ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಿಳೆಯರ ಕುರಿತು ಅವಹೇಳನಕಾರಿ ಹಾಗೂ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಅನುರಾಗ್ ಠಾಕೂರ್, ಶಾಸಕರಾದ ಯಶ್ಪಾಲ್ ಸುವರ್ಣ, ಸಿ.ಟಿ. ರವಿ ಹಾಗೂ ಬಿಜೆಪಿ ಮುಖಂಡ ಭರತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಭವನದ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರು, ಮಹಿಳೆಯರಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರಾದ ಎ. ಆನಂದ್, ಜಿ. ಪ್ರಕಾಶ್ ಆದಿತ್ಯ, ಉಮೇಶ್, ಚಂದ್ರಶೇಖರ್, ಮುರುಳಿ, ಪುಟ್ಟರಾಜು, ಕುಶಾಲ್ ಹರುವೇಗೌಡ, ರಂಜೀತ್ ಕುಮಾರ್ ಮಾಧವಹನೂರು, ಪ್ರವೀಣ್ ರಾವ್, ಒಬಳೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಿಜೆಪಿ ನಾಯಕರ ವಿರುದ್ಧ ಎಸ್. ಮನೋಹರ್ ವಾಗ್ದಾಳಿ
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಮಹಿಳೆಯರ ಬಗ್ಗೆ ಗೌರವವಿಲ್ಲದ ರೀತಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು ಕೇಂದ್ರ ಶಿಕ್ಷಣ ಸಚಿವ ಸ್ಥಾನದಲ್ಲಿರುವುದು ದುರಂತ ಎಂದು ಟೀಕಿಸಿದರು.
“ಮಹಿಳೆಯರಿಗೆ ಅಪಮಾನ ಮಾಡುವ ಹೇಳಿಕೆಗಳನ್ನು ನೀಡಿರುವ ನಾಯಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಹೇಳಿಕೆಗಳು ಸಮಾಜದಲ್ಲಿ ಕೆಟ್ಟ ಸಂದೇಶವನ್ನು ನೀಡುತ್ತವೆ” ಎಂದು ಹೇಳಿದರು.
Also read>> ನೋಟೀಸ್ ನೀಡದೆ ಜೆಸಿಬಿ ಜಪ್ತಿ | ಶಿವಮೊಗ್ಗದ ಫೈನಾನ್ಸ್ ಸಂಸ್ಥೆಗೆ ದಂಡ
ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದ ಅವರು, ಅನುರಾಗ್ ಠಾಕೂರ್, ಸಿ.ಟಿ. ರವಿ, ಯಶ್ಪಾಲ್ ಸುವರ್ಣ ಹಾಗೂ ಭರತ್ ಶೆಟ್ಟಿ ಅವರ ಹೇಳಿಕೆಗಳು ಮತ್ತು ವರ್ತನೆಗಳನ್ನು ಖಂಡಿಸಿದರು.
ಅನುರಾಗ್ ಠಾಕೂರ್ ಅವರು ನೀಡಿರುವ ಹೇಳಿಕೆಗಳು, ಸಿ.ಟಿ. ರವಿ ಅವರು ಪೊಲೀಸ್ ಇಲಾಖೆಯ ನೋಟಿಸ್ಗಳಿಗೆ ಸ್ಪಂದಿಸಿದ ರೀತಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ಪ್ರಚೋದನಕಾರಿ ಹೇಳಿಕೆಗಳು ಹಾಗೂ ಭರತ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುರಿತು ಬಳಸಿದ ಭಾಷೆ ಖಂಡನೀಯ ಎಂದು ಹೇಳಿದರು.
ಬಂಧನಕ್ಕೆ ಆಗ್ರಹ
ಇಂತಹ ಕೀಳುಮಟ್ಟದ ರಾಜಕಾರಣಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಬಂಧಿಸಬೇಕು. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಎಸ್. ಮನೋಹರ್ ತಿಳಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ಶಾಂಭವಿ, ಸುಜಾತ, ಶಾಹಿನ್ ಶರೀಫ್, ನದೀಯಾ, ಫರ್ಹಾಜಾನಾ, ಭಾನುಪ್ರಿಯಾ, ರೂಪ, ರಮ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









