ಸದ್ವಿಚಾರ ಸದಾಚಾರಗಳೆರಡೂ ಸದ್ಗತಿಯ ಪ್ರಾಪ್ತಿಗೆ ವಿಹಿತವಾದ ಸಾಧನಗಳು. ದೇಹದ ನೈರ್ಮಲ್ಯಕ್ಕೆ ವ್ರತ, ಉಪವಾಸ, ತೀರ್ಥಯಾತ್ರೆ, ದಾನ, ತಪಸ್ಸು, ಜಪ, ಯಾಗ, ಯಜ್ಞ ಮೊದಲಾಗಿ ಅನೇಕ ಸಾಧನಗಳನ್ನು ಶಾಸ್ತ್ರಗಳು ವಿಧಿಸಿದೆ. ಇವು ನೇರವಾಗಿ ಮೋಕ್ಷಪ್ರಾಪ್ತಿಗೆ ಸಾಧನಗಳಲ್ಲವಾದರೂ ಮೋಕ್ಷಕ್ಕೆ ಅಗತ್ಯವಾದ ಜ್ಞಾನಭಕ್ತಿಗಳ ಪ್ರಾಪ್ತಿಗೆ ಮುಖ್ಯಸೋಪಾನಗಳಾಗಿವೆ.
ಪ್ರತಿ ವರುಷದ ಆಷಾಢ ಮಾಸದಿಂದ ಕಾರ್ತೀಕ ಮಾಸದವರೆಗಿನ ಚಾತುರ್ಮಾಸವು ದೇಹಶುದ್ದಿಗಾಗಿ ಮಾಡುವ ಮಹಾವ್ರತವೆಂದು ಪರಿಗಣಿತವಾಗಿದೆ.
‘ಚಾತುರ್ಮಾಸ್ಯ’ ಎಂಬ ಶಬ್ದವೇ ಸೂಚಿಸುವಂತೆ ’ನಾಲ್ಕು ತಿಂಗಳ’ ವ್ರತ – ಆಷಾಢ ಶುದ್ಧ ಏಕಾದಶಿಯಿಂದ ಕಾರ್ತೀಕ ಶುದ್ದ ದಶಮಿವರೆಗೆ ಇದರ ಆಚರಣೆ, ಸೂರ್ಯನು ಕರ್ಕಾಟಕ ರಾಶಿಯಲ್ಲಿರುವಾಗ ಆಷಾಢ ಶುಕ್ಲ ಏಕಾದಶಿ ದಿನದಂದು ದೇವತೆಗಳಿಗೆ ರಾತ್ರಿಯು ಆರಂಭವಾಗುತ್ತದೆ, ಭಗವಂತನ ಯೋಗನಿದ್ರಾಕಾಲ, ಮಾಡಲ್ಪಟ್ಟ ಸಣ್ಣ ವ್ರತ, ನಿಯಮಗಳು ಅನಂತ ಫಲದ ನೀಡುವ ಪುಣ್ಯ ವರ್ಷಾಕಾಲ. ಪೌಷ್ಕರ ಸಂಹಿತೆ ತಿಳಿಸುವಂತೆ ಮಾಘ, ವೈಶಾಖ ಮಾಸಗಳಲ್ಲಿ ಆಚರಿಸುವ ಧರ್ಮಕಾರ್ಯಗಳಿಗಿಂತ ಕೋಟಿಪಟ್ಟು ಪುಣ್ಯ ಚಾತುರ್ಮಾಸ್ಯದಲ್ಲಿ ಆಚರಿಸುವ ವ್ರತಾದಿಗಳಿಗೆ ಉಂಟು.
ದೇವನು ಮಲಗಿರುವ ನಾವು ಭೋಗಕ್ಕೆ ವಿರಾಮ ಹಾಕಿ ಯೋಗಕ್ಕೆ ನಾಂದಿ ಹಾಡಬೇಕು. ಮಂಗಳಕರನಾದ ದೇವಾಧಿದೇವನು ಮಲಗಿದಾಗ ಅರ್ಥಾತ್ ಮಂಗಳ ದೃಷ್ಠಿ ಇಲ್ಲದಿರುವಾಗ ಮಾಡುವ ಕಾರ್ಯಗಳಿಗೆ ಮಂಗಳಕರವಾದ ಫಲ ಹೇಗೆ ಉಂಟಾಗಲು ಸಾಧ್ಯ? ಕಾರಣ, ಚಾತುರ್ಮಾಸ್ಯದಲ್ಲಿ ಮದುವೆ, ಮುಂಜಿ ಮುಂತಾದ ಶುಭ (ಮಂಗಳ) ಕಾರ್ಯಗಳು ಪ್ರಶಸ್ತವಲ್ಲ ಎನ್ನುತ್ತದೆ ಸ್ಕಂಧಪುರಾಣ.
ಆಷಾಢ ಮಾಸ ಬಂತೆಂದರೆ ಯತಿಗಳು –ಮಠಾಧೀಶರು ತಮ್ಮ ಚಾತುರ್ಮಾಸ್ಯ ವ್ರತಕ್ಕೆ ಸಿದ್ದತೆ ಮಾಡುತ್ತಾರೆ. ಈ ವ್ರತ ದೀಕ್ಷೆ ಸ್ವೀಕರಿಸಿದ ಅನಂತರ ಅದು ಮುಗಿಯುವವರೆಗೂ ಅವರ ಪರಿವ್ರಾಜಕತ್ವಕ್ಕೆ ವಿಶ್ರಾಂತಿ. ಆ ಸಮಯದಲ್ಲಿ ಯತಿಗಳಾದವರು ಅಂತರ್ಮುಖಿಗಳಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ತೊಡಗಬೇಕು. ಹಾಗೆ ಮಾಡಿದಾಗ ಸಮಾಜ ಹಸನಾಗಲು ಸಾಧ್ಯ. ಸಾತ್ವಿಕ ಶಕ್ತಿಯ ಸಂಚಾರ ಎಲ್ಲೆಡೆ ಆಗಲು ಸಾಧ್ಯ.
ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವ, ಬೌದ್ಧ, ಜೈನ ಮೊದಲಾದ ಎಲ್ಲ ಸಂಪ್ರದಾಯದವರು ಚಾತುರ್ಮಾಸ್ಯವನ್ನು ಶ್ರದ್ಧೆ, ಭಕ್ತಿಗಳಿಂದ ಆಚರಿಸುತ್ತಾರೆ. ಈ ನಾಲ್ಕು ತಿಂಗಳು ಮಳೆಗಾಲವಾದ್ದರಿಂದ ನಿರಂತರ ಮಳೆಯಿಂದಾಗಿ ಭೂಮಿಯೂ ಮೆದುವಾಗಿರುತ್ತದೆ, ಅಲ್ಲದೆ ಕ್ರಿಮಿ ಕೀಟಗಳು ಹುಟ್ಟಿಕೊಂಡಿರುವುದರಿಂದ ಆಗ ಸಂಚರಿಸಿದರೆ ತಿಳಿದೋ ತಿಳಿಯದೋ ಹಿಂಸೆ ಮಾಡಿದಂತಾಗುತ್ತದೆ, ಅಹಿಂಸಾ ಪರಿಪಾಲನೆಗಾಗಿ ಸನ್ಯಾಸಾಶ್ರಮಿಯು ಒಂದೆಡೆ ನೆಲಸಿ ಸ್ವಾತ್ಮಧ್ಯಾನ ಪರಾಯಣರಾಗುವರು. ಪರಿಸರ ಪ್ರಜ್ಞೆಯ ಅಂಶವೊಂದನ್ನು ಉಳಿಸಿ ಬೆಳೆಸಲು ಈ ಆಚರಣೆಯು ಇಂದಿಗೂ ಜೀವಂತವಾಗಿರುವ ಶ್ಲಾಘನೀಯ ವಿಚಾರ.
ಚಾತುರ್ಮಾಸ್ಯ ನಿರತ ಯತಿಗಳ ಸೇವೆ ಸಲ್ಲಿಸುವ ಅವಕಾಶ ಸಿಗುವುದರಿಂದ ಭಕ್ತಜನರಿಗೂ ಇದು ಶ್ರವಣ, ಮನನದ ಕಾಲ. ಯತಿಗಳ ಸೇವೆಯಿಂದ ಗೃಹಸ್ಥರಿಗೆ ಸಕಲ ಶ್ರೇಯಸ್ಸು ಲಭಿಸುತ್ತದೆ ಎನ್ನುವುದು ಶಾಸ್ತ್ರವಾಕ್ಯ.
ಮಾಧವನೊಲುಮೆಯ ಮಾಸ
ನಿಯಮನಿಷ್ಟೆಯಿಂದ, ಅಂತಃಕರಣ ಶುದ್ದಿಗಾಗಿ ಸುಖ-ಭೋಗಗಳನ್ನು ತ್ಯಜಿಸಿ ವೈರಾಗ್ಯದ ಮೂಲಕ ಭಗವದ್ಭಕ್ತಿ ಹೊಂದಿ ಜ್ಞಾನಗಳಿಕೆ, ಸತ್ಕರ್ಮಗಳನ್ನು ಮಾಡುವುದೇ ಚಾತುರ್ಮಾಸ್ಯ ವ್ರತದ ಗುರಿ. ಸಮಯ-ಪುರುಸೊತ್ತಿನ ಅಭಾವ, ಒಂದೇ ಸ್ಥಳದಲ್ಲಿ ನಾಲ್ಕು ತಿಂಗಳು ನೆಲೆಯಾಗ ಬೇಕಾಗಿರುವುದರಿಂದ ಒಂದು ಪಕ್ಷವನ್ನೇ ಮಾಸವೆಂದು ಪರಿಗಣಸಿ (ಪಕ್ಷೋ ವೈ ಮಾಸಃ) ಎರಡು ತಿಂಗಳಿಗೆ ಚಾತುರ್ಮಾಸ್ಯ ವ್ರತ ಮುಗಿಸುವ ಪದ್ಧತಿಯೂ ಇದೆ.
ವರಾಹ ಪುರಾಣದ ಧರಿಣಿದೇವಿ ಮತ್ತು ವರಾಹದೇವರ ಸಂವಾದದ “ಚಾತುರ್ಮಾಸ್ಯ ಮಾಹಾತ್ಮ್ಯೆ” ಯಲ್ಲಿ ತಿಳಿಸಿರುವಂತೆ ಆಷಾಢಮಾಸದ ಶುಕ್ಲಪಕ್ಷದ ಶಯನೀ ಏಕಾದಶಿಯಂದು ಉಪವಾಸದಿಂದಿದ್ದು ದೇಹದ ಪಾವಿತ್ರ್ಯಕ್ಕಾಗಿ ತಪ್ತಮುದ್ರಾಧಾರಣೆಯನ್ನು ಗುರುಗಳಿಂದ ಮಾಡಿಸಿಕೊಂಡು, ದ್ವಾದಶಿಯಂದು ಪಂಚಗವ್ಯ ಸೇವಿಸಿ, ಆಷಾಢ ಶುದ್ದ ಪೂರ್ಣಿಮೆಯಂದು ಚಾತುರ್ಮಾಸ್ಯ ಸಂಕಲ್ಪ ಕೈಗೊಳ್ಳಬೇಕು, ಅಂದು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದೇ ಇದ್ದಲ್ಲಿ ಆಷಾಢ ಕೃಷ್ಣ ಪಂಚಮಿಯವರೆಗೂ ಸಂಕಲ್ಪಕ್ಕೆ ಅವಕಾಶ ಕಲ್ಪಿಸಲಾಗಿದೆ.
ಚಾತುರ್ಮಾಸ್ಯದ ಸಂಧರ್ಭದಲ್ಲಿ ನದಿಯನ್ನು ದಾಟಬಾರದೆಂಬುದು ಒಂದು ವಿಶೇಷ ನಿಯಮ. ಹಿಂದೆ ಬಹುತೇಕ ನದಿಯೇ ಗ್ರಾಮದ ಗಡಿ.ಆದ್ದರಿಂದ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಯತಿಯು ಮೂರು ಮೈಲಿಗಳಿಗಿಂತ ಹೆಚ್ಚುದೂರ ಹೋಗಬಾರದೆಂದು ಧರ್ಮಶಾಸ್ತ್ರಕಾರರ ಅನುಶಾಸನ.
ಚಾತುರ್ಮಾಸ್ಯ ವ್ರತದ ಅಚರಣೆಗೂ ಶುದ್ಧ ಪ್ರಾಚೀನ ಹಿನ್ನೆಲೆ ಉಂಟು, ಸಂಪ್ರದಾಯದ ಪುಷ್ಟಿ ಉಂಟು, ಅಂಧಾಚರಣೆ ಅಥವಾ ಅರ್ವಾಚೀನರ ಸ್ವಾರ್ಥದ ಹಿನ್ನೆಲೆಯಲ್ಲಿ ಹೊಸದಾಗಿ ಸೃಷ್ಟಿಗೊಂಡ ಗೊಡ್ಡು ಆಚರಣೆ ಸರ್ವಥಾ ಅಲ್ಲ. ಪ್ರಾಮಾಣಿಕವಾದ, ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದ ಪ್ರಾಚೀನ ಋಷಿಮುನಿಗಳು ಆಚರಿಸಿ ಫಲಗಳನ್ನು ಅನುಭವಿಸಿ ಸಂಪ್ರದಾಯ ಹಾಕಿಕೊಟ್ಟ ಆಚರಣೆಗಳಿವು. ಅಂತೆಯೇ ಎಲ್ಲ ಕಾಲಕ್ಕೂ ಅನುಕರಣಿಯವಾದವುಗಳು.
ನಮ್ಮ ಸಾಮಾಜಿಕ ಬದುಕಿನಲ್ಲಿ ಇಷ್ಟವಿರಲಿ ಇಲ್ಲದಿರಲಿ ಅಧಿಕಾರಿವರ್ಗದ, ಕುಟುಂಬವರ್ಗದ ಜನರ ಸಂತೋಷಕ್ಕಾಗಿ ಒಳ್ಳೆಯದನ್ನು ತ್ಯಜಿಸುವ ,ಕೆಟ್ಟದನ್ನು ಸ್ವಾಗತಿಸುವ ಕಾರ್ಯವನ್ನು ಮಾನವನು ಮಾಡುವನು, ಆದರೆ ತನಗೆ ಒಳ್ಳೆಯ ಶರೀರ, ಇಂದ್ರಿಯ, ವಿಚಾರಶಕ್ತಿ, ಉತ್ತಮವಾದ ವಿದ್ಯೆ,ಭೌತಿಕ ಸಂಪತ್ತನ್ನು ಕರುಣಿಸಿದ ಪರಮಾತ್ಮನ ಪ್ರೀತಿಗಾಗಿ ಏನನ್ನಾದರೂ ತ್ಯಜಿಸುವ ಅವಶ್ಯಕತೆಯಿದೆ.
ಪ್ರಧಾನವಾಗಿ ನಾವು ಪ್ರೀತಿಸುವ ಆಹಾರದ ಮೇಲಿನ ಅಭಿಮಾನವನ್ನು ತ್ಯಜಿಸುವ ಹಿನ್ನೆಲೆಯಲ್ಲಿ ಆಹಾರತ್ಯಾಗವನ್ನು ಋಷಿಗಳು ಮಾಧ್ಯಮವನ್ನಾಗಿ ಗುರುತಿಸಿದ್ದಾರೆ. ಆದ್ದರಿಂದ ಚಾತುರ್ಮಾಸ ಕಾಲದಲ್ಲಿ ಭೋಗವಸ್ತುಗಳ ಮೇಲಿನ ಅಭಿಮಾನವನ್ನು ತ್ಯಜಿಸುವುದು ಹೆಚ್ಚು ಕಾಲ ಭಗವನ್ನಾಮ ಸ್ಮರಣೆ ನಮ್ಮ ಬದುಕಿನ ಬೆಳಕಾಗಬೇಕು.
ಚಾತುರ್ಮಾಸ್ಯ ಪರಿಕಲ್ಪನೆ: ಸ್ವಸ್ಥ ಜೀವನದ ಸಂಶೋಧನೆ
ಈ ನಾಲ್ಕು ತಿಂಗಳ ಕಾಲದಲ್ಲಿ ಶರೀರದ ಉಷ್ಣವು ಒಂದೊಂದು ತಿಂಗಳಿನಲ್ಲೂ ರವಿಯ ಸಂಚಾರ ಮಾಡುವ ನಕ್ಷತ್ರಗಳ ಪ್ರಭಾವದಿಂದ ಆರೋಗ್ಯಕ್ಕೆ ಧಕ್ಕೆ ಬರದೇ ಇರಲೆಂದು ಋತುವಿಗನುಸಾರವಾಗಿ ಮತ್ತು ಮಾಸಕ್ಕನುಸಾರವಾಗಿ ಆಹಾರ ನಿಯಮ ಮಾಡಿದ್ದಾರೆ. ವ್ರತ ಮುಗಿದ ದಿನ ಅಂದರೆ ಕಾರ್ತೀಕ ಶುದ್ಧ ದ್ವಾದಶಿಯಂದು ನೆಲ್ಲಿಕಾಯಿಯನ್ನು ಉಪಯೋಗಿಸುವುದನ್ನು ಕಡ್ಡಾಯ ಮಾಡಿದರು ಕಾರಣ, ಶೀತ ಗುಣವುಳ್ಳ ನೆಲ್ಲಿ ಕಾಯಿ ಶರೀರದ ಉಷ್ಣತೆಯನ್ನು ಶಮನ ಮಾಡುತ್ತದೆ ಎಂದು.
ಪೂರ್ವೀಕರ ಸುದೀರ್ಘ ಮತ್ತು ಸ್ವಸ್ಥ ಜೀವನದ ಹಿಂದೆ ಆಯುರ್ವೇದ ಶಾಸ್ತ್ರದ ಭದ್ರ ತಳಹದಿಯಿದೆ.ಇಂದಿನ ದಿನ ಚಾತುರ್ಮಾಸ್ಯದ ಹಿಂದಿರುವ ಅಪೂರ್ವ ದಿನಚರಿ ಮತ್ತು ಆಚರಣೆ ಮರೆತಿದ್ದೇವೆ ಅದನ್ನು ಕೇವಲ ಕಠಿಣ ಆಹಾರಶಿಸ್ತು ಎಂದು ಬಗೆದರೆ ಅದು ನಮ್ಮ ತಪ್ಪು, ನಮ್ಮ ಸಂಸ್ಕøತಿಯ ಇಂಥ ಆಚರಣೆ ಗಳಲ್ಲಿ ಸಹಸ್ರಾರು ವರ್ಷಗಳ ಅಪಾರ ಅನುಭವ ಅಡಗಿದೆ.
ನೀರಿನಿಂದ ಬರುವ ಅನೇಕ ರೋಗಗಳಿಗೆ ಉತ್ಪತ್ತಿ ಸ್ಥಾನ ಚಾತುರ್ಮಾಸ್ಯದ ಮೊದಲ ತಿಂಗಳು. ನೆಲದಲ್ಲಿರುವ ಅನೇಕ ಜಂತುಗಳು ಮೆಲಕ್ಕೆ ಬಂದು ಹೊಸದಾಗಿ ಬೆಳೆದ ಕಾಯಿ ಪಲ್ಲೆಗಳನ್ನು ಸೇರುತ್ತದೆ. ಮಳೆಗಾಲದ ದಿನಗಳು ಅಂದರೆ ಅದು ವಾತದೋಷದ ಕಾಲ. ಹಸಿವೆ ಹೆಚ್ಚು. ತರಕಾರಿ, ಗೆಡ್ಡೆ ಗೆಣಸಿನ ಬಳಕೆಯಿಂದ ವಾತ ಇನ್ನಷ್ಟು ವೃದ್ದಿ, ಹಾಗಾಗಿ ಅದನ್ನು ದೂರ ಉಳಿಸಿ ಆರೋಗ್ಯ ಸಾಧಿಸುವ ಉಪಾಯವೇ ಮಳೆಗಾಲದ ಮೊದಲ ವ್ರತ ಶಾಕಾವ್ರತ.
ಆಯುರ್ವೇದದ ಪ್ರಕಾರ ಕಫರೋಗ ದೂರವಿಡಲು ಮೊಸರು ಸೇವನೆಗೆ ಕಡಿವಾಣ. ಅದು ದಧಿ ಬಿಡುವ ಎರಡನೇ ಪಾಳಿಯ ವ್ರತ. ಈ ಮಾಸದಲ್ಲಿ (ಭಾದ್ರಪದ) ಹಸುಗಳು ಹಾಗು ಇತರ ಹಾಲುಕೊಡುವ ಪ್ರಾಣಿಗಳು ಮೈಥುನದಲ್ಲಿ ತೊಡಗುವವು, ಆದ್ದರಿಂದ ಈ ಕಾಲದಲ್ಲಿ ಮೊಸರು ಸೇವನೆಗೆ ನಿಷೇಧ ವಿಧಿಸಲಾಗಿದೆ.
ಅನಂತರ ಗರ್ಭ ಧರಿಸಿರುವ ಹಸುಗಳ ಕ್ಷೀರ ಉಪಯೋಗ ಬಿಡುವ ಉಪಾಯ. ಹಾಲು ಸಹ ಕೊಂಚ ಕಾಲ ಬಿಡುವ ದೂರ ಇಡಿ ಎನ್ನುವ ಸಲಹೆ, ಅದು ಆಶ್ವಯುಜದಲ್ಲಿನ ಚಾತುರ್ಮಾಸ್ಯದ ಮೂರನೇ ಭಾಗದ್ದು .
ಕೊನೆಗೆ ಬೇಳೆಕಾಳು ಅಥವ ದ್ವಿದಳ ವ್ರತದಲ್ಲಿ ವಾತಕರ ಆಹಾರದ ನಿಷೇಧವಿದೆ. ಕಾರ್ತಿಕ ಮಾಸದಲ್ಲಿ ಹೊಸಧಾನ್ಯ ಉತ್ಪತ್ತಿಯಾಗುತ್ತದೆ. ಅವುಗಳ ಬಳಕೆ ಆರೋಗ್ಯಕರವಲ್ಲ. ಒಟ್ಟಿನಲ್ಲಿ ಮಳೆಗಾಲ ಮತ್ತು ಅನಂತರದ ಋತುಗಳಲ್ಲಿ ಆರೋಗ್ಯ ಪಾಲನೆಯ ಶಿಸ್ತು ನಮ್ಮ ಸಂಸ್ಕøತಿಯ ನೆಲೆಗಟ್ಟು.
ಒಂದು ಪುಣ್ಯಕಾರ್ಯದ ಮುಕ್ತಾಯ ಮತ್ತೊಂದು ಶುಭಕಾರ್ಯಕ್ಕೆ ನಾಂದಿ ಅಂತೂ ಸಾಧನೆಗೆ ಕೊನೆಯಿಲ್ಲ. ಒಂದು ತಿಂಗಳು ಬಿಟ್ಟಿದ ಪದಾರ್ಥವನ್ನು ಮತ್ತೆ ಸ್ವೀಕರಿಸುವ ಸುಯೋಗ. ಅದು ಪರಮಾತ್ಮನ ಪ್ರೀತಿಗಾಗಿ ಅದನ್ನು ದಾನ ನೀಡುವುದು ಶ್ರೇಯಸ್ಕರ. ಆರೋಗ್ಯ ತಪ್ಪಿದಲ್ಲಿ ಸಾಧನೆಯ ಮಾತು ಕನಸಿನದೇ ಸರಿ: ಶರೀರ ಮಾಧ್ಯಮಂ ಖಲು ಧರ್ಮಸಾಧನಂ.
ಮತ್ತೊಂದು ರೀತಿಯಲ್ಲಿ ಚಾತುರ್ಮಾಸ್ಯದ ಆಹಾರ ನಿಯಮ ಅರ್ಥವತ್ತಾದದು. ವರ್ಷಪೂರ್ತಿ ಉಪಯೋಗಿಸಿದ ತರಕಾರಿಗಳನ್ನು ಆ ಮೊದಲ ಒಂದು ತಿಂಗಳಲ್ಲಿ ಬಿಡುವುದು, ಆನಂತರದ ದಿನಗಳಲ್ಲಿ ಮೊಸರು ಮೊದಲಾದವುಗಳನ್ನು ಬಿಡುವುದು ದೇಹಕ್ಕೆ ಹಿತಕರವೆನ್ನಿಸಲು ಕಾರಣವಿದೆ.
ದೇಹಕ್ಕೂ ಸಹ ಒಂದೇ ಬಗೆಯ ಆಹಾರ ಸೇವನೆಯಿಂದ ಕೆಲವು ಪೋಷಕಾಂಶಗಳು ಹೆಚ್ಚುವ ಇತರ ಪೋಷಕಾಂಶಗಳ ಕೊರತೆ ತಪ್ಪಿದಲ್ಲ. ಅದರಂತೆ ಹಾಲು ಮೊಸರುಗಳಲ್ಲಿನ ಕೆನೆ ಅಂಶ ಹೆಚ್ಚಾಗಿ ದೇಹದಲ್ಲಿನ ರಕ್ತನಾಳಗಳು ಪೆಡಸುಗೊಳ್ಳುವ ಸಾಧ್ಯತೆಯನ್ನು ಆ ಎರಡು ತಿಂಗಳಲ್ಲಿ ಆವುಗಳನ್ನು ತೊರೆಯುವುದರಿಂದ ನಿಯಂತ್ರಿಸಲು ಸಾಧ್ಯವಾಗುವುದು.
ಮಳೆಗಾಲದ ಚಾತುರ್ಮಾಸ್ಯದಲ್ಲಿ ಕೆಲಸವಿಲ್ಲದವರಿಗೆ ಹೊತ್ತು ಹೋಗದು ಏನೇನೋ ಮಾಡಿಕೊಂಡು ಕಾಲ ಕಳೆದು ಸಮಯ ಪೋಲಾಗದಂತೆ ದೇವರೆಡೆಗೆ ಸೆಳೆಯಲು ಹಿರಿಯರು ವಿಧಿಸಿದ ಹಲವು ವ್ರತಗಳು:
ಲಕ್ಷವರ್ತೀ ವ್ರತ: ಪರಮಾತ್ಮನನ್ನು ಸ್ಮರಿಸುತ್ತ ಹತ್ತಿ ಹೊಸೆದು ಒಂದು ಲಕ್ಷ ಬತ್ತಿ ಮಾಡುವ ಈ ವ್ರತ ಪರಲೋಕದ ಬುತ್ತಿಯನ್ನು ಸಿದ್ದ ಮಾಡಲು ಸಾಧನ. ಹತ್ತಿಯ ಕಗ್ಗಂಟನ್ನು ಬಿಡಿಸಿ ಹಸನಾಗಿಸುವಾಗಲೇ ನಿಮ್ಮ ಮನ ಹಸನಾಗಿ ಪರಿಶುದ್ಧವಾಗುತ್ತದೆ. ಹತ್ತಿ ಹೊಸೆಯಲು ಬತ್ತಿಗಾಗಿ ನೀವು ಎರಡೂ ಕೈ ತಿಂಗಳುಗಟ್ಟಲೆ ಬಳಸಿರುವಾಗ ದೇವರು ತನ್ನ ವರ ಅಭಯ ಎಂಬ ಎರಡು ಕೈಗಳಿಂದ ನಿಮ್ಮನ್ನು ಅನುಗ್ರಹಿಸುವನು,ಅಂತು ಕೂತು ಮಾಡಿದ ಈ ಕಾರ್ಯ, ಆರತಿ ಆಗುವಾಗ ನಿಂತ ಭಕ್ತರಿಗೆಲ್ಲಾ ಆನಂದ ತರುವದೆಂದ ಮೇಲೆ ನಿಮಗೆ ಆನಂದ ಸಿಗದೇ?
ಲಕ್ಷ ಪ್ರದಕ್ಷಿಣ ವ್ರತ: ಚಾತುರ್ಮಾಸ್ಯ ಈ ಸಂದರ್ಭದಲ್ಲಿ ನಾವು ಹಮ್ಮಿಕೊಳ್ಳುವ ವ್ರತ ಸೇವಕರು- ಸಂಪತ್ತು- ಸವಲತ್ತುಗಳನ್ನು ಆಧರಿಸಿರುವ ದುಬಾರಿ ವ್ರತ ಆಗಬಾರದು. ಕೆಲವು ವಸ್ತುಗಳು ಅಥವಾ ಸಹಾಯಕರು ಅಥವಾ ನಮ್ಮ ಸ್ವಂತ ಸಂಪತ್ತು ಇಲ್ಲದಿರುವಾಗ ಆ ವ್ರತ ಅರ್ಧಕ್ಕೆ ನಿಂತಂತಾಗಿ ಮುಜುಗರವಾಗಬಾರದು. ಗಟ್ಟಿಮುಟ್ಟಿನ ದೇಹದ ಗುರಿಹೊಂದಿದ ಲಕ್ಷಪ್ರದಕ್ಷಿಣ ವ್ರತ ಲಕ್ಷಗಟ್ಟಲೆ ಪುಣ್ಯವನ್ನು ಲೂಟಿಮಾಡುವ ಸುಲಭವ್ರತ.
ಚಾತುರ್ಮಾಸ್ಯವೆಂದರೆ ನಾಲ್ಕು ತಿಂಗಳಿನ 120 ದಿನಗಳು ಅದರಲ್ಲಿ ಸ್ತ್ರೀಯರ ಮಾಸಿಕ ದಿನಗಳನ್ನು ಕಳೆದರೆ 100 ದಿನಗಳಲ್ಲಿ ದಿನಕ್ಕೆ 1000 ಪ್ರದಕ್ಷಿಣೆ ಹಾಕಿದರು ಲಕ್ಷ ಪ್ರದಕ್ಷಿಣೆ ಮುಗಿದಂತೆ ಸರಿ. ಭೆಳಿಗ್ಗೆ- ಸಂಜೆ 500-500ರಂತೆ ಹೀಗೆ ಲಕ್ಷಬಾರಿ ತಿರುಗುವಾಗ ಒಮ್ಮೆಯಾದರು ನೀವು ಲಕ್ಷ್ಮೀಪತಿಯ ಕಣ್ಣಿಗೆ ಬೀಳದಿರುತ್ತೀರಾ? ಹೀಗೆ ಮಾಡಿ ನೀವು ಪಾರತ್ರಿಕ ಲೋಕದ ಲಕ್ಷಾಧೀಶರಾಗಿ!
ಗೋಪದ್ಮ ವ್ರತ: ಸಾಧಕನ ಶಕ್ತಿ ಉತ್ಸಾಹಕ್ಕನುಗುಣವಾಗಿ ವಿವಿಧ ವ್ರತಗಳ ಉಲ್ಲೇಖ ಶಾಸ್ತ್ರದಲ್ಲಿದೆ. ಒಂದನ್ನು ಸುಲಭವೆಂದು ಮಾಡಿ ಮುಗಿಸಿದ ಸಾಧಕ ಮತ್ತೊಂದನ್ನು ಆಯ್ದುಕೊಳ್ಳಬಹುದು. ಹಮ್ಮಿಕೊಂಡ ನಾಲ್ಕು ತಿಂಗಳ ವ್ರತ ಮುಗಿದಾಗ ಮುಖದಲ್ಲಿ ಸಾತ್ವಿಕ ನಗೆ ಸಹಜ, ಅಂತರಂಗದಲ್ಲಿ ಸಾರ್ಥಕ್ಯ ಮನೋಭಾವ.
ಕೃಷ್ಣ ಸುಭದ್ರೆಗೆ ಹೇಳಿದ ಪುಣ್ಯತಮವಾದ ವ್ರತವೇ ಗೋಪದ್ಮವ್ರತ. ಗೋವುಗಳ ಸನ್ನಿಧಿಯಲ್ಲಿ ಅಥವಾ ದೇವರ ಕೋಣೆಯಲ್ಲಿ ಗೋಮಯದಿಂದ ಸಾರಿಸಿ ಗೋವಿನ ಚಿತ್ರ ಬರೆದು ಅದರ ಸುತ್ತಲು 33 ಪದ್ಮಗಳನ್ನು ರಂಗೋಲಿಯಿಂದ ಬಿಡಿಸುವುದು. ರಂಗೋಲಿ ಬಿಡಿಸುವುದು ತಾಳ್ಮೆ-ಜಾಣ್ಮೆಗಳ ಸಂಕೇತ. ಇನ್ನು ಕಮಲ ನೀರಿನಲ್ಲಿದ್ದರೂ ತೋಯದಂತೆ ಸುಖದುಃಖದಲ್ಲಿ ನಿರ್ಲಿಪ್ತರಾಗ ಬೇಕಾದ ಸಂದೇಶ ಸೂಚಿಸುತ್ತದೆ.
ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ,) ಯುವ-ಸಂಸ್ಕøತಿ ಚಿಂತಕರು
Discussion about this post