ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸೋಸಲೆ ಶ್ರೀ ವ್ಯಾಸರಾಜರ ಮಠ ಹಮ್ಮಕೊಂಡಿದ್ದ 9 ದಿನಗಳ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ.
ಭವ್ಯ ಮತ್ತು ದಿವ್ಯ ಪ್ರಕ್ರಿಯೆಗೆ ಮಂಗಳ ಹಾಡುವ ಸಂದರ್ಭದಲ್ಲಿ ಲಕ್ಷ ಆವರ್ತಿ ವಾಯುಸ್ತುತಿ ಪಾರಾಯಣ ಸಂಘದಿಂದ ನೂರಾರು ಸಾತ್ವಿಕರಿಂದ ವಾಯು ಸ್ತುತಿ ಪಾರಾಯಣ, ಲೋಕ ಕಲ್ಯಾಣಕ್ಕಾಗಿ 1008 ಬಾರಿ ಸುಮಧ್ವ ವಿಜಯ ಪಾರಾಯಣ ಮತ್ತು 1008 ಬಾರಿ ಹರಿಕಥಾಮೃತಸಾರ ಪಾರಾಯಣ ಹಾಗೂ ಒಂದು ಕೋಟಿ ಬಾರಿ ಯಂತ್ರೋದ್ಧಾರಕ ಹನುಮತ್ ಸ್ತೋತ್ರ ಪಾರಾಯಣ ಸಮರ್ಪಣೆ ನೆರವೇರಿದ್ದು ಗಮನ ಸೆಳೆಯಿತು.

ಸಮಸ್ತ ಭಕ್ತರು ಒಂಬತ್ತು ದಿನಗಳ ಕಾಲ ನಡೆದ ಐತಿಹಾಸಿಕ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ನಾಡಿನ ಮತ್ತು ಹೊರನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಜನ ಹಲವು ಯತಿಗಳ ಸಮ್ಮುಖದಲ್ಲಿ ಧನ್ಯತೆಯನ್ನು ಮೆರೆದಿದ್ದಾರೆ . ಸೋಸಲೆ ಗುರುಗಳ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ನಾಡಿನ ಹಲವು ಯತಿಗಳು ಸಾಕ್ಷಿಯಾಗಿದ್ದು ಒಂದು ವಿಶೇಷ. ಮಧ್ವ ಪೀಠದ ಮಠದ ಇತಿಹಾಸದಲ್ಲಿ ಇದು ಒಂದು ವಿಶೇಷ ಮೈಲಿಗಲ್ಲು.
-ಡಿ.ಪಿ. ಅನಂತಾಚಾರ್ಯ, ಮಠದ ಮುಖ್ಯಸ್ಥರು
ಇದೇ ಸಂದರ್ಭದಲ್ಲಿ ಸದಾಚಾರ ಸ್ಮೃತಿ ಪಾರಾಯಣ ಸಮರ್ಪಣೆ, ಮಹಿಳೆಯರಿಂದ ಶ್ರೀ ಲಕ್ಷ್ಮಿ ಶೋಭಾನೆ ಮತ್ತು ಮಧ್ವನಾಮ ಸಹಿತ ಪಂಚರತ್ನ ಸುಳಾದಿಗಳ ಪಾರಾಯಣವು ನೆರವೇರಿದ್ದು, ಮೈಸೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿತು.
ನಾಡಿನ ವಿವಿಧ ಭಾಗಗಳಿಂದ ಮತ್ತು ಹೊರರಾಜ್ಯಗಳಿಂದ ಬಂದಂತಹ ಸಾವಿರಾರು ಭಕ್ತರು ಹಾಗೂ ವನಿತೆಯರು ಈ ಸೇವ ಕಾರ್ಯದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ನಿಂದ ವೆಂಕಟೇಶಮೂರ್ತಿ ಅವರ ಸಾರಥ್ಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ 3 ತಾಸುಗಳ ಕಾಲ ವಿಜೃಂಭಣೆಯಿಂದ ನೆರವೇರಿದ್ದು ವಿಶೇಷವಾಗಿತ್ತು.
ಸುಸಜ್ಜಿತವಾದ ವೇದಿಕೆಯಲ್ಲಿ ವಿಶೇಷ ಧ್ವನಿ ಬೆಳಕು ಮತ್ತು ಸೆಟ್ಟಿಂಗ್ ನಡುವೆ ಶ್ರೀನಿವಾಸನ ಕಲ್ಯಾಣ ಕಾರ್ಯವನ್ನು ಸ್ವಯಂಸೇವಕರು ಮತ್ತು ವಿದ್ವಾಂಸರು, ಸುಮಂಗಲಿಯರ ಒಡಗೂಡಿ ನೆರವೇರಿಸಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಒಂದು ಭವ್ಯ ಸಮಾರಂಭ ನಮ್ಮ ನಿರೀಕ್ಷೆಗೂ ಮೀರಿ ಸಂಪನ್ನಗೊಂಡಿದೆ. ನಮ್ಮ ಮಠದ ಕಾರ್ಯಕರ್ತರು, ಸ್ವಯಂ ಸೇವಕರು ಮತ್ತು ಸಮಸ್ತ ಭಕ್ತ ಗಣ ನೀಡಿದ ಸಹಕಾರ ಮಹೋನ್ನತವಾದದ್ದು.
-ಡಾ.ಡಿ.ಪಿ. ಮಧು ಸೂದನಾಚಾರ್ಯ, ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ
ಕಲ್ಯಾಣೋತ್ಸವದಲ್ಲಿ ಶ್ರೀ ನಿವಾಸನು ಪದ್ಮಾವತಿ ದೇವಿಗೆ ಮಾಂಗಲ್ಯ ಧಾರಣೆ ಮಾಡಿದಾಗ ಮಂಗಳ ವಾದ್ಯಗಳನ್ನು ಮೊಳಗಿಸಲಾಯಿತು.
ಸಮಾರೋಪ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಭಕ್ತರಿಗೂ ಶ್ರೀನಿವಾಸನ ಮಂತ್ರಾಕ್ಷತೆ ಸಹಿತ ಪ್ರಸಾದವನ್ನು ವಿತರಣೆ ಮಾಡಲಾಯಿತು. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯರ್ ಸಾನಿಧ್ಯ ವಹಿಸಿದ್ದರು.
ಸ್ವಾಮೀಜಿ ಆಶೀರ್ವಚನ
ಸೊಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಸಮಾರೋಪಸಂದೇಶ ನೀಡಿ, ವಿದ್ವತ್ ಪ್ರಪಂಚಕ್ಕೆ ನಾಲ್ವರು ಯುವ ಮತ್ತು ನವ ಪಂಡಿತರನ್ನು ಕೊಡುಗೆಯಾಗಿ ನೀಡಿದ ಈ ಸುಧಾಮಂಗಳ ಮಹೋತ್ಸವ ಸಕಲ ಭಕ್ತರ ಸಹಕಾರದಿಂದ ಮತ್ತು ವಿವಿಧ ಮಠಾಧೀಶರ ದಿವ್ಯ ಸಾನಿಧ್ಯ ಮತ್ತು ಸಹಮತದಿಂದ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇಂದಿನ ಯುವಕರು ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸಿಕೊಂಡು ಅಖಂಡ ಭಾರತದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಆಗಬೇಕು ಎಂದು ಆಶಿಸುತ್ತೇವೆ ಎಂದರು.
ವ್ಯಾಸರಾಜರ ಮಠವು ಸದಾ ಕಾಲ ಸನಾತನ ಧರ್ಮದ ಪಾಲನೆಗೆ ಮತ್ತು ಪರಂಪರೆಯ ರಕ್ಷಣೆಗೆ ಬದ್ಧವಾಗಿದೆ. ಮುಂಬರುವ ವರ್ಷಗಳಲ್ಲಿ ಇಂತಹ ಸುಧಾಮಂಗಳ ಸಮ್ಮೇಳನಗಳನ್ನು ಪ್ರತಿವರ್ಷವೂ ಆ ಯೋಜನೆ ಮಾಡಲು ಸಂಕಲ್ಪ ಮಾಡಲಾಗಿದೆ. ಶ್ರೀ ಹರಿವಾಯು ಗುರುಗಳು ಮತ್ತು ಶ್ರೀ ವ್ಯಾಸರಾಜರು ಈ ಕಾರ್ಯವನ್ನು ಸುಗಮವಾಗಿ ನಡೆಸಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಅವರು ಹೇಳಿದರು. ಎಲ್ಲರಲ್ಲಿಯೂ ಸದಾಚಾರ ಸದ್ವಿಚಾರ ಮತ್ತು ಸನ್ನಡತೆಗಳು ವಿಜೃಂಭಿಸಲಿ ಎಂದು ಸೋಸಲೆ ಶ್ರೀಗಳು ನುಡಿದರು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಸಾವಿರಾರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















