ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯ Kuvempu University ಕಳೆದ ಮೂರು ದಶಕಗಳಿಂದ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಹಲವಾರು ಮಾನದಂಡಗಳಲ್ಲಿ ರಾಜ್ಯದ ಇತರೆ ವಿಶ್ವವಿದ್ಯಾಲಯಗಳನ್ನು ಹಿಂದಿಕ್ಕಿ ಇಡೀ ರಾಷ್ಟವೇ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡುತ್ತಿರುವುದು ಪ್ರಶಂಸನಾರ್ಹ ವಿಚಾರ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ Minister Sudhakar ಪ್ರಶಂಸಿಸಿದರು.
ಕುವೆಂಪು ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನ್ಯಾಕ್’ನಿಂದ ಎ’ ಶ್ರೇಣಿ, ಎನ್ಐಆರ್’ಎಫ್’ನಲ್ಲಿ ಉತ್ತಮ ಸ್ಥಾನ, ಕೆಎಸ್’ಯುಆರ್’ಎಫ್’ನಲ್ಲಿ ಮೂರನೇ ಸ್ಥಾನ, ಸತತ ಐದು ವರ್ಷಗಳಿಂದ ಹೆಚ್ ಇಂಡೆಕ್ಸನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲೇ ಅಗ್ರ ಸ್ಥಾನ, ಹೀಗೆ ಕಳೆದ ದಶಕದಿಂದೀಚೆಗೆ ರಾಜ್ಯದ ಶೈಕ್ಷಣಿಕ ರಂಗದಲ್ಲಿ ಮಹತ್ವದ ಸಂಸ್ಥೆಗಾಗಿ ಬೆಳೆದು ನಿಂತಿದೆ ಎಂದರು.
ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಸುಮಾರು 17 ಪ್ರಾಜೆಕ್ಟ್’ಗಳನ್ನು ನಡೆಸಲಾಗುತ್ತಿದ್ದು, 04 ಪೇಟೆಂಟ್’ಗಳನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹೊಂದಿದ್ದಾರೆ. ಅಲ್ಪಾವಧಿಯಲ್ಲಿಯೇ ಇಂತಹ ಅಭೂತಪೂರ್ವ ಸಾಧನೆ ಮಾಡಿರುವ ಕುವೆಂಪು ವಿಶ್ವವಿದ್ಯಾಲಯ ಮಲೆನಾಡಿನ ಶೈಕ್ಷಣಿಕ ಕಾಶಿ ಎಂದರೆ ತಪ್ಪಾಗಲಾರದು ಎಂದರು.
ವಿಶ್ವವಿದ್ಯಾಲಯದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಶಿಕ್ಷಣ ನಿಕಾಯಗಳನ್ನೊಳಗೊಂಡು 33 ವಿಭಾಗಗಳಿದ್ದು, 45ಕ್ಕೂ ಹೆಚ್ಚು ಕೋಸ್’ಗಳನ್ನು ನಡೆಸಲಾಗುತ್ತಿದೆ. ಕಡೂರು ಮತ್ತು ಚಿಕ್ಕಮಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿರುವ ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 110 ಪದವಿ ಕಾಲೇಜುಗಳನ್ನು ಮುನ್ನಡೆಸುತ್ತಿದೆ. ವಿಶ್ವವಿದ್ಯಾಲಯ ಸುಸಜ್ಜಿತ ಜ್ಞಾನಸಹ್ಯಾದ್ರಿ ಮುಖ್ಯಾವರಣದಲ್ಲಿ ಪ್ರತಿ ವರ್ಷ 2500 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸತಿ ಸೌಲಭ್ಯದೊಂದಿಗೆ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು.
ಉದ್ಯೋಗ ಮಾರುಕಟ್ಟೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸ್ಪೋಕನ್ ಇಂಗ್ಲೀಷ್, ಸಂವಹನ ಕೌಶಲಗಳು, ಕಂಪ್ಯೂಟರ್ ತರಬೇತಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್’ಗಳನ್ನು ವಿಶ್ವವಿದ್ಯಾಲಯ ಆರಂಭಿಸಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರವಾಗಿ ತರಬೇತಿ ನೀಡಲು ವಿಶೇಷ ಘಟಕವನ್ನು ಪ್ರಾರಂಭಿಸಲಾಗಿದೆ. ವೃತ್ತಿಯಾಧರಿತ ಕೌಶಲ್ಯಗಳನ್ನು ಒಳಗೊಂಡಿರುವ ಯುವಜನರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುವಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದರು.
ಇಂತಹ ವಿಶ್ವವಿದ್ಯಾಲಯದಿಂದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ, ಸ್ವರ್ಣಪದಕ, ನಗದು ಬಹುಮಾನ, ಪಿಎಚ್’ಡಿ ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು, ಸಂಶೋಧನಾರ್ಥಿಗಳನ್ನು ಅಭಿನಂದಿಸುತ್ತಾ ಅವರುಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ನಮ್ಮ ದೇಶಕ್ಕೆ ಕೀರ್ತಿ ತರಲೆಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















