ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ಎಸ್. ರಘುನಾಥ್ ಅವರನ್ನು ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿರುವ ಸರ್ಕಾರ, ರಘುನಾಥ್ ಅವರನ್ನು ಮೂರು ವರ್ಷಗಳ ಅವಧಿಗೆ ಸದಸ್ಯರನ್ನಾಗಿ ನೇಮಿಸಿದೆ.
ಮೂಲತಃ ಶಿವಮೊಗ್ಗದವರಾದ ರಘುನಾಥ್ ಕನ್ನಡ ಸಾಹಿತ್ಯದಲ್ಲಿ ಆಳ ಅಧ್ಯಯನ ನಡೆಸಿದವರಾಗಿದ್ದು, ತಮ್ಮ ಕರ್ತವ್ಯ ಬದ್ಧತೆ ಹಾಗೂ ಕನ್ನಡ ಕ್ರಿಯಾಶೀಲತೆಯ ಮನೋಭಾವದಿಂದ ಕುವೆಂಪು ವಿವಿಯಲ್ಲಿ ಉತ್ತಮ ಹೆಸರು ಗಳಿಸಿದ್ದು, ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಸಹ ಪ್ರಾಧ್ಯಾಪಕರಾಗಿದ್ದಾರೆ.
‘ಹೊಸಗನ್ನಡ ಕಾದಂಬರಿಗಳಲ್ಲಿ ಅಂತರ್ಜಾತೀಯ ಮತ್ತು ಮತೀಯ ವಿವಾಹ’ ಎಂಬ ವಿಷಯದ ಕುರಿತಾಗಿ 2008ರಲ್ಲಿ ಇವರು ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿವಿ ಡಾಕ್ಟರೇಟ್ ಪ್ರದಾನ ಮಾಡಿದೆ.
ಕುವೆಂಪು ವಿವಿ ವ್ಯಾಪ್ತಿಯಲ್ಲಿನ ಬಿಎ, ಬಿಕಾಂ, ಬಿಎಸ್’ಸಿ, ಬಿಬಿಎಂ, ಬಿಸಿಎ ಪದವಿ ತರಗತಿಗಳಿಗೆ ಕನ್ನಡ ಭಾಷಾ ಪಠ್ಯಪುಸ್ತಕಗಳ ಸಂಪಾದಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಇವರು, ಸ್ನಾತಕ ಪದವಿ ಕನ್ನಡ ಪರೀಕ್ಷಾ ಮಂಡಳಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿರುವ ರಘುನಾಥ್ ಅವರು, ಪ್ರಬಂಧ ಮಂಡನೆ, ಉಪನ್ಯಾಸ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತಮ್ಮದೇ ಅದ ಕೊಡುಗೆ ನೀಡಿದ್ದಾರೆ.
ಕುಪ್ಪಳಿಯಲ್ಲಿರುವ ಹಂಪಿ ವಿವಿಯ ರಾಷ್ಟ್ರಕವಿ ಕುವೆಂಪು ಸಂಶೋಧನಾ ಕೇಂದ್ರದಲ್ಲಿ ಇಬ್ಬರು ಬಾಹ್ಯ ಸಂಶೋಧನಾರ್ಥಿಗಳಿಗೆ 2015ರಿಂದ ಪಿಎಚ್’ಡಿ ಮಾರ್ಗದರ್ಶಕರಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿರುವ ರಘುನಾಥ್, ಯುಜಿಸಿಯ ಮೈನರ್ ರಿಸರ್ಚ್ ಪ್ರಾಜೆಕ್ಟ್(ಎಂಆರ್ಪಿ) ಅಡಿಯಲ್ಲಿ ಆಯ್ಕೆಯಾಗಿ ಯಶಸ್ವಿಯಾಗಿ ಸಂಶೋಧನೆ ನಡೆಸಿ ಎಂಆರ್ಪಿ ಪ್ರಾಜೆಕ್ಟ್ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ದ್ರಾವಿಡ ಕುಪ್ಪಂ ವಿವಿಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದ ಸಾಹಿತಿ ಶ್ರೀನಿವಾಸ ಉಡುಪರ ಕಥಾಸಾಹಿತ್ಯದ ಬಗ್ಗೆ ವಿದ್ಯಾರ್ಥಿಯೊಬ್ಬರು 2018ರಲ್ಲಿ ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಿ, ಎಂಫಿಲ್ ಪದವಿ ಪಡೆದಿದ್ದು, ಇವರಿಗೂ ರಘುನಾಥ್ ಅವರು ಮಾರ್ಗದರ್ಶಕರಾಗಿದ್ದರು. ಅಲ್ಲದೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ವಾರ್ಷಿಕ ಮಕ್ಕಳ ಸಾಹಿತ್ಯ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರಾಗಿಯೂ ಸಹ ಕರ್ತವ್ಯ ನಿರ್ವಹಿಸಿದ್ದಾರೆ.
ರಾಜ್ಯ ಸರ್ಕಾರಿ ಪದವಿ ಕಾಲೇಜು ಅಧ್ಯಾಪಕರ ಸಂಘದ ಸದಸ್ಯರಾಗಿರುವ ಇವರು ಕೆಜಿಸಿಟಿಎದ ಪದಾಧಿಕಾರಿಗಳಾಗಿ ಶಿವಮೊಗ್ಗ ಭಾಗದ ಪ್ರಮುಖ ಅಧ್ಯಾಪಕ ಮುಖಂಡರಾಗಿದ್ದಾರೆ.
1991ರಿಂದ 1996ರವರೆಗೂ ಶಿವಮೊಗ್ಗದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ಇವರು, ರಾಜ್ಯಮಟ್ಟದ ಪತ್ರಿಕೆಯ ವರದಿಗಾರರಾಗಿಯೂ ಅನುಭವ ಹೊಂದಿದ್ದಾರೆ.
ಶ್ರೀಯುತರು ಶಿವಮೊಗ್ಗದ ದಿ.ಸೀತಾರಾಮ ಜೋಯ್ಸ್ ಹಾಗೂ ಶ್ರೀಮತಿ ಲಲಿತಮ್ಮ ಅವರ ದ್ವಿತೀಯ ಪುತ್ರರಾಗಿದ್ದಾರೆ.
ಇದಲ್ಲದೇ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿ, ಈಗ ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಇವರಿಗೆ ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಮಂಡಳಿ, ವಿದ್ಯಾರ್ಥಿನಿಯರು, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮತ್ತು ಮುಖಂಡರಾದ ಶ್ರೀಯುತ. ಮ.ಸ. ನಂಜುಂಡಸ್ವಾಮಿ, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಡಿ.ಎಸ್. ಅರುಣ್, ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ವರ್ಗ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಬಿ.ವಿ. ವಸಂತಕುಮಾರ್, ಮೈಸೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆಯ ಅಧ್ಯಕ್ಷರಾದ ಡಾ.ಅಜಕ್ಕಳ ಗಿರೀಶ್ ಭಟ್, ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಮಂಜುನಾಥ್, ಕುವೆಂಪು ವಿವಿ ವಲಯ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಪ್ರಸನ್ನ, ಸಾಗರ ನಗರಸಭಾ ಸದಸ್ಯರುಗಳಾದ ಟಿ.ಡಿ. ಮೇಘರಾಜ್, ಗಣೇಶ್ ಪ್ರಸಾದ್, ಸಾಗರ ಪತ್ರಕರ್ತರ ಸಂಘದ ಅಧ್ಯಕ್ಷರುಗಳಾದ ಜಿ. ನಾಗೇಶ್ , ಡಾ. ಕೆಳದ ವೆಂಕಟೇಶ್ ಜೋಯ್ಸ್, ಸಾಗರ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ. ಪರಮೇಶ್ವರಪ್ಪ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಭದ್ರಾವತಿಯ ಧರ್ಮಪ್ರಸಾದ್, ಜಿಲ್ಲಾ ಬಿಜೆಪಿ ಮುಖಂಡ ಎಸ್. ದತ್ತಾತ್ರಿ, ಶಿವಮೊಗ್ಗ ಉಪಮೇಯರ್ ಚನ್ನಬಸಪ್ಪ(ಚೆನ್ನಿ), ಕುವೆಂಪು ವಿವಿ ವಿಶ್ರಾಂತ ಕುಲಸಚಿವ ಮತ್ತು ನಾಡಿನ ಹಿರಿಯ ಚಿಂತಕ ಡಾ.ಶ್ರೀಕಂಠ ಕೂಡಿಗೆ, ಜಿಲ್ಲಾ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post