ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಇಂದು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸರ್ಕಾರ ಕೂಡಲೇ ಶಿವಮೊಗ್ಗ ಜಿಲ್ಲೆಗೆ ಸಾವಿರ ಆಸನಗಳ ಸಾಮರ್ಥ್ಯದ ಹೊಸ ಗ್ರಂಥಾಲಯ ಮಂಜೂರು ಮಾಡಬೇಕು. ಕೆಪಿಎಸ್ಸಿಯಲ್ಲಿ KPSC ಅಕ್ರಮವಾಗಿರುವ ಕೆ.ಎ.ಎಸ್., ಸಿಟಿಐ, ಪಿಡಿಓ ಮುಂತಾದ ಎಲ್ಲಾ ನೇಮಕಾತಿಗಳ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು.
ಖಾಲಿ ಇರುವ 56,432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ 8 ತಿಂಗಳ ಒಳಗಡೆ ನೇಮಕಾತಿ ಪ್ರಕ್ರಿಯೆ ಮುಗಿಸಬೇಕು. ಪ್ರಬುದ್ಧ ಅಕಾಡೆಮಿಯ ಉಚಿತ ಐಎಎಸ್, ಕೆಎಎಸ್, ಸ್ಪರ್ಧಾತ್ಮಕ ತರಬೇತಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಹಣ ನೀಡಬೇಕು. ಪಿಎಸ್ಐ ಸಿವಿಲ್, 600 ಹುದ್ದೆಗಳಿಗೆ ಆರ್ಥಿಕ ಅನುಮೋದನೆ ಸಿಕ್ಕಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಬೇಕು. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿಮಾಡಬೇಕು. ಕೆಎಸ್ಆರ್ಪಿ, ಆರ್ಎಸ್ಐ, ಕೆಎಸ್ಐಎಸ್ಎಫ್, ವೈರ್ಲೆಸ್ ಮತ್ತು ಐಬಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು. ಪಿಯು ಉಪನ್ಯಾಸಕ ಮತ್ತು ಸಹಾಯಕ ಪ್ರಾಧ್ಯಾಪಕ, ದೈಹಿಕ ಶಿಕ್ಷಕರು, ಕಂಪ್ಯೂಟರ್ ಆಪರೇಟ್, ವಾರ್ಡನ್, ಗ್ರಂಥಪಾಲಕ, ಗ್ರಂಥಾಲಯ ಸಹಾಯಕ, ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು. 384 ಕೆಎಎಸ್ ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. 2000 ಎಫ್ಡಿಎ, 2000 ಎಸ್ಡಿಎ, 247 ಅಬಕಾರಿ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ಗಳ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
ಸಬ್ ರಿಜಿಸ್ಟ್ರರ್ ಮತ್ತು ರೆವಿನ್ಯೂ ಇನ್ಸ್ಪೆಕ್ಟರ್ಗಳು, ಸಿಟಿಐ ಮತ್ತು ಆರ್ಟಿಓ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಮಾಡಬೇಕು. ಪಿಡಿಓ ಗ್ರೇಡ್-1, ಗ್ರೇಡ್-2, ಫುಡ್ ಅಂಡ್ ಸಿವಿಲ್ ಸಪ್ಲೈ, ಓಬಿಸಿ ಮತ್ತು ಎಸ್ಡಬ್ಲ್ಯೂಡಿ ಹಾಗೂ ಅಲ್ಪಸಂಖ್ಯಾತ ಇಲಾಖೆಯ ನೇಮಕಾತಿ ಭೂ ಸರ್ವೇಯರ್, ಎಸಿಎಫ್, ಆರ್ಎಫ್ಓ, ಡಿಆರ್ಎಫ್ಓ ಮುಂತಾದ ಹುದ್ದೆಗಳ ನೇಮಕಾತಿ ಕೂಡಲೇ ಪ್ರಾರಂಭಿಸಬೇಕು. ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು. ಪ್ರತೀವರ್ಷ ಎಲ್ಲಾ ಇಲಾಖೆಗಳಲ್ಲೂ ಎಲ್ಲಾ ನೇಮಕಾತಿಗಳನ್ನು ಕಡ್ಡಾಯವಾಗಿ ಮಾಡಬೇಕು. ಯುಪಿಎಸ್ಸಿ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು. ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಎಸ್ಸಿ-ಎಸ್ಟಿಗಳಿಗೆ 33ವರ್ಷ, ಸಾಮಾನ್ಯ 30 ವರ್ಷಕ್ಕೆ ಖಾಯಂಗೊಳಿಸಬೇಕು. ಎಸಿಎಸ್ಎಎಡಿ ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಿಥುನ್ ಚಕ್ರವರ್ತಿ, ಪ್ರಧಾನ ಕಾರ್ಯದರ್ಶಿ ಸಂಜಯ್ಕುಮಾರ್, ಪ್ರಮುಖರಾದ ರಂಗನಾಥ್ ಡಿ., ಗಣೇಶ್ಕುಮಾರ್, ಕುಶಾಲ್ ಪಿ.ಕೆ., ಕಿರಣ್ಗೌಡ ಪೂಜಾರ್ ಸೇರಿದಂತೆ ನೂರಾರು ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















