ನಗರದ ಬಿ.ಹೆಚ್. ರಸ್ತೆಯ ಬಾಲಕಿಯರ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಅಗ್ನಿ ಶಾಮಕ ದಳದಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ವಸಂತಕುಮಾರ್ ಮಕ್ಕಳಿಗೆ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ನೀಡಿದರು. ಜೀವ ಹಾನಿ ಮತ್ತು ಸಂಪತ್ತಿನ ರಕ್ಷಣೆಗಾಗಿ 1964 ರಲ್ಲಿ ಮೈಸೂರು ಅಗ್ನಿಶಾಮಕ ಜನ್ಮ ತಾಳಿತು. 1989ರಲ್ಲಿ ಕರ್ನಾಟಕ ಫೈಯರ್ ಸರ್ವಿಸ್ ಆಗಿ ಈಗ ಅದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಎಂದು ನಾಂಕರಣಗೊಂಡು ಎಲ್ಲಾ ರೀತಿಯ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ. ಪ್ರಕೃತಿ ವಿಕೋಪ ಇರಬಹುದು. ಅಗ್ನಿ ಅವಘಡಗಳು, ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಕೂಡ ಎಸ್.ಡಿ.ಆರ್.ಎಫ್. ಜೊತೆಗೂಡಿ ಸೇವೆ ಸಲ್ಲಿಸುತ್ತಿದೆ ಎಂದರು.
4 ವರ್ಗಗಳನ್ನಾಗಿ ಅಗ್ನಿ ವಿಪತ್ತುಗಳನ್ನು ವಿಂಗಡಿಸಲಾಗಿದೆ. ಎ ವರ್ಗದಲ್ಲಿ ಹುಲ್ಲು, ಕಾಟನ್, ಪೇಪರ್, ಮರ, ಪ್ಲಾಸ್ಟಿಕ್ ಮೊದಲಾದವುಗಳಿಗೆ ಬೆಂಕಿ ಹೊತ್ತಿದಾಗ ಯಾವ ರೀತಿ ಆರಿಸಬೇಕು. ಬಿ ವರ್ಗದಲ್ಲಿ ಲಿಕ್ವಿಡ್ ದ್ರವ ಪದಾರ್ಥಗಳು, ಪೆಟ್ರೋಲ್, ಎಣ್ಣೆ, ಡೀಸೆಲ್, ಆಲ್ಕೋಹಾಲ್, ಆಸಿಡ್ ಗಳಿಗೆ ಬೆಂಕಿ ತಗುಲಿದಾದ ಯಾವ ರೀತಿ ಕ್ರಮ ಕೈಗೊಳ್ಳಬೇಕು. ಎಲ್.ಪಿ.ಜಿ. ಗ್ಯಾಸ್ ಲೀಕೇಜ್ ಆಗಿ ಅಥವಾ ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದಾಗ ಯಾವ ಕ್ರಮ ಕೈಗೊಳ್ಳಬೇಕು. ಡಿ ವರ್ಗದಲ್ಲಿ ಮೆಟಲ್, ಕಬ್ಬಿಣದ ವಸ್ತುಗಳು, ಸೋಡಿಯಂ, ಅಲ್ಯೂಮಿನಿಯಂ ಇಂತಹ ವಸ್ತುಗಳು ಬೆಂಕಿಗಾಹುತಿಯಾದಾಗ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಎ ವರ್ಗದಲ್ಲಿ ಬೆಂಕಿ ಸಂಭವಿಸಿದಾಗ ನೀರಿನಿಂದ, ಬಿ ವರ್ಗದಲ್ಲಿ ಬೆಂಕಿ ತಗುಲಿದಾಗ ಬ್ಲಾಂಕೆಟ್ ಅಥವಾ ಫೋಮ್ (ನೊರೆ ರೀತಿಯ ದ್ರವದಿಂದ), ಸಿ ವರ್ಗದಲ್ಲಿ ಬೆಂಕಿ ಹೊತ್ತಿದಾಗ ಯಾವುದೇ ಮೊಬೈಲ್ ಅಥವಾ ಎಲೆಕ್ಟ್ರಿಕ್ ಸ್ವಿಚ್ ಗಳನ್ನು ಆನ್, ಆಫ್ ಮಾಡಲು ಹೋಗಬಾರದು. ಸ್ಥಳದಿಂದ ಹೊರಗೆ ಬರಬೇಕು. ಗಾಳಿಯಾಡುವಂತೆ ವಾತಾವರಣ ಕಲ್ಪಿಸಬೇಕು. ಮತ್ತು ಅದಕ್ಕಾಗಿ ದ್ರವ ರೂಪದ ಲಿಕ್ವಿಡ್ ನಿಂದ ಬೆಂಕಿ ಆರಿಸಲು ವ್ಯವಸ್ಥೆ ಇದೆ. ಡಿ ವರ್ಗದಲ್ಲಿ ಬೆಂಕಿ ಅವಘಡ ಉಂಟದಾಗ ಮೋನೋ ಅಲ್ಯೂಮಿನಿಯಂ ಸಲ್ಫೇಟ್ ಪೌಡರ್ ನಿಂದ ಬೆಂಕಿ ಆರಿಸಬಹುದು. ಎತ್ತರ ಕಟ್ಟಡದಲ್ಲಿ ಬೆಂಕಿ ಹೊತ್ತಿದಾಗ ಗಾಳಿಗಿಂತ ಹೊಗೆ ಹಗುರವಾಗಿರುವುದರಿಂದ ಅದು ಮೇಲಕ್ಕೆ ಚಲಿಸುತ್ತದೆ. ಆಗ ಆದಷ್ಟು ಬಗ್ಗಿ ತೆವಳಿಕೊಂಡು ಹೊರಗೆ ಬರಬೇಕು. ಗಾಬರಿಗೆ ಒಳಗಾಗಬಾರದು. ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಬೇಕು. ಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಕೂಡ ಎಲ್ಲರೂ ಹೊಂದಿರಬೇಕು. ಅತ್ಯಾಧುನಿಕ ವ್ಯವಸ್ಥೆ ಈಗ ಅಗ್ನಿಶಾಮಕ ದಳಕ್ಕೆ ಬಂದಿದೆ. ವಿದ್ಯಾರ್ಥಿಗಳು ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಅವರು ವಿವರಿಸಿದರು.
ಸಾಮಾನ್ಯವಾಗಿ ಬೆಂಕಿ ತಾಗಿ ಉರಿಯುತ್ತಿರುವಾಗ ಸಾಧ್ಯವಾದರೆ ಪಕ್ಕದಲ್ಲಿರುವ ವಸ್ತುಗಳನ್ನು ಮೊದಲು ದೂರ ಮಾಡಬೇಕು ಎಂದು ಮಾಹಿತಿ ನೀಡಿದರು.
ಎಲ್ಲಾ ರೀತಿಯ ಬೆಂಕಿ ನಂದಿಸುವ ವಿಧಿ ವಿಧಾನಗಳ ಬಗ್ಗೆ ಸುಮಾರು 700 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪ್ರಾತ್ಕಕ್ಷಿಕೆ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಅಗ್ನಿಶಾಮಕ ಅಧಿಕಾರಿ ಶಫೀಕ್ ತಹಶೀಲ್ದಾರ್, ಪ್ರಾಂಶುಪಾಲ ಜಯಂತ್ ಎಸ್. ಆಡಳಿತ ಮಂಡಳಿ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಉಪನ್ಯಾಸಕರು, ಅಗ್ನಿಶಾಮಕ ದಳ ಸಿಬ್ಬಂದಿ ಇದ್ದರು.
Discussion about this post