತಾಷ್ಟಕಗಳ ಮೂಲಕ ಅಪಾರ ಕಾಣಿಕೆ ನೀಡಿ, ಧಾರ್ಮಿಕ ಮೇರೆಯನ್ನು ಮೀರಿದವರು.
ಇಸ್ಲಾಂ ಸಂಪ್ರದಾಯಕ್ಕೆ ಸೇರಿದ ಬಡೇಸಾಹೇಬರು (ಶ್ರೀರಾಮದಾಸರು) ಅತ್ಯಪೂರ್ವ ಕೀರ್ತನೆಗಳನ್ನು ರಚಿಸಿದರೆನ್ನುವದು ಒಂದು ಮಹತ್ವವಾದ ಸಂಗತಿ. ಅವರದು ರಾಯಚೂರು ಜಿಲ್ಲೆಯ ಜೋಳದಡಿಗಿ ಜನ್ಮಸ್ಥಳ. ಹಂಪಿಯಲ್ಲಿ ಶ್ರೀರಾಮದಾಸರು ಶ್ರೀರಾಮ ಅಂಕಿತದಿಂದ, ಶ್ರೀ ರಾಮಾವಧೂತರಿಂದ ಪಡೆದ ಗುರೂಪದೇಶದಿಂದ ಅವರ ಮನಸ್ಸು ಆಧ್ಯಾತ್ಮದತ್ತ ತಿರುಗಿತು. ಗೋನವಾರ,ಲಿಂಗದಹಳ್ಳಿ ಅವರ ಓಡಾಟದ ತಾಣಗಳು. ಗೋನವಾರ ಗ್ರಾಮದಲ್ಲಿದ್ದ ವೈದಿಕ ಬ್ರಾಹ್ಮಣ ಜೋಯಿಸ್ ಮನೆತನದ ವೇ.ಮೂ. ವೆಂಕಟಭೀಮಾಚಾರ್ಯ ಹಾಗೂ ಹನುಮಂತಾಚಾರ್ಯ ಅಪ್ರತಿಮ ಸಂಗೀತಪಟುಗಳು ಹಾಗೂ ಕೀರ್ತನಗಾರರು. ಇವರ ಒಡನಾಟದಿಂದ ಸಂಗೀತ ಒಲವು ಹುಟ್ಟಿ ದಾಸ ಸಾಹಿತ್ಯದ ಅಭ್ಯಾಸ ಮಾಡಿದರು.
ಅವರು ಹರಿಪ್ರೇರಣದಿಂದ ಶ್ರೀರಾಮ ಅಂಕಿತದಲ್ಲಿ ಕೃತಿಗಳನ್ನು ರಚಿಸಿ ರಾಮದಾಸರೆಂದು ಹೆಸರಾದರು. ಅವರ 773 ಕೃತಿಗಳ ಸಂಕಲನ ಮೈಸೂರು ವಿಶ್ವವಿದ್ಯಾಲಯದ ಅಧ್ಯಯನ ಪೀಠದಿಂದ ಪ್ರಕಟವಾಗಿವೆ.
ಶ್ರೀರಾಮದಾಸರ ಆರಾಧನೆಯನ್ನು ಅವರ ರಚನೆಯ ಕೃತಿಗಳನ್ನು ಹಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಸಮೀರಾಚಾರ ಬಂಡಿಹಾಳ, ಪ್ರಭಾಕರ ಪಟವಾರಿ, ಶ್ರೀನಾರಾಯಣದಾಸ ಸಂತೆಕೆಲ್ಲೂರ, ಶ್ರೀಗುರುರಾಜ ಜೋಶಿಯವರು ಗಾಯನ ಸೇವೆ ಸಲ್ಲಿಸಿದರು. ಶ್ರೀಗುರುರಾಜದಾಸ, ಶ್ರೀಅನಂತ ಪವಣಸ್ಕರ ತಬಲಾ ಸಾಥ ನೀಡಿದರೆ, ಹಾರ್ಮೋನಿಯಂನಲ್ಲಿ ಪ್ರಭಾಕರ ಪಟವಾರಿ , ಸಮೀರ ಬಂಡಿಹಾಳ ನಾರಾಯಣದಾಸ ಸಹಕರಿಸಿದರು. ತಾಳ ವಾಧ್ಯದಲ್ಲಿ ನರಸಿಂಹ ಆಲೂರ, ಗುರುರಾಜ ಜೋಶಿ ಸಹಕರಿಸಿದರು.
(ವರದಿ: ಮುರಳೀಧರ ನಾಡಿಗೇರ್, ಕೊಪ್ಪಳ)
Get in Touch With Us info@kalpa.news Whatsapp: 9481252093
Discussion about this post