ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹರೋಹರ ಜಾತ್ರೆಯ (Harohara Jatre) ಅಂಗವಾಗಿ ಗುಡ್ಡೆಕಲ್ಲಿನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಜಾತ್ರೆಯ ಹಿನ್ನೆಲೆಯಲ್ಲಿ ಶಿವಮೊಗ್ಗ (Shivamogga) ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸಿದರು.
ಬೆಳಗ್ಗೆಯಿಂದಲೇ ದೇವಸ್ಥಾನದ ಸುತ್ತಮುತ್ತ “ಹರೋಹರ… ಹರೋಹರ…” ಎಂಬ ಘೋಷಣೆ ಮೊಳಗುತ್ತಿತ್ತು. ದೂರದ ಊರುಗಳಿಂದ ಭಕ್ತರು ಗುಂಪು ಗುಂಪಾಗಿ ಪಾದಯಾತ್ರೆಯಲ್ಲಿ ಆಗಮಿಸಿ, ದೇವರ ನಾಮಸ್ಮರಣೆ ಮಾಡುತ್ತಾ ತಮ್ಮ ಹರಕೆಗಳನ್ನು ಅರ್ಪಿಸಿದರು.
ಕಾವಡಿ ಹೊತ್ತು ಹರಿದುಬಂದ ಭಕ್ತರು
ಆಷಾಢ ಮಾಸದ ಆಡಿಕೃತಿಕೆ ಅಂಗವಾಗಿ ಭಕ್ತರು ಹಳದಿ ಬಣ್ಣದ ಉಡುಪು ಹಾಗೂ ವಸ್ತ್ರಗಳನ್ನು ಧರಿಸಿ ಬಾಲಸುಬ್ರಹ್ಮಣ್ಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದರು. ವಿಶೇಷವಾಗಿ ಕಾವಡಿ ಹೊತ್ತು ಬಂದ ಭಕ್ತರು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದರು.
ನವಿಲು ಕಾವಡಿ, ಅರಮನೆ ಕಾವಡಿ, ಎಳನೀರು ಕಾವಡಿ, ಜೇನುತುಪ್ಪ ಕಾವಡಿ, ಹಾಲು ಕಾವಡಿ ಹಾಗೂ ಪುಷ್ಪ ಕಾವಡಿಗಳನ್ನು ಹೊತ್ತು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು. ಕಾವಡಿ ಹೊತ್ತ ಭಕ್ತರು ಮೇಳದ ತಾಳಕ್ಕೆ ಹೆಜ್ಜೆ ಹಾಕುತ್ತಾ, “ಹರೋಹರ… ಹರೋಹರ…” ಎಂದು ಬಾಲಸುಬ್ರಹ್ಮಣ್ಯ ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಪಾದಯಾತ್ರೆಯಲ್ಲಿ ಸಾಗಿದರು.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ವಿವಿಧ ವಯೋಮಾನದ ಭಕ್ತರು ಕಾವಡಿ ಹೊತ್ತು ಹರಕೆ ತೀರಿಸುತ್ತಿರುವುದು ಕಂಡುಬಂತು.
ವಿಶಿಷ್ಟ ಹರಕೆ ಸಲ್ಲಿಸಿದ ಭಕ್ತರು
ಜಾತ್ರೆಯಲ್ಲಿ ಕೆಲ ಭಕ್ತರು ದೇಹ ದಂಡನೆಯಂತಹ ಕಠಿಣ ಹರಕೆಗಳನ್ನು ಸಲ್ಲಿಸಿದರು. ಕೆಲವರು ನಾಲಿಗೆಗೆ ಬೆಳ್ಳಿ ಅಥವಾ ಕಬ್ಬಿಣದ ತ್ರಿಶೂಲವನ್ನು ಚುಚ್ಚಿಸಿಕೊಂಡು, ಮತ್ತಿತರರು ಕೆನ್ನೆಗೆ ಉದ್ದವಾದ ಕಬ್ಬಿಣದ ತ್ರಿಶೂಲಗಳನ್ನು ಚುಚ್ಚಿಸಿಕೊಂಡು ಹರಕೆ ತೀರಿಸಿದರು.
ಇನ್ನು ಕೆಲವರು ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಂಡಿಗಳನ್ನು ಚುಚ್ಚಿಸಿಕೊಂಡು, ಅದರ ಮೂಲಕ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಸಣ್ಣ ತೇರನ್ನು ಎಳೆದು ಹರಕೆ ಸಲ್ಲಿಸಿದರು. ಕೆಲ ಭಕ್ತರು ನಿಂಬೆಹಣ್ಣುಗಳನ್ನು ದಾರದಲ್ಲಿ ಪೋಣಿಸಿ, ಸೂಜಿಯ ಮೂಲಕ ಚರ್ಮಕ್ಕೆ ಚುಚ್ಚಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಿದರು.
ಕೆನ್ನೆಗೆ ಸುಮಾರು 3ರಿಂದ 15 ಅಡಿ ಉದ್ದದ ಹಾಗೂ 2ರಿಂದ 15 ಕೆ.ಜಿ. ತೂಕದ ಕಬ್ಬಿಣದ ತ್ರಿಶೂಲಗಳನ್ನು ಚುಚ್ಚಿಸಿಕೊಂಡ ಭಕ್ತರೂ ಜಾತ್ರೆಯಲ್ಲಿ ಕಂಡುಬಂದರು.
ಭಕ್ತರ ಇಂತಹ ವಿಶಿಷ್ಟ ಹರಕೆ ಸಲ್ಲಿಸುವ ದೃಶ್ಯಗಳು ಜಾತ್ರೆಗೆ ಆಗಮಿಸಿದ್ದವರ ಗಮನ ಸೆಳೆದವು. ಭಕ್ತರ ಭಕ್ತಿಯ ಪರಾಕಾಷ್ಠೆ ನೋಡಿದವರಿಗೆ ಮೈ ಜುಮ್ಮೆನ್ನಿಸುವಂತಿತ್ತು.
ಮಳೆಗೂ ಜಗ್ಗದ ಭಕ್ತರ ಉತ್ಸಾಹ
ಭದ್ರಾವತಿ, ಹೊಳೆಹೊನ್ನೂರು, ಚನ್ನಗಿರಿ, ಹೊನ್ನಾಳಿ, ತರೀಕೆರೆ, ಲಕ್ಕವಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಿಂದ ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೂ ದೇವಸ್ಥಾನಕ್ಕೆ ಆಗಮಿಸುತ್ತಲೇ ಇದ್ದರು.
ಜಾತ್ರೆಯ ಸಂದರ್ಭದಲ್ಲಿ ಆಗಾಗ್ಗೆ ಜೋರಾಗಿ ಮಳೆ ಸುರಿದರೂ ಭಕ್ತರ ಉತ್ಸಾಹ ಮಾತ್ರ ಕುಗ್ಗಲಿಲ್ಲ. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಭಕ್ತರು ದೇವಸ್ಥಾನದತ್ತ ಹರಿದುಬಂದರು. ಹರಕೆ ಹೊತ್ತವರು ಪಾದಯಾತ್ರೆಯಲ್ಲಿ ಆಗಮಿಸಿದರೆ, ಇನ್ನೂ ಕೆಲವರು ದ್ವಿಚಕ್ರ ವಾಹನ, ಕಾರು, ಟ್ರ್ಯಾಕ್ಟರ್ ಹಾಗೂ ಬಸ್ಗಳ ಮೂಲಕ ದೇವಸ್ಥಾನಕ್ಕೆ ಬಂದರು.
Also read>> ಸಚಿವರಾದ ಬಳಿಕ ಮೊದಲ ಬಾರಿಗೆ ಸೊರಬಕ್ಕೆ ಮಧು ಬಂಗಾರಪ್ಪ ಭೇಟಿ: ಅದ್ದೂರಿ ಸ್ವಾಗತ
ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ವತಿಯಿಂದ ವಿಶೇಷ ಬಸ್ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಪೊಲೀಸ್ ಬಿಗಿ ಭದ್ರತೆ
ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ವಾಹನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ವಿವಿಧ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು.
ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಕ್ತರ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಜಾತ್ರೆಯ ವಾತಾವರಣಕ್ಕೆ ಮೆರುಗು ನೀಡಿದ ಅಂಗಡಿಗಳು
ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿವಿಧ ಅಂಗಡಿಗಳು ತಲೆ ಎತ್ತಿದ್ದವು. ಬೆಂಡು, ಬತಾಸು, ಕಾರ ಮಂಡಕ್ಕಿ, ಹೂವು, ಹಣ್ಣು, ಆಟಿಕೆಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟದ ಅಂಗಡಿಗಳು ಭಕ್ತರನ್ನು ಆಕರ್ಷಿಸಿದವು.
ಒಟ್ಟಾರೆ, ಮಳೆ ನಡುವೆಯೂ ಸಾವಿರಾರು ಭಕ್ತರ “ಹರೋಹರ… ಹರೋಹರ…” ಘೋಷಣೆ, ಪಾದಯಾತ್ರೆ, ಕಾವಡಿ ಸೇವೆ ಹಾಗೂ ವಿವಿಧ ಹರಕೆಗಳೊಂದಿಗೆ ಗುಡ್ಡೆಕಲ್ಲು ಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಭಕ್ತಿಭಾವದಿಂದ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







