ಕಲ್ಪ ಮೀಡಿಯಾ ಹೌಸ್ | ನವದೆಹಲಿ |
“ಸನಾತನ ಧರ್ಮದ ಮೇಲೆ ಆಂತರಿಕವಾಗಿಯೂ ಮತ್ತು ಬಹಿರಂಗವಾಗಿಯೂ ವಿವಿಧ ರೀತಿಯ ಸವಾಲುಗಳು ಎದುರಾಗುತ್ತಿವೆ. ಇಂತಹ ಸವಾಲುಗಳನ್ನು ಎದುರಿಸಲು ಸಮಾಜದಲ್ಲಿ ಸಂಘಟಿತರಾಗಿ, ಒಗ್ಗಟ್ಟಿನಿಂದ ಮುನ್ನಡೆಯುವುದು ಅತ್ಯಗತ್ಯ. ಎಷ್ಟೇ ಸವಾಲುಗಳು ಬಂದರೂ ಧೈರ್ಯ ಕಳೆದುಕೊಳ್ಳದೆ ಒಂದಾಗಿ ನಿಲ್ಲಬೇಕು” ಎಂದು ಉಡುಪಿ ಶ್ರೀ ಪೇಜಾವರ ಮಠದ (Pejawara Swamiji) ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೆಹಲಿಯಲ್ಲಿ (Delhi) ಕರೆ ನೀಡಿದರು.
ಶ್ರೀಗಳ 39ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಭಾನುವಾರ ನವದೆಹಲಿಯ ರೋಹಿಣಿ ವಿಧಾನಸಭಾ ಕ್ಷೇತ್ರದ ಸೆಕ್ಟರ್-4ರಲ್ಲಿರುವ ದಲಿತ ಬಡಾವಣೆಗೆ (Pejawar Sri visits Dalit Colony) ಭೇಟಿ ನೀಡಿ ಅವರು ಮಾತನಾಡಿದರು. ಈ ಬಡಾವಣೆಯಲ್ಲಿ 300ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದು, ಶ್ರೀಗಳ ಆಗಮನಕ್ಕೆ ಸ್ಥಳೀಯ ನಿವಾಸಿಗಳು ಆತ್ಮೀಯ ಮತ್ತು ಭಕ್ತಿಪೂರ್ವಕ ಸ್ವಾಗತ ಕೋರಿದರು.
ಐದು ಮನೆಗಳಿಗೆ ಶ್ರೀಗಳ ಭೇಟಿ
ಬಡಾವಣೆಗೆ ಭೇಟಿ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥರು ಅಲ್ಲಿನ ಐದು ಮನೆಗಳಿಗೆ ತೆರಳಿ ನಿವಾಸಿಗಳೊಂದಿಗೆ ಉಭಯಕುಶಲೋಪರಿ ವಿಚಾರಿಸಿದರು. ಮಠದ ವತಿಯಿಂದ ಉಡುಪಿ ಶ್ರೀಕೃಷ್ಣ ಹಾಗೂ ಅಯೋಧ್ಯೆಯ ಶ್ರೀರಾಮರ ಭಾವಚಿತ್ರಗಳನ್ನು ಮನೆಗಳಿಗೆ ನೀಡಲಾಯಿತು.
ಶ್ರೀಗಳು ಮನೆಗಳಲ್ಲಿ ದೀಪ ಬೆಳಗಿಸಿ, ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ನಿವಾಸಿಗಳಿಗೆ ರಾಮಮಂತ್ರದ ಉಪದೇಶ ನೀಡಿ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಬದುಕಿನ ಮಹತ್ವವನ್ನು ತಿಳಿಸಿದರು.
ಸ್ವಚ್ಛತೆಯೂ ರಾಮರಾಜ್ಯದ ನಿರ್ಮಾಣಕ್ಕೆ ಕಾರಣ
ಬಳಿಕ ಬಡಾವಣೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ರಾಮರಾಜ್ಯದ ಪರಿಕಲ್ಪನೆಯನ್ನು ವಿವರಿಸಿದರು.
“ಮೈ, ಮನಸ್ಸು, ಮನೆ, ಬಡಾವಣೆ, ರಸ್ತೆ, ಊರು ಮತ್ತು ಕೇರಿಗಳ ಸ್ವಚ್ಛತೆಯೂ ರಾಮರಾಜ್ಯದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಾಹ್ಯ ಸ್ವಚ್ಛತೆಯ ಜತೆಗೆ ಮನಸ್ಸಿನ ಸ್ವಚ್ಛತೆಯೂ ಮುಖ್ಯ” ಎಂದು ಶ್ರೀಗಳು ಕಿವಿಮಾತು ಹೇಳಿದರು.
Pejawara Swamiji : ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ
ಬಡಾವಣೆಯ ಕುಟುಂಬಗಳಿಗೆ ಮಾರ್ಗದರ್ಶನ ನೀಡಿದ ಶ್ರೀಗಳು, ಮಕ್ಕಳ ಶಿಕ್ಷಣ ಮತ್ತು ಉತ್ತಮ ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಪೋಷಕರಿಗೆ ತಿಳಿಸಿದರು.
“ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಸಂಸ್ಕಾರವನ್ನೂ ನೀಡಬೇಕು. ಶಿಕ್ಷಣವು ಕೇವಲ ಉದ್ಯೋಗಕ್ಕೆ ಸೀಮಿತವಾಗಬಾರದು. ಅದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ, ಸಮಾಜದ ಒಳಿತಿಗೆ ಮತ್ತು ದೇಶದ ಪ್ರಗತಿಗೆ ಪೂರಕವಾಗಬೇಕು” ಎಂದು ಅವರು ಹೇಳಿದರು.
ಸನಾತನ ಧರ್ಮ ಎದುರಿಸುತ್ತಿರುವ ಸವಾಲುಗಳಿಗೆ ಒಗ್ಗಟ್ಟೇ ಉತ್ತರ
ಸನಾತನ ಧರ್ಮದ ಮೇಲೆ ವಿವಿಧ ರೀತಿಯ ಸವಾಲುಗಳು ಎದುರಾಗುತ್ತಿರುವುದನ್ನು ಉಲ್ಲೇಖಿಸಿದ ಶ್ರೀಗಳು, ಸಮಾಜದ ಪ್ರತಿಯೊಂದು ವರ್ಗವೂ ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಬದುಕಬೇಕೆಂದು ಕರೆ ನೀಡಿದರು.
“ಸನಾತನ ಧರ್ಮಕ್ಕೆ ಆಂತರಿಕವಾಗಿಯೂ, ಬಹಿರಂಗವಾಗಿಯೂ ವಿವಿಧ ರೀತಿಯ ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಎದುರಿಸಲು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದೊಂದೇ ಮಾರ್ಗವಾಗಿದೆ” ಎಂದು ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಬಡಾವಣೆಯ ಸಮಸ್ಯೆಗಳ ಪರಿಹಾರಕ್ಕೆ ಸೂಚನೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಶಾಸಕ ಕುಲವಂತ ರಾಣಾ ಅವರೊಂದಿಗೆ ಶ್ರೀಗಳು ಬಡಾವಣೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಬಡಾವಣೆಯ ಸ್ವಚ್ಛತೆ ಮತ್ತು ಮೂಲಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ, ಹಲವು ವರ್ಷಗಳಿಂದ ಹಳೆಯದಾಗಿರುವ ಮನೆಗಳನ್ನು ತುರ್ತಾಗಿ ಪರಿಶೀಲಿಸಿ ಅಗತ್ಯವಿರುವ ಕಡೆ ದುರಸ್ತಿ ಮತ್ತು ನವೀಕರಣ ಕ್ರಮಗಳನ್ನು ಕೈಗೊಳ್ಳುವಂತೆ ಶ್ರೀಗಳು ಶಾಸಕರಿಗೆ ಸೂಚಿಸಿದರು.
ಸ್ಥಳೀಯ ನಿವಾಸಿಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸುವುದು ಮತ್ತು ಸುರಕ್ಷಿತ ವಾಸದ ವ್ಯವಸ್ಥೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಅವರು ತಿಳಿಸಿದರು.
300ಕ್ಕೂ ಅಧಿಕ ಮಂದಿಗೆ ರಾಮಕೃಷ್ಣರ ಭಾವಚಿತ್ರ, ಸಿಹಿತಿಂಡಿ ವಿತರಣೆ
ಶ್ರೀಗಳ ಬಡಾವಣೆ ಭೇಟಿಯ ಸಂದರ್ಭದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಸೇವಾಭಾರತಿಯ ಸಹಯೋಗ ದೊರೆಯಿತು. ಕಾರ್ಯಕ್ರಮದಲ್ಲಿ ಬಡಾವಣೆಯ 300ಕ್ಕೂ ಅಧಿಕ ಮಂದಿಗೆ ಮಠದ ವತಿಯಿಂದ ಶ್ರೀರಾಮ ಮತ್ತು ಶ್ರೀಕೃಷ್ಣರ ಭಾವಚಿತ್ರಗಳು ಹಾಗೂ ಸಿಹಿತಿಂಡಿ ವಿತರಿಸಲಾಯಿತು.
ಶ್ರೀಗಳ ಆಗಮನದಿಂದ ಬಡಾವಣೆಯಲ್ಲಿ ವಿಶೇಷ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
39ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಆಯೋಜಿಸಲಾದ ಈ ವಿಶೇಷ ಬಡಾವಣೆ ಭೇಟಿ ಕಾರ್ಯಕ್ರಮವು, ಸಾಮಾಜಿಕ ಸಾಮರಸ್ಯ, ಸ್ವಚ್ಛತೆ, ಶಿಕ್ಷಣ, ಸಂಸ್ಕಾರ ಮತ್ತು ಸಮಾಜದ ಸಂಘಟನೆಯ ಮಹತ್ವವನ್ನು ಸಾರುವ ಕಾರ್ಯಕ್ರಮವಾಗಿ ಗಮನಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








