ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಾಯಿ ಚಾಮುಂಡೇಶ್ವರಿಯನ್ನು ನಂಬಿರುವವರು ನಾವು. ಯಾವುದೇ ಶುಭ ಕಾರ್ಯಕ್ರಮ ಮಾಡುವ ಮುನ್ನ ದೇವಿಯ ಪ್ರಾರ್ಥನೆ ಮಾಡುವುದು ಸಂಪ್ರದಾಯ. ಎಲ್ಲ ಅಡಚಣೆಗಳನ್ನು ಸಂಹಾರ ಮಾಡುವ ಶಕ್ತಿ ಈ ದೇವಿಗೆ ಇದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಹಿತ, ಕುಡಿಯುವ ನೀರು, ಕಾವೇರಿ ಜಲಾನಯನ ಪ್ರದೇಶದ ರೈತರಿಗಾಗಿ ನಾವು ಮೇಕೆದಾಟು ಹೋರಾಟ ಮಾಡುತ್ತಿದ್ದೇವೆ ಎಂದರು.

ಚಾಮರಾಜನಗರ ನಗರ ಕೂಡ ಮೈಸೂರು ಜಿಲ್ಲೆ ಭಾಗ. ಮತ್ತೊಂದು ರಾಮನಗರ ಬೆಂಗಳೂರಿನ ಒಂದು ಭಾಗ. ಮೇಕೆದಾಟು ಒಂದು ದಡ ಮೈಸೂರು ಜಿಲ್ಲೆಯಾದರೆ, ಮತ್ತೊಂದು ದಡ ಬೆಂಗಳೂರಿಗೆ ಸೇರಿದೆ. ಅದರ ಮಧ್ಯೆ ಕಾವೇರಿ ತಾಯಿ ಹರಿಯುತ್ತಿದ್ದಾಳೆ. ಈ ಯೋಜನೆ ಮೈಸೂರು ಹಾಗೂ ಬೆಂಗಳೂರು ಜನತೆಯ ಹಕ್ಕು. ಮೈಸೂರು ಬೆಂಗಳೂರು ಸೇರಿಸುವ ಸ್ಥಳವೇ ಸಂಗಮ ಹಾಗೂ ಮೇಕೆದಾಟು ಎಂದು ತಿಳಿಸಿದರು.

ವಾಜಪೇಯಿ ಅವರ ಕಾಲದಲ್ಲಿ ಆಡ್ವಾಣಿ ಅವರು ರಥಯಾತ್ರೆ ಮಾಡಿದರು. ಈ ಹಿಂದೆ ದೇವೇಗೌಡರು ಅನೇಕ ಯಾತ್ರೆ ಮಾಡಿದ್ದಾರೆ. ಅದನ್ನೆಲ್ಲ ನೀವು ಏನೆಂದು ಕರೆಯುತ್ತೀರಿ. ಕುಮಾರಣ್ಣನವರು ಹೋರಾಟ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಏನನ್ನುತ್ತೀರಿ? ಯಡಿಯೂರಪ್ಪನವರು ಹೋರಾಟ ಮಾಡಿದ್ದರು, ಮೊನ್ನೆ ನೂತನ ಕೇಂದ್ರ ಸಚಿವರು ಕೋವಿಡ್ ಸಮಯದಲ್ಲೇ ಯಾತ್ರೆ ಮಾಡಿದರು. ಅದಕ್ಕೆ ಅವಕಾಶ ಇತ್ತೇ? ಇದೆಲ್ಲವನ್ನು ನಿಮ್ಮ ವಿವೇಚನೆಗೆ ಬಿಡುತ್ತೇವೆ ಎಂದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















