ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಾರ್ನಲ್ಲಿ ಮದ್ಯಪಾನ ಮಾಡಲು ಬಂದ ವೇಳೆ ತನ್ನ ಬ್ಯಾಗ್ ಕಳೆದುಹೋಗಿದೆ ಎಂದು ವ್ಯಕ್ತಿಯೊಬ್ಬ 112 ತುರ್ತು ಪೊಲೀಸ್ ಸಹಾಯವಾಣಿಗೆ (112 Emergency Police Helpline) ಸುಳ್ಳು ಕರೆ ಮಾಡಿದ ಘಟನೆ ಶಿವಮೊಗ್ಗದ (Shivamogga) ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಬಾರ್ಗೆ ಬರುವಾಗಲೇ ಯಾವುದೇ ಬ್ಯಾಗ್ ತಂದಿರಲಿಲ್ಲ ಎಂಬುದು ತಿಳಿದುಬಂದಿದೆ.
ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ 112 ಸಹಾಯವಾಣಿಗೆ ಕರೆ ಮಾಡಿ, ತಾನು ಬಾರ್ನಲ್ಲಿ ಮದ್ಯಪಾನ ಮಾಡಲು ಬಂದಿದ್ದಾಗ ತನ್ನ ಬ್ಯಾಗ್ ಕಳೆದುಹೋಗಿದೆ ಎಂದು ದೂರು ನೀಡಿದ್ದಾನೆ. ತುರ್ತು ಕರೆ ಬಂದ ಹಿನ್ನೆಲೆಯಲ್ಲಿ 112 ಸಿಬ್ಬಂದಿ ತಕ್ಷಣವೇ ವ್ಯಕ್ತಿ ತಿಳಿಸಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಾರ್ ಮಾಲೀಕರ ಬಳಿ ವಿಚಾರಣೆ
ಸ್ಥಳಕ್ಕೆ ಆಗಮಿಸಿದ ಪೊಲೀಸರು, ವ್ಯಕ್ತಿ ಹೇಳಿದಂತೆ ಬ್ಯಾಗ್ ಕಳೆದುಹೋಗಿದೆಯೇ ಎಂಬ ಬಗ್ಗೆ ಬಾರ್ ಮಾಲೀಕರ ಬಳಿ ವಿಚಾರಿಸಿದ್ದಾರೆ. ಆದರೆ ಬಾರ್ ಮಾಲೀಕರು, ಸಂಬಂಧಪಟ್ಟ ವ್ಯಕ್ತಿ ಬಾರ್ಗೆ ಬಂದಾಗ ಯಾವುದೇ ಬ್ಯಾಗ್ ತೆಗೆದುಕೊಂಡು ಬಂದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಆದರೂ ಪೊಲೀಸರು ವಿಚಾರಣೆಯನ್ನು ಅಲ್ಲಿಗೆ ನಿಲ್ಲಿಸದೆ, ಕರೆ ಮಾಡಿದ ವ್ಯಕ್ತಿಯಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ನಂತರ ವ್ಯಕ್ತಿಯ ಮಗಳಿಗೆ ಕರೆ ಮಾಡಿ ಬ್ಯಾಗ್ ಬಗ್ಗೆ ಮಾಹಿತಿ ಕೇಳಿದ್ದಾರೆ.
Also read>> ಭದ್ರಾವತಿ | ವೆಂಟಿಲೇಟರ್ ಮೂಲಕ ನುಗ್ಗಿ ಚಿನ್ನಾಭರಣ ಕಳ್ಳತನ | 2 ಅಪ್ರಾಪ್ತರ ಬಂಧನ
ಮಗಳ ಬಳಿ ಬಯಲಾಯ್ತು ಅಸಲಿ ಸಂಗತಿ
ಪೊಲೀಸರು ವ್ಯಕ್ತಿಯ ಮಗಳೊಂದಿಗೆ ಮಾತನಾಡಿದಾಗ ಪ್ರಕರಣದ ಅಸಲಿ ಸಂಗತಿ ಬಯಲಾಗಿದೆ. ಆ ವ್ಯಕ್ತಿ ಮದ್ಯಪಾನ ಮಾಡಿದ ಬಳಿಕ ಈ ರೀತಿ ಸುಮ್ಮನೆ 112 ತುರ್ತು ಪೊಲೀಸ್ ಸಹಾಯವಾಣಿಗೆ ಆಗಾಗ್ಗೆ ಕರೆ ಮಾಡುತ್ತಾರೆ ಎಂದು ಮಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಮಾಹಿತಿ ತಿಳಿದ ಬಳಿಕ, ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಅನಗತ್ಯವಾಗಿ ತುರ್ತು ಸೇವೆಯನ್ನು ಬಳಸಬಾರದು ಎಂದು ಸಂಬಂಧಪಟ್ಟ ವ್ಯಕ್ತಿಗೆ 112 ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.



ತುರ್ತು ಸೇವೆಯ ದುರುಪಯೋಗ ಬೇಡ
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಕ್ಷಣದ ಪೊಲೀಸ್ ನೆರವು ಒದಗಿಸುವ ಉದ್ದೇಶದಿಂದ 112 ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಆದರೆ ಸುಳ್ಳು ಕರೆಗಳು ಮತ್ತು ಅನಗತ್ಯ ದೂರುಗಳು ಸಿಬ್ಬಂದಿಯ ಸಮಯವನ್ನು ವ್ಯರ್ಥಗೊಳಿಸುವುದರ ಜೊತೆಗೆ, ನಿಜವಾದ ತುರ್ತು ಸಂದರ್ಭದಲ್ಲಿ ಸಹಾಯದ ಅಗತ್ಯವಿರುವವರಿಗೆ ತೊಂದರೆ ಉಂಟುಮಾಡಬಹುದು.
ಈ ಹಿನ್ನೆಲೆಯಲ್ಲಿ ಸುಳ್ಳು ಮಾಹಿತಿ ನೀಡಿ ಅಥವಾ ಅನಗತ್ಯವಾಗಿ 112 ಸಹಾಯವಾಣಿಗೆ ಕರೆ ಮಾಡದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







