ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’… ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆರೆ ಬಳುಕಿನಲ್ಲಿ’… ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’… ಗೀತೆಗಳ ಗಾಯನವು ಜಿಲ್ಲಾದ್ಯಂತ ಮಾರ್ದನಿಸಿ, ಕೇಳುಗರ ಕಿವಿಗೆ ತಂಪನ್ನೀಯುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿತು.
2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ನಿಮಿತ್ತ ರಾಜ್ಯ ಸರ್ಕಾರ ವಿಶೇಷ ಗೀತಗಾಯನ ಕಾರ್ಯಕ್ರಮವನ್ನು ಏಕಕಾಲದಲ್ಲಿ(ಬೆಳಿಗ್ಗೆ 11 ಗಂಟೆಗೆ) ರಾಜ್ಯದ್ಯಂತ ಏರ್ಪಡಿಸಿ, ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ನಿತೋತ್ಸವ ಕವಿ ನಿಸಾರ್ ಅಹ್ಮದ್ರವರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗಳನ್ನು ಆಯ್ಕೆ ಮಾಡಿದ ಅನುಸಾರ ಇಂದು ಜಿಲ್ಲಾಡಳಿತದ ಆವರಣ, ಶಿವಪ್ಪನಾಯಕ ಮಾರುಕಟ್ಟೆಯ ಆವರಣ, ಸಿಮ್ಸ್ ಆವರಣ, ಇತರೆ ಶಾಲಾ-ಕಾಲೇಜುಗಳ ಆವರಣ, ಸಂಘ ಸಂಸ್ಥೆಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ಈ ಕನ್ನಡ ಗೀತ ಗಾಯನ ಕಾರ್ಯಕ್ರಮ ಸಂಪನ್ನಗೊಂಡಿತು.
ಜಿಲ್ಲಾಡಳಿತ ಆವರಣದಲ್ಲಿ ಅರುಣ್ಕಮಾರ್ ಮತ್ತು ತಂಡ, ಶಿವಪ್ಪನಾಯಕ ಮಾರುಕಟ್ಟೆ(ಬೇರಿಸ್ ಮಾಲ್) ಆವರಣದಲ್ಲಿ ಭದ್ರಾವತಿ ವಾಸು ಮತ್ತು ತಂಡ, ಸಿಮ್ಸ್ ಆವರಣದಲ್ಲಿ ಶುಭಾ.ಸಿ.ಎಸ್. ಮತ್ತು ತಂಡದೊಂದಿಗೆ ಸ್ಥಳೀಯ ಗಾಯಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ದನಿಗೂಡಿಸಿದರು.
ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಎಡಿಸಿ ನಾಗೇಂದ್ರ ಹೊನ್ನಳ್ಳಿ, ತಹಶೀಲ್ದಾರ್ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಗಾಯನಕ್ಕೆ ದನಿಗೂಡಿಸಿದರು. ಇದೇ ಸಂದರ್ಭದಲ್ಲಿ ಎಡಿಸಿ ನಾಗೇಂದ್ರ ಹೊನ್ನಳ್ಳಿರವರು ಕನ್ನಡ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಿದರು.
ಪಾಲಿಕೆ ಸಹಯೋಗದಲ್ಲಿ ಶಿವಪ್ಪನಾಯಕ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಗೀತಗಾಯನದಲ್ಲಿ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಸುಗಮ ಸಂಗೀತ ಪರಿಷತ್ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗದರ್ಶನ ಮತ್ತು ಇತರೆ ಇಲಾಖೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವು ಶಿಷ್ಟಾಚಾರದಂತೆ ನಾಡಗೀತೆಯೊಂದಿಗೆ ಆರಂಭವಾಗಿ, ಸರ್ಕಾರ ನಿಗದಿಪಡಿಸಿದ 3 ಕನ್ನಡ ಗೀತೆಗಳ ಗಾಯನದ ನಂತರ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಗಾಯಕರು ಧರಿಸಿದ್ದ ಬಿಳಿ ಉಡುಪು ಹಾಗೂ ಸಮೂಹ ಗಾಯನ ಎಲ್ಲರ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post