ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವ ಮಕ್ಕಳು ಸದಾ ಕಾಲ ತಲೆ ಬಗ್ಗಿಸಿ ಮೊಬೈಲ್ ನೋಡುತ್ತಾರೋ, ಅವರು ಜೀವನದಲ್ಲಿ ತಲೆ ಎತ್ತುವುದಿಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಂಜಮ್ಮ ಜೋಗತಿ Padmashri awardee Manjamma Jogathi ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯ 11ನೆಯ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡುವ ಮನಃಸ್ಥಿತಿಯಲ್ಲಿ ಪೋಷಕರು ಹೊಂದಿಲ್ಲ. ಬಾಲ್ಯದಲ್ಲಿ ಮಕ್ಕಳ ಸಹಜವಾಗಿ ಬೆಳೆದಾಗ ಮಾತ್ರ ಜೀವನದಲ್ಲಿ ಎಂತಹ ಪರಿಸ್ಥಿತಿಯನ್ನು ಸಹ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳನ್ನು ಹೆರುವುದು ದೊಡ್ಡದಲ್ಲ. ನಾಯಿ, ಹಂದಿಗಳೂ ಸಹ ಹತ್ತಾರು ಮರಿಗಳನ್ನು ಹಾಕುತ್ತವೆ. ಆದರೆ, ಪ್ರಾಣಿಗಳಿಗೂ, ಮನುಷ್ಯರಿಗೂ ಇರುವವೆಂದರೆ ಅದು ಜ್ಞಾನ ಹಾಗೂ ಸಂಸ್ಕಾರ. ಇದನ್ನು ಅರಿತು ಮಕ್ಕಳನ್ನು ಬೆಳೆಸಬೇಕು. ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುವುದು ಮುಖ್ಯವಲ್ಲ. ಬದಲಾಗಿ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಬೆಳೆಸುವುದು ಮುಖ್ಯ ಎಂದರು.
ಮಕ್ಕಳಿಗೆ ಸೈಕಲ್ ಕೊಡಿಸಿ, ಸಹಜವಾಗಿ ಬೆಳೆಯಲು ಬಿಡಿ, ನಮ್ಮ ಸಂಸ್ಕೃತಿಯ ಹಿಂದಿನ ಕಾಲದ ಆಟಗಳನ್ನು ಆಡಲು ಕಲಿಸಿ. ನಮ್ಮ ಹಳೆಯ ಕಾಲದ ಆಟಗಳು ಅತ್ಯಂತ ವೈಜ್ಞಾನಿಕವಾಗಿದ್ದವರು. ಅವುಗಳಿಂದ ದೇಹಾರೋಗ್ಯ ಹಾಗೂ ಮಾನಸಿಕ ಆರೋಗ್ಯ ಚುರುಕಾಗುತ್ತದೆ. ಹೀಗಾಗಿ, ನಮ್ಮ ನೆಲಮೂಲದ ಆಟ ಹಾಗೂ ಸಂಸ್ಕೃತಿಯ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದು ಕರೆ ನೀಡಿದರು.
Also read: ಇಂಡಿಯನ್ ಡೆಂಟಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ಡಾ. ಭರತ್ ಅಧಿಕಾರ ಸ್ವೀಕಾರ
ಇಂದಿನ ಕಾಲದಲ್ಲಿ ಕಲೆ ನಶಿಸುತ್ತಿದೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ಅದು ಸುಳ್ಳು, ಕಲೆ ನಶಿಸುತ್ತಿಲ್ಲ. ಬದಲಾಗಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ಮಕ್ಕಳಲ್ಲಿ ಕಲೆಯೊಂದಿಗೆ ಸಾಹಿತ್ಯ, ಪತ್ರಿಕೆ ಹಾಗೂ ಪುಸ್ತಕ ಓದು ಹವ್ಯಾಸ ಬೆಳೆಸಿ. ಇದರೊಟ್ಟಿಗೆ ಭಾಷೆಯನ್ನು ಕಲಿಸುವುದೂ ಮುಖ್ಯ. ಇಂದಿನ ಜೀವನ ಹಾಗೂ ವ್ಯವಹಾರಕ್ಕಾಗಿ ಇಂಗ್ಲಿಷ್ ಬೇಕು. ಆದರೆ, ಕನ್ನಡಕ್ಕೆ ಮೊದಲನೆಯ ಆದ್ಯತೆ ನೀಡಬೇಕು. ಇಂಗ್ಲಿಷ್ ಉಪ್ಪಿನಕಾಯಿ ರೀತಿಯದ್ದಾದರೆ, ಕನ್ನಡ ಅನ್ನಕ್ಕೆ ಸಮಾನವಾದ ಭಾಷೆ ಎಂದರು.
ಸಹ್ಯಾದ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಧನಜಂಯ್ ಮಾತನಾಡಿ, ನಿಮ್ಮ ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸುವುದು ಎಷ್ಟು ಮುಖ್ಯವೋ, ಮಕ್ಕಳಿಗೂ ಸಹ ಜವಾಬ್ದಾರಿಯನ್ನು ಕಲಿಸಿ. ದೇಶಕ್ಕೆ ಮಕ್ಕಳನ್ನು ಕೊಡುಗೆಯನ್ನಾಗಿ ನೀಡುವ ಜೊತೆಯಲ್ಲಿ ಉತ್ತಮ ಪ್ರಜೆಗಳನ್ನಾಗಿ ನೀಡಿ ಎಂದರು.
ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಆಸಕ್ತಿಯನ್ನು ಅರಿತು ಅದರಲ್ಲೇ ಸಾಧನೆಯ ಮಾಡಲು ಪ್ರೋತ್ಸಾಹ ನೀಡಿ. ಪೋಷಕರಿಂದ ಮಕ್ಕಳನ್ನು ಗುರುತಿಸುವುದಲ್ಲ. ಮಕ್ಕಳಿಂದ ಪೋಷಕರನ್ನು ಗುರುತಿಸುವಂತಾಗಬೇಕು ಎಂದರು.
ಡಿವೈಎಸ್’ಪಿ ಸುರೇಶ್ ಮಾತನಾಡಿ, ಇಂದಿನ ಕಾಲದ ಚಿಕ್ಕ ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಯೋಚನೆ ಹಾಗೂ ದಾರಿ ತಪ್ಪುವ ಆಲೋಚನೆಗಳು ಹೆಚ್ಚಾಗಿ ಬರುತ್ತಿವೆ. ಇದಕ್ಕೆ ಕಾರಣ ಪೋಷಕರು ಹಾಗೂ ಕುಟುಂಬಸ್ಥರಿಂದ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಕೊರತೆಯಾಗುತ್ತಿರುವುದೇ ಆಗಿದೆ. ಮನೆಯಲ್ಲಿ ಸಿಗದ ಭಾವನೆಯನ್ನು ಮಕ್ಕಳು ಹೊರಗೆ ಹುಡುಕುತ್ತಾರೆ. ಇದು ಅವರನ್ನು ದಾರಿ ತಪ್ಪಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ನಿಮ್ಮ ಮಕ್ಕಳಿಗೆ ಮನೆಯಲ್ಲಿ ಹೆಚ್ಚಿನ ಪ್ರೀತಿ, ವಾತ್ಸಲ್ಯ, ಅಂತಃಕರಣ ನೀಡುವ ಜೊತೆಯಲ್ಲಿ ಜವಾಬ್ದಾರಿ ಹಾಗೂ ಒಳ್ಳೆಯದು ಕೆಟ್ಟಡನ್ನು ಅರಿಯುವ ಜ್ಞಾನವನ್ನು ಬೆಳೆಸಿ ಎಂದರು.
ಶಾಲೆಯ ವಾರ್ಷಿಕ ಸಂಚಿಕೆ ಹಾಗೂ ಕ್ಯಾಲೆಂಡರನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆ ಮಾಡಿದರು.
ಪ್ರಾಂಶುಪಾಲರಾದ ಪ್ರಿಯದರ್ಶಿನಿ ಮಾತನಾಡಿ, ಶಾಲೆಯ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಶಾಲಾ ಸಂಯೋಜಕಿ ದಿವ್ಯಾ ಶೆಟ್ಟಿ ವಂದನಾರ್ಪಣೆ ಮಾಡಿದರು.
ಎಲ್ಲ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಾರ್ಷಿಕ ಕ್ರೀಡಾಕೂಟ ಹಾಗೂ ಕಳೆದ ವರ್ಷದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಸೌಲಭ್ಯ ವ್ಯವಸ್ಥಾಪಕ ವಿಜಯ್ ಕುಮಾರ್, ಸಿಇಒ ಸುಮಂತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post