ಶುಕಾಚಾರ್ಯರು ಹೇಳುತ್ತಾರೆ ಮೊದಲು ಆಸನ ಶುದ್ಧವಾದ ಪರಿಸರದಲ್ಲಿ ಕುಳಿತುಕೊಳ್ಳಬೇಕು, ಪ್ರಾಣಾಯಾಮದಿಂದ ಮತ್ತು ವಾಯುದೇವರ ಅನುಗ್ರಹದಿಂದ ಶ್ವಾಸವನ್ನು ಜಯಿಸಬೇಕು. ಉಸಿರಿನ ಹಿಡಿತದಿಂದ ಮನೋನಿಗ್ರಹ ಮಾಡಬಹುದು. ಇದಕ್ಕಾಗಿ ನಮ್ಮ ಹಿರಿಯರು ಎಲ್ಲರಿಗು ಸಂಧ್ಯಾವಂದನೆಯಲ್ಲಿ ಒಟ್ಟು ಮೂರುಬಾರಿ ಅಂದರೆ ಒಂಬತ್ತು ಬಾರಿ ಪ್ರಾಣಾಯಾಮವನ್ನು ಮಾಡಲು ಹೇಳಿದ್ದಾರೆ. ಒಂದು ಕ್ಷಣ ಉಸಿರನ್ನು ಹಿಡಿದಾಗ ನಮ್ಮ ಚಿಂತನೆಗಳು ಸ್ವಲ್ಪ ನಿಲ್ಲುತ್ತದೆ ಆ ಸಮಯದಲ್ಲಿ ಒಂದು ಕ್ಷಣ ಅಥವಾ ಸ್ವಲ್ಪ ಕ್ಷಣಗಳ ಭಗವಂತನ ರೂಪವನ್ನು ಚಿಂತಿಸಿದಾಗ ಅದು ಮನದಲ್ಲೇ ಉಳಿಯುತ್ತದೆ. ಇದು ಮಾಡಿನೋಡಿ ಹೇಗೆ ಒಂದು Photo Flash ಆದಾಗ ಆ ಚಿತ್ರ ಸೆರೆ ಹಿಡಿಯುತ್ತದೆ. ಹಾಗೆ ಮನಸ್ಸಿನಲ್ಲಿ ದೇವರ ಚಿಂತನೆ ಹಿಡಿಯುತ್ತದೆ.ಆನಂತರ ಇಂದ್ರಿಯಗಳನ್ನು ವಶಮಾಡಿಕೊಂಡು ಧ್ಯಾನ ಮಾಡುವ ಅಭ್ಯಾಸ ಮಾಡಬೇಕು ಎಂದು ಹೇಳುತ್ತಾರೆ.
ವಾದಿರಾಜರು ತಮ್ಮ ಒಂದು ಕೃತಿಯಲ್ಲಿ ಹೇಗೆ ಮುಮುಕ್ಷು ಆದವನು ಹೇಗೆಇರಬೇಕು ಎಂದು ಹೇಳಿದ್ದಾರೆ. ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ತಾಳವನ್ನು ಹಿಡಿದು ಭಜನೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ, ಯಾಕೆಂದರೆ ಈ ಕಲಿಯುಗದಲ್ಲಿ ಹರಿಪೂಜೆ ಮತ್ತು ಹರಿದ್ಯಾನಕ್ಕೆ ಹಲವಾರು ಅಡೆತಡೆಗಳು ಬರುತ್ತವೆ. ವಾದಿರಾಜ ತೀರ್ಥರು ಹೇಳುವಹಾಗೆ ಮಾನವಜನ್ಮದಲ್ಲಿ ಪ್ರಮುಖವಾಗಿ ಮಾಡುವ ಕೆಲಸದಲ್ಲಿ ಭಗವಂತನ ಸ್ಮರಣೆಯು ಕೂಡ ಮುಖ್ಯವಾದ ಕೆಲಸ. ಮುಮುಕ್ಷುವಾದವನ ಕರ್ತವ್ಯವೆಂದರೆ “ದ್ವಾರಾವತಿಯ ಗೋಪಿ ಚಂದನದಿಂದ ಶ್ರೀ ರಮಣನ ತವನಾಮವ ನೆನೆನೆದೆರಡು ಊರ್ಧ್ವಪುಂಡ್ರಗಳ ಧರಿಸಿ ವೀರ ವೈಷ್ಣವ ಗುರುವ, ಸೇರಿ ಸಂತೃಪ್ತ ಸುದರ್ಶನ ಶಂಖವ ಧಾರಣವನು ಭುಜಯುಗದೊಳು ಮಾಡಿ ಮುರಾರಿಯಾ ಮಂತ್ರಗಳಿಂದ ಅವರಿಂದಲೇ ಕೇಳಿ ಓರಂತೆ ಜಪಿಸುತ್ತಿರು ಎಂದು ಹೇಳಿದ್ದಾರೆ”. ನಾರಾಯಣನ ನೆನೆ ಮನವೇ ನಾರಾಯಣನ ನೆನೆ.
ಇಲ್ಲಿ ಹೇಳಿದಹಾಗೆ ದ್ವಾರಾವತಿಯ ಗೋಪಿ ಚಂದನ ಧರಿಸಿ ಮುದ್ರಾಧಾರಣೆ ಮಾಡಿ ಗುರುಗಳಿಂದ ಉಪದೇಶ ಪಡೆಯುವುದು ಇದು ನಮ್ಮೆಲ್ಲರ ಕರ್ತವ್ಯ ಆದರೆ ಮೊದಲೇ ಹೇಳಿದಂತೆ ನಾರಾಯಣನ ನಿರಂತರ ನೆನೆ ಮನವೇ ಎಂದು ಹೇಳಿದ್ದಾರಲ್ಲ ಅದರಿಂದ ಮೊದಲು ನಾರಾಯಣನ ನೆನೆದರೆ ಜ್ಞಾನದಿಂದ ಕರ್ಮಆಚರಣೆ ಕೇವಲ ಕರ್ಮಾಚರಣೆಯಿಂದ ಜ್ಞಾನವಲ್ಲ. ಕೆಲವರು ಕೇವಲ ಕರ್ಮಾಚರಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ ಆದರೆ ಭಾಗವತ ಹೇಳುತ್ತದೆ ಮೊದಲು ಜ್ಞಾನ ನಂತರ ಕರ್ಮಾಚರಣೆ. ಇಲ್ಲೂ ವಾದಿರಾಜರು ಹೇಳಿದ್ದು ನಾರಾಯಣನ ನೆನೆ ನಂತರ ಗೋಪಿಚಂದನ ಧಾರಣ, ಮುದ್ರಾಧಾರಣ ಪೂಜೆ ಎಲ್ಲವು. ಇದನ್ನೇ ಶಾಸ್ತ್ರಗಳಲ್ಲಿ ತಿಳಿಸಿದ್ದು “ಆತ್ಮವಾರೇ ಸ್ರೋತವ್ಯಹ ದೃಷ್ಟವ್ಯಹ ಮಂತ್ರವ್ಯೋ ನಿಧಿಧಾಸಾವ್ಯಹ”.
ಭಗವಂತನ ಅಪರೋಕ್ಷ ಜ್ಞಾನ ಬಂದರೆ ಮಾತ್ರ ನಮಗೆ ಮೋಕ್ಷ ಅನ್ನುವುದು ನಿಷ್ಚಿತ, ಮೊದಲು ಶ್ರವಣ ಭಗವಂತನ ಕಥೆಗಳನ್ನೂ ಕೇಳುವುದು, ಮನನ – ಕೇಳಿದನ್ನು ಮನಸ್ಸಿನಲ್ಲೇ ಚಿಂತಿಸುವುದು, ನಿದಿಧ್ಯಾಸನ – ಭಗವಂತನನ್ನು ಅವನಬಗ್ಗೆ ಕೇಳಿ ಅದನ್ನು ತಿಳಿದು ನಂತರ ನಿರಂತರ ಧ್ಯಾನ ಮಾಡುವುದು. ಇದೆ ಮನುಷ್ಯ ಜನ್ಮದ ಪ್ರಮುಖ ಕೆಲಸ. ಅದೇ ರೀತಿ ವಾದಿರಾಜರು ಹೇಳುತ್ತಾರೆ ಅವನ ಶ್ರವಣ ಮನನ ನಿಧಿ ಧ್ಯಾಸನ ತಿಳಿದು ನಂತರ ಅವನ ಅರ್ಚನೆ ಮಾಡುವುದು ಹೆಚ್ಚಿನ ಸುಖ ಅಥವಾ ಪುಣ್ಯವನ್ನು ಕೊಡುತ್ತದೆ. ಈ ರೀತಿ ನೆನೆದರೆ ಮಾತ್ರ ಅಂತ್ಯಕಾಲದಲ್ಲಿ ಭಾಗವಂತನ ಚಿಂತನೆ ಬರಬಹುದು.
ಜಗದ್ಗುರು ಶ್ರೀಮದ್ವಾಚಾರ್ಯರು ದ್ವಾದಶ ಸ್ತೋತ್ರದಲ್ಲಿ ಇದನ್ನೇ ಉಲ್ಲೇಖ ಮಾಡಿದ್ದಾರೆ, ಸಂತತಂ ಚಿಂತಯೇ ಅನಂತಂ ಅಂತ್ಯಕಾಲೇ ವಿಶೇಷತಃ ಯಾವಾಗಲೂ ಭಗವಂತನ ಚಿಂತನೆಯನ್ನು ಮಾಡುತ್ತಿರಬೇಕು ಕಡೆಗಾಲದಲ್ಲಿ ಅದು ನೆನಪಿಗೆ ಬರುತ್ತದೆ. ಇದನ್ನು ಪುರಂದರದಾಸರು ತಮ್ಮ ಕೃತಿಗಳಲ್ಲಿ ಕೊಟ್ಟಿದ್ದಾರೆ ಅಂತ್ಯಕಾದಲ್ಲಿ ಸ್ಮರಿಸೋ ಹಾಗೆ ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತ ಎನ್ನ ನಾಲಿಗೆಗೆ ಬರಲಿ ಎಂದು ಹೇಳಿದ್ದಾರೆ.
ಪರೀಕ್ಷಿತ್ ರಾಜ ಕೇಳುತ್ತಾನೆ: ಈ ಮಾನವ ಜನ್ಮದ ಪರಮ ಲಾಭ ಯಾವುದು? ಶುಕಾಚಾರ್ಯರು ಹೇಳುತ್ತಾರೆ: ಅಂತ್ಯೆಚ ಹರಿಸ್ಮರಣಂ ಇದಕ್ಕೆ ಅನೇಕ ಉಪಯೋಗಗಳನ್ನು ನಮ್ಮ ಹಿರಿಯರು ಮಾಡಿದ್ದಾರೆ, ಅವುಗಳೆಂದರೆ ತಮ್ಮ ಮಕ್ಕಳಿಗೆ ಭಗವಂತನ ಹೆಸರುಗಳನ್ನೂ ಇಟ್ಟು ತಮ್ಮ ಅಂತ್ಯ ಕಾಲದಲ್ಲಿ ಅವರ ಹೆಸರು ಕೂಗಿದರೆ ಆಗಲಾದರೂ ಭಗವಂತನ ಚಿಂತನೆ ಬರಲಿ ಎಂದು ಹೆಸರಿಡುತ್ತಿದ್ದರು. ಶುಕಾಚಾರ್ಯರು ಮುಂದುವರೆಸುತ್ತ ಹೇಳುತ್ತಾರೆ ಈಗಾಗಲೇ ಮೋಕ್ಷದಲ್ಲಿ ಇರತಕ್ಕವರು ಕೂಡ ಭಗವಂತನ ನಾಮಗಳನ್ನು ಇನ್ನಷ್ಟು ಜಪಿಸುವುದರಿಂದ ಅಲ್ಲಿ ಇನ್ನು ಹೆಚ್ಚಿನ ಸುಖಗಳನ್ನೂ ಪಡೆಯುತ್ತಾರೆ ಎಂದು ಹೇಳುತ್ತಾರೆ. ಮುಕ್ತಿಯಲ್ಲಿ ಆನಂದ ರೂಪದಲ್ಲಿ ಭಗವಂತನ ಜಪ ಮಾಡುತ್ತಿರುತ್ತಾರೆ. ಹೀಗೆ ಧ್ಯಾನದ ಮಹತ್ವವನ್ನು ಹೇಳುತ್ತಾರೆ.
ಕಲಿಯುಗ!
ಒಮ್ಮೆ ನಾಲ್ಕು ಜನ ಪಾಂಡವರು ಯುಧಿಷ್ಠಿರನನ್ನು ಹೊರತುಪಡಿಸಿ (ಅವನಾಗ ಅಲ್ಲಿರಲಿಲ್ಲ) ಕೃಷ್ಣನನ್ನು ಪ್ರಶ್ನಿಸಿದರು, “ಕಲಿಯುಗವೆಂದರೇನು ಮತ್ತು ಕಲಿಯುಗದಲ್ಲಿ ಏನು ಜರುಗುತ್ತದೆ?”
ಕೃಷ್ಣನು ಮುಗುಳ್ನಕ್ಕು, “ನಾನು ನಿಮಗೆ ಕಲಿಯುಗದ ಪರಿಸ್ಥಿತಿ ಹೇಗಿರುತ್ತದೆಂದು ತೋರಿಸುತ್ತೇನೆ” ಎಂದು ಹೇಳಿದ. ಶ್ರೀ ಕೃಷ್ಣನು ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಾಲ್ಕು ಬಾಣಗಳನ್ನು ನಾಲ್ದೆಸೆಗಳಿಗೆ ಹೊಡೆದು ಆ ನಾಲ್ಕು ಜನ ಪಾಂಡವರಿಗೆ ಆ ಬಾಣಗಳನ್ನು ತೆಗೆದುಕೊಂಡು ಬರಲು ಹೇಳಿದ. ಆ ನಾಲ್ವರೂ ಬಾಣಗಳನ್ನು ಹುಡುಕಲು ತಲಾ ಒಂದೊಂದು ದಿಕ್ಕಿಗೆ ತೆರಳಿದರು.
ಅರ್ಜುನನು ತನಗೆ ಸಿಕ್ಕ ಬಾಣವನ್ನು ಕೈಗೆತ್ತಿಕೊಳ್ಳುತ್ತಿದ್ದಾಗ ಅವನಿಗೆ ಒಂದು ಮಧುರವಾದ ಸ್ವರವು ಕೇಳಿಸಿತು. ಅವನು ತಿರುಗಿ ನೋಡಿದಾಗ ಒಂದು ಕೋಗಿಲೆಯು ಸಮ್ಮೋಹನಗೊಳಿಸುವ ಸ್ವರದಲ್ಲಿ ಹಾಡುತ್ತಿತ್ತು. ಅದರೊಂದಿಗೆ ಜೀವಂತವಿದ್ದ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದ ಒಂದು ಮೊಲದ ಮಾಂಸವನ್ನು ಆ ಕೋಗಿಲೆಯು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಅಂತಹ ದಿವ್ಯ ಪಕ್ಷಿಯು ಮಾಡುತ್ತಿದ್ದ ಹೇಯವಾದ ಕಾರ್ಯವನ್ನು ನೋಡಿ ಅದನ್ನು ಭರಿಸಲಾಗದೆ ಅರ್ಜುನನು ಜಿಗುಪ್ಸೆಗೊಂಡು ಅಲ್ಲಿಂದ ತಕ್ಷಣವೇ ಹೊರಟುಹೋದ.
ಭೀಮನು ಐದು ಬಾವಿಗಳಿರುವಂತಹ ಒಂದು ಸ್ಥಳದಿಂದ ಬಾಣವನ್ನು ಎತ್ತಿಕೊಂಡ. ನಾಲ್ಕು ಬಾವಿಗಳು ಒಂದು ಬಾವಿಯ ಸುತ್ತಲೂ ಇದ್ದವು. ಆ ನಾಲ್ಕೂ ಬಾವಿಗಳು ಸಿಹಿಯಾದ ನೀರಿನಿಂದ ತುಂಬಿ ತುಳುಕುತ್ತಾ ತಮ್ಮಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಉಕ್ಕಿ ಹರಿಯುತ್ತಿದ್ದವು. ಆದರೆ ಆಶ್ಚರ್ಯಕರವಾಗಿ ಮಧ್ಯದಲ್ಲಿರುವ ಬಾವಿಯು ಸಂಪೂರ್ಣವಾಗಿ ಬರಿದಾಗಿತ್ತು. ಭೀಮನೂ ಸಹ ಆ ದೃಶ್ಯವನ್ನು ನೋಡಿ ಸೋಜಿಗಗೊಂಡ.
ನಕುಲನೂ ಸಹ ತನಗೆ ಸಿಕ್ಕ ಬಾಣವನ್ನು ಎತ್ತಿಕೊಂಡು ಹಿಂದಿರುಗಿ ಬರುತ್ತಿದ್ದ. ಒಂದು ಸ್ಥಳದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡುತ್ತಿದ್ದ ಸ್ಥಳದಲ್ಲಿ ನಿಂತುಕೊಂಡ. ಕರು ಹಾಕಿದ ತಕ್ಷಣ ಆ ಹಸುವು ತನ್ನ ಕಂದನ ಮೈಯನ್ನು ನೆಕ್ಕತೊಡಗಿತು. ಹಾಗೆ ನೆಕ್ಕುವ ಮೂಲಕ ಕರುವಿನ ಶರೀರವು ಸ್ವಚ್ಛಗೊಂಡ ಬಳಿಕವೂ ಹಸುವು ಕರುವನ್ನು ನೆಕ್ಕುವುದನ್ನು ಮುಂದುವರೆಸಿತು. ಅದರಿಂದಾಗಿ ಆ ಕರುವಿನ ಚರ್ಮ ಕಿತ್ತುಹೋಗುವಂತಾಯಿತು. ಆದರೂ ಸಹ ಆ ತಾಯಿ ಹಸು ಕರುವನ್ನು ನೆಕ್ಕುವುದನ್ನು ಬಿಡಲಿಲ್ಲ. ಅದನ್ನು ಗಮನಿಸಿದ ಕೆಲವು ಜನ ಬಹಳ ಕಷ್ಟಪಟ್ಟು ಆ ಹಸು ಕರುಗಳನ್ನು ಬೇರ್ಪಡಿಸಿದರು. ನಕುಲನಿಗೂ ಸಹ ಹಸುವಿನಂತಹ ಸಾಧು ಪ್ರಾಣಿಯ ವರ್ತನೆಯು ಆಶ್ಚರ್ಯವನ್ನುಂಟು ಮಾಡಿತು.
ಸಹದೇವನು ತನ್ನ ಬಾಣವನ್ನು ಪರ್ವತವೊಂದರ ಹತ್ತಿರದಿಂದ ಎತ್ತಿಕೊಂಡ. ಅಲ್ಲಿ ಮೇಲಿನಿಂದ ಕೆಳಗೆ ಉರುಳುತ್ತಿದ್ದ ಬೃಹತ್ ಬಂಡೆಯೊಂದನ್ನು ನೋಡಿದ. ಉರುಳುತ್ತಿದ್ದ, ಆ ಹೆಬ್ಬಂಡೆಯು ತನ್ನ ಅಡಿಗೆ ಸಿಕ್ಕ ದೊಡ್ಡ ದೊಡ್ಡ ಬಂಡೆಗಳನ್ನು ಸಹ ಪುಡಿಪುಡಿ ಮಾಡುತ್ತಾ, ಬೃಹದಾಕಾರದ ಮರಗಳನ್ನು ನೆಲಕ್ಕೆ ಒರಗುವಂತೆ ಮಾಡುತ್ತಿತ್ತು. ಅಂತಹ ಬಂಡೆಯು ಒಂದು ಚಿಕ್ಕ ಗಿಡವು ಅಡ್ಡ ಬಂದುದರಿಂದ ನಿಂತುಕೊಂಡಿತು. ಸಹಜವಾಗಿಯೇ ಸಹದೇವನೂ ಸಹ ಈ ಸೋಜಿಗವನ್ನು ನೋಡಿ ಅಚ್ಚರಿಗೊಂಡ.
ಎಲ್ಲ ಪಾಂಡವರೂ ತಾವು ಕಂಡ ಸಂಗತಿಗಳ ಕುರಿತು ಕೃಷ್ಣನಿಗೆ ಹೇಳಿ ಅವನಿಂದ ವಿವರಣೆಯನ್ನು ಬಯಸಿದರು. ಕೃಷ್ಣನು ನಸುನಕ್ಕು ಅವುಗಳನ್ನು ವಿವರಿಸತೊಡಗಿದ…
“ಕಲಿಯುಗದಲ್ಲಿ ಪುರೋಹಿತರು ಬಹಳ ಮಧುರವಾದ ಧ್ವನಿಯನ್ನು ಹೊಂದಿರುತ್ತಾರೆ ಮತ್ತು ಬಹಳ ಉನ್ನತವಾದ ಜ್ಞಾನವನ್ನೂ ಹೊಂದಿರುತ್ತಾರೆ; ಆದರೂ ಸಹ ಆ ಕೋಗಿಲೆಯು ಮೊಲವನ್ನು ಕಿತ್ತು ತಿಂದಂತೆ ಅವರು ಭಕ್ತರನ್ನು ಸುಲಿದು, ಪೀಡಿಸುತ್ತಾರೆ.
ಕಲಿಯುಗದಲ್ಲಿ ಬಡವರು ಶ್ರೀಮಂತರ ಮಧ್ಯೆಯೇ ಬದುಕುತ್ತಾರೆ ಮತ್ತು ಆ ಶ್ರೀಮಂತರು ತುಂಬಿ ತುಳುಕುವಷ್ಟು ಧನಕನಕಗಳನ್ನು ಹೊಂದಿರುತ್ತಾರೆ; ಆದರೂ ಸಹ ಅವರು ಬಡವರಿಗೆ ಬಿಡಿಗಾಸನ್ನೂ ಕೊಡುವುದಿಲ್ಲ. ಆ ತುಂಬಿ ಹರಿಯುತ್ತಿದ್ದ ನಾಲ್ಕು ಬಾವಿಗಳಂತೆ ಬರಿದಾದ ಬಾವಿಗೆ ಅವರು ನೀರುಣಿಸುವುದಿಲ್ಲ.
ಕಲಿಯುಗದಲ್ಲಿ ತಾಯ್ತಂದೆಯರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಅವರ ಮಮಕಾರವು ಮಕ್ಕಳನ್ನು ಹಾಳು ಮಾಡುವುದಷ್ಟೇ ಅಲ್ಲ ಅವರ ಜೀವನವನ್ನೂ ನಾಶ ಮಾಡುತ್ತದೆ; ಆ ಆಕಳು ತನ್ನ ಕರುವಿನ ಮೇಲೆ ತೋರಿಸಿದ ಮಮತೆಯಂತೆ.
ಕಲಿಯುಗದಲ್ಲಿ ಪರ್ವತದ ಮೇಲಿಂದ ಬೀಳುವ ಹೆಬ್ಬಂಡೆಯಂತೆ ಜನರು ತಮ್ಮ ಸುಗುಣಗಳನ್ನು ಕಳಚಿಕೊಂಡು ಅಧಃಪತನಕ್ಕೆ ಬೀಳುತ್ತಾರೆ ಮತ್ತು ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ; ಆದರೆ ಅಂತಿಮವಾಗಿ ಭಗವನ್ನಾಮ ಸ್ಮರಣೆ ಮಾತ್ರ ಅವರನ್ನು ಆ ಪುಟ್ಟ ಗಿಡದಂತೆ ಕೆಳಗೆ ಜಾರದಂತೆ ಹಿಡಿದು ರಕ್ಷಿಸುತ್ತದೆ”.
~ಶ್ರೀಮದ್ಭಾಗವತದಿಂದ ಆಯ್ದ ಉದ್ಧವ ಗೀತೆಯ ಭಾಗ.
ಕೃಷ್ಣಾ ಎನಬಾರದೆ..
ನರ ಜನ್ಮ ಬಂದಾಗ ನಾಲಿಗೆ ಇದ್ದಾಗ| ಕೃಷ್ಣ ಎನಬಾರದೆ||
ಭಕ್ತಿ ಪೂರ್ವಕವಾಗಿ ಕೃಷ್ಣನಿಗೆ ಒಂದು ಬಾರಿ ಮಾಡಿದ ನಮಸ್ಕಾರವು ಹತ್ತು ಅಶ್ವಮೇಧ ಯಾಗ ಮಾಡಿದುದಕೆ ಸಮ ಅಂತ ಬಲ್ಲವರು ಹೇಳುತ್ತಾರೆ. ಅಶ್ವಮೇಧ ಯಾಗ ಮಾಡಿದವನಿಗೆ ಮತ್ತೆ ಪುನರಪಿ ಜನನಂ, ಪುನರಪಿ ಮರಣಂ. ಆದರೆ ಸರ್ವೋತ್ತಮ ನಾದ ದೇವ ದೇವನನ್ನು ನನ್ನ ಸ್ವಾಮಿ ಎಂದು ಒಪ್ಪಿಕೊಂಡವರಿಗೆ, ತಮ್ಮ ಸಂಪೂರ್ಣ ಬದುಕನ್ನು ಅವನಿಗೆ ಸಮರ್ಪಿಸಿಗೊಳಿಸಿದವರಿಗೆ ಮತ್ತೆ ಗರ್ಭವಾಸ ಇಲ್ಲವೆಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಮಲಗೆದ್ದು ಕೂಡುವಾಗ, ಮೈ ಮುರಿದು ಏಳುತಲೊಮ್ಮೆ, ತನ್ನ ಮಂದಗಮನೆಯ ಕೂಡ ಸರಸವಾಡುತಲೊಮ್ಮೆ, ಮಕ್ಕಳಾಡಿಸುವಾಗ ಅಕ್ಕರದಿ ನಲಿವಾಗ ಮತ್ತು ದೂರವಾಣಿ ಕರೆ ಮಾಡಿದಾಗ ಅಥವಾ ಸ್ವೀಕಾರ ಮಾಡಿದಾಗ, ಮನೆಯವರು ಅಥವಾ ಬಂಧು, ಬಳಗ, ಸ್ನೇಹಿತ ವರ್ಗದ , ಜೊತೆಗೆ ಮಾತನಾಡುವಾಗ ಆ ಭಗವಂತನಾದ ದೇವ ದೇವನ ಸ್ಮರಣೆ ಕಿಂಚಿತ್ತೂ ಆದರು ಆಗಲಿ.
( ಪ್ರೇರಣೆ/ಚಿರಋಣಿ- ಅ.ವಿಜಯವಿಠಲರವರ ಬರಹಗಳು)
Discussion about this post