ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಗವತಿಯ ಮಹಾ ಅನುಗ್ರಹದಿಂದಲೇ ವಿಶ್ವದಲ್ಲಿ ಎಲ್ಲ ರೀತಿಯ ಸತ್ಕಾರ್ಯಗಳು ಸಂಪನ್ನಗೊಳ್ಳುತ್ತಿದೆ. ಹಾಗಾಗಿ ಜಗನ್ ಮಾತೆಯ ಶಕ್ತಿಯ ಅರಿವು ಹೊಂದುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳುವ ಚಿಂತನೆ ನಡೆಸಬೇಕು ಎಂದು ಬೆಂಗಳೂರು ಸಮೀಪದ ಪೋಲೋಹಳ್ಳಿಯ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷೆ ಶ್ರೀ ಮಾತಾಜಿ ವಿವೇಕಮಯಿ ಹೇಳಿದರು
ಸೋಮಿನಕೊಪ್ಪ ಕೆಎಚ್ಬಿ ಪ್ರೆಸ್ ಕಾಲನಿಯ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ನಿಂದ ಶರನ್ನವರಾತ್ರಿ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಎಲ್ಲ ಆಗುಹೋಗುಗಳಿಗೆ ಮಹಾ ಮಾತೆಯೇ ಕಾರಣ. ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹಾತ್ಮರು ದೇವಿಯ ಶಕ್ತಿ, ಇರುವಿಕೆಯ ಸತ್ಯವನ್ನು ಮೌಲ್ಯಯುತ ಸಂದೇಶಗಳ ಮೂಲಕ ನೀಡಿದ್ದಾರೆ. ಪ್ರತಿಯೊಬ್ಬರೂ ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
ಸಮಾಜಸೇವೆಗೆ ನಮ್ಮ ನಾಡಿನ ಸಂಸ್ಕೃತಿ ಯಲ್ಲಿ ವಿಶೇಷ ಮಾನ್ಯತೆ ಇದೆ. ಸೇವೆಯಿಂದ ಜೀವನದಲ್ಲಿ ನೆಮ್ಮದಿ ಪಡೆಯುವ ಜತೆಗೆ ಬದುಕು ಅರ್ಥಪೂರ್ಣವಾಗುತ್ತದೆ. ಹಾಗಾಗಿ ನಾವೆಲ್ಲ ಸಮಾಜದ ಋಣ ತೀರಿಸಲು ಸೇವಕರಾಗೋಣ ಎಂದರು.
ಕುಷ್ಠರೋಗ ಪೀಡಿತರಿಗೆ ಕಲಬುರಗಿಯ ಹಣಮಂತ ದೇವನೂರ ಮಾಡುತ್ತ ಇರುವ ಸೇವೆ ಮಹತ್ತರ ವಾಗಿದೆ. ಇಂಥವರ ಕಾರ್ಯ ದೇಶದ ಜನರಿಗೆ ಆದರ್ಶ ಮತ್ತು ಪ್ರೇರಣಾದಾಯಿ ಆಗಿದೆ. ಅವರಿಗೆ ಜಗನ್ಮಾತೆ ಪ್ರತಿರೂಪವೇ ಆದ ದೊಡ್ಡಮ್ಮ ದೇವಿ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ರಾಷ್ಟ್ರೀಯ ಪುರಸ್ಕಾರ ಪಡೆದ ಕಲಬುರಗಿಯ ಹಣಮಂತ ದೇವನೂರ ಮಾತನಾಡಿ, ನನ್ನ ಸಣ್ಣ ಸೇವೆ ಗುರುತಿಸಿ ಇಂತಹ ದೊಡ್ಡ ಪುರಸ್ಕಾರ ಮತ್ತು ಗೌರವ ನೀಡಿರುವುದು ಸಂತಸ ತಂದಿದೆ. ದೇವಿಯ ಅನುಗ್ರಹದಿಂದ ನಾನು ಈ ಪ್ರಶಸ್ತಿಗೆ ಭಾಜನನಾಗಿದ್ದೇನೆ. ಇದರಿಂದ ನನ್ನ ಸೇವೆಗೆ ಇನ್ನಷ್ಟು ಪ್ರೇರಣೆ ದೊರೆತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ದೊಡ್ಡಮ್ಮ ದೇವಿ ಉಪಾಸಕ ಸಿದ್ದಪ್ಪಾಜಿ ಆಶೀರ್ವಚನ ನೀಡಿ, ಜಗನ್ ಮಾತೆಯ ದಿವ್ಯ ಕೃಪೆಯಿಂದ ಸಾಮಾನ್ಯರೂ ವಿಶ್ವ ಮಾನ್ಯರಾಗಿದ್ದಾರೆ ದೇಶದ ಇತಿಹಾಸವನ್ನೇ ನಿರ್ಮಿಸಿ ಮನು ಕುಲದ ಮಹಾನ್ ಗುರುಗಳಾಗಿದ್ದಾರೆ .ಅವರ ಜೀವನವೇ ನಮಗೆ ದೊಡ್ಡ ಸಂದೇಶವಾಗಿದೆ ಎಂದರು.
ಹನುಮಂತ ದೇವನೂರ ಅವರಿಗೆ ಶ್ರೀ ದೊಡ್ಡಮ್ಮದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಹಾಗೂ ಸೌಂದರ್ಯ ಲಹರಿ ಉಪಾಸಕರಾದ ಕಾಮಾಕ್ಷಮ್ಮ ಅವರಿಗೆ ಶ್ರೀ ಲಲಿತಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹೊಸಕೋಟೆ ಶ್ರೀ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ಬ್ರಹ್ಮಮಯಿ, ಶ್ರೀ ಚೈತನ್ಯಮಯಿ ಮಾತಾಜಿ, ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್, ಲೇಖಕಿ ದೀಪ್ತಿ ಪಟವರ್ಧನ್ ಅವರನ್ನು ಸನ್ಮಾನಿಸಲಾಯಿತು. ಯೋಗಾಚಾರ್ಯ ರುದ್ರಾರಾಧ್ಯ, ಚನ್ನಪಟ್ಟಣದ ಮಾತಾ ಶ್ರೀ ಶಾರದಾಶ್ರಮದ ಮಾತಾಜಿ ಜ್ಯೋತ್ಸ್ನಾ ಮಯಿ ಇತರರಿದ್ದರು. ಆರ್ಟ್ ಆಫ್ ಲಿವಿಂಗ್ ತರಬೇತುದಾರ ಶಬರೀಶ್ ಕಣ್ಣನ್ ಅವರಿಂದ ಭಜನೆ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post