ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಗುಂದ: ಹೊಸಗುಂದ ಉತ್ಸವ ಪ್ರಕೃತಿ-ಸಂಸ್ಕೃತಿ-ಭಕ್ತಿಯ ನೆಲೆಯಾಗಿರುವ ಹೊಸಗುಂದದಲ್ಲಿ ಡಿಸೆಂಬರ್ 5 ರಿಂದ 7ರವರೆಗೆ ಹೊಸಗುಂದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಡಿ.5 ರಿಂದ 7 ರವರೆಗೆ ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಭಗವಂತನ ಉಪಾಸನೆ ಮಾಡಲು ಭಜನೆ, ನೃತ್ಯ, ಸಂಗೀತ, ಕಲೆ, ಸಂಸ್ಕೃತಿ, ಜಾನಪದ ಕಲೆ ಹಾಗೂ ವಿವಿಧ ವಾದ್ಯಗಳ ಕಲೆಯ ಬಗ್ಗೆ ಕಲಾವಿದರು ವಾದ್ಯಗಳನ್ನು ನುಡಿಸಿ ಉತ್ಸವದ ಮೆರೆಗು ಹೆಚ್ಚಿಸಲಿದ್ದಾರೆ.
ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಕಾರ್ತಿಕ ಕೃಷ್ಣ ಸಪ್ತಮಿ ಸೋಮವಾರ ಡಿ.7 ರಂದು ಶ್ರೀ ಉಮಾಮಹೇಶ್ವರನಿಗೆ ಲಕ್ಷ ದೀಪೋತ್ಸವ ಜರುಗಲಿದೆ.
ಡಿ.5 ರಿಂದ 7 ರ ಒಳಗೆ ಹೊಸಗುಂದಕ್ಕೆ ಭೇಟಿ ನೀಡಿದರೆ, ಪ್ರವಾಸದ ಜೊತೆ ಜೊತೆಗೆ, ಉತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬಹುದು.
ಪ್ರಕೃತಿಯ ಮಡಿಲಲ್ಲಿ ಆಚರಿಸುವ ಹೊಸಗುಂದ ಉತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್’ನ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್. ಶಾಸ್ತ್ರಿ ಮತ್ತು ಡಾ.ವಿ.ಆರ್. ಗೌರಿಶಂಕರ್ ಮತ್ತು ಟ್ರಸ್ಟಿಗಳು ಹಾಗೂ ನಿರ್ದೇಶಕರು ಹಾಗೂ ಕಾರ್ಯ ಕಾರಿ ಮಂಡಳಿ ಸದಸ್ಯರು ಪ್ರೀತಿಯಿಂದ ನಾಡಿನ ಸಮಸ್ತ ಭಕ್ತರನ್ನು ಹಾಗೂ ಪ್ರಕೃತಿಯ ಆರಾಧಕರನ್ನು ಹೊಸಗುಂದಕ್ಕೆ ಆಹ್ವಾನಿಸಿದ್ದಾರೆ.
ದೇವಾಲಯದ ಬಗ್ಗೆ
ಶ್ರೀ ಕ್ಷೇತ್ರ ಹೊಸಗುಂದ ಶ್ರೀ ಉಮಾ ಮಹೇಶ್ವರ ದೇವಾಲಯ ಕರ್ನಾಟಕ ಹಲವು ಪರಂಪಾರಿಕ ತಾಣಗಳ ತವರೂರು. ಸಾಗರ ತಾಲೂಕಿನಲ್ಲಿರುವ ಈ ದೇವಾಲಯ ಶಿವಮೊಗ್ಗದಿಂದ ಆನಂದಪುರಂ ಮಾರ್ಗದಲ್ಲಿ ಸಂಚರಿಸಿವ ಮಾರ್ಗದ ಸನಿಹವಿದೆ. ಆನಂದಪುರಂನಿಂದ 8 ಕಿಮೀ ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿಮೀ ಕ್ರಮಿಸಿದರೆ ಸಿಗುವ ಪುಟ್ಟ ಗ್ರಾಮ ಹೊಸಗುಂದ.
ಹೊಸಗುಂದ ಕೇವಲ ಪೂಜಾ ಸ್ಥಳವಲ್ಲ, ಅದು ಪ್ರಕೃತಿ ಪ್ರಿಯರಿಗೆ ಶಾಂತಿಯ ವಾಸಸ್ಥಾನ, ಅಲ್ಲಿನ 600 ಎಕರೆಗೂ ವಿಸ್ತಾರವಾದ ದಟ್ಟಾರಣ್ಯದಲ್ಲಿ ದೇವಾಲಯ ನಗರಿ ತೆರೆದುಕೊಂಡಿದೆ.
ಶ್ರೀ ಉಮಾ ಮಹೇಶ್ವರ ದೇವಾಲಯವು ಶಿಲಾಮಯವಾಗಿದ್ದು ಇಲ್ಲಿನ ಫಲಕಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು, ಸಾಮಾಜಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆ -ಜೊತೆಗೆ ಮಿಥುನ ಶಿಲ್ಪಗಳು ಮನೋಹರವಾಗಿದ್ದು ದೇವಾಲಯವು ಪೂರ್ವಾಭಿಮುಖವಾಗಿದೆ.
ದೇವಾಲಯ 21 ಮೀಟರ್ ಉದ್ದವಿದ್ದು 9 ಮೀಟರ್ ಅಗಲವಿದೆ. ದೇವಾಲಯದ ಪೂರ್ವ ಮತ್ತು ದಕ್ಷಿಣ ಬದಿಗಳಲ್ಲಿ ಪ್ರವೇಶದ್ವಾರವಿದೆ. ಕಲ್ಯಾಣ ಚಾಲುಕ್ಯ ಕಾಲದ ಸ್ಥಂಭ ಮಾದರಿಗಳಲ್ಲಿ ಒಂದಾದ ಪುಷ್ಪದ ಫಲಕಗಳಿವೆ.
ದೇವಾಲಯದ ಸುತ್ತಲೂ ಕೃಷ್ಣನ ಬಾಲಲೀಲೆಗಳು, ರತಿ ಮನ್ಮಥ, ಸಂನ್ಯಾಸಿ, ದರ್ಪಣಸುಂದರಿ, ಮತ್ಸ್ಯ ಕನ್ಯೆ, ಬೇಟೆಗಾರರು, ಬೇಟೆಯ ಸನ್ನಿವೇಶ, ವಾದ್ಯಗಾರರು, ನೃತ್ಯ ಭಂಗಿಗಳು ಮುಂತಾದ ಸಾಮಾಜಿಕ ಜೀವನವನ್ನು ಬಿಂಬಿಸುವ ಶಿಲ್ಪಗಳನ್ನು ಕೆತ್ತಲಾಗಿದೆ.
ಶ್ರೀ ಉಮಾ ಮಹೇಶ್ವರ ದೇವಾಲಯ ಶಿಲ್ಪ ವೈಭವದ ದೇವಾಲಯ:
ಸನ್ನಿಧಾನ
ಶ್ರೀ ಉಮಾ ಮಹೇಶ್ವರ ದೇವಾಲಯ, ಶ್ರೀ ಪ್ರಸನ್ನ ನಾರಾಯಣ ದೇವಾಲಯ, ಶ್ರೀ ಕಂಚಿ ಕಾಳಮ್ಮ ದೇವಾಲಯ, ಶ್ರೀ ಲಕ್ಷ್ಮೀ ಗಣಪತಿ ದೇವಾಲಯ ಹಾಗೂ ಪರಿವಾರ ದೇವತೆಗಳಾದ ಕದಂಬ ನಾಗರ ಮಾದರಿಯ ಚಿಕ್ಕ ಗುಡಿಯಲ್ಲಿ ಶ್ರೀ ವೀರಭದ್ರ ದೇವರು ಮತ್ತು ಶ್ರೀ ಗಣೇಶ – ಸುಬ್ರಹ್ಮಣ್ಯ ಮತ್ತು ಮಹಿಷಾಸುರ ಮರ್ದಿನಿ ದೇವತೆಗಳ ಸಾನಿಧ್ಯವಿತ್ತು ಎಂದು ಅಷ್ಟ ಮಂಗಲ ಪ್ರಶ್ನೆಯಿಂದ ತಿಳಿದುಬಂದಿದೆ.
ಹೊಸಗುಂದ ಇತಿಹಾಸ: ದೇವಾಲಯದ ಜೀರ್ಣೋದ್ಧಾರ
ಕ್ರಿ. ಶ.1995 ರಲ್ಲಿ ಶಿವಮೊಗ್ಗದ ಮಲ್ನಾಡ್ ರಿಸರ್ಚ್ ಅಕಾಡೆಮಿಯ ಹೊಸಗುಂದದ ದಿ.ಎಚ್.ಡಿ. ನಾಗರಾಜಪ್ಪ ಗೌಡರ ಸಹಕಾರದೊಂದಿಗೆ ಇಲ್ಲಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿಚಾರ ಸಂಕಿರಣದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸಿ.ಎಂ. ನಾರಾಯಣ ಶಾಸ್ತ್ರೀಯವರು ದೇವಾಲಯದ ಜೀರ್ಣೋದ್ಧಾರದ ಕೆಲಸವನ್ನು ಪ್ರಾರಂಭ ಮಾಡಿ ಗ್ರಾಮಸ್ಥರನ್ನು ಸೇರಿಸಿ ಶ್ರೀ ಉಮಾಮಹೇಶ್ವರ ಟ್ರಸ್ಟ್ ಸ್ಥಾಪಿಸಿದರು. 2001 ಮೇ 4ರಂದು ಕಾಶಿಯಿಂದ ತಂದಿದ್ದ ನರ್ಮದಾ ಬಾಣಲಿಂಗವನ್ನು ಪ್ರತಿಷ್ಠೆ ಮಾಡಲಾಯಿತು. ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶ್ರೀ ಶಾರದಾ ಪೀಠಾಧೀಶ್ವರರ ಅನುಗ್ರಹದಿಂದ ಪ್ರತಿನಿತ್ಯ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ನೆರವೇರುತ್ತಿದೆ.
ಯೋಜನೆ
ಟ್ರಸ್ಟ್ ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಗೋ ಶಾಲೆ ನಿರ್ಮಾಣ, ನಕ್ಷತ್ರವನ, ಗಿಡ ಮೂಲಿಕಾ ವನಗಳ ನಿರ್ಮಾಣ, ಹೊಸಗುಂದದ ಅಪರೂಪದ ಸಸ್ಯ ಸಂಪತ್ತುಗಳನ್ನು ಉಳಿಸಿ ಬೆಳಸುವ ಯೋಜನೆ, ಹೊಸಗುಂದ ಕೆರೆಯ ಹೊಳೆತ್ತಿಸಿ ಅಂತರ್ ಜಲ ಮಟ್ಟವನ್ನು ಹೆಚ್ಚಿಸುವ ಯೋಜನೆ, ಹೊಸಗುಂದದ 500 ಎಕರೆ ಕಾಡನ್ನು ದೇವರ ಕಾಡು ಎಂದು ಘೋಷಣೆ ಮಾಡಲು ಸರಕಾರದ ಬಳಿ ವಿನಂತಿಸಿಕೊಳ್ಳುವುದು ಹಾಗೂ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ, ಧಾರ್ಮಿಕ ಪ್ರವಾಸಿ ನಗರಿಯನ್ನಾಗಿಸುವುದು ಹತ್ತು ಹಲವಾರು ಯೋಜನೆಗಳನ್ನು ಹೊಂದಿದೆ.
ಹೊಸಗುಂದದ ಬಗ್ಗೆ
ಕ್ರಿಶ 9 ರಿಂದ 13ನೆಯ ಶತಮಾನದವರೆಗೆ ಹೊಸಗುಂದ ಸಾಂತರಸರು ಈ ಪ್ರದೇಶದಲ್ಲಿ ಆಡಳಿತ ನಡೆಸಿದ್ದರು ಎಂಬುದು ಇತಿಹಾಸ ಅಧ್ಯಯನಕಾರರಾದ ಅ.ಸುಂದರಂ, ಡಾ.ಜಿ.ವಿ. ಕಲ್ಲಾಪುರ, ಎಸ್.ಜಿ. ಸಾಮಗ ಮತ್ತಿತರರ ಅಧ್ಯಯನ ಶ್ರಮದಿಂದ ದೃಢಪಟ್ಟಿದೆ.
ಉತ್ಖಖನನ ಸಂದರ್ಭದಲ್ಲಿ ನೂತನ ಶಿಲಾಯುಗಕ್ಕೆ ಸೇರಿದ ಕಲ್ಲಿನ ಆಯುಧಗಳು, ಗಂಗರ ಕಾಲದ ನಾಣ್ಯಗಳು ಲಭಿಸಿದ್ದು, ಈ ಸ್ಥಳದ ಪುರಾತನ ವೈಭವವನ್ನು ಅನಾವರಣಗೊಳಿಸಿರುವ ಬಗ್ಗೆ ಹೊಸಗುಂದ ಇತಿಹಾಸ ನಿಬಂಧನೆಗಳು ಎಂಬ ಗ್ರಂಥದಲ್ಲಿ ಡಾ.ಜಿ.ವಿ. ಕಲ್ಲಾಪುರ (ಗುರುರಾಜ್ ಕಲ್ಲಾಪುರ) ಅವರ ಸಂಪಾದಕತ್ವದಲ್ಲಿ 2001ರಲ್ಲಿ ಪ್ರಥಮ ಆವೃತಿಯನ್ನು ಮಲ್ನಾಡ್ ರಿಸರ್ಚ್ ಅಕಾಡೆಮಿ ಶಿವಮೊಗ್ಗ ಪ್ರಕಟಣೆ ಮಾಡಿದ್ದು ಹೊಸಗುಂದದ ಬಗ್ಗೆ ಹಾಗೂ ಉಮಾಮಹೇಶ್ವರ ದೇವಾಲಯದ ಬಗ್ಗೆ ಈ ಲೇಖನ ಬರೆಯಲು ಡಾ.ಜಿ.ವಿ.ಕಲ್ಲಾಪುರ ಅವರಿಂದ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ಪಡೆದು ಲೇಖನ ಬರೆಯಲಾಗಿದೆ.
ಎಲ್ಲಿದೆ ಹೊಸಗುಂದ?
ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ, ಆನಂದಪುರಂನಿಂದ ಸಾಗರ ಕಡೆ 8 ಕಿಮೀ ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿಮೀ ಕ್ರಮಿಸಿದರೆ ಪುಟ್ಟ ಗ್ರಾಮ ಹೊಸಗುಂದ ಸಿಗುತ್ತದೆ. ಬೆಂಗಳೂರಿನಿಂದ 330 ಕಿಮೀ ದೂರದಲ್ಲಿದೆ.
ಮಾಸ್ಕ್ ಧಾರಣೆ ಕಡ್ಡಾಯ
ಕೊರೋನಾ ವೈರಸ್ ಇರುವ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತ ದೃಷ್ಟಿಯಿಂದ ಭಕ್ತರು ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಹೊಸಗುಂದ ಉತ್ಸವದಲ್ಲಿ ಭಾಗವಹಿಸಿ ಶ್ರೀಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ದೇವಾಲಯದ ಆಡಳಿತ ಮಂಡಳಿಯು ವಿನಂತಿಸಿಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post