ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರತಿಯೊಬ್ಬರಿಗೂ ಮಾನಸಿಕ, ದೈಹಿಕವಾಗಿ ಆರೋಗ್ಯವಾಗಿರುವುದಕ್ಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದು ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸೆಪೆಕ್ಟರ್ ಸಂಗೀತಾ ಜಿ ಕಾನಡೆ ಅಭಿಪ್ರಾಯಪಟ್ಟರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವು ತನ್ನದೇ ಆದ ಪ್ರತಿಭೆ ಹೊಂದಿರುತ್ತದೆ. ಆ ಪ್ರತಿಭೆಯ ಅನಾವರಣಕ್ಕೆ ಶಾಲೆ ಅತ್ಯಂತ ಸೂಕ್ತ ವೇದಿಕೆ. ಯಾವುದೇ ಕ್ಷೇತ್ರದ ಸಾಧನೆಗೆ ಕಠಿಣ ಶ್ರಮ ಅಗತ್ಯ ಆ ಶ್ರಮದ ಪ್ರತಿಬಿಂಬ ಈ ಕ್ರೀಡೆ ಎಂದರೆ ತಪ್ಪಲ್ಲ. ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಸದೃಢಗೊಳಿಸಿ ಉತ್ತಮ ಅರೋಗ್ಯಕ್ಕೆ ದಾರಿದೀಪವಾಗಿದೆ ಎಂದರು.
ಅಂಕಗಳಿಕೆ ಶಿಕ್ಷಣವಲ್ಲ, ಬದಲಾಗಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಸಾಧಕರಾಗಿ ಮಾಡುವ ಹೊಣೆಗಾರಿಕೆ ಶಿಕ್ಷಣದ್ದಾಗಿದೆ. ಇಂದಿನ ಮಕ್ಕಳ ಕೇಂದ್ರಬಿಂದು ಕ್ರೀಡಾಕ್ಷೇತ್ರ. ಹಲವಾರು ಜನರು ಕ್ರೀಡೆಯಲ್ಲಿ ಸಾಧಕರಾಗಿ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರಂತೆ ನೀವು ಉತ್ತಮ ಕ್ರೀಡಾಪಟುಗಳಾಗಿ ಎಂದು ಕರೆ ನೀಡಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಜಿ.ಎಸ್. ಶಿವಕುಮಾರ್ ಮಾತನಾಡಿ, ಮಕ್ಕಳಿಗೆ ಕ್ರೀಡೆ ಎಂದರೆ ಪ್ರೀತಿ. ಇಂದು ಎಷ್ಟೋ ಮಕ್ಕಳು ಏಕಲವ್ಯನಂತೆ ಕ್ರೀಡಾ ಸಾಧಕರನ್ನು ಆರಾಧ್ಯ ಗುರುಗಳಾಗಿ ಸ್ವೀಕರಿಸಿ ವಿವಿಧ ಆಟಗಳಲ್ಲಿ ಸಾಧನೆ ಮಾಡಿದ್ದಾರೆ. ಅವರ ಆದರ್ಶ ಸಾಧನೆಯ ಜೀವನ ನಿಮಗೆ ಪ್ರೇರಣೆಯಾಗಲಿ. ಈ ಕ್ರೀಡಾಜ್ಯೋತಿ ನಿಮ್ಮ ಬದುಕಲ್ಲಿ ಬೆಳಕಾಗಲಿ ಎಂದು ಹಾರೈಸಿದರು.
ಎಸ್’ವಿವಿಎಸ್ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ಶಾಲೆಯ ಪ್ರಾಚಾರ್ಯರಾದ ಎಚ್.ಡಿ. ಪ್ರಶಾಂತ್, ಆಡಳಿತ ಸಮನ್ವಯಧಿಕಾರಿಗಳಾದ ಕೆ. ಕುಬೇರಪ್ಪ, ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ. ವೀರೇಂದ್ರ ಗೌಡ, ಎಟಿಡಿಸಿ ಪ್ರಾಚಾರ್ಯರಾದ ವಿದ್ಯಾಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೋ-ಆರ್ಡಿನೇಟರ್ ಪ್ರಭು, ಬೋಧಕ -ಬೋಧಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹಶಿಕ್ಷಕಿ ಅಮೃತ ಸ್ವಾಗತಿಸಿ, ಕಾವ್ಯ ಪಾಟೀಲ್ ವಂದಿಸಿದರು. ಸಹಶಿಕ್ಷಕಿಯರಾದ ವೇದ ನಾಯ್ಕ್ ಹಾಗೂ ಕೋ -ಆರ್ಡಿನೆಟರ್ ಕಾವ್ಯ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















