ಕಲ್ಪ ಮೀಡಿಯಾ ಹೌಸ್ | ವಿಶೇಷ ವರದಿ |
ಅಂತೂ ಇಂತೂ ಭರಮಸಾರಗದ ಬತ್ತಿದ ಕೆರೆಗೆ ತುಂಗಭದ್ರೆಯು ಪೈಪ್ ಲೈನ್ ಮೂಲಕ ಹರಿದು ಬಂದು ಸಾಗರವಾಯಿತು. ರೈತರ ಮುಖದಲ್ಲಿ ಮಂದಹಾಸ. ಸುಮೂರು 20 ವರ್ಷಗಳ ಹೋರಾಟಕ್ಕೆ ಜಯ ಲಭಿಸಿತು. ರೈತರು, ಸಂಘ ಸಮಿತಿಗಳು, ನಾಗರಿಕರು ಮತ್ತು ಸಿರಿಗೆರೆಯ ಸ್ವಾಮೀಜಿಗಳ ಹೋರಾಟಕ್ಕೆ ಸಂದ ಜಯ ಇದು.
2021ರ ಸೆ.29ರ ಬುಧವಾರ ಭರಮಸಾಗರ ಮತ್ತು ಸುತ್ತಮುತ್ತಲಿನ ಜನರಿಗೆ ಎಂದು ಮರೆಯದ ದಿನ. ಕಂಗಾಲಾದ ರೈತರಿಗೆ ಉಸಿರು ನೀಡಿದ ದಿನ. ಪ್ಲವ ನಾಮ ಸಂವತ್ಸರದ ಕೃಷ್ಣ ಪಕ್ಷ ಅಷ್ಟಮಿ. ಬುಧವಾರ ಸುಮಾರು ಮಧ್ಯಾಹ್ನ 3 ಗಂಟೆಗೆ ಭರಮಸಾರದ ದೊಡ್ಡ ಕೆರೆಗೆ ತುಂಗಭದ್ರೆ ಹರಿದು ಬಂದ ಈ ದಿನವನ್ನು ಮರೆಯಲಾಗದ ದಿನವಾಗಿ ಜನರು ಹರುಷದಿಂದ ಸ್ವಾಗತಿಸಿದರು.
ಚಿತ್ರದುರ್ಗದ ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ
ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಜೋಡಿ ಕೆರೆಗಳ ನಿರ್ಮಾಣ ಕಾರ್ಯ 2021 ಅಕ್ಟೋಬರ್ 30 ನೆಯ ತಾರೀಕಿಗೆ 300 ವರ್ಷಗಳು ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭರಮಸಾಗರದ ಕೆರೆ ನಿರ್ಮಾಣ ಕಾರ್ಯ 1689 ರಲ್ಲಿ ಪ್ರಾರಂಭವಾಗಿ ಸುಮಾರು 32 ವರ್ಷಗಳ ಕಾಲ ಕೆಲಸ ಕಾರ್ಯಗಳು ನಡೆದಿರುವುದರ ಬಗ್ಗೆ ಉಲ್ಲೇಖವಿರುತ್ತದೆ. ಕೆರೆಯನ್ನು ಸುತ್ತಮುತ್ತಲಿನ ವಡ್ಡರ ಜನಾಂಗದ ಪರಿಶ್ರಮದಿಂದ ಕೆರೆ ನಿರ್ಮಾಣವಾಗಿರುತ್ತದೆ. ದೊಡ್ಡ ಕೆರೆಯು 30-10-1721 ನಿರ್ಮಾಣವಾಗಿ ಭರಮಸಾಗರದ ಜನರ ಕೈಗೆ ಶ್ರೀ ಬಿಚ್ಚುಗತ್ತಿ ಭರಮಣ್ಣ ನಾಯಕರು ರೈತರಿಗೆ ಅರ್ಪಿಸಿದರು ಎಂಬುದಾಗಿ ತಿಳಿಯುತ್ತದೆ.
ಬಿಚ್ಚುಗತ್ತಿ ಭರಮಣ್ಣ ನಾಯಕರು 1689 ರ ಸೆ.14 ಶನಿವಾರ ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಪಟ್ಟವನ್ನೇರಿರುತ್ತಾರೆ. ಭರಮಣ್ಣನಾಯಕರ ಕಾಲದಲ್ಲಿ ಚಿತ್ರದುರ್ಗ ಸಂಸ್ಥಾನವು ಪ್ರಭಲವಾಗಿತ್ತು. ತಮ್ಮ ಆಳ್ವಿಕೆಯಲ್ಲಿ ಸುಸ್ತಿರ ಸರ್ಕಾರವನ್ನು ಸ್ಥಾಪಿಸಿ, ಉತ್ತಮ ಆಡಳಿತವನ್ನು ನಡೆಸಿದ ರಾಜರುಗಳಲ್ಲಿ ಶ್ರೀ ಭರಮಣ್ಣ ನಾಯಕರು ಸಹ ಒಬ್ಬರಾಗಿರುವರು. ಆಗ ಇದ್ದ ಪುರಲಗಟ್ಟೆ, ಗುಡಿನಾಯಕನಹಳ್ಳಿ, ಬುಡುರನಹಳ್ಳಿ, ಜೋಗಿಹಳ್ಳಿ ಈ ನಾಲ್ಕು ಗ್ರಾಮಗಳನ್ನು ಸೇರಿಸಿ ಭರಮಸಾಗರ ಊರಾಗಿ ಮಾಡಿದರು. 1821 ಮೇ 20 ಶನಿವಾರ ಬೆಳಿಗ್ಗೆ 10 ಸಮಯಕ್ಕೆ ಭರಮಣ್ಣನಾಯಕರು ಮೃತರಾಗುತ್ತಾರೆ. ವೀರವ್ವನಾಗತಿ ಅರಮನೆ ಬಳಿಯಲ್ಲಿ ಇವರ ಸಮಾಧಿ ಮಾಡಿದ್ದಾರೆ.
ಭರಮಸಾಗರದ ಕೆರೆಯ ಹಿನ್ನೆಲೆ
ಶ್ರೀ ಭರಮಣ್ಣ ನಾಯಕರು ತಮ್ಮ ಆಳ್ವಿಕೆ ಸಮಯದಲ್ಲಿ ಚಿತ್ರದುರ್ಗ ಪ್ರಾಂತ್ಯದಲ್ಲಿ ಬೃಹತ್ ಜಲಾಶಯಗಳ್ನು ಮನದಲ್ಲಿ ಇಟ್ಟುಕೊಂಡು ಕೃಷಿ ಮತ್ತಿತರ ಉಪಯೋಗಗಳಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಲು ಪ್ರಾರಂಭಿಸಿ ಸುಮಾರು 21 ಸ್ಥಳಗಳಲ್ಲಿ ಕೆರೆಗಳು ಮತ್ತು ಬಾವಿಗಳನ್ನು ಕಟ್ಟಿಸಿಕೊಟ್ಟಿರುತ್ತಾರೆ. 1689 ಅಕ್ಟೋಬರ್ 30 ಭಾನುವಾರ ಬಿಚ್ಚುಗತ್ತಿ ಭರಮಣ್ಣನಾಯಕರು ತನ್ನ ದಂಡಿನ ದಳವಾಯಿ ಲಿಂಗಪ್ಪನಾಯಕನಿಗೆ ಭರಮಸಾಗರದ ಕೆರೆಯ ಕಾಮಗಾರಿ ಆರಂಭಿಸಲು ತಾಕೀತು ಮಾಡಿದರು. 1695 ರಲ್ಲಿ ಭರಮಸಾಗರದ ಕೆರೆ ಕಾಮಗಾರಿ ನಿರ್ಮಾಣಕಾರ್ಯ ಪೂರ್ಣವಾಗಿದೆ ಎನ್ನಲಾಗಿದೆ. ಇದಕ್ಕೆ ಸರಿಯಾದ ಮಾಹಿತಿ ಇರುವುದಿಲ್ಲ. ಚಿತ್ರದುರ್ಗ ಪ್ರಾಂತ್ಯದಲ್ಲಿ ಭರಮಸಾಗರ ಕೆರೆ ಸುಮಾರು ಆಗ 1000 ಎಕರೆಗಳಲ್ಲಿ ಕಟ್ಟಿದ ದೂಡ್ಡದಾದ ವಿಶಾಲವಾದ ಜೋಡಿ ಕೆರೆಗಳ ನಿರ್ಮಾಣ ಮಾಡಿರುತ್ತಾರೆ. ಅದನ್ನು ನೋಡಿ ಸಾಗರ ಕ್ಕೆ ಹೋಲಿಸಲಾಗಿದೆ. ಈಗ ಇದು ಸುಮಾರು 800 ರಿಂದ 900 ಎಕರೆ ಇರಬಹುದು. ಉಳಿದ ಜಾಗದಲ್ಲಿ ಮನೆಗಳು, ಕಣ ಮತ್ತು ಸೈಟ್ಗಳಾಗಿ ಜನರು ವಾಸವಾಗಿರುತ್ತಾರೆ. ಆಗ ಭರಮಸಾಗರದ ಕೆರೆ ಪೂರ್ಣವಾಗಿ ಭರ್ತಿಯಾದರೆ ಈ ಭಾಗದ ರೈತರು ಸುಮಾರು 3-4 ವರ್ಷಗಳು ಯಾವುದೇ ತೊಂದರೆ ಇಲ್ಲದೆ ಜಮೀನಿಗೆ ನೀರನ್ನ ಹಾಯಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಮತ್ತು ಹೆಸರುವಾಸಿಯಾದ ತೆಂಗು, ಬಾಳೆ, ಹಲಸು ಮತ್ತು ಅಡಿಕೆಯ ತೋಟಗಳನ್ನು ಮಾಡಿ ಹೆಸರುವಾಸಿಯಾಗಿದ್ದ ಘಟನೆಗಳು ಕಣ್ಣುಮುಂದೆ ಬರುತ್ತದೆ.
ಭತ್ತಿದ ಕೆರೆಯಿಂದ ಕಂಗಾಲಾದ ರೈತರು ಮತ್ತು ಜನರು
ಕಳೆದ ಸುಮಾರು 15 ವರ್ಷಗಳಲ್ಲಿ ಹೆಚ್ಚಾಗಿ ದೇಶದಲ್ಲಿ, ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ ಸಕಾಲಕ್ಕೆ ಮಳೆ ಬಂದರೂ ಸಹ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಾಗದೆ ಬರಗಾಲ ಹೆಚ್ಚಾಯಿತು. ಇದರಿಂದ ಜನರು, ರೈತರು ಕಂಗಾಲಾಗಿ ಕೆರೆಬತ್ತಿ ನೀರು ಇರದೆ ಭರಮಸಾಗರದ ಸುತ್ತಮುತ್ತಲಿನ ಎಲ್ಲಾ ಕೆರೆ, ಕಾಲುವೆ ಬಾವಿಗಳು ಬತ್ತಿ ಭೀಕರವಾದ ಬರಗಾಲದ ಛಾಯೆ ಎದುರಾಗಿ ಫಸಲುಕೊಡುತ್ತಿದ್ದ ಜಮೀನು-ತೋಟ, ಗದ್ದೆಗಳು ಒಣಗಿ ಸುಮಾರು 3-4 ಸಾವಿರ ಎಕರೆ ಅಡಿಕೆ, ತೆಂಗಿನ ತೋಟ ಒಣಗಿ ನಿಂತಾಗ ಎಷ್ಟೂ ರೈತರು ಇದನ್ನು ನೋಡಲಾಗದೆ ತಮ್ಮ ಆಯಸ್ಸನ್ನು ಕೊನೆಮಾಡಿಕೊಂಡ ಘಟನೆಗಳು ಸಹ ಇರುತ್ತದೆ. 2005 ನೆಯ ಸಾಲಿನಿಂದ 2020 ರತನಕ ಭರಮಸಾಗರದ ಕೆರೆ ಬತ್ತಿ ಬರುಡಾಗಿ ಹೋಯಿತು. ಕಳೆದ ಎರಡು ಮೂರು ವರ್ಷದಲ್ಲಿ ದೇಶದಲ್ಲಿ ಮಳೆ ಹೆಚ್ಚಾಗಿ ಬಂದು ಕೆರೆ, ಹಳ್ಳ, ನದಿಗಳು ನೀರಿನಿಂದ ತುಂಬಿ ಜಲಾಶಯದ ಡ್ಯಾಂ ಓಪನ್ ಮಾಡಿದರೂ ಸಹ ವಿಸ್ಮಯ ಎಂದರೆ ಭರಮಸಾಗರದ ಜೋಡಿಕೆರೆಗಳಿಗೆ ನೀರುಬಾರದೆ ಯತಾಸ್ಥಿತಿ ಕಾಣಬೇಕಾಯಿತು.
ಕೆರೆಗೆ ನೀರು ತುಂಬಿಸಲು ಸಂಘ ಸಂಸ್ಥೆ ಮತ್ತು ಸಾರ್ವಜನಿಕರಿಂದ ಹರಸಾಹಸ ಪ್ರಾರಂಭವಾದ ಹೋರಾಟಗಳು
ಸುಮಾರು 15-16 ವರ್ಷದ ಹಿಂದ ಭರಮಸಾಗರದ ದಿವಂಗತ ಬಿ.ಎನ್. ಕೃಷ್ಣಮೂರ್ತಿಯವರು ಪಿಡಬ್ಬೂಡಿ ಇಲಾಖೆಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುವಾಗ ಕೆರೆಗೆ ನೀರಾವರಿ ಇಲಾಖೆಯಿಂದ ಅನುಮೋದನೆಯನ್ನು ಪಡೆದು ನೀರು ತುಂಬಿಸುವ ಕಾರ್ಯಕ್ಕೆ ಕೈ ಹಾಕಿದ್ದರು. ಊರಿನ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ನೀರಾವರಿ ಇಲಾಖೆಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ಅದರೆ ಆಗ ಸರಿಯಾದ ಬೆಂಬಲ, ಮತ್ತು ಮುಂದಾಳತ್ವದ ಕೊರತೆಯಿಂದಾಗಿ ಮನವಿ ಪತ್ರ ಸರ್ಕಾರದ ಮುಂದೆ ಹೋಗದೆ ಹಾಗೆಯೇ ಉಳಿಯಿತು.
ಕೆರೆಗೆ ನೀರು ತುಂಬಿಸಲು ಹುಟ್ಟಕೊಂಡ ಹೋರಾಟ ಸಂಘ ಸಮಿತಿಗಳು
ಭರಮಸಾಗರದ ವಿವಿದ ಸಂಘ ಸಂಸ್ಥೆಗಳು, ಯುವಕರು ಮತ್ತು ಸಾರ್ವಜನಿಕರು ಕಳೆದ 5-6 ವರ್ಷಗಳಿಂದ ಕೆರೆಗೆ ನೀರನ್ನು ತರುವ ಉದ್ದೇಶದಿಂದ ಬಯಲು ಸೀಮೆಯಲ್ಲಿ ಏತನೀರಾವರಿ ಯೋಜನೆಯಡಿಯಲ್ಲಿ ನೀರನ್ನು ತುಂಬಿಸಬೇಕು ಎಂದು ಅನೇಕ ಬಾರಿ ಹೋರಾಟ ಮಾಡಲಾಯಿತು. ಕರ್ನಾಟಕ ಸರ್ಕಾರದಲ್ಲಿ ಕಾಂಗ್ರೆಸ್, ಜನತಾದಳ ಮತ್ತು ಬಿಜೆಪಿ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು. ರಾಜಕೀಯ ನಾಯಕರು, ಶಾಸಕರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸರಿಯಾಗಿ ಪ್ರಯೋಜನವಾಗದೆ ಹೋರಾಟವನ್ನು ಮುಂದುವರೆಸಬೇಕಾಯಿತು. ಹೋರಾಟ ಸಮಿತಿಗಳ ಜೊತೆಗೆ ಮುಂದಾಳತ್ವ ವಹಿಸಿದ ಸಿರಿಗೆರೆಯ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು.
ಏತ ನೀರಾವರಿ ಯೋಜನೆ
ಹರಿಹರದ ಹಲಸಬಾಳು ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಮೇಲೆತ್ತಿ ಕೆರೆ ನೀರು ತುಂಬಿಸುವ 565 ಕೋಟಿ ವೆಚ್ಚದ ಯೋಜನೆ. ಇದು 2018 ಡಿಸೆಂಬರ್ನಲ್ಲಿ ಕಾಮಗಾರಿ ಪ್ರಾರಂಭವಾಗಿ 2 ವರ್ಷ ನಿಗದಿಪಡಿಸಿ ಯೋಜನೆ ಪೂರ್ಣಗೊಳಿಸಿದ ಬೃಹತ್ ಯೋಜನೆ.
ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಪ್ರಸ್ತಾಪಿಸಿ, ಬರುವ ಬಜೆಟ್ನಲ್ಲಿ ಏತನೀರಾವರಿ ಯೋಜನೆಯಲ್ಲಿ ಕೆರೆಗೆ ನೀರನ್ನು ಹರಿಸಲು ಅನುಮೋದನೆ ಪಡೆಯಲು ಪ್ರಸ್ತಾಪನೆ ಮಾಡಿದರು. ಈ ಯೋಜನೆಯು ಆಗ ಬಜೆಟ್ನಲ್ಲಿ 250 ಕೋಟಿಗೆ ಅನುಮೋದನೆ ಸಿಕ್ಕಿತು. ನಂತರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪನವರು ತೋರಿದ ಕಾಳಜಿ ಮತ್ತು ಮುತುವರ್ಜಿಯಿಂದ ಮತ್ತು ಸಿರಿಗೆರೆ ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯರ ಒತ್ತಡದ ಫಲವಾಗಿ 2019 ರಲ್ಲಿ 585 ಕೋಟಿ ರೂ. ವೆಚ್ಚದ ಯೋಜನೆಯಾಗಿ ಹೊರಬಂದು 1000 ಎಕರೆ ವಿಸ್ತೀರ್ಣವಿರುವ ಕೆರೆ ಪ್ರಾಯೋಗಿಕವಾಗಿ ಅನುಮೂದನೆ ಸಿಕ್ಕ ಪ್ರತಿಫಲವಾಗಿದೆ. ಇದರಿಂದ ಈ ಕೆರೆಯ ಸುತ್ತಮುತ್ತಲಿನ 42 ಕೆರೆಗಳಿಗೆ ನೀರನ್ನು ಹರಿಸುವ ಯೋಜನೆಯಾಗಿದೆ. ಇದು ಸುಮಾರು 55 ಕಿಮೀ ದೂರದಿಂದ ಪೈಪ್ಲೈನ್ ಹಾಕಿ ನೀರನ್ನು ಹರಿಸುವ ಬೃಹತ್ ಏತನೀರಾವರಿ ಯೋಜನೆ. ಈ ಯೋಜನೆಯನ್ನು ಬೆಂಗಳೂರಿನ ರೇಡಿಯನ್ ಸರ್ವೆ ಕಂಪನಿ ಸರ್ವೆ ಮಾಡಿ ಭೂ ಮಟ್ಟ ಮತ್ತು ಈ ಮಾರ್ಗಗಳಲ್ಲಿ ಎಲ್ಲಾ ಮಣ್ಣು, ಕಂಭ ಇತರೆ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಸರ್ವೆಕಾರ್ಯ ಮಾಡಿ ಕೊಡಲಾಗಿತ್ತು.
ಸಾರ್ವಜನಿಕರು, ರೈತರು ಮತ್ತು ಸಿರಿಗೆರೆಯ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಮಲೇಷಿಯಾ, ಅಪಘಾನಿಸ್ತಾನಗಳಲ್ಲಿ ಮತ್ತು ರಾಜ್ಯದ ಅನೇಕ ಕಡೆ ಸಿವಿಲ್ ಕಾರ್ಯ ನಿರ್ವಹಿಸಿ ಹೆಸರನ್ನು ಗಳಿಸಿದ್ದ ಶಂಕರನಾರಾಯಣ ಕನ್ಸ್ಟ್ರಕ್ಷನ್ ಕಂಪನಿಗೆ ಈ ಕಾರ್ಯ ನೆರವೇರಿಸಲು ಗುತ್ತಿಗೆ ನೀಡಿ ಮಳೆಗಾಲದ ಒಳಗೆ ಈ ಕೆಲಸ ನಿರ್ವಹಿಸಿಕೊಡಲು ಒಪ್ಪಂದ ಮಾಡಲಾಯಿತು.
55 ಕಿಮೀ ದೂರದ ಪೈಪ್ ಲೈನ್ ಮೂಲಕ ನೀರನ್ನು ಕೆರೆಗೆ ಹರಿಸುವ ಕಾರ್ಯ ಕೆಲಸ ಪ್ರಾರಂಭಿಸಿದಾಗ, ಈ ಮಧ್ಯೆ ಮಹಾಮಾರಿ ಕರೋನಾ ಬಂದು ಸುಮಾರು ದಿನ ಕೆಲಸ ಕಾರ್ಯಗಳು ನಿಧಾನವಾಗಿ, ಕೋವಿಡ್ ನಿಯಮದಡಿಯಲ್ಲಿ ಮತ್ತು ಸರ್ಕಾರದ ಮಾರ್ಗಸೂಚಿಗಳಿಂದ ಕೆಲಸ ಮಂದಗತಿಯಲ್ಲಿ ಸಾಗಿದರೂ ಸಹ ಗುತ್ತಿಗೆದಾರರು ಒಪ್ಪಿಕೊಂಡ ದಿನಕ್ಕೆ ಭರಮಸಾಗರದ ಕೆರೆಗೆ ನೀರನ್ನು ಹರಿಸಲು ಹರಸಹಾಸ ಮಾಡಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿರುತ್ತಾರೆ. ಅನುಭವಿದಾರರ ಪ್ರಕಾರ ರಾಜ್ಯದಲ್ಲೇ ಉದ್ದವಾದ ಪೈಪ್ ಲೈನ್ ಇದಾಗಿದ್ದು, ಇದು ಶಾಶ್ವತ ಬರ ಪರಿಹಾರದ ಅಪರೂಪದ ಯೋಜನೆಯಾಗಿ ಮುಂದುವರೆಯಲಿದೆ.
ಪ್ರಾರಂಭಿಕ ಸಮಸ್ಯೆ ಬಗೆಹರಿದು ತುಂಗಾಭದ್ರೆ ಭರಮಸಾಗರದ ಮಡಿಲ ಸೇರಿದ ದಿನ
2021ರ ಸೆ.20ರಂದು ಭರಮಸಾಗರದ ಕೆರೆಗೆ ನೀರು ಬರಬೇಕಾಗಿತ್ತು. ತಾಂತ್ರಿಕ ಕಾರಣಗಳಿಂದ ನೀರು ಹರಿಸುವುದು ವಿಳಂಬವಾಯಿತು. ತಾತ್ಕಾಲಿಕ ವಿಘ್ನ ಪರಿಹಾರ ಮಾಡಿ ಪ್ರಾರಂಭ ಹಂತದಲ್ಲಿ ಸೆ.29ರ ಬುಧವಾರ 2950 ಎಚ್’ಪಿಯ ಎರಡು ಪಂಪ್ ಬಳಕೆ ಮಾಡಿ ನೀರನ್ನು ಕೆರೆಗೆ ಹರಿಸಲಾಯಿತು. ಭರಮಸಾಗರದ ಕೆರೆಗೆ ನೀರು ತರಲು ಶ್ರಮಿಸಿದ ತರಳಬಾಳು ಶ್ರೀಗಳು ಈ ಭಾಗದ ರೈತರ ಪಾಲಿನ ದೇವರಾದರು. ಕೆರೆಯ ವಿಸ್ತ್ರರ್ಣದನ್ವಯ ನೀರಿನ ಪ್ರಮಾಣ 0.938 ಟಿಎಂಸಿ ಅಡಿಯಾಗಿದ್ದು, ನೀರಿನ ಹರಿವಿನ ಪ್ರಮಾಣ 2012.04 ಕ್ಯುಬಿಕೆ ಮೀಟರ್, ಭರಮಸಾಗರದ ದೊಡ್ಡ ಕೆರೆಯು ನೀರು ಸಂಗ್ರಹಣಾ ಕೇಂದ್ರವಾಗಿದೆ (ರಿಸರ್ವ್ ಟ್ಯಾಂಕ್). ಈಗ ಇರುವ ಪೈಪ್ ಲೈನ್ ಮೂಲಕ ನೀರುಹರಿಸಿದರೆ ಸುಮೂರು 20 ದಿನಕ್ಕೆ ಕೆರೆ ಭರ್ತಿಯಾಗಲಿದೆ. ನಂತರ ನಿರ್ಮಾಣಹಂತದಲ್ಲಿ ಇರುವ 2 ಜಾಕ್ ವೆಲ್ ಮೂಲಕ ಉಳಿದ 41 ಕೆರೆಗಳಿಗೆ ನೀರನ್ನು ಹರಿಸುವ ಯೋಜನೆ ಇದಾಗಿದೆ.
ಕಳೆದ ಎರಡು ದಿನದಿಂದ ಹರಿಸಲಾದ ನೀರಿನ ಸಾಮಾಥ್ಯದಲ್ಲಿ ಬಹಳಷ್ಟು ನೀರನ್ನು ಬತ್ತಿದ ಕೆರೆ ಇಂಗಿಸಿಕೊಂಡಿದೆ. ಅಕ್ಟೋಬರ್ 1ರ ನಿನ್ನೆ ಮೂರನೆಯ ಪಂಪ್ ಪ್ರಾರಂಭಿಸಿ, ನೀರನ್ನು ಹರಿಸಲಾಗಿದೆ. ಈಗ ಕೆರೆಯ ಅಂಗಳದಲ್ಲಿ ನೀರು ನಿಲ್ಲಲು ಪ್ರಾರಂಭವಾಗಿದೆ.
300 ವರ್ಷದ ಕೆರೆ ನೋಡಲು ಹರುಷದಿಂದ ಬಂದ ಜನಸಾಗರ
300 ವರ್ಷಕ್ಕೆ ಕಾಲಿಟ್ಟ ಭರಮಣ್ಣನಾಯಕರ ಹೆಸರಾಂತ ಕೆರೆ 20 ವರ್ಷದಿಂದ ಸರಿಯಾಗಿ ಭರ್ತಿಯಾಗದೆ ಬರಿದಾಗಿತ್ತು. ನೀರು ಬಂದ ತಕ್ಷಣ ನೀರನ್ನು ಮತ್ತು ಜೀಣೋದ್ದಾರವಾದ ಕೆರೆಯನ್ನು ವೀಕ್ಷಣೆ ಮಾಡಲು ಸುತ್ತಮುತ್ತಲಿನ ಊರಿನ ಜನರು ಮತ್ತು ಭರಮಸಾಗರದ ಜನರು ಕೆರೆಯ ಅಂಗಳದಲ್ಲಿ ನಿಂತು ಮಳೆಯನ್ನು ಲೆಕ್ಕಿಸದೆ ನೀರು ಚುಮ್ಮುವುದನ್ನು ನೋಡಿ ಆನಂದ ವ್ಯಕ್ತಪಡಿಸುತ್ತಿದ್ದಾರೆ. ಊರಿನ ಮಹಿಳೆಯರು ಗಂಗಾಪೂಜೆ ಮಾಡಿ ಗಂಗೆಯನ್ನು ಸ್ವಾಗತಿಸುತ್ತಿದ್ದಾರೆ.
ಕೆರೆಗೆ ನೀರು ಹರಿಸಲು ಶ್ರಮ ವಹಿಸಿದವರುಗಳು
ಈ ಯೋಜನೆ ಕೈ ಸೇರಬೇಕಾದರೆ ಬಹಳ ಜನರ ಸಹಾಯ ಸಹಕಾರ ಮತ್ತು ಮುಂದಾಳತ್ವ ಇದೆ. ಮುಖ್ಯವಾಗಿ ಗ್ರಾಮದೇವತೆ ಶ್ರೀಮಾತೆ ದುರ್ಗಾದೇವಿ ಮತ್ತು ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕರ ಆಶೀರ್ವಾದದ ಮತ್ತು ಜೀವನವೇ ಮುಗಿಯಿತು ಎನ್ನುತ್ತಿದ್ದ ರೈತಾಪಿ ವರ್ಗ, ಊರಿನ ಜನ ಮತ್ತು ಸುತ್ತಮುತ್ತಲಿನ ಊರಿನ ಜನರ ಬವಣೆ ನೀಗಿಸಲು ಮುಂದಾಗಿ ನಿಂತು ಮಾರ್ಗದರ್ಶಕರಾದ ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ಸರ್ಕಾರದ ಈ ಯೋಜನೆ ಬೇಗಬೇಗ ಸಿಗುವಂತೆ ಕೈಜೋಡಿಸಿದ ಮಾಜಿ ಸಚಿವರಾದ ಎಚ್. ಆಂಜನೇಯ, ಶಾಸಕರಾದ ಚಂದ್ರಪ್ಪನವರು, ಮತ್ತು ನೀರಾವರಿ ಇಲಾಖೆಯ ಇಂಜಿನಿಯರ್ ಮತ್ತು ಕಾರ್ಮಿಕರು, ಗುತ್ತಿಗೆಕೆಲಸಗಾರರು ಇವರೆಲ್ಲರಿಗೂ ಭರಮಸಾಗರದ ಪರವಾಗಿ ಧನ್ಯವಾದಗಳನ್ನು ಆರ್ಪಿಸಲಾಯಿತು.
ಬಾಕಿ ಇರುವ ಕೆಲಸಗಳಿಗೂ ಸಾರ್ವಜನಿಕರು ಒತ್ತಡ ಮಾಡಿ ಕೆಲಸಮಾಡಿಸಿಕೊಳ್ಳಬೇಕು.
1. ಕೆರೆಯ ಏರಿಯ ಮೇಲೆ ಬಿಚ್ಚುಗತ್ತಿ ಭರಮಣ್ಣನಾಯಕರ ಕಂಚಿನ ಪ್ರತಿಮೆಯನ್ನು ಮಾಡಿಸಿ ಪ್ರತಿಷ್ಠಾಪನೆ ಮಾಡಿ ಊರಿನ ಮತ್ತು ಕೆರೆಯ ಹೆಸರನ್ನು ಉಳಿಸಬೇಕು.
2. ಕೆರೆಯಲ್ಲಿ ಶೇಖರಣೆ ಮಾಡಲಾದ ನೀರನ್ನು ಸರಿಯಾಗಿ ಶುಧ್ದಿಕರಿಸಲು ಶುದ್ಧಿಕರಣ ಘಟಕ ಸ್ಥಾಪಿಸಿ, ಊರಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.
3. ಪೂರ್ವಯೋಜನೆ ರೂಪಿಸಿ ಕೆರೆಯಲ್ಲಿ ಶೇಖರಣೆ ಮಾಡಲಾದ ನೀರು ಯಾವುದೇ ರೀತಿಯಲ್ಲಿ ಪೂಲಾಗದಂತೆ ನಿರ್ವಹಣೆ ಮಾಡಬೇಕು.
4. ದೋಣಿ ವಿಹಾರ, ಮೀನು ಸಾಗಣಿಕೆ ಇವುಗಳ ಯೋಜನೆಗೆ ಮುಂದಾಗಬೇಕು.
5. ನೀರು ತುಂಬಿದ ಕೆರೆಯಲ್ಲಿ ಮಕ್ಕಳು ಹೊಗದಂತೆ ಸುರಕ್ಷತಾ ಏರಿಯನ್ನು ಕಟ್ಟಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವುದು.
ಕೆರೆಯನ್ನು ಶುದ್ದವಾಗಿಟ್ಟುಕೊಳ್ಳುವುದು, ಘನತ್ಯಾಜ್ಯ ಹೋಗದಂತೆ ತಡೆಯುವುದು ಮತ್ತು ಪರಿಸರ ಮತ್ತು ನೀರಿನ ಸಂರಕ್ಷಣೆ ಮಾಡಲು ಮುಂದಾಗುವುದು ಗ್ರಾಮಸ್ಥರ ಜವಾಬ್ದಾರಿ
(ವರದಿ: ಮುರುಳೀಧರ್ ನಾಡಿಗೇರ್)
Discussion about this post