ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೃತ್ಯ ಕಲಿಸಿ ಸಾಮೂಹಿಕ ರಂಗಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಭರತನಾಟ್ಯದ ಕಲಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಸಹಚೇತನ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ಅವರ ಕಾರ್ಯ ಮಾದರಿಯಾದುದು ಎಂದು ಹಿರಿಯ ನೃತ್ಯ ವಿದ್ವಾಂಸರಾದ ಮೈಸೂರಿನ ಡಾ. ತುಳಸಿ ರಾಮಚಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಚೇತನ ನಾಟ್ಯಾಲಯದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನೃತ್ಯ ಕದಂಬಕA ಎಂಬ ಸಾಮೂಹಿಕ ಉಚಿತ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಚೇತನ ನಾಟ್ಯಾಲಯದ ಮೂಲಕ ನೃತ್ಯಗುರು ಸಹನಾ ಚೇತನ್ ಭರತನಾಟ್ಯ ಕ್ಷೇತ್ರಕ್ಕೆ ಅಪಾರ ಹಾಗೂ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ಯುವ ಪೀಳಿಗೆಯಲ್ಲಿ ಭರತನಾಟ್ಯ ಕಲಾಸಕ್ತಿಯನ್ನು ಮೂಡಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದೇಶದ ಸಂಸ್ಕೃತಿ ಕಲೆಗಳಿಂದ ಅಭಿವ್ಯಕ್ತಗೊಳ್ಳುತ್ತದೆ. ಭರತನಾಟ್ಯದಂತಹ ಸಾಂಸ್ಕೃತಿಕ ಶ್ರೀಮಂತಿಕೆಯ ಕಲೆಗಳು ನಮ್ಮ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸುತ್ತದೆ. ಭರತನಾಟ್ಯ ಪುರಾತನ ನೃತ್ಯ ಕಲಾ ಪ್ರಕಾರವಾಗಿದ್ದು, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆಯಲ್ಲದೆ ನಮ್ಮ ಸಂಪದ್ಭರಿತ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದರು.
ಕಲಾಸಕ್ತಿಯಿಂದ ದೈಹಿಕ ಹಾಗೂ ಮಾನಸಿಕ ಚೈತನ್ಯ ದೊರೆಯುತ್ತದೆ. ಯುವ ಸಮುದಾಯ ಭರತನಾಟ್ಯದಂತಹ ಪ್ರಾಚೀನ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ನಡೆಸಬೇಕು. ಕಲೆಯನ್ನು ಆರಾಧಿಸಬೇಕು ಹಾಗೂ ಆಸ್ವಾದಿಸಬೇಕು. ಪ್ರಾಚೀನ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.
Also read: ಜೀವನದಲ್ಲಿ ಶಿಸ್ತುಬದ್ದ ನಡವಳಿಕೆ ರೂಢಿಸಿಕೊಳ್ಳಿ: ಶಾಸಕಿ ಶಾರದಾ ಪೂರ್ಯಾನಾಯ್ಕ್ ಕರೆ
ಭಾರತೀಯ ಸಂಸ್ಕೃತಿ ಮೇಲೆ ನಿರಂತರವಾಗಿ ಆಕ್ರಮಣವಾಗಿದ್ದರೂ ಕೂಡಾ ಅವು ತಮ್ಮ ಮೂಲ ಸೊಗಡನ್ನು ಕಳೆದುಕೊಂಡಿಲ್ಲ. ಭಾರತೀಯ ಕಲಾ ಪರಂಪರೆಯ ಬೇರುಗಳು ಸದೃಢವಾಗಿರುವುದೇ ಇದಕ್ಕೆ ಕಾರಣ. ಇಂತಹ ಬೇರುಗಳನ್ನು ಬಲಪಡಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಕರೆ ನೀಡಿದರು.
ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರೂ ಆದ ಶಾಸಕ ಎಚ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ನಾಟ್ಯಾಲಯದ ಅಧ್ಯಕ್ಷ ಎಸ್.ಆರ್. ಪ್ರಕಾಶ್(ಆಚಿ), ಸಹನಾ ಚೇತನ್ ಇದ್ದರು.
ಸಹಚೇತನ ನಾಟ್ಯಾಲಯದ ಡಿ.ಎ. ಸೇಜಲ್, ಶರಣ್ಯ ಎ.ಸಿ., ಕಾಮಾಕ್ಷಿ ಆರ್. ಪ್ರಭು, ಸಿಂಧುಶ್ರೀ ಅಡಿಗ, ಆರ್. ರಕ್ಷಿತಾ ಸಾಮೂಹಿಕ ರಂಗ ಪ್ರವೇಶ ಮಾಡಿದರು. ಈ ನೃತ್ಯ ಕಲಾವಿದರನ್ನು ಅವರ ತಂದೆ ತಾಯಿಯೊಂದಿಗೆ ಗೌರವಿಸಲಾಯಿತು. ಸಹನಾ ಚೇತನ್ ಸ್ವಾಗತಿಸಿ, ಅಶ್ವಿನಿ ರಾಜಗೋಪಾಲ್ ನಿರೂಪಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಂಗ ಪ್ರವೇಶಿಸುವ ಐವರು ನೃತ್ಯ ಪಟುಗಳನ್ನು ಮಹಾವೀರ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಸಾರೋಟದ ಮೂಲಕ ಮೆರವಣಿಗೆಯಲ್ಲಿ ಕರೆತಂದು ಪೂರ್ಣಕುಂಭದ ಸ್ವಾಗತ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post