ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಂಶೋಧನಾ ಪ್ರವೃತ್ತಿಯಿಂದ ನೂತನ ವಿಷಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬಹುದೆಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ತಿಳಿಸಿದರು.
ಅವರು ಇಂದು ನಗರದ ಸಹ್ಯಾದ್ರಿ ಕಲಾ ಕಾಲೇಜು ಹಾಗೂ ರಾಜ್ಯ ಪತ್ರಾಗಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾರ್ಥಿಗಳಿಗೆ ಏರ್ಪಡಿಸಿದ್ದ ಇಂದಿನ ಸಂಶೋಧನೆಯ ಪರಿಕಲ್ಪನೆಗಳು ಹಾಗೂ ಸಂಶೋಧನೆಯ ವಿವಿಧ ಆಯಾಮಗಳು ಎಂಬ ವಿಷಯದ ಬಗ್ಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ಉಧ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಸಂಶೋಧಕನೂ ಉತ್ತಮ ಸಂಶೋಧಕರಾಗಬೇಕು. ನನ್ನ ಚಿಂತನೆ ಹಾಗೂ, ನನ್ನ ಆಯ್ಕೆಯ ವಿಷಯವೇ ಉತ್ತಮ ಎನ್ನುವ ಮನೋಭಾವನೆ ಹೊಂದಿ ಸಂಶೋಧನಾ ಕಾರ್ಯದಲ್ಲಿ ನಿರತನಾಗಬೇಕು ಎಂದು ಹೇಳಿದರು.
ನಮ್ಮ ಚಿಂತನೆಯ ಸಂದೇಶ ಸಮಾಜಕ್ಕೆ ತಲುಪಬೇಕು ಹಾಗೂ ಒಳಿತಾಗುವಂತಿರಬೇಕು. ಜ್ಞಾನದ ಬಲದಿಂದ ನಾವು ಪ್ರಪಂಚದ ಜ್ಞಾನವನ್ನು ಅರಿಯಬೇಕೆ ಹೊರತು, ಹಣದಿಂದ ತಿರುಗಿದರೆ ಬರುವುದಿಲ್ಲ. ನೀವೆಲ್ಲ ಗುರುಗಳನ್ನು ಮೀರಿಸಿದ ಶಿಷ್ಯರು ಆಗಬೇಕು ನಿಮಗೆ ಮಾರ್ಗದರ್ಶನ ಮಾಡುತ್ತಿರುವ ಗುರುಗಳನ್ನು ನೀವು ಗೌರವಿಸಿ ಅವರ ಉಪದೇಶವನ್ನು ಗೌರವಯುತವಾಗಿ ಪಾಲಿಸಿ ಎಂದು ಸಂಶೋಧನಾರ್ಥಿಗಳಿಗೆ ಕರೆ ನೀಡಿದರು.
ಪ್ರತಿಯೊಬ್ಬರು ಆತ್ಮವಿಶ್ವಾಸವನ್ನು ಹೊಂದಿರಬೇಕು ಯಾವುದೇ ಕಾರಣಕ್ಕೂ ನಮ್ಮ ಬಗ್ಗೆ ನಮಗೆ ಹೀನ ಭಾವನೆ ಬರಬಾರದು. ನೀವು ಯಾವ ವಿಷಯದ ಬಗ್ಗೆ ಸಂಶೋಧನೆಯನ್ನು ಮಾಡುತ್ತಿದ್ದೀರಿ ಅದನ್ನು ಹೇಗೆ, ಯಾವ ವಿಷಯದ ಬಗ್ಗೆ ಎಂಬುದನ್ನು ಇತರರಿಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಮಾರ್ಗದರ್ಶನ ನೀಡಿದರು.
ಸಂಶೋಧನಾ ಪ್ರವೃತ್ತಿಯಿಂದ ನಮ್ಮಲ್ಲಿ ಜ್ಞಾನಾರ್ಜನೆ ಜಾಸ್ತಿಯಾಗುವುದರ ಮೂಲಕ ಹೊಸ ವಿಷಯಗಳನ್ನು ಸಮಾಜಕ್ಕೆ ಕೊಡುವಂತಹ ಪುಣ್ಯದ ಕೆಲಸ ಆಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಂಪಿ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಪ್ರೋ.ಸಿ.ಆರ್. ಗೋವಿಂದ ರಾಜು, ರಾಜ್ಯ ಪತ್ರಗಾರ ಇಲಾಖೆ ಉಪನಿರ್ದೇಶಕ ಡಾ.ಗವಿಸಿದ್ದಯ್ಯ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಿ. ಧನಂಜಯ ಉಪಸ್ಥಿತರಿದ್ದರು.
ಉಪನ್ಯಾಸಕಿ ಶೋಭಾ ಪ್ರಾರ್ಥಿಸಿದರು. ಡಾ. ಕೆ.ಎನ್.ಮಂಜುನಾಥ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡ ಉಪನ್ಯಾಸಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಶಂಭುಲಿಂಗ ಮೂರ್ತಿ ವಂದನಾರ್ಪಣೆ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post