ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಚಿವ ನಾಗೇಂದ್ರನ ಕೈ ಬಿಡಿ ಅಷ್ಟೆ. ಇದು ಆ.13ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಬಿಜೆಪಿ-ಮಿತ್ರ ಪಕ್ಷಗಳ ಪ್ರಮುಖ ಒಂದಂಶದ ಹೋರಾಟವಾಗಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪುನರುಚ್ಛರಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿ.ನಾಗೇಂದ್ರ ಅವರ ಪರವಾಗಿ ಮಾತನಾಡಿ ಯಾರ ಮೇಲೆ ಪ್ರಕರಣವಿಲ್ಲ? ನನ್ನ ಮೇಲೂ ಪ್ರಕರಣವಿದೆ. ಎಲ್ಲರ ಮೇಲೂ ಪ್ರಕರಣವಿದೆ ಎಂದಿರುವುದು ‘ಜೊತೆಗಿರುವವರು ಓಡಾಡಿಕೊಂಡಿರಲಿ’ (ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ) ಎಂಬಂತಾಗಿದೆ. ಇಂಥಹ ಹೇಳಿಕೆಯನ್ನು ಮುಖ್ಯಮಂತ್ರಿಗಳಿಂದ ನಿರೀಕ್ಷಿಸಿರಲಿಲ್ಲ. ಡಿಕೆಶಿ ಮೇಲಿರುವ ಪ್ರಕರಣದ ಸ್ವರೂಪವೇ ಬೇರೆ. ನಾಗೇಂದ್ರ ಮೇಲಿರುವ ಪ್ರಕರಣಗಳ ಸ್ವರೂಪವೇ ಬೇರೆ. ಇಂಥಹ ಬೇಜವಾಬ್ದಾರಿ ಹೇಳಿಕೆಗಳು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿವೇಶನದ ಸಂದರ್ಭದಲ್ಲಿಯೇ ನಾಗರ ಪಂಚಮಿ ಹಬ್ಬವೂ ಬರುತ್ತಿದೆ. ನಾಗರಾಜನಿಗೆ ಹಾಲೆರೆಯಲಾಗುತ್ತದೆ. ಆದರೆ ಭ್ರಷ್ಟಾಚಾರ ಆರೋಪ ಹೊತ್ತು ಸಚಿವರಾದ ನಾಗೇಂದ್ರನಂತಹ ದುಷ್ಟರಿಗೆ ಹಾಲೆರೆಯುವ ಮನಸ್ಥಿತಿಯಲ್ಲಿ ನಾವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ವಿವಿಧ ಪಿಂಚಣಿಗಳನ್ನು ಸರ್ಕಾರ 4-5 ತಿಂಗಳಿಂದ ನಿಲ್ಲಿಸಿದೆ. ಪರಿಶೀಲನೆ ಹೆಸರಿನಲ್ಲಿ ರಾಜ್ಯ ಸರ್ಕಾರವು ನಗರದಲ್ಲಿ ಸುಮಾರು 6 ಸಾವಿರ ಜನರ ಪಿಂಚಣಿಯನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಕೂಡಲೇ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಿಂಚಣಿದಾರರ ಪರವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಸಿದರು.
Also read>> ದೃಢ ಸಂಕಲ್ಪದಿಂದ ಹಸಿವನ್ನು ಗೆಲ್ಲಲು ಸಾಧ್ಯ: ರಾಮಚಂದ್ರಾಪುರ ಶ್ರೀ
ಅಲ್ಲದೆ ಪಿಂಚಣಿದಾರರು ತಮ್ಮ ಮರಣ ದಾಖಲೆಯ ದೃಢೀಕರಣ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಸರ್ಕಾರದ ಇತ್ತೀಚಿನ ಸುತ್ತೋಲೆ ಸರ್ಕಾರದ ಸಚಿವರು, ಅಧಿಕಾರಿಗಳು ಎಷ್ಟರ ಮಟ್ಟಿಗೆ ಮೂರ್ಖರಿದ್ದಾರೆ ಎಂಬುದನ್ನು ದೃಢೀಕರಿಸುತ್ತದೆ. ಇಂಥಹ ಅಸಂಬಂಧ ಸತ್ತೋಲೆಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಪಿಂಚಣಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಅವರು ಅಂಗವಿಕಲರಂತಹ ಫಲಾನುಭವಿಗಳ ಅರ್ಹತೆಯನ್ನು ಪದೇ ಪದೇ ಪರಿಶೀಲಿಸುವ ಅಗತ್ಯವೇನು? ಸರ್ಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಹಿಂದೆ ನಡೆಸಿದ ಪರಿಶೀಲನೆ ಮತ್ತು ದಾಖಲಾತಿಗಳ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಎಸ್ ಐಆರ್ ಗೆ ಸಂಬಂಧಿಸಿದಂತೆ, ನಗರದಲ್ಲಿ ಸುಮಾರು 56 ಸಾವಿರ ಮತದಾರರ ಹೆಸರುಗಳು ಮತ ಪಟ್ಟಿಯಿಂದ ಹೊರಗುಳಿಯುತ್ತವೆ ಎಂಬ ಮಾಹಿತಿ ಇದೆ. ಆದರೆ ಸರಿಯಾದ ದಾಖಲಾತಿ ಸಲ್ಲಿಸುವ ಮೂಲಕ ಅಂಥಹ ಮತದಾರರು ಪುನ: ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಮರಣ, ಸ್ಥಳಾಂತರ, ಎರಡೆರಡು ಕಡೆ ಮತ ಇದ್ದವರು ಮೊದಲಾದವರ ಹೆಸರು ಡಿಲಿಟ್ ಆದರೂ ಸುಮಾರು ಶೇ.30ರಷ್ಟು ಮತ ಕಡಿಮೆಯಾಗಬಹುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










