ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಏಕೀಕರಣಗೊಂಡು ಅರವತ್ತೆಂಟು ವರ್ಷಗಳೇ ಕಳೆದರು ಇಂದಿಗೂ ಗಡಿನಾಡ ಕನ್ನಡಿಗರು ಅನೇಕ ಸವಾಲುಗಳನ್ನು ಎದುರಿಸುತ್ತಿರುವುದು ದುರಂತ ಎಂದು ಖ್ಯಾತ ಲೇಖಕ ಡಾ.ಕಲೀಂ ಉಲ್ಲಾ ಬೇಸರ ವ್ಯಕ್ತಪಡಿಸಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ National Education Trust ಸಿ. ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ KannadaRajyothsava ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಂಜತಾ ಎಲ್ಲೋರಾದಲ್ಲಿರುವ ಎಲ್ಲೋರ ಇತಿಹಾಸದ ಫಲಕದಲ್ಲಿ ಕನ್ನಡ ಎಂಬ ಪದದ ಉಲ್ಲೇಖವಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಎಂಬ ಹೆಸರಿನ ಹಳ್ಳಿಯಿದೆ. ಇಂದಿಗೂ ಕರ್ನಾಟಕದ ಹೊರತಾಗಿ ಗಡಿನಾಡಿನ ಇತರೇ ಪ್ರದೇಶಗಳಲ್ಲಿ ಸುಮಾರು ಮೂರು ಕೋಟಿ ಕನ್ನಡಿಗರಿದ್ದಾರೆ. ಕರ್ನಾಟಕಕ್ಕೆ ಸೇರಿಕೊಳ್ಳಲು ಅನೇಕ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಿಂದ ಅನೇಕ ಶೋಷಣೆಗಳನ್ನು ಎದುರಿಸುತ್ತಿದ್ದು, ಗಡಿನಾಡ ಕನ್ನಡಿಗರ ಸ್ಥಿತಿಗತಿ ಬದಲಾಗಬೇಕಿದೆ.
ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದೆಡೆ ಸೇರಿಸುವ ದೊಡ್ಡ ಹೋರಾಟವೇ ಏಕೀಕರಣ ಹೋರಾಟ. ಕರ್ನಾಟಕ ಶಬ್ದದ ಪರಿಕಲ್ಪನೆ ತಂದು ಕೊಟ್ಟವರು ಕುವೆಂಪು. ಸ್ವಾತಂತ್ರ ಪೂರ್ವದಲ್ಲಿಯೇ ಅವರು ರಚಿಸಿದ್ದ ನಾಡಗೀತೆಯ ಮೊದಲ ಸಾಲುಗಳು ಕರ್ನಾಟಕದ ಏಕೀಕರಣದ ಅವಶ್ಯಕತೆಯನ್ನು ಸಾರಿ ಹೇಳುತ್ತಿದೆ.
ಕನ್ನಡಕ್ಕೆ ಕನ್ನಡೇತರರ ಕೊಡುಗೆ ಅಪಾರ. ಕನ್ನಡ ಬಹುಮುಖಿಯಾಗಿ ಬೆಳೆಯಲು ಎಲ್ಲಾ ಧರ್ಮದವರು, ಕನ್ನಡೇತರರು ತಮ್ಮ ಬದುಕನ್ನು ಶ್ರಮಿಸಿದ್ದಾರೆ. ಮಾತೃಭಾಷೆ ಬೇರೆಯದೇ ಆದರೂ ಕನ್ನಡದಲ್ಲಿ ಮಹತ್ತರ ಕೊಡುಗೆಗಳನ್ನು ನೀಡಿದ ಸಾಹಿತಿಗಳು, ಚಲನಚಿತ್ರ ನಟರು, ಗಾಯಕರು, ಹೋರಾಟಗರಾರು ಕನ್ನಡದ ಅಸ್ಮಿತೆಗಳಾಗಿ ನಮ್ಮ ಮನದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
Also read: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮಕ್ಕೆ ರಾಜ್ಯಪಾಲರ ಚಾಲನೆ
ಮುಖ್ಯ ಅತಿಥಿಗಳಾಗಿದ್ದ ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಎಸ್.ಗಂಗಾಧರ ಮಾತನಾಡಿ, ವಿವಿಧ ಸಂಸ್ಕೃತಿಯ ಜನರನ್ನು ಒಂದೆಡೆ ಸೇರಿಸುವಲ್ಲಿ ಭಾಷೆ ಕೊಂಡಿಯಾಗಿದೆ. ಯುವ ಸಮೂಹ ಹೆಚ್ಚುಗಾರಿಕೆಗಳ ತೋರ್ಪಡಿಕೆಯ ಹಂಬಲದಲ್ಲಿ ಇತರೇ ಭಾಷೆಗಳ ಮೇಲೆ ಪ್ರಭಾವಕ್ಕೊಳಗಾಗುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡ ಕಲಿಕೆಯ ಅನಿವಾರ್ಯತೆ ಸೃಷ್ಟಿಸಬೇಕಿದೆ. ಕನ್ನಡಕ್ಕೆ ತನ್ನದೇ ಲಿಪಿಯ ಶ್ರೀಮಂತಿಕೆಯಿದ್ದು, ಬರೆದಂತೆ ಉಚ್ಚರಿಸಬಹುದಾದ ಅವಕಾಶವಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವ ಪ್ರಸ್ತುತತೆಯಿದೆ. ನಮ್ಮ ಮಕ್ಕಳು ಆಡುವ ಮತ್ತು ಕಲಿಯುವ ಭಾಷೆಗಳ ನಡುವೆ ಗೊಂದಲವಿದೆ. ಯಾವ ಭಾಷೆಯಲ್ಲಿಯು ಪರಿಪಕ್ವವಾಗದೇ ಅತಂತ್ರರಾಗುತ್ತಿದ್ದಾರೆ. ಮಾತೃಭಾಷೆಯನ್ನು ಪರಿಪಕ್ವವಾಗಿ ಕಲಿಯದ ವ್ಯಕ್ತಿ ಎಂದಿಗೂ ಇತರ ಭಾಷೆಗಳನ್ನು ಸಮರ್ಥವಾಗಿ ಕಲಿಯಲಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ಡಾ.ಕಾಂತರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post