ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಬಸ್ನಿಲ್ದಾಣ ಸಮೀಪ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ರಸ್ತೆಬದಿಯ ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ವ್ಯಾಪಾರಸ್ಥರು ಮಾವಿನ ಹಣ್ಣನ್ನು Mango ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಬಹಳಷ್ಟು ಹಣ್ಣಿನ ವ್ಯಾಪಾರಸ್ಥರು ರಸ್ತೆಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದರು. ಅವರ ತೆರವಿಗೆ ಪುರಸಭೆ ಸಿಬ್ಬಂದಿ ತೆರಳುತ್ತಿದ್ದಂತೆ, ಅಂಗಡಿ ಬೇರೆಕಡೆ ಮಾಡಿದರೆ ವ್ಯಾಪಾರ ಆಗುವುದಿಲ್ಲ. ಅದಕ್ಕಾಗಿ ತೆರವುಗೊಳಿಸುವುದು ಬೇಡ ಎಂದು ಮನವಿ ಮಾಡಿದರೂ ಒಪ್ಪದಿದ್ದಾಗ ಆಕ್ರೋಶ ಗೊಂಡ ವ್ಯಾಪಾರಸ್ಥರು ಹತ್ತಾರು ಪುಟ್ಟಿ ಮಾವಿನ ಹಣ್ಣನ್ನು ರಸ್ತೆಗೆ ಸುರಿಯುವ ಮೂಲಕ ತೆರವು ಕಾರ್ಯದ ವಿರುದ್ಧ ಪ್ರತಿಭಟಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಬಸ್ ನಿಲ್ದಾಣ ವೃತ್ತದ ಸಮೀಪ ರಸ್ತೆಬದಿ ಹಣ್ಣಿನ ವ್ಯಾಪಾರ ಮಾಡುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರೂ ಹಲವು ಬಾರಿ ದೂರು ನೀಡಿದ್ದ ಕಾರಣಕ್ಕೆ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ತಿಂಗಳ ಹಿಂದೆಯೇ ವ್ಯಾಪಾರಸ್ಥರಿಗೆ ತಿಳಿಸಿದ್ದಲ್ಲದೆ ಸೋಮವಾರವೂ ಅಂಗಡಿ ಹಾಕದಂತೆ ಮನವಿ ಮಾಡಲಾಗಿತ್ತು. ಅದಕ್ಕೂ ಸ್ಪಂದಿಸದಿದ್ದುದರಿಂದ ಅನಿವಾರ್ಯವಾಗಿ ಒತ್ತಾಯಪೂರ್ವಕ ತೆರವಿಗೆ ಮುಂದಾಗಿದ್ದೇವೆ. ಸುಗಮ ಸಂಚಾರ, ಸಾರ್ವಜನಿಕರ ಅನುಕೂಲಕ್ಕಾಗಿ ತೆರವು ಅನಿವಾರ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಹೇಳಿದರು.
Also read: ಸೊರಬದಲ್ಲಿ ಯುವಕನ ಅನುಮಾನಾಸ್ಪದ ಸಾವು | ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ರಸ್ತೆಗೆ ಚೆಲ್ಲಿದ ಮಾವಿನ ಹಣ್ಣನ್ನು ಪುರಸಭೆ ಸಿಬ್ಬಂದಿ ತುಂಬಿ ವ್ಯಾಪಾರಸ್ಥರಿಗೆ ಮರಳಿಸುವ ಪ್ರಯತ್ನ ನಡೆಸಿದರು. ಪಟ್ಟಣ ಠಾಣೆ ಸಬ್ಇನ್ಸ್ಪೆಕ್ಟರ್ ಪ್ರಶಾಂತ್, ಪುರಸಭೆ ಸಿಬ್ಬಂದಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















