ಇಂದು ವಿಶ್ವದೆಲ್ಲಡೆ ಜೀವ ಬೇಧವಿಲ್ಲದೆ ಬುದ್ಧಿ ಜೀವಿಗಳು, ಜನ ಸಾಮಾನ್ಯರು ಎಂಬ ತಾರತಮ್ಯವಿಲ್ಲದೆ ಜಾತಿ ಮತ ಪಂಥಗಳ ಹಂಗಿಲ್ಲದೆ ಪೂಜಿಸಲ್ಪಡುವ ಆರಾಧಿಸುವ ಭಕ್ತಿ ಸಾಮ್ರಾಜ್ಯದ ಕೆಲವೇ ಕೆಲವರ ಪೈಕಿ ಮಂತ್ರಾಲಯ ಶ್ರೀ ಗುರುರಾಘವೇಂದ್ರರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವತ್ತಿಗೂ ಗುರುವಾರ ಬಂತೆಂದರೆ ಅದು ಎಲ್ಲರ ಪಾಲಿಗೆ ಸಡಗರ – ಸಂಭ್ರಮದ ರಾಯರ ನೆನೆಯುವ ಪುಣ್ಯದಿನ. ಅವರ ಜೀವನಗಾಥೆ ಭಕ್ತರ ಪಾಲಿಗೆ ಕುಳಿರ್ಗಾಳಿಯ ಸ್ಪರ್ಶ, ಎಂದಿಗೂ ಆರದೆ ದೇದೀಪ್ಯಮಾನವಾಗಿ ಉರಿಯುವ ನಂದಾದೀಪ. ಅವರ ದರ್ಶನ ಮಾತ್ರಕ್ಕೆ ಜೀವನದ ಮುಗ್ಗುಲು ಬದಲಾಯಿಸುವ ಸಾಮರ್ಥ್ಯವಿದೆ. ಸರಳ ಆಧ್ಯಾತ್ಮಿಕತೆಯ ಅವರ ಜೀವನ ತತ್ವಗಳು ಅಳುವ ಕಂದನಿಗೆ ಮಾತೆಯ ಲಾಲಿಯಿದ್ದಂತೆ. ಶ್ರೀ ರಾಘವೇಂದ್ರರು ಮಹಾಮಹಿಮರಾಗಲು ಪರಮಾತ್ಮ ಪಾದಾರವಿಂದಗಳಲ್ಲಿ ಸತತ ಸೇವೆಯೇ ಕಾರಣ. ಅಂತೆಯೇ ಅವರ ಶಾಪಾನುಗ್ರಹ ಶಕ್ತಿ; ಇನ್ನೊಂದು ಅವರ ಸಿದ್ದಾಂತ ಸಾರಸ್ವತ ಸೇವೆ.
ರಾಯರು, ಈ ಶಬ್ದದಲ್ಲಿ ಅಖಿಲಭೂಮಂಡಲವನ್ನು ಸೆಳೆಯುವ ಮಹಾಶಕ್ತಿ ಇದೆ, ಪರಮೇಶ್ವರನ ಪ್ರೀತಿಯನ್ನು ಸಂಪಾದಿಸುವ ಅನುಭೂತಿಯು ಈ ಶಬ್ದಶ್ರವಣದಿಂದ ಆಗುತ್ತದೆ. ಹಾಗಾಗಿ ಈ ಶಬ್ದ ಮಂಗಲಮಯ . ರಾಯರು ಅಂದರೆ ಪುಣ್ಯದ ಪರ್ವತ , ರಾಯರೆಂದರೆ ಕರುಣೆಯ ಮಡಿಲು , ರಾಯರೆಂದರೆ ಶರಣಾಗತರ ಕಾಮಧೇನು, ರಾಯರೆಂದರೆ ಆಧ್ಯಾತ್ಮಿಕ ಬಾಳಿನ ಜೇನು, ರಾಯರೆಂದರೆ ತತ್ವಗ್ರಂಥಭಂಡಾರ, ರಾಯರೆಂದರೆ ತಾಪತ್ರಯಪರಿಹಾರ, ನಮಗೆ ರಾಯರೇ ಗತಿ, ರಾಯರೆಂದರೆ ದುರಿತಗಳನ್ನು ಪರಿಹಾರ ಮಾಡಿ ಸನ್ಮಾರ್ಗವನ್ನು ತೋರಿ, ಉತ್ಕ್ರಷ್ಟವಾಧ ಸುಖವನ್ನು ಕೊಡುವವರು ಎಂದು ಚಿಂತನೆ ಮಾಡುವವನೇ ಭಾಗ್ಯಶಾಲಿ, ಜಯಶೀಲ, ಸದ್ಗುಣಶಾಲಿಯಾಗುತ್ತಾನೆ.
ಪೂರ್ವದಲ್ಲಿ ಬ್ರಹ್ಮದೇವನ ಶಾಪವನ್ನು ವರವಾಗಿ ಸ್ವೀಕರಿಸಿದ ಶಂಕು ಕರ್ಣನೆಂಬ ದೇವತೆ, ಕೃತಯುಗದಲ್ಲಿ ಪ್ರಹ್ಲಾದ, ದ್ವಾಪರದಲ್ಲಿ ಬಾಹ್ಲಿಕ ರಾಜ, ಕಲಿಯುಗದಲ್ಲಿ ವ್ಯಾಸರಾಜರು ಮತ್ತು ಕೊನೆಯಲ್ಲಿ “ರಾಘವೇಂದ್ರ”ರಾಗಿ ಪ್ರಜ್ವಲಿಸಿದರು ಎಂದು ಪ್ರತೀತಿ. ಸನ್ಯಾಸಾಶ್ರಮ ಪಡೆಯುವ ಮೊದಲು ಮೂವರು ಜ್ಯೋತಿಷಿಗಳು ವೆಂಕಟನಾಥರ (ರಾಯರ ಪೂರ್ವಾಶ್ರಮದ ಹೆಸರು) ಜಾತಕ ಕುಂಡಲಿ ನೋಡಿ ಒಬ್ಬನು ಅವರ ಆಯುಷ್ಯ 100 ವರ್ಷ, ಎರಡನೇಯವರನು 300 ವರ್ಷವೆಂದೂ, ಮೂರನೆಯವರನು 700 ವರ್ಷ ಎಂದು ಹೇಳಲು, ಮೊದಲನೆಯದು ದೇಹದೃಷ್ಠಿಯಿಂದ, ಎರಡನೆಯದು ಗ್ರಂಥ ದೃಷ್ಠಿಯಿಂದ ಹಾಗೂ ಮೂರನೆಯದು ವೃಂದಾವನ ಮಹಿಮೆ ಎಂದೂ ವಿವರಣೆಯನ್ನು ಅವರೇ ನೀಡಿದ್ದಾರೆ. ಧಾರ್ಮಿಕ ಸೌಹಾರ್ದ, ಭಾವೈಕ್ಯಕ್ಕೆ ಒತ್ತು ಕೊಟ್ಟು ದೇಶದೆಲ್ಲಡೆ ಜಾತಿ, ಮತ ಹಾಗೂ ವರ್ಣಬೇಧ ತಾಂಡವವಾಡುತ್ತಿದ್ದಾಗ, “ಜಾತಿಗಿಂತ ನೀತಿ ಮೇಲು, ಮಡಿಗಿಂತ ಭಕ್ತಿ ಮೇಲು” ಎನ್ನುವ ತತ್ವವನ್ನು ವಿಶ್ವಕ್ಕೆ ಸಾರಿ ಭಕ್ತಿಯ ಶಕ್ತಿಯನ್ನು ಆಧುನಿಕ ಯುಗದಲ್ಲಿ ಸಮರ್ಥವಾಗಿ ತೋರಿದ ಯತಿ ಶ್ರೇಷ್ಠರು.
“ಇಂದು ಎನಗೆ ಗೋವಿಂದ” ಹಾಡಿನ ಮೂಲಕ ಹರಿದಾಸರಿಗೆ ಸ್ಫೂರ್ತಿಯಾಗಿ, ವಿಜಯದಾಸರಿಗೆ ದರ್ಶನ ನೀಡಿ, ಗೋಪಾಲದಾಸರಿಗೆ ದಿಕ್ಕಾಗಿ, ಜಗನ್ನಾಥದಾಸರಿಗೆ ದೆಸೆಯಾಗಿ, ಮುಂದೆ ಬಂದ ದಾಸ ಪಂಥದವರಿಗೆ ಪ್ರೇರಕ ಶಕ್ತಿಯಾದವರು ಶ್ರೀ ರಾಘವೇಂದ್ರ ಸ್ವಾಮಿಗಳು, ಭಕ್ತ ವೃಂದವನ್ನು ಭಗವಂತನೆಡೆಗೆ ಕರೆದೊಯ್ಯುವ ಹರಿಗೋಲಾದವರು.
ಶ್ರೀ ರಾಘವೇಂದ್ರರು “ಹೃದಯ – ಬುದ್ಧಿ”ಗಳ ಸಂಗಮವಾದಂತೆ ಇದ್ದವರು. ಇವರಲ್ಲಿ ಭಾವ ಜೀವನವು, ಹರಿತವಾದ ತೀಕ್ಷ್ಣ ಬುದ್ಧಿಯು ಮಧುರವಾಗಿ ಸಮನ್ವಯಗೊಂಡಿತ್ತು. ಅವರು ಶುಷ್ಕ ವೇದಾಂತಗಳಾಗಿರಲಿಲ್ಲ. ಸಾಹಿತ್ಯ ಕಲೆ-ಸಂಗೀತಗಳ ಆರಾಧಕರೂ ಆಗಿದ್ದರು. ಜನ್ಮ ತಾಳಿದ್ದು ಸಾಮಾನ್ಯವಾದ ಕುಟುಂಬದಲ್ಲಾದರೂ ಸಾಧನೆ – ತಪಸ್ಸಿನಿಂದ ದೈವತ್ವಕ್ಕೆ ಏರಿದವರು. “ಸಾಧಕ – ಸಂಸಾರಿ ಸಂಸಾರದಲ್ಲಿದ್ದರೂ ಸಂಯಮದಿಂದ ಬದುಕನ್ನು ಹೇಗೆ ಸಾಧಿಸಿ – ಸನ್ಯಾಸಿಯಾಗಿ ಬೃಹತ್ ಕುಟುಂಬಿಯಾದ ಎಂಬುದು ಅವರ ಜೀವನ ಗಾಥೆ ನಮಗೆ ಮಾದರಿ.
ರಾಘವೇಂದ್ರರು ಭೌತಿಕ ನೆಲೆಯಲ್ಲಿ ಅದೃಶ್ಯರಾದರೂ “ಕುಂದದೆ ವರ ಮಂತ್ರಾಲಯ”ದಲ್ಲಿ ಅದ್ಯಪಿ ಸನ್ನಿಹಿತರಾಗಿದ್ದಾರೆಂದು ಭಕ್ತರ ನಂಬಿಕೆ. ಮಂಚಾಲೆ ಮಂತ್ರಾಲಯವಾದದುದು ರಾಘವೇಂದ್ರಸ್ವಾಮಿಗಳು ಇದನ್ನು ತಮ್ಮ ನಿರ್ಣಯ ಕ್ಷೇತ್ರವಾಗಿ ಆರಿಸಿಕೊಂಡ ನಂತರವೇ. ಬೃಂದಾವನಕ್ಕೆಂದು ಭೂಮಿಯನ್ನು ಅಗೆಯುತ್ತಿದ್ದಾಗ ರಾಶಿ ರಾಶಿ ಯಾಗಿ ಇದ್ದಿಲು ದೊರೆಕಿತೆಂದು, ಪ್ರಹ್ಲಾದನು ಯಾಗ ಮಾಡಿದ ಸ್ಥಳವೇ ಅದೆಂದೂ ನಂಬಿಕೆಯಿದೆ, ಅಂತೂ ಅವರು ಬೃಂದಾವನವಾದ ಸ್ಥಳ ಮಂತ್ರಸಿದ್ದಕ್ಷೇತ್ರವೆಂದು ಪ್ರಸಿದ್ದವಾಯಿತು. ಅವರ ಬೃಂದಾವನಗಳಿರುವೆಡೆಗಳೆಲ್ಲ ಪ್ರದಕ್ಷಿಣೆ, ನಮನಸ್ತುತಿ, ಮೃತ್ತಿಕಾ – ತೀರ್ಥ – ಪಾದೋದಕ ಸೇವನ ಇವು ವ್ಯಾಪಕವಾಗಿ ನಡೆಯುತ್ತಲೆ ಇದೆ.
ವ್ಯಾಸರ ಸೂತ್ರಗಳೆಂಬ ಪಾತ್ರೆಯಲ್ಲಿ ಆಚಾರ್ಯ ಮಧ್ವರ ಭಾಷ್ಯವೆಂಬ ಬತ್ತಿಯನ್ನಿಟ್ಟು ಜಯತೀರ್ಥರ “ಸುಧಾ” ಎಂಬ ತುಪ್ಪ ಹಾಕಿ, ರಾಘವೇಂದ್ರ ಮಂತ್ರ ದೀಪ ಎಂಬ ದೀಪವನ್ನು ಹಚ್ಚಿಟ್ಟ ಜಗನ್ಮಾನ್ಯರು. ಕಲಿಯ ಪ್ರಾಬಲ್ಯಕ್ಕೆ ಒಳಗಾಗಿ ಇನ್ನಿಲ್ಲದ ಸಂಕಷ್ಟಗಳಿಗೆ ಒಳಗಾಗುತ್ತಿರುವ ಸಾತ್ವಿಕ ಜನರಿಗೆ ಮಂತ್ರಾಲಯ ಗುರುರಾಯರು ಬೃಂದಾವನದಲ್ಲಿಯೇ ಸಂಜೀವಿನಿಯಾಗಿ ರಕ್ಷಣೆ ಮಾಡುತ್ತಿರುವರು.
ಧಾರ್ಮಿಕ ಚೌಕಟ್ಟಿನಲ್ಲಿ ಕೇವಲ ಕೆಲವರಿಗೆ ಮಾತ್ರ ದೊರಕುವಂತಾಗಿದ್ದ ‘ಆರಾಧನಾ ಭಾಗ್ಯ’ ಇಂದು ಸಾರ್ವತ್ರಿಕವಾಗಿ, ಉಳ್ಳವರು ,ಇಲ್ಲದವರು ಕೂಡ ಇಷ್ಟಪಟ್ಟು ಆಚರಿಸಬಹುದಾದ ಉತ್ಸವವಾಗಿದೆ. ಇದಕ್ಕೆ ಕಾರಣ ಶ್ರೀರಾಯರ ಸರಳತನ. ತಮ್ಮ ಔದಾರ್ಯ-ತ್ಯಾಗದಿಂದಾಗಿ ಜನ ಮಾನಸದಲ್ಲಿ ನೆಲೆಸಿದವರು. ಗುರುರಾಜರು. ಮುಸ್ಲಿಂ ದೊರೆ ಸಿದ್ದಿಮಸೂದ್ ಖಾನನ ಹೃದಯ ಗೆದ್ದರು, ದನ ಕಾಯುವವನನ್ನೂ ಹರಸಿದರು. ಆಂಗ್ಲಾಧಿಕಾರಿ, ಕ್ರೈಸ್ತಾನುಯಾಯಿ ಸರ್ ಥಾಮಸ್ ಮನ್ರೋ ಕೂಡ ಅಚ್ಚರಿ ಪಡುವಂತೆ ಪವಾಡ ಮೆರೆದರು.
ದೀನನ ಭಕ್ತಿಗೆ ಸೋತು ಹಿಡಿ ಸಾಸಿವೆಗೆ ಮಹತ್ವ ನೀಡಿ ಭಕ್ತಿಯ ಪ್ರಾಧಾನ್ಯವನ್ನು ಸಾರಿದರು. ಮಾತೃಭಾಷೆ ತಮಿಳನ್ನು ಬಳಸಿ, ಕಸ್ತೂರಿ ಕನ್ನಡವನ್ನು ಆಡು ಭಾಷೆಯನ್ನಾಗಿಸಿಕೊಂಡು , ದೇವಭಾಷೆ ಸಂಸ್ಕೃತದಲ್ಲಿ ಗ್ರಂಥ ರಚಿಸಿ, ಬಿಜಾಪುರದ ಸುಲ್ತಾನನೊಟ್ಟಿಗೆ ಉರ್ದುವಿನಲ್ಲಿ ಸಂಭಾಷಿಸಿ, ಮನ್ರೋವಿನೊಟ್ಟಿಗೆ ಆಂಗ್ಲಭಾಷೆಯಲ್ಲಿ ವ್ಯವಹರಿಸಿ, ತೆಲುಗು ನಾಡಿನಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶಿಸಿದ ರಾಯರು, ಭಾಷೆಯ ಭಾವೈಕ್ಯತೆ ಮೆರೆದ ಪ್ರತಿಭಾವಂತರು.
ಶಾಸ್ತ್ರದ ಮೇಲೆ ರಾಯರ ಪ್ರಭುತ್ವ ದೊಡ್ಡದು .ಅವರ ಕೃತಿಗಳ ಅಧ್ಯಯನ ದೊಡ್ಡ ಸಾಧನ , ಅಷ್ಟೇ ಸಿದ್ದಿಯೂ ಕೂಡಾ, ಅವರ ವಿದ್ವತ್ತಿನ ಮುಖವೇ ಅವರ ನಿಜವಾದ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಅವರ ಕೃತಿಗಳು ಪಂಡಿತ ರಂಜಕ, ಪಾಮರ ಬೋಧಕ, ಜ್ಞಾನ ಸಾಧಕ, ವಿದ್ಯಾದಾಯಕ, ಬುದ್ದಿ ಪೋಷಕಗಳಾಗಿವೆ.
ಲೋಕಕಲ್ಯಾಣಕ್ಕಾಗಿಯೇ ಅವತಾರ ಮಾಡಿ, ಭಗವಂತನ ಅತ್ಯದ್ಭುತ ಅವತಾರಕ್ಕೆ ಕಾರಣರಾಗಿ ನಂಬಿ ಬಂದ ಭಕ್ತರನ್ನು ಉದ್ಧಾರದ ಹೆದ್ದಾರಿಯತ್ತ ಕೊಂಡೊಯ್ಯುತ್ತ “ಜಗದ್ಗುರು”ಗಳು ಎಂಬ ಪದಕ್ಕೆ ಅನ್ವರ್ಥನಾಮರಾಗಿ ಕಲ್ಪವೃಕ್ಷ ಕಾಮಧೇನು ಸದೃಶರಾದ, ಅಗಮ್ಯ ಮಹಿಮರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವನ್ನು ಪಂಚರಾತ್ರೋತ್ಸವವಾಗಿ ಶ್ರದ್ಧಾಭಕ್ತ್ಯಾದರಗಳಿಂದ ತದಂಗವಾಗಿ ವಿಶೇಷವಾಗಿ ಪ್ರಾಣದೇವರಿಗೆ ಹಾಗೂ ರಾಯರ ಬೃಂದಾವನಕ್ಕೆ ವಾಯುಸ್ತುತಿ ಪುರಶ್ಚರಣೆ ಪೂರ್ವಕ ಮಧು, ಫಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪ್ರಹ್ಲಾದರಾಜರಿಗೆ ಕನಕಾಭಿಷೇಕ, ಪಾದುಕಾ ಪೂಜೆ, ತುಳಸಿ ಪುಷ್ಪಾರ್ಚನೆ, ನಾದಲಹರಿ ಭವ್ಯ ಮೆರವಣಿಗೆ ರಥೋತ್ಸವದೊಂದಿಗೆ ತುಲಾಭಾರ, ಜ್ಞಾನ ಯಜ್ಞದ ಅಂಗವಾಗಿ ಗುರುರಾಜರ ಮಹಿಮಾ ಕುರಿತು ಉಪನ್ಯಾಸ, ಅಲಂಕಾರ ಪಂಕ್ತಿ , ಅನ್ನಸಂತರ್ಪಣೆ ಏರ್ಪಡಿಸಿದೆ.
ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಯುವ ಸಂಸ್ಕೃತಿ ಚಿಂತಕರು
Discussion about this post