ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ ಬಜೆಟ್ ನಂತರದಲ್ಲಿ ಚರ್ಚೆಗೆ ಆಹ್ವಾನಿಸಿದ್ದರೂ ಕೂಡ ಆಡಳಿತ ಪಕ್ಷದ ಸದಸ್ಯರು ಪಲಾಯನ ಮಾಡಿರುವುದನ್ನು ಪಾಲಿಕೆ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಾರಿಯ ಪಾಲಿಕೆ ಬಜೆಟ್ ಜನವಿರೋಧಿಯಾಗಿದೆ. ನಿರೀಕ್ಷೆ ಸುಳ್ಳಾಗಿದೆ. ಸಮಸ್ಯೆಗಳ ಅಧ್ಯಯನವನ್ನೇ ಮಾಡಿಲ್ಲ. ಬಜೆಟ್ಪೂರ್ವ ಸಭೆಗಳಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳ ಪರಿಗಣಿಸಿಲ್ಲ. ಮುಖ್ಯವಾಗಿ ಆದರ್ಶ ವ್ಯಕ್ತಿಗಳ ಹೆಸರಿನ ಯೋಜನೆಗಳೆಲ್ಲ ವಿಫಲವಾಗಿ ಆದರ್ಶ ವ್ಯಕ್ತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಸರ್ಕಾರ ಪಂಚವಾರ್ಷಿಕವಾಗಿ ಹೊಸ ಘೋಷಣೆಗಳನ್ನು 2018ರಿಂದ 2023ರವರೆಗೆ ಕೈಗೊಂಡಿತ್ತು. ಈ ಯೋಜನೆಗಳಿಗೆ ಆದರ್ಶ ಪುರುಶರಾದ ಲವ-ಕುಶ, ಸಿದ್ದಗಂಗಾ ಶ್ರೀಗಳು, ಸ್ವಾಮಿ ವಿವೇಕಾನಂದರು, ಅಬ್ದುಲ್ ಕಲಾಂ, ಪಂಡಿತ್ ದೀನದಯಾಳ್, ಕೆಳದಿ ರಾಣಿ ಚೆನ್ನಮ್ಮ ಹೀಗೆ ಹಲವರ ಹೆಸರಿನಲ್ಲಿ ಕೋಟ್ಯಂತರ ರೂಗಳನ್ನು ಮೀಸಲಾಗಿಟ್ಟಿದ್ದು, ಇದಕ್ಕಾಗಿ ಐದು ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ ಈಗ ಅವರೇ ಕರಪತ್ರದಲ್ಲ ಹೇಳಿರುವಂತೆ ಆದರ್ಶಪುರುಶರ ಹೆಸರಿನಲ್ಲಿ ಇರುವ ಯಾವ ಯೋಜನೆಗಳಿಗೂ ಹಣವನ್ನು ಖರ್ಚು ಮಾಡಿಲ್ಲ. ಇದು ಆದರ್ಶಪುರುಶರಿಗೆ ಮಾಡಿದ ಅವಮಾನ ಎಂದರು.
Also read: ಜಪ ಸಂಕಲ್ಪದಿಂದ ವಿಐಎಸ್ಎಲ್ ಉಳಿಸಲು ಪ್ರಾರ್ಥಿಸಿ: ವಿದ್ವಾನ್ ರಂಗನಾಥ ಶರ್ಮಾ
ಗೋವು ನಮ್ಮ ದೇವತೆ ಎಂದು ಹೇಳಕೊಳ್ಳುವ ಬಿಜೆಪಿಯವರು ಪ್ರಾಣಿಗಳ ಸಂರಕ್ಷಣೆಗೆ 50ಲಕ್ಷ ರೂ.ಗಳನ್ನು ಕಾದಿರಿಸಿತ್ತು. ಆದರೆ ಇಲ್ಲಿಯವರೆಗೆ 1ರೂಪಾಯಿ ಕೂಡ ಖರ್ಚು ಮಾಡಿಲ್ಲ. ಕಸಾಯಿಖಾನೆಗಳ ನಿರ್ಮಾಣಕ್ಕೂ 50ಲಕ್ಷ ಇಟ್ಟಿತ್ತು. ಅದು ಕೂಡ ಖರ್ಚಾಗಿಲ್ಲ. ಗೋವು ಸಂರಕ್ಷಣಾ ಯೋಜನೆಗೆ ಕೂಡ ಹಣ ಖರ್ಚು ಮಾಡಿಲ್ಲ. ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ 40ಲಕ್ಷ ರೂ. ಇಟ್ಟರೆ ಕೇವಲ 10ಲಕ್ಷ ಮಾತ್ರ ಖರ್ಚು ಮಾಡಲಾಗಿದೆ. ಲವ-ಕುಶ ಮಕ್ಕಳ ಕಲ್ಯಾಣ ಯೋಜನೆಗೆ 10ಲಕ್ಷ ಇದ್ದರೂ ಕೂಡ ಇದುವರೆಗೂ 1ಪೈಸೆ ಕೂಡ ಖರ್ಚಾಗಿಲ್ಲ. ಎಲ್ಲಾ ಯೋಜನೆಗಳು ವಿಫಲವಾಗಿವೆ ಎಂದು ದೂರಿದರು.
ಕಸದ ಸಮಸ್ಯೆ ಹಾಗೆಯೇ ಉಳಿದಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆ ಕೂಡ ನೆನೆಗುದಿಗೆ ಬಿದ್ದಿದೆ. ಸುಳ್ಳು ಭರವಸೆಗಳು, ಸುಳ್ಳು ಘೋಷಣೆಗಳು. ಒಟ್ಟಾರೆ ಇದೊಂದು ಬೋಗಸ್ ಬಜೆಟ್ ಆಗಿದೆ. ಕನ್ನಡಿಯೊಳಗಿನ ಗಂಟಾಗಿದೆ. ಜನವಿರೋಧಿಯಾಗಿದೆ ಎಂದು ದೂರಿದರು.
ಸದಸ್ಯ ಹೆಚ್.ಸಿ. ಯೋಗೀಶ್ ಮಾತನಾಡಿ, ಈ ಬಜೆಟ್ನಲ್ಲಿ 35 ವಾರ್ಡುಗಳ ಜನರ ಸಮಸ್ಯೆಗಳಿಗೆ ಒಂದೇ ಒಂದು ಸಮಾಧಾನವಿಲ್ಲ. ಪ್ರತಿ ವರ್ಷದ ಬಜೆಟ್ನಲ್ಲೂ ಹೇಳಿದಂತೆ ಈ ಬಾರಿಯೂ ಆಶ್ವಾಸನೆಗಳನ್ನು ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳ ಬಗ್ಗೆ ಎಲ್ಲರಿಗೂ ಪ್ರೀತಿ ಇದೆ. ಅವರ ಹೆಸರಿನಲ್ಲಿ ವಿದ್ಯಾಸರಸ್ವತಿ ಯೋಜನೆಯನ್ನು ಜಾರಿಗೆ ತಂದಿದ್ದರು. ಅದಕ್ಕಾಗಿ 40 ಲಕ್ಷ ರೂ. ಮೀಸಲಿಟ್ಟಿದ್ದರು. ಐದು ವರ್ಷದಲ್ಲಿ ಕೇವಲ 10 ಲಕ್ಷ ಖರ್ಚು ಮಾಡಿದ್ದಾರೆ. ಇದು ಕೂಡ ಸಮರ್ಪಕವಾಗಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಸದ್ಯರಾದ ಮೆಹಕ್ ಷರೀಫ್, ರಮೇಶ್ ಹೆಗಡೆ, ಆರ್.ಸಿ.ನಾಯಕ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post