ಬೆಂಗಳೂರು, ಸೆ.19: ಕೇಂದ್ರ ನೌಕರರ ಮುದ್ರಾ ಯೋಜನೆ ಅನುಷ್ಟಾನದಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ ಎಂದು ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ಅಧ್ಯಕ್ಷ ಅರುಣ್ ಶ್ರೀ ವಾಸ್ತವ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ರಾಜ್ಯಮಟ್ಟದ ಬ್ಯಾಂಕರ್ ಗಳ ಸಮಿತಿಯ 135ನೇ ಸಭೆಯಲ್ಲಿ ಮಾತನಾಡಿದ ಅವರು, ಮುದ್ರ ಯೋಜನೆಯಲ್ಲಿ 2015-16ನೇ ಸಾಲಿನಲ್ಲಿ 10.37 ಲಕ್ಷ ಫಲಾನುಭವಿಗಳಿಗೆ 8984 ಕೋಟಿ ರೂ. ಸಾಲ ನೀಡಲಾಗಿದೆ.
ಈ ವರ್ಷ ಕೂಡ ಬ್ಯಾಂಕರ್ ಗಳು ಸಾಲ ನೀಡಿಕೆಯಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಎಸ್ಐಡಿಬಿಐ ಹಾಗೂ ನಬಾರ್ಡ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಸಹಕಾರದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಶೀಲ ವ್ಯಕ್ತಿಗಳ ಉನ್ನತಿಗೆ ಬ್ಯಾಂಕರ್ ಗಳು ಆದ್ಯತೆ ನೀಡಬೇಕು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯಕ್ಕೆ ಆದ್ಯತೆ ವಲಯದ ಸಾಲ ನೀಡಿಕೆಯಲ್ಲಿ ಶೇ.23.75ರಷ್ಟು ಪ್ರಗತಿ ಸಾಧಿಸಲಗಿದೆ. ಒಂದು ಲಕ್ಷ ಮೂವತ್ತೈದು ಸಾವಿರ ನೂರ ಎಂಭತ್ತು ಕೋಟಿ ರೂ. ಗುರಿಯಲ್ಲಿ 32,110 ಕೋಟಿ ಸಾಲವನ್ನು ಆದ್ಯತಾ ರಂಗಕ್ಕೆ ನೀಡಲಾಗಿದೆ.
ಕೃಷಿ ಕ್ಷೇತ್ರದ ಶೇ.26.62ರಷ್ಟು ಹಾಗೂ ಸಣ್ಣ ಉದ್ದಿಮೆ ವಲಯಕ್ಕೆ ಶೇ.33.66ರಷ್ಟು ಸಾಲ ನೀಡಿಕೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದರು.













