ಶಿವಮೊಗ್ಗ: ಕಳೆದ ಗುರುವಾರ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ ತಾಯಿ ಭಾರತಿ ಹೆಮ್ಮೆಯ 42 ಯೋಧರಿಗೆ ಗೋಪಾಳದ ಕಲಾತರಂಗ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಗೋಪಾಳ ಬಸ್ ನಿಲ್ದಾಣದ ಬಳಿ ಆಯೋಜನೆ ಮಾಡಲಾಗಿತ್ತು. ಅಮರ್ ಜವಾನ್ ಪ್ರತಿಕೃತಿ ಇಟ್ಟು ಹೂಗುಚ್ಚವನ್ನು ಅರ್ಪಿಸಿ ಪುಷ್ಪ ನಮನ, ಲೇಖನ, ಕವನಗಳನ್ನು ಓದುವುದರ ಮೂಲಕ ನುಡಿ ನಮನ, ನೆರೆದಿದ್ದ ನೂರಾರು ದೇಶಭಕ್ತರಿಂದ ದೀಪ ಬೆಳಗಿಸಿ ಜ್ಯೋತಿ ನಮನ ಸಲ್ಲಿಸಲಾಯಿತು.
ಉಗ್ರರ ದಾಳಿಗೆ ಬಲಿಯಾದ ವೀರ ಯೋಧರ ಕುರಿತು ತಾವೇ ರಚಿಸಿದ ಹಾಡನ್ನು ಕಲಾವಿದರಾದ ಡಿಂಗ್ರಿ ನರೇಶ್ ಹಾಡುವುದರ ಮೂಲಕ ಗೀತ ನಮನ ಸಲ್ಲಿಸಿದರು.
ನುಡಿನಮನ ಕಾರ್ಯಕ್ರಮದಲ್ಲಿ ಗೋಪಾಳದ ನೂರಾರು ಮಂದಿ ದೇಶಭಕ್ತರು ಸ್ವಯಂಪ್ರೇರಿತರಾಗಿ ಹಾಜರಿದ್ದು, ನಮಗಾಗಿ ವೀರಸ್ವರ್ಗ ಸೇರಿದ ಯೋಧರಿಗೆ ಭಾವಪೂರ್ಣ ನಮನ ಸಲ್ಲಿಸಿದರು.
ರಂಗತಂಡವಾಗಿರುವ ಕಲಾತರಂಗ ಸಂಸ್ಥೆಯು ಕಲಾ ಶಿಕ್ಷಣ ನೀಡುವುದಲ್ಲದೇ, ಸಾಮಾಜಿಕ ಕಳಕಳಿಯಿಂದ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಮೂಲಕ ಜನಮೆಚ್ಚುಗೆ ಗಳಿಸಿದೆ.
ಈ ಕಾರ್ಯಕ್ರಮದಲ್ಲಿ ಕಲಾತರಂಗದ ನಾಗರಾಜ್, ಶ್ರೀಹರ್ಷ, ವಿಶಾಲ್, ಸೋಮಶೇಖರ್, ಶ್ರೀವತ್ಸ, ರೇಣುಕಯ್ಯ, ವಿನಾಯಕ್, ಮಂಜು, ನೌಶಾದ್, ಶರವಣ್, ನಮ್ರತ, ವಿಭಾ, ಗಣೇಶ್, ಪೃಥ್ವಿರಾಜ್, ಕಾಮನ್ ಮ್ಯಾನ್ ತಂಡದ ಗಣೇಶ್ ಬಿಳಗಿ, ನವೀನ್ ತಲಾರಿ, ರೇಣುಕಯ್ಯ, ಜಯದೇವಯ್ಯ, ನಂದಕುಮಾರ್, ಮಂಜು, ಸಂಜಯ್, ಪೃಥ್ವಿ ಮಲ್ಲಾಪುರ, ಶ್ವೇತ, ಚೇತನ್ ರಾಯನಹಳ್ಳಿ, ತುಂಗಾನಗರ ಠಾಣೆಯ ಏಎಸ್’ಐ ಬಸವರಾಜಪ್ಪ ಮತ್ತು ಸಿಬ್ಬಂದಿಗಳು, ಕಲಾತರಂಗದ ಪೋಷಕರು ಮತ್ತು ಗೋಪಾಳದ ನೂರಾರು ನಾಗರಿಕರು ಉಪಸ್ಥಿತರಿದ್ದರು.
ಕಲರ್ ಈವೆಂಟ್ ಮೇಕರ್ಸ್, ಕಾಮನ್ ಮ್ಯಾನ್, ಜವಿಸ್ಥಾ ಟೆಕ್ನಾಲಜೀಸ್, ಗೋಲ್ಡನ್ ಶಟರ್ ಸ್ಟುಡಿಯೋಸ್ , ಜೆ ಆರ್ ಗ್ರೂಪ್ಸ್ ಸಹಕಾರವಿತ್ತು.
ಪ್ರಮುಖವಾಗಿ ಭಾರತ್ ಸ್ಕೌಟ್ ಮತ್ತು ಗೈಡ್ಸ್’ನ ಮಲ್ನಾಡ್ ಓಪನ್ ಗ್ರೂಪ್ ಈ ಕಾರ್ಯಕ್ರಮಕ್ಕೆ ಅಮರ್ ಜವಾನ್ ಪ್ರತಿಕೃತಿ ನೀಡಿತ್ತು.
Discussion about this post