ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಡಾನೆ ಜೊತೆಗೆ ಸೆಲ್ಫಿ ತೆಗೆಯುವ ಯತ್ನ ಉದ್ಯಮಿಯೊಬ್ಬರ ಜೀವವನ್ನೇ ಬಲಿತೆಗೆದುಕೊಂಡಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಹಾಗೂ ಉದ್ಯಮಿ ನರೇಂದ್ರ ಶಿಂಧೆ (52) ಮೃತಪಟ್ಟ ದುರ್ದೈವಿ.
ಆರಂಭದಲ್ಲಿ ಸ್ನೇಹಿತರು ನೀಡಿದ್ದ ಮಾಹಿತಿ ಮತ್ತು ನಂತರ ಅರಣ್ಯ ಇಲಾಖೆ ನಡೆಸಿದ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಕಾಡಾನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಾರಿನಿಂದ ಇಳಿದ ವೇಳೆ ಆನೆ ದಾಳಿ ನಡೆಸಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾತ್ರಿಯ ಪ್ರವಾಸ ದುರಂತದಲ್ಲಿ ಅಂತ್ಯ
ಸೋಮವಾರ ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ, ನರೇಂದ್ರ ಶಿಂಧೆ ಅವರು ತಮ್ಮ 10 ಮಂದಿ ಸ್ನೇಹಿತರೊಂದಿಗೆ ರಾಮನಗರ ಜಿಲ್ಲೆಯಲ್ಲಿರುವ ಖಾಸಗಿ ರೆಸಾರ್ಟ್ಗೆ ಭೇಟಿ ನೀಡಿ, ಬಳಿಕ ಮೂರು ಕಾರುಗಳಲ್ಲಿ ಬೆಂಗಳೂರಿನತ್ತ ಹಿಂದಿರುಗುತ್ತಿದ್ದರು.
ಈ ವೇಳೆ ಕನಕಪುರ ವನ್ಯಜೀವಿ ಅಭಯಾರಣ್ಯದ ಬಸವನಬೆಟ್ಟ ಸಮೀಪದ ಕರಬಗೆರೆ ಕೆರೆಯ ಬಳಿ ಕಾರುಗಳನ್ನು ನಿಲ್ಲಿಸಲಾಗಿತ್ತು.
ಮೊದಲು ಹೇಳಿದ್ದ ಕಥೆ ಸುಳ್ಳು ಎಂದು ಬಹಿರಂಗ
ಘಟನೆಯ ಬಳಿಕ ಸ್ನೇಹಿತರು, ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ ಎಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಆದರೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಅಧಿಕಾರಿಗಳ ತನಿಖೆಯಲ್ಲಿ, ಕೆರೆಯ ಸಮೀಪ ನಿಂತಿದ್ದ ಕಾಡಾನೆಯನ್ನು ಕಂಡ ನರೇಂದ್ರ ಶಿಂಧೆ ಅವರು ಫೋಟೊ ಅಥವಾ ಸೆಲ್ಫಿ ತೆಗೆಯುವ ಉದ್ದೇಶದಿಂದ ಕಾರಿನಿಂದ ಇಳಿದಿದ್ದರು ಎಂಬುದು ಬೆಳಕಿಗೆ ಬಂದಿದೆ.
ಸೆಲ್ಫಿ ತೆಗೆಯುವಾಗಲೇ ಏಕಾಏಕಿ ದಾಳಿ
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಶಿಂಧೆ ಅವರು ಆನೆಯತ್ತ ಬೆನ್ನು ಮಾಡಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ.
ಆನೆಯ ದಂತಗಳು ಅವರ ಸೊಂಟ ಹಾಗೂ ಬೆನ್ನಿಗೆ ಬಲವಾಗಿ ತಾಗಿದ್ದು, ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅವರು ಸಮೀಪದಲ್ಲಿದ್ದ ಕರಬಗೆರೆ ಕೆರೆಯಲ್ಲಿ ಬಿದ್ದಿದ್ದಾರೆ.
Also read>> ಪ್ರಕೃತಿಯ ವಿಚಿತ್ರ ಸೃಷ್ಟಿ: ಸೊರಬದಲ್ಲಿ 8 ಕಾಲು, 3 ಕಿವಿ, 2 ಬಾಲದ ಆಡಿನ ಮರಿ ಜನನ
ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟಿರುವ ಸಾಧ್ಯತೆ ಇದ್ದು, ಆನೆ ದಾಳಿ ಆರಂಭವಾದ ನಂತರ ಕೇವಲ ಮೂರುರಿಂದ ಐದು ಸೆಕೆಂಡುಗಳೊಳಗೆ ಘಟನೆ ನಡೆದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯುವ ವೇಳೆ ಬೆಳಕಿಗೆ ಬಂದ ಘಟನೆ
ಘಟನೆಯ ಬಳಿಕ ಸ್ನೇಹಿತರು ಸ್ಥಳೀಯರ ನೆರವಿನಿಂದ ಕೆರೆಯಿಂದ ಮೃತದೇಹವನ್ನು ಹೊರತೆಗೆದು, ಯಾವುದೇ ಮಾಹಿತಿ ನೀಡದೆ ನೇರವಾಗಿ ಬೆಂಗಳೂರಿಗೆ ಕೊಂಡೊಯ್ಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಗೇಟ್ ಬಳಿ ವಾಹನಗಳನ್ನು ತಪಾಸಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆ
ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಂ. ರಾಮಕೃಷ್ಣಪ್ಪ ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಕಾರು ನಿಲ್ಲಿಸಿದ್ದ ಸ್ಥಳದಿಂದ ಕೆರೆಯವರೆಗೆ ಸುಮಾರು 50 ಮೀಟರ್ ದೂರವಿದ್ದು, ಆನೆ ದಾಳಿ ನಡೆಸಿದಾಗ ಶಿಂಧೆ ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಸಿಕ್ಕಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇಂತಹ ಮೊದಲ ಸಾವು
ಕನಕಪುರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆಯೊಂದಿಗೆ ಸೆಲ್ಫಿ ಅಥವಾ ಫೋಟೊ ತೆಗೆಯಲು ಹೋಗಿ ಮೃತಪಟ್ಟಿರುವ ಮೊದಲ ಘಟನೆ ಇದಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಅರಣ್ಯ ಇಲಾಖೆ ಎಚ್ಚರಿಕೆ
ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ವನ್ಯಜೀವಿಗಳ ಸಮೀಪ ಹೋಗುವುದು, ಅವುಗಳೊಂದಿಗೆ ಸೆಲ್ಫಿ ಅಥವಾ ಫೋಟೊ ತೆಗೆಯಲು ಯತ್ನಿಸುವುದು ಅತ್ಯಂತ ಅಪಾಯಕಾರಿ ಎಂದು ತಿಳಿಸಿದೆ. ಅರಣ್ಯ ಪ್ರದೇಶಗಳಲ್ಲಿ ವಾಹನದಿಂದ ಇಳಿಯದಂತೆ ಹಾಗೂ ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






