ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಲಕ್ರಮೇಣ ವೀರರು, ಶೂರರು ಹಾಗೂ ಜ್ಞಾನಿಗಳನ್ನು ಜನರು ಮರೆತುಬಿಡಬಹುದು. ಆದರೆ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ ಉತ್ತಮ ಕೊಡುಗೆ ನೀಡಿದ ವ್ಯಕ್ತಿಗಳು ಮಾತ್ರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಪದ್ಮಭೂಷಣ ಪುರಸ್ಕೃತ, ಬಹುಶ್ರುತ ವಿದ್ವಾಂಸ ಹಾಗೂ ಶತವಾಧಾನಿ ಡಾ. ಆರ್. ಗಣೇಶ್ ಶಿವಮೊಗ್ಗದಲ್ಲಿ (Shivamogga) ಅಭಿಪ್ರಾಯಪಟ್ಟರು.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಹಸೂಡಿ ವೆಂಕಟಶಾಸ್ತ್ರಿ ಕುಟುಂಬದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಸೂಡಿ ವೆಂಕಟಶಾಸ್ತ್ರಿ ದತ್ತಿನಿಧಿ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
Also Read>> ಶಂಕರರು ಸೈನ್ಯ, ಸಂಪತ್ತುಗಳಿಲ್ಲದೇ ಧರ್ಮ ಸಂರಕ್ಷಿಸಿದರು | ರಾಮಚಂದ್ರಾಪುರ ಶ್ರೀ
ಹಸೂಡಿ ವೆಂಕಟಶಾಸ್ತ್ರಿಗಳು ನಿಧನ ಹೊಂದಿ ಹಲವು ದಶಕಗಳು ಕಳೆದರೂ, ಇಂದಿಗೂ ಅವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದು ಅವರು ಸಮಾಜಕ್ಕಾಗಿ ಮಾಡಿದ ಸೇವೆ ಹಾಗೂ ಸತ್ಕಾರ್ಯಗಳಿಗೆ ದೊರೆತ ಗೌರವದ ಪ್ರತೀಕವಾಗಿದೆ ಎಂದು ಹೇಳಿದರು.
ಸತ್ಕಾರ್ಯ ಎಂದಿಗೂ ಅಳಿಯುವುದಿಲ್ಲ
ಜ್ಞಾನಿಗಳು ಕಾಲಕ್ರಮೇಣ ತಾವು ಕಲಿತ ವಿದ್ಯೆಯನ್ನು ಮರೆಯಬಹುದು. ಆಳವಾಗಿ ಬೇರುಬಿಟ್ಟ ಮರ ಕೂಡ ಒಂದು ದಿನ ನೆಲಕ್ಕುರುಳಬಹುದು. ಸದಾ ತುಂಬಿ ಹರಿಯುವ ನದಿಯೂ ಒಂದು ಸಂದರ್ಭದಲ್ಲಿ ಬತ್ತಿಹೋಗಬಹುದು. ಆದರೆ ಸತ್ಕಾರ್ಯ, ದಾನಧರ್ಮ, ಭಗವಂತನ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳು ಎಂದಿಗೂ ಜನಮನದಿಂದ ಅಳಿದು ಹೋಗುವುದಿಲ್ಲ ಎಂದು ಡಾ. ಗಣೇಶ್ ಹೇಳಿದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ‘ಪುಣ್ಯ’ ಎಂಬ ಪರಿಕಲ್ಪನೆಗೆ ಅಪಾರ ಮಹತ್ವವಿದೆ. ಧಾರ್ಮಿಕ ದೃಷ್ಟಿಯಿಂದಲೂ ಪುಣ್ಯಕ್ಕೆ ವಿಶೇಷ ಸ್ಥಾನಮಾನವಿದ್ದು, ದಾನ, ಧರ್ಮ ಹಾಗೂ ಸಮಾಜಮುಖಿ ಕಾರ್ಯಗಳಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಮುಂದುವರಿದಿದೆ. ಈ ನಂಬಿಕೆಗೆ ಪುರಾಣಗಳಲ್ಲಿ ಉಲ್ಲೇಖವಾಗಿರುವ ಅನೇಕ ಘಟನೆಗಳು ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು.
ಗುರುಪೂರ್ಣಿಮೆಯ ಮಹತ್ವ ವಿವರಿಸಿದ ಗಣೇಶ್
ನಮ್ಮ ಸಂಸ್ಕೃತಿಯ ಪ್ರತಿಯೊಂದು ಆಚರಣೆಯೂ ವಿಶೇಷ ಅರ್ಥವನ್ನು ಹೊಂದಿದೆ. ಅದರಲ್ಲೂ ಗುರುಪೂರ್ಣಿಮೆಗೆ ಅತ್ಯಂತ ಮಹತ್ವವಿದೆ ಎಂದು ಅವರು ಹೇಳಿದರು.
ವೇದವ್ಯಾಸರು ರಚಿಸಿದ ಗ್ರಂಥಗಳು ಭಾರತೀಯ ಸಂಸ್ಕೃತಿಯ ಅಡಿಪಾಯವಾಗಿದ್ದು, ಅವರು ಕಲಿತಿದ್ದ ನಾಲ್ಕು ವೇದಗಳನ್ನು ನಾಲ್ವರು ಶಿಷ್ಯರಿಗೆ ಬೋಧಿಸುವ ಮೂಲಕ ವೇದ ಪರಂಪರೆಯ ಉಳಿವು ಮತ್ತು ಬೆಳವಣಿಗೆಗೆ ಕಾರಣಕರ್ತರಾದರು. ಅದಕ್ಕಾಗಿ ಅವರ ಜನ್ಮದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ವೇದಾಂತದ ನಿರ್ಮಾಪಕರಾದ ವೇದವ್ಯಾಸರು ಐತಿಹಾಸಿಕ ಮಹಾಗ್ರಂಥ ಮಹಾಭಾರತವನ್ನು ರಚಿಸಿದ್ದು, 18 ಪುರಾಣಗಳಿಗೂ ಅವರೇ ಮೂಲಕರ್ತರು ಎಂಬುದು ಪೂರ್ವಿಕರ ನಂಬಿಕೆಯಾಗಿದೆ ಎಂದು ಹೇಳಿದರು.

Shivamogga : ಈ ಗೌರವ ಪೂರ್ವಜನ್ಮದ ಸುಕೃತ
ವೇದವ್ಯಾಸರ ಜಯಂತಿಯ ದಿನವೇ ಹಸೂಡಿ ವೆಂಕಟಶಾಸ್ತ್ರಿಗಳ ಹೆಸರಿನ ದತ್ತಿನಿಧಿ ಪುರಸ್ಕಾರ ನನಗೆ ಲಭಿಸಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದು ಡಾ. ಆರ್. ಗಣೇಶ್ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ ಭಾಗವತ್ ವಹಿಸಿದ್ದರು.
ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಹಸೂಡಿ ವೆಂಕಟಶಾಸ್ತ್ರಿಗಳ ಕುಟುಂಬದ ಸದಸ್ಯರಾದ ಪೊ. ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ ಮತ್ತು ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾರದಾಪೀಠದ ಆಸ್ಥಾನ ಪಂಚಾಂಗಕರ್ತ ವೇ.ಬ್ರ. ಶ್ರೀ ತಟ್ಟುವಟ್ಟು ವಾಸುದೇವ ಜೋಯಿಸರು ಹಸೂಡಿ ವೆಂಕಟಶಾಸ್ತ್ರಿ ದತ್ತಿನಿಧಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬ್ರಾಹ್ಮಣ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಹಸೂಡಿ ವೆಂಕಟಶಾಸ್ತ್ರಿಗಳ ಸೇವೆಯನ್ನು ಸ್ಮರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









