ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರಕನ್ನಡ) |
ಬದುಕಲು ನೀರು ಅಗತ್ಯ. ಆದರೆ ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಗೋವಿನ ತುಪ್ಪದ ಪಾತ್ರ ಮಹತ್ವದ್ದು. ಕ್ರಿಮಿ-ಕೀಟಗಳ ಮಟ್ಟದ ಬದುಕಿನಿಂದ ಮೇಲೇರಿ ಅರಿವಿನ ಬದುಕನ್ನು ಕಟ್ಟಿಕೊಳ್ಳಲು ಗೋವಿನ ತುಪ್ಪ (Desi Cow ghee) ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆ.19ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ತುಪ್ಪದ ಮಹತ್ವದ ಕುರಿತು ಪ್ರವಚನ ನೀಡಿದ ಶ್ರೀಗಳು, ಗೋವು ಸೃಷ್ಟಿಯ ಸಾರವಾದರೆ, ಹಾಲು ಗೋವಿನ ಸಾರ. ತುಪ್ಪವು ಸಾರಗಳ ಸಾರವಾಗಿದೆ ಎಂದು ವಿವರಿಸಿದರು.
ದಿನ ಕಳೆದಂತೆ ಪ್ರಪಂಚದ ಬಹುತೇಕ ವಸ್ತುಗಳ ಗುಣ ಕುಂಠಿತವಾಗುತ್ತಾ ಸಾಗುತ್ತವೆ. ಆದರೆ ತುಪ್ಪದ ಗುಣ ಮಾತ್ರ ಕಾಲ ಕಳೆದಂತೆ ಹೆಚ್ಚುತ್ತಾ ಸಾಗುತ್ತದೆ ಎಂಬ ನಂಬಿಕೆ ಇದೆ. ಆಯುರ್ವೇದದಲ್ಲಿ ನೂರು ವರ್ಷಗಳಷ್ಟು ಹಳೆಯ ತುಪ್ಪವನ್ನು ಮಹಾ ಔಷಧವೆಂದು ಪರಿಗಣಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
Desi Cow ghee: ದೇಶಿ ಗೋವಿನ ತುಪ್ಪವೇ ನಿಜವಾದ ತುಪ್ಪ
ದೇಶಿ ಗೋವಿನ ತುಪ್ಪವೇ ನಿಜವಾದ ತುಪ್ಪ ಎಂದು ಪ್ರತಿಪಾದಿಸಿದ ಶ್ರೀಗಳು, A2 ಹಾಲಿನಿಂದ ತಯಾರಿಸಲಾದ ತುಪ್ಪದ ಮಹತ್ವವನ್ನು ವಿವರಿಸಿದರು. ಸುಶ್ರುತರು ಜೀವಿಗಳಿಗೆ ಹಿತವಾದ ಆಹಾರಗಳ ಪಟ್ಟಿಯಲ್ಲಿ ನೀರಿನ ನಂತರ ತುಪ್ಪಕ್ಕೆ ಸ್ಥಾನ ನೀಡಿದ್ದಾರೆ. ಇದು ತುಪ್ಪಕ್ಕಿರುವ ಮಹತ್ವವನ್ನು ಸೂಚಿಸುತ್ತದೆ ಎಂದರು.
ಆದರೆ ಇತ್ತೀಚಿನ ದಿನಗಳಲ್ಲಿ ತುಪ್ಪ ಸೇವಿಸಬಾರದು, ಅದು ಆರೋಗ್ಯಕ್ಕೆ ಹಾನಿಕರ ಎಂಬ ರೀತಿಯಲ್ಲಿ ಪ್ರಚಾರ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
Also read>> INRC 2026ರ 2ನೇ ಸುತ್ತು ಆರಂಭ | 64 ಕಾರುಗಳು, 128 ಸ್ಪರ್ಧಿಗಳು ಕಣಕ್ಕೆ
ಆಹಾರದ ದೋಷ ನಿವಾರಣೆಯಲ್ಲೂ ತುಪ್ಪದ ಪಾತ್ರ
ಆಹಾರದಲ್ಲಿರುವ ದೋಷಗಳನ್ನು ನಿವಾರಿಸುವ ಶಕ್ತಿ ತುಪ್ಪಕ್ಕಿದೆ ಎಂದು ಶ್ರೀಗಳು ಹೇಳಿದರು. ಯಜ್ಞಗಳಲ್ಲಿ ದೇವರಿಗೆ ವಿವಿಧ ದ್ರವ್ಯಗಳನ್ನು ಸಮರ್ಪಿಸುವಾಗ ಅವುಗಳಿಗೆ ತುಪ್ಪದ ಸಂಸರ್ಗ ಅತ್ಯಗತ್ಯವಾಗಿದೆ. ಅದೇ ರೀತಿ ಔಷಧದೊಂದಿಗೆ ತುಪ್ಪವನ್ನು ಸೇರಿಸಿದಾಗ, ಔಷಧದ ಗುಣವನ್ನು ಹೊತ್ತು ಸಾಗಿಸುವುದರ ಜೊತೆಗೆ ತನ್ನ ಗುಣವನ್ನೂ ಉಳಿಸಿಕೊಳ್ಳುವ ವಿಶೇಷ ಸಾಮರ್ಥ್ಯ ತುಪ್ಪಕ್ಕಿದೆ ಎಂದು ವಿವರಿಸಿದರು.
‘ಬದುಕಲು ನೀರು ಬೇಕು, ಬದುಕು ಸಾರ್ಥಕವಾಗಿಸಿಕೊಳ್ಳಲು ತುಪ್ಪ ಬೇಕು’ ಎಂಬ ಸಂದೇಶದ ಮೂಲಕ ತುಪ್ಪದ ಮಹತ್ವವನ್ನು ಶ್ರೀಗಳು ವಿವರಿಸಿದರು.
ತುಪ್ಪದಿಂದಲೇ ಊಟ ಆರಂಭವಾಗಬೇಕು
ಆಯುರ್ವೇದದ ಪ್ರಕಾರ ಆಹಾರ ಸೇವನೆಯನ್ನು ತುಪ್ಪದಿಂದಲೇ ಆರಂಭಿಸಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಉಪ್ಪಿನಕಾಯಿಯಿಂದ ಊಟ ಆರಂಭಿಸುವ ಪದ್ಧತಿ ಹೆಚ್ಚಾಗಿದೆ. ಹೀಗೆ ಮಾಡಿದರೆ ಊಟದ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
“ತುಪ್ಪದಿಂದಲೇ ಆಹಾರ ಸೇವನೆಯ ಆರಂಭವಾಗಬೇಕು ಎಂಬುದು ಆಯುರ್ವೇದದ ಅಭಿಮತ. ಇಂದು ಉಪ್ಪಿನಕಾಯಿಯಿಂದ ಊಟವನ್ನು ಆರಂಭಿಸುತ್ತಾರೆ. ಹಾಗಾದಲ್ಲಿ ಊಟದ ವ್ಯವಸ್ಥೆಯೇ ಬುಡಮೇಲಾದಂತೆ.”
-ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ
ಗುರುಭಿಕ್ಷಾಸೇವೆ ಸಮರ್ಪಣೆ
ಕಾರ್ಯಕ್ರಮದಲ್ಲಿ ಭಾರತ ಮಂಡಲದ ಚೆನ್ನೈ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಯಲ್ಲಾಪುರ, ಚಿಕ್ಕಮಗಳೂರು, ಹಾಸನ ಹಾಗೂ ಕೇರಳ ವಲಯದ ಪರವಾಗಿ ಗಜಾನನ ಭಾಗ್ವತ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಕಳಂಜಿ ಹಾವೇರಿ, ಆರ್.ಜಿ. ಭಟ್, ಡಾ. ಶಾರದಾ ಜಯಗೋವಿಂದ ಹಾಗೂ ದಿನಪ್ರಧಾನರಾಗಿ ದತ್ತರಾಜ್ ಮಂಚಾಲೆ ದಂಪತಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









