ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವ್ಯವಹಾರದ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡಿದ ಮಾರಾಟಗಾರರ ವಿರುದ್ಧ ಸಮರ ಸಾರಿರುವ ಕಾನೂನು ಮಾಪನಶಾಸ್ತ್ರ ಇಲಾಖೆ ಜಿಲ್ಲೆಯಲ್ಲಿ ಬರೋಬ್ಬರಿ 911 ಪ್ರಕರಣಗಳನ್ನು ದಾಖಲಿಸಿದೆ.
ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್. ಮಂಜುನಾಥ್ ಅವರು, ದೋಷಪೂರಿತ ತೂಕ ಮತ್ತು ಅಳತೆ ಪರಿಕರಗಳನ್ನು ಬಳಸುವುದು, ತೂಕ ಮತ್ತು ಅಳತೆಯಲ್ಲಿ ವಂಚಿಸುವುದು, ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ವ್ಯಾಪಾರಿ ಸಂಸ್ಥೆಗಳನ್ನು ಗುರುತಿಸಿ 913 ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
2020ರ ಏಪ್ರಿಲ್ನಿಂದ 2021 ಜನವರಿವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 1868 ವ್ಯಾಪಾರಸ್ಥರ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇದಲ್ಲದೆ ವ್ಯಾಪಾರ, ವ್ಯವಹಾರ ನಡೆಸುವವರು ಬಳಸುವ ತೂಕ ಮತ್ತು ಅಳತೆ ಪರಿಕರಗಳ ಸತ್ಯಾಪನಾ ನಡೆಸಿ 1,05,26,436 ರೂ. ಶುಲ್ಕ ವಸೂಲಿ ಮಾಡಲಾಗಿದೆ. ವಂಚನೆ ಆರೋಪದಲ್ಲಿ ದಾಖಲಾದ ಮೊಕದ್ದಮೆಗಳ ಪೈಕಿ 911 ಪ್ರಕರಣಗಳನ್ನು ರಾಜಿ ಅಭಿಸಂದಾನದ ಮೂಲಕ ಇತ್ಯರ್ಥಪಡಿಸಿ, ತಪ್ಪಿತಸ್ಥರಿಂದ 15,97,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.ನ್ಯಾಯಬೆಲೆ ಅಂಗಡಿ, ಚಿಲ್ಲರೆ ಸೀಮೆಎಣ್ಣೆ ಮಾರಾಟಗಾರರು, ಸಗಟು ವ್ಯಾಪಾರಸ್ಥರು, ಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post