ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದಲ್ಲಿ ಖಾಸಗೀ ಶಾಲೆಗಳ ಮಿತಿಮೀರಿದ ಡೋನೇಷನ್ ಹಾವಳಿಯನ್ನು ತಪ್ಪಿಸುವಂತೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಈ ಸಂಬಂಧ ಡಿಡಿಪಿಐ ಜೊತೆಗೆ ಸಂಘಟನೆವತಿಯಿಂದ ಚರ್ಚೆ ಮಾಡಲಾಗಿದೆ. ಆದರೂ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ. ಕೊರೋನಾ ನಂತರ ಜನಸಾಮಾನ್ಯರ ಮಕ್ಕಳು ವಿದ್ಯಾಭ್ಯಾಸಕ್ಕೆ ಖಾಸಗೀ ಶಾಲೆಗಳಲ್ಲಿ ಶುಲ್ಕ ಕಟ್ಟುವುದು ಕಷ್ಟವಾಗುತ್ತಿದೆ. ಆದರೂ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಖಾಸಗೀ ಶಾಲೆಗಳಲ್ಲಿ ಮಿತಿಮೀರಿದ ಡೋನೇಷನ್ ಹಾವಳಿ ಮುಂದುವರೆದಿದ್ದು, ಸರ್ಕಾರ ಇದಕ್ಕೆ ಬ್ರೇಕ್ ಹಾಕುವಂತೆ ಮತ್ತು ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಹಾಗೂ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶಾಲಾ ಶುಲ್ಕದ ದರಪಟ್ಟಿಯನ್ನು ಕಡ್ಡಾಯವಾಗಿ ಹಾಕುವಂತೆ ಶಾಲೆಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಲಾಯಿತು.
ಅಲ್ಲದೆ ನಗರದ ಪ್ರತಿಷ್ಠಿತ ದುರ್ಗಿಗುಡಿ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸುಮಾರು 1000 ಮಕ್ಕಳು ಓದುತ್ತಿದ್ದು, ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಈ ಶಾಲೆಗೆ ಅನೇಕ ಮೂಲಭೂತ ಸೌಲಭ್ಯಗಳ ಕೊರತೆಯಿದೆ. 24-7 ನೀರಿನ ಸೌಲಭ್ಯ ಬೇಕಾಗಿದೆ. ಹೆಚ್ಚು ಮಕ್ಕಳು ಓದುತ್ತಿರುವುದರಿಂದ ಶೌಚಾಲಯಗಳ ನಿರ್ಮಾಣ ಮಾಡಿ, ಅಲ್ಲಿ ಸರಿಯಾದ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಸಣ್ಣ ಮಳೆ ಬಂದರೆ ಈ ಶಾಲೆಯ ಕ್ರೀಡಾಂಗಣದಲ್ಲಿ ನೀರು ನಿಂತು ಮಕ್ಕಳು ಓಡಾಡುವುದೇ ಕಷ್ಟವಾಗುತ್ತದೆ. ‘ಬಿ’ದರ್ಜೆ ನೌಕರರ ಕೊರತೆಯಿದೆ. ಶಾಲಾ ಕಟ್ಟಡದ ಗೋಡೆಗಳು ಲಿಕೇಜ್ ಆಗಿ ನೀರು ಸುರಿಯುತ್ತಿದೆ. ಊಟದ ಹಾಲ್ ಕೂಡ ಬೇಕಾಗಿದ್ದು, ಸ್ಮಾರ್ಟ್ಸಿಟಿಯವರು ಶಾಲೆಯ ಪಕ್ಕದಲ್ಲಿ ಕಾಮಗಾರಿ ನಡೆಸುವಾಗ ಪೈಪ್ಗಳನ್ನು ಒಡೆದು ಹಾಕಿದ್ದು, ಶಾಲಾ ಶೌಚಾಲಯದ ನೀರು ಮುಂದಕ್ಕೆ ಹೋಗದೆ ಗಬ್ಬುವಾಸನೆ ಬೀರುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಇದೇ ತಿಂಗಳು 28ರಿಂದ ಶಾಲೆಗಳು ಪ್ರಾರಂಭವಾಗಲಿದೆ. ಆದ್ದರಿಂದ ಕೂಡಲೇ ದುರ್ಗಿಗುಡಿ ಶಾಲೆಗೆ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರವಿಪ್ರಸಾದ್, ಜಿಲ್ಲಾಧ್ಯಕ ಮಧುಸೂದನ್, ನಯಾಜ್, ಗೋಪಿ, ಕಿರಣ್, ವೆಂಕಟೇಶ್, ಜಯಕೀರ್ತಿ, ಶರತ್, ಲಿಂಗರಾಜ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post