ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುತೇಕ ಸರ್ಕಾರಿ ಕಚೇರಿಗಳು, ಮಹಿಳಾ ವಸತಿ ನಿಲಯಗಳು, ಸಾರ್ವಜನಿಕ ಸ್ಥಳಗಳು ಅಧಿಕಾರಿಗಳ ದಿವ್ಯ ನಿರ್ಲಕ್ಷ, ದುರ್ನಡತೆಗಳಿಂದ ಅವ್ಯವಸ್ಥೆಗಳ ಆಗರವಾಗಿ ಮಾರ್ಪಟ್ಟಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ #K N Panindra ಹೇಳಿದರು.
ಅವರು ಇಂದು ತಮ್ಮ ಶಿವಮೊಗ್ಗ ಭೇಟಿಯ ಮೂರನೇ ದಿನ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವಾಂಶಗಳನ್ನು ತಿಳಿದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಿಂದ ಅಪಾರ ಸಂಖ್ಯೆಯ ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದು ಆಲ್ಕೊಳದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರ, ರಾಜ್ಯ ಮಹಿಳಾ ನಿಲಯ, ಬಾಲರಾಜ ಅರಸ್ ರಸ್ತೆಯಲ್ಲಿನ ಪಜಾ, ಪಪಂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಬೈಪಾಸ್ ರಸ್ತೆಯಲ್ಕಿರುವ ಡಿ.ದೇವರಾಜ್ ಅರಸ್ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಗಳಿಗೆ ಭೇಟಿ ನೀಡಿ ಬಂದಿದ್ದು ಎಲ್ಲ ಕಡೆ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಆ ಎಲ್ಲ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದರು.
Also read: ಯುಗಾದಿ/ರಂಜಾನ್ | ಮೈಸೂರು-ಕಾರವಾರ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಸರ್ಕಾರದ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹಾಸ್ಟೇಲ್ ಗಳಲ್ಲಿ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಕೆಲ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಇಲ್ಲ ಸಲ್ಲದ ಸಮರ್ಥನೆ ನೀಡುತ್ತಿದ್ದಾರೆ. ಅದನ್ನು ತಾವು ಸಹಿಸುವುದಿಲ್ಲ ಎಂದು ಚಾಟಿ ಬೀಸಿದರು.
ಭೇಟಿ ನೀಡಿದ ಸ್ಥಳಗಳಲ್ಲಿ ಕಂಡುಬಂದ ಲೋಪಗಳನ್ನು ಸರಿಪಡಿಸಲು 3ತಿಂಗಳು ಗಡುವು ಕೊಟ್ಟಿದ್ದೇನೆ. ಅಷ್ಟರೊಳಗೆ ತಿದ್ದಿಕೊಳ್ಳದಿದ್ದರೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಕಡಕ್ ಎಚ್ಚರಿಕೆ ನೀಡಿದರು.
ಸಾಗರದಲ್ಲಿ ಅನಧಿಕೃತ ಮಣ್ಣು ಗಣಿಕಾರಿಕೆ ಸಂಬಂಧ ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ನೋಡಿದ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ತಮ್ಮ ವ್ಯಾಪ್ತಿಯ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಪ್ರವಾಸ ಬಾಕಿ ಇದೆ. ಅದು ಮುಗಿದ ಬಳಿಕ ತಾಲೂಕಾ ಸ್ಥಳಗಳಿಗೂ ಭೆಟಿ ನೀಡುವುದಾಗಿ ತಿಳಿಸಿದರು.
ಜೊ.ಪಂ.ಸಿಇಒ ಹೇಮಂತ್ ಎನ್. ಎಸ್.ಪಿ. ಮಿಥುನ್ ಕುಮಾರ್ ಜಿ.ಕೆ. ಲೋಕಾಯುಕ್ತ ಎಸ್.ಪಿ.ಮಂಜುನಾಥ್ ಚೌಧರಿ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post