ಕಲ್ಪ ಮೀಡಿಯಾ ಹೌಸ್ | ಮೈಸೂರು |
ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳ ಆರೋಗ್ಯದ ಹಿತದೃಷ್ಠಿಯಿಂದ ಭಾರತೀಯ ರೈಲ್ವೆ ಆಯೋಜಿಸಿರುವ ಸಫಾಯಿ ಮಿತ್ರ ಸುರಕ್ಷಾ ಶಿಬಿರ ಮೈಸೂರು ವಿಭಾಗದಲ್ಲಿ ಯಶಸ್ವಿಯಾಗಿ ನೆರವೇರಿತು.
ಸಫಾಯಿ ಮಿತ್ರರಿಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಅವರ ಆರೋಗ್ಯ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಈ ಶಿಬಿರದ ಉದ್ದೇಶವಾಗಿತ್ತು.
ಈ ಶಿಬಿರಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಕಚೇರಿ ಆವರಣದಲ್ಲಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗೆ ಲಭ್ಯವಿರುವ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ವಿವರಿಸಲಾಯಿತು. ಮೈಸೂರು ವಿಭಾಗವು ತನ್ನ ಮುಂಚೂಣಿ ಕಾರ್ಯಕರ್ತರ ಕಲ್ಯಾಣದತ್ತ ಬದ್ಧವಾಗಿರುವುದನ್ನು ಒತ್ತಿ ಹೇಳಲಾಯಿತು.
ಏನೆಲ್ಲಾ ತಪಾಸಣೆ ಮಾಡಲಾಯ್ತು?
ಈ ಕಾರ್ಯಕ್ರಮದ ಅಂಗವಾಗಿ, ಭಾಗವಹಿಸಿದವರಿಗೆ ಮಾಹಿತಿ ಪತ್ರಿಕೆಗಳನ್ನು ಹಂಚಲಾಗಿದ್ದು, ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ನಡೆಸಲಾಯಿತು. ಈ ಶಿಬಿರದಲ್ಲಿ ಮಧುಮೇಹ, ಕಣ್ಣಿನ ಮಸಕುದೃಷ್ಟಿ (ಕ್ಯಾಟರಾಕ್ಟ್), ರಕ್ತಹೀನತೆ, ರಕ್ತದೊತ್ತಡ, ಅತಿಸ್ಥೂಲತೆ ಮತ್ತು ಆಸ್ಥಮಾ ತಪಾಸಣೆ ನಡೆಸಲಾಯಿತು.
ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಸ್ವಸ್ಥ ನಾರಿ – ಶಕ್ತಿಶಾಲಿ ಕುಟುಂಬ (ಎಸ್’ಎನ್’ಎಸ್’ಪಿ) ಎಂಬ ಪರಿಕಲ್ಪನೆಯನ್ನು ಒತ್ತಿ ಹೇಳಲಾಯಿತು. ನಾಡಿಸ್ಪಂದನ, ರಕ್ತದೊತ್ತಡ, ಎಸ್’ಪಿಒ, ಯಾದೃಚ್ಛಿಕ ರಕ್ತ ಸಕ್ಕರೆ, ಎತ್ತರ, ತೂಕ ಮತ್ತು ಬಿಎಂಐಗಳನ್ನು ಪರಿಶೀಲಿಸಲಾಯಿತು. ಇದಲ್ಲದೆ ಸಾಮಾನ್ಯ ದೇಹಪರೀಕ್ಷೆ, ಸಿಸ್ಟಮಿಕ್ ಪರೀಕ್ಷೆ, ಸ್ತನಪರೀಕ್ಷೆ ಮತ್ತು ಇಸಿಜಿ ನಡೆಸಲಾಯಿತು. ಸಣ್ಣಪುಟ್ಟ ಅಸ್ವಸ್ಥತೆಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತು. ಸಿಬ್ಬಂದಿಗೆ ಆರೋಗ್ಯ ಕಾಪಾಡುವ ಉತ್ತಮ ಅಭ್ಯಾಸಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಎಲ್ಲೆಲ್ಲಿಂದ ಭಾಗಿಯಾಗಿದ್ದರು?
ಮೈಸೂರು ವಿಭಾಗದ ವಿವಿಧ ಆರೋಗ್ಯ ಘಟಕಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ನಡೆದಿದ್ದು, ಮೈಸೂರು ಆರೋಗ್ಯ ಘಟಕದಲ್ಲಿ 80 ಮಂದಿ ಸಫಾಯಿ ಮಿತ್ರರು ತಪಾಸಣೆಗೆ ಒಳಪಟ್ಟರು.
ಇದಲ್ಲದೆ ಸಕಲೇಶಪುರ (07), ಅರಸೀಕೆರೆ (30), ಅಶೋಕಪುರಂ (26), ಕಬಕಪತ್ತೂರು (05), ಹರಿಹರ (29), ದಾವಣಗೆರೆ (16) ಮತ್ತು ಶಿವಮೊಗ್ಗ (40) ಘಟಕಗಳಲ್ಲಿ ಸಹ ಸಿಬ್ಬಂದಿ ಆರೋಗ್ಯ ತಪಾಸಣೆಯಿಂದ ಪ್ರಯೋಜನ ಪಡೆದರು. ಒಟ್ಟು 233 ಮಂದಿ ಸಫಾಯಿ ಮಿತ್ರರು ಮೈಸೂರು ವಿಭಾಗದಾದ್ಯಂತ ಈ ಆರೋಗ್ಯ ತಪಾಸಣೆಯಿಂದ ಲಾಭ ಪಡೆದರು.
ಇನ್ನು, ದಿನಪೂರ್ತಿ ನಡೆದ ಈ ಕಾರ್ಯಕ್ರಮವು ಸಂಪೂರ್ಣವಾಗಿ ಸಫಾಯಿ ಮಿತ್ರರಿಗೆ ಮೀಸಲಾಗಿದ್ದು, ಮೈಸೂರು ವಿಭಾಗದ ಪ್ರಮುಖ ಸ್ಥಳಗಳ ಆರೋಗ್ಯ ಘಟಕಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಪಾಲ್ಗೊಳ್ಳುವಿಕೆಯ ಮೂಲಕ, ಸಫಾಯಿ ಮಿತ್ರರ ಆರೋಗ್ಯ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವತ್ತ ಇದು ಮಹತ್ವದ ಹೆಜ್ಜೆಯಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















