ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇಶದ ಮಹೋನ್ನತ ಮಹಾಕಾವ್ಯ ರಾಮಾಯಣವನ್ನು (Ramayana) ಇಷ್ಟ ಪಡದವರು ಯಾರು ಇಲ್ಲ. ಚಿಕ್ಕ ಮಕ್ಕಳಿಂದಿಡಿದು ಎಲ್ಲಾ ವಯಸ್ಸಿವವರಿಗೂ ರಾಮಾಯಣ ಇಷ್ಟ. ಅದರ ಆದರ್ಶಗಳು ಸದಾ ಪ್ರೇರಣಾದಾಯಕ.
ಎಳವೆಯಲ್ಲೇ ಈ ಮಹಾಕಾವ್ಯದಿಂದ ಪ್ರೇರೇಪಿತಗೊಂಡ ನಗರದ ಬಾಲಕಿಯೊಬ್ಬಳು ಈಗ ತನ್ನ 11ನೇ ವಯಸ್ಸಿನಲ್ಲಿ ಕೇವಲ 15 ದಿನಗಳಲ್ಲಿ 36 ಪುಟಗಳ ಮಕ್ಕಳ ರಾಮಾಯಣ ಬರೆದಿದ್ದು, ಈಗ ಅದು ಪ್ರಕಟಣೆಗೆ ಸಿದ್ದಗೊಂಡಿದೆ. ಭಾನುವಾರ ಈ ಪುಸ್ತಕ ನಗರದ ಶ್ರೀ ಕೃಷ್ಣಧಾಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ನಗರದ ಹೆಬ್ಬಾಳದ ನಿವಾಸಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಶ್ರೀರಾಮ್ ಹಾಗು ಸಮತಾ ಶ್ರೀರಾಮ್ ಪುತ್ರಿ ಧನ್ಯಶ್ರೀ ಎಸ್ ಈ ಸಾಧನೆ ಮಾಡಿರುವ ಪುಟ್ಟ ಬಾಲಕಿ. ಹೆಬ್ಬಾಳದಲ್ಲಿರುವ ಶ್ರೀ ಜ್ಞಾನೇಶ್ವರಿ ವಿದ್ಯಾಸಂಸ್ಥೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆಗೆ ಎಳವೆಯಿಂದಲೇ ರಾಮಾಯಣದ ಬಗ್ಗೆ ಅತೀವ ಆಸಕ್ತಿ. ತಂದೆ ಹಾಗು ತಾಯಿಯಿಂದ ರಾಮಾಯಣ ಕತೆ ಕೇಳುತ್ತಾ ಬೆಳೆದ ಈಕೆ ಬಳಿಕ ರಾಮಾಯಣದ ಬಗ್ಗೆಗಿನ ಹೆಚ್ಚಿನ ಓದು, ಪ್ರವಚನಗಳ ಆಲಿಸುವಿಕೆ, ಮೂಲಕ ಇಡೀ ಮಹಾಕಾವ್ಯವನ್ನು ಅರ್ಥೈಸಿಕೊಂಡಳು ಇದೀಗ ತನ್ನದೇ ಶೈಲಿಯಲ್ಲಿ ರಾಮಾಯಣ ಬಗ್ಗೆಗಿನ ಪುಸ್ತಕ ಬರೆದಿದ್ದಾಳೆ.
ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ, ಯುದ್ಧಕಾಂಡ, ಹಾಗು ಸಿಂಧೂರದ ಕತೆಯನ್ನು ವಿದ್ಯಾರ್ಥಿನಿ ಧನ್ಯಶ್ರೀ ಈ ಪುಸ್ತಕದಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾಳೆ. ಹನುಮಂತನ ವಿಗ್ರಹಕ್ಕೆ ಯಾಕೆ ಕುಂಕುಮ ಹಚ್ಚುತ್ತಾರೆ ಅನ್ನುವ ಕತೆ ರಾಮ-ಹನುಮಂತನ ಭಾಂಧವ್ಯವನ್ನು ಜಗತ್ತಿಗೆ ತೋರಿಸಿಕೊಡುತ್ತದೆ. ಹೀಗೆ ರಾಮಾಯಣವನ್ನು ತಾನು ಅರ್ಥಮಾಡಿಕೊಂಡ ರೀತಿಯಲ್ಲಿಯೇ ಆಕೆ ಈ ಪುಸ್ತಕದಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾಳೆ. ಪ್ರತಿ ಅಧ್ಯಾಯದ ಸೊಬಗು ಹೆಚ್ಚಿಸಿರುವುದು ಅಲ್ಲಿ ಬಳಸಲಾಗಿರುವ ರೇಖಾಚಿತ್ರಗಳು.
“ನನಗೆ ರಾಮಾಯಣ ಎಂದರೆ ತುಂಬಾ ಇಷ್ಟ. ಅದರ ಪಾತ್ರಗಳು ಕೂಡಾ ಇಷ್ಟ. ಹೀಗಾಗಿ ನಾನು ಈ ಪುಸ್ತಕ ಬರೆದೆ ಎನ್ನುತ್ತಾಳೆ ಧನ್ಯಶ್ರೀ. ಆಕೆಯ ಮುಗ್ದ ಮಾತಿನ ರೂಪದಲ್ಲಿಯೇ ಕಥಾ ಹಂದರ ಸಾಗಿದೆ. ರಾಮಾಯಣದ ಪ್ರಮುಖ ಘಟನೆಗಳನ್ನು ತನ್ನ ಕಲ್ಪನೆ ಮೂಲಕ ಆಕೆ ಇಲ್ಲಿ ಓದುಗರ ಮುಂದೆ ಇಟ್ಟಿದ್ದಾಳೆ.
“ಮಗಳಿಗೆ ಚಿಕ್ಕಂದಿನಿಂದಲೂ ರಾಮಾಯಣದ ಬಗ್ಗೆ ಇನ್ನಿಲ್ಲದ ಆಸಕ್ತಿ. ನಾನಾ ರಾಮಾಯಣ ಮೇಲಣ ಪರೀಕ್ಷೆಗಳು, ಟಿವಿ ಧಾರಾವಾಹಿಗಳು, ರಸಪ್ರಶ್ನೆ ಇತ್ಯಾದಿಗಳಲ್ಲಿಯೇ ಸದಾ ತೊಡಗಿಸಿಕೊಂಡಿದ್ದನ್ನು ನೋಡಿ, ತಮಾಷೆಗಾಗಿ ನಾನು ನೀನೆ ಈಗ ರಾಮಾಯಣ ಪುಸ್ತಕ ಬರೆಯಬಹುದು ಎಂದು ಹೇಳಿದ್ದನ್ನು ಗಂಭೀರವಾಗಿ ಸ್ವೀಕರಿಸಿ, ಆಕೆ ತನಗೆ ತೋಚಿದ ರೀತಿಯಲ್ಲಿ ರಾಮಾಯಣವನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾಳೆ. ಪೂರ್ಣವಾಗಿ ಕೈ ಬರಹದಲ್ಲಿಯೇ ಆಕೆ ಈ ಪುಸ್ತಕರ ಬರೆದಿದ್ದಾಳೆ. ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ, ಪೇಜಾವರ ಶ್ರೀ, ಫಲಿಮಾರು ಶ್ರೀ ಹಾಗು ಶ್ರೀ ವ್ಯಾಸ ಶ್ರೀಗಳ ಪ್ರವಚನ, ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ ಎಲ್ಲವೂ ಆಕೆಯನ್ನು ಪ್ರಭಾವಿಸಿದವು,” ಎಂದು ಹೇಳುತ್ತಾರೆ ಆಕೆಯ ತಂದೆ ಡಾ. ಶ್ರೀ ರಾಮ್.
ಆಕೆಯ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ನಂಜುಂಡಸ್ವಾಮಿ ತಮ್ಮ ವಿದ್ಯಾರ್ಥಿನಿಯ ಈ ಪ್ರಯತ್ನ ಎಲ್ಲಾ ಮಕ್ಕಳಿಗೂ ಪ್ರೇರಣೆ ಎಂದು ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










