ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕಳ್ಳತನ ಮಾಡುವುದು ಅಪರಾಧ. ಹೀಗಾಗಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದಲ್ಲಿ ಕೀಳು ಮನೋಭಾವನೆಯಿಂದ ನೋಡುತ್ತಾರೆ. ಹಳೆ ಕಳ್ಳತನ ಚಾಳಿಯನ್ನು ಬಿಟ್ಟು ಹೊಸ ಮನುಷ್ಯರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ ಅಂತವರನ್ನು ಕಳ್ಳರ ಪಟ್ಟಿಯಿಂದ ಕೈಬಿಡುವುದಾಗಿ ಜಿಲ್ಲಾ ಹೆಚ್ಚುವರಿ ಎಸ್’ಪಿ ಮಹಾಲಿಂಗನಂದಗಾವಿ ಕಿವಿಮಾತು ಹೇಳಿದರು.
ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕರ ಕಚೇರಿ ವ್ಯಾಪ್ತಿಯ ಚಳ್ಳಕೆರೆ, ನಾಯಕನಹಟ್ಟಿ, ರಾಂಪುರ, ಪರಶುರಾಂಪುರ, ತಳಕು, ಮೊಳಕಾಲ್ಮೂರು ಠಾಣೆ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಕಳ್ಳರನ್ನು ನಗರದ ಡಿವೈಎಸ್’ಪಿ ಕಚೇರಿ ಆವರಣದಲ್ಲಿ ಭಾನುವಾರ ಪೆರೇಡ್ ನಡೆಸಿ ಮಾತನಾಡಿದರು.
ಕಳ್ಳತನ ಮಾಡುವುದು ಅಪರಾಧ. ಹೀಗಾಗಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದಲ್ಲಿ ಕೀಳು ಮನೋಭಾವನೆಯಿಂದ ನೋಡುತ್ತಾರೆ. ಪದೇ ಪದೇ ಪೊಲೀಸರು ನಿಮ್ಮ ಮನೆಯ ಬಳಿ ಬಂದರೆ ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಗಳು ಬೀರಿ ನಿಮಗೆ ಪ್ರಶ್ನೆ ಕೇಳುವಂತಾಗುತ್ತವೆ. ನಿಮ್ಮ ನೆಂಟರಿಷ್ಟರು, ಬಂಧು ಬಳಗ ದೂರವಾಗಿ ನಿಮ್ಮ ಮಕ್ಕಳಿಗೆ ವಿವಾಹ ಮಾಡಿಕೊಳ್ಳಲು, ಕೊಡಲು ಯಾರು ಮುಂದೆ ಬರುವುದಿಲ್ಲ ಎಂದರು.
ನೀವು ಮಾಡುವ ಕೆಟ್ಟ ಕೆಸಲಗಳಿಂದ ನಿಮ್ಮ ಕುಟುಂಬ ಹಾಗೂ ಗ್ರಾಮಕ್ಕೆ ಕೆಟ್ಟ ಹೆಸರು ಬರುವುದು ಬೇಡ. ಕಳ್ಳತನ, ದುಶ್ಚಟ, ದೊಂಬಿ, ಗಲಾಟೆ ಹಾಗೂ ಇತರೆ ಅಪರಾಧ ಕೃತ್ಯಗಳಿಂದ ದೂರ ಉಳಿದು, ಒಳ್ಳೆಯ ನಡತೆ ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ಗ್ರಾಮಸ್ಥರು, ನೆರೆಹೊರೆ ಹಾಗೂ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಕಳ್ಳತನ ಪಟ್ಟಿಯಿಂದ ತಾತ್ಕಾಲಿಕವಾಗಿ ಕೈಬಿಡುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ನೀಡಲಾಗುವುದು. ಆದ್ದರಿಂದ ಪೊಲೀಸ್ ಇಲಾಖೆ ನಿಮ್ಮ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಿಗಾ ವಹಿಸಲಿದೆ. ಮತ್ತೆ ಇಂತಹ ಕೃತ್ಯಗಳನ್ನು ಮಾಡಿರುವುದು ಬೆಳಕಿಗೆ ಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಠಾಣೆಗೆ ಬಂದು ಹಾಜರಾತಿಗೆ ಸಹಿ ಹಾಕಬೇಕು. ಪೊಲೀಸ್ ಇಲಾಖೆಯಿಂದ ಕರೆ ಮಾಡಿದಾಗ ಅಥವಾ ಕರೆದಾಗ ಬಂದು ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ.
ಪೆರೇಡ್’ನಲ್ಲಿ ಭಾಗವಹಿಸಿ ಆಂಧ್ರದ ರಾಯದುರ್ಗ, ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ಕಳ್ಳರು ಒಕ್ಕೊರಲಿನಿಂದ ಸ್ವಾಮಿ, ನಾವು ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲ. ಕೂಲಿ ಕೆಲಸ ಮಾಡಿಕೊಂಡು ಉತ್ತಮ ಜೀವನ-ಸಂಸಾರ ನಡೆಸುತ್ತೇವೆ. ನಮ್ಮನ್ನು ಕಳಂಕಿತರ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಿಕೊಂಡರು.
ಡಿವೈಎಸ್’ಪಿ ರೋಷನ್ ಜಮೀರ್ ಮಾತನಾಡಿ, ಕಳ್ಳತನ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡಬೇಕು. ಅಲ್ಲದೆ ಇತ್ತೀಚಿಗೆ ಸರಗಳ್ಳತನ, ಬೈಕ್, ಮೊಬೈಲ್, ಮನೆಗಳ್ಳತನಗಳು ನಡೆಯುತ್ತಿದ್ದು, ಕದ್ದ ಮಾಲುಗಳನ್ನು ಮಾರಾಟ ಮಾಡುತ್ತಿರುವ ಅಪರಿತರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ನಿಮ್ಮ ಗಮನಕ್ಕೆ ಅಂತಹವರ ಮಾಹಿತಿ ಇದ್ದರೆ ತತಕ್ಷಣ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು.
ಈ ವೇಳೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಹೆಚ್ಚುವರಿ ಎಸ್ಪಿ ಮಹಾಲಿಂಗನಂದಗಾವಿ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ನೆರೆಯ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ವಾಸ ಮಾಡುವ ಆರೋಪಿಗಳು ವಾಸ ಮಾಡುವ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕಣದ ಆರೋಪಿಗಳ ಚಲನ ವಲನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಚಳ್ಳಕೆರೆ ಉಪನಿರೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿ ಸುಮಾರು 500 ಜನರು ಕಳ್ಳತನ ಪಟ್ಟಿಯಲ್ಲಿದ್ದು ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ 143 ಕಳ್ಳರಿದ್ದಾರೆ. ನೆರೆ ರಾಜ್ಯ, ಜಿಲ್ಲೆಯ ಹಾಗೂ ಬೇರೆ ಠಾಣೆ ವ್ಯಾಪ್ತಿಯ ನಿವಾಸಿಗಳು ಸ್ಥಳೀಯವಾಗಿ ಕಳ್ಳತನ ಮಾಡಿದವರು 357 ಜನ ಆರೋಪಿಗಳಿದ್ದಾರೆ. ಸತ್ತವರನ್ನು ಹಾಗೂ 60 ವರ್ಷ ವಯೋವೃದ್ದರನ್ನು, ಕಳ್ಳತನ ಮಾಡಲು ಶಕ್ತಿ ಇಲ್ಲದ ರೋಗಿಗಳಿಗೆ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಮಾಹಿತಿ ನೀಡಿದರು.
ಪೆರೇಡ್ ಕಾರ್ಯಕ್ರಮದಲ್ಲಿ ಚಳ್ಳಕೆರೆ ವೃತ್ತ ನಿರೀಕ್ಷ ಈ. ಆನಂದ್, ಮೊಳಕಾಲ್ಮೂರು ವೃತ್ತ ನಿರೀಕ್ಷಕ ಗೋಪಾಲನಾಯ್ಕ, ಪಿಎಸ್’ಐಗಳಾದ ನೂರ್ ಆಹ್ಮದ್, ಸತೀಶ್ ನಾಯ್ಕ, ರಘುನಾಥ್, ಶಿವಕುಮಾರ್, ಗುಡ್ಡಪ್ಪ, ಬಸವರಾಜ್ ಇತರರಿದ್ದರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post