ವಿದೇಶಿ ಅನುದಾನಕ್ಕೆ ಕಠಿಣ ನಿಯಂತ್ರಣ ಕಾಯ್ದೆ
ರಾಷ್ಟ್ರೀಯ ಭದ್ರತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಬಲಪಡಿಸಲು ಎಫ್ಸಿಆರ್ಎ ತಿದ್ದುಪಡಿ ಮಸೂದೆಗೆ ಕೇಂದ್ರದ ಒತ್ತು ನೀಡುವುದು ಇದರ ಮುಖ್ಯ ಗುರಿಯಾಗಿದೆ ಎಂಬುದು ಸ್ಪಷ್ಟ.
ಲಭ್ಯವಿರುವ ಮಾಹಿತಿಯ ಪ್ರಕಾರ, 2019ರಿಂದ 2022ರ ಅವಧಿಯಲ್ಲಿ 13,500ಕ್ಕೂ ಹೆಚ್ಚು ಸಂಸ್ಥೆಗಳು ಸುಮಾರು ರೂ. 55,741 ಕೋಟಿ ವಿದೇಶಿ ಅನುದಾನವನ್ನು ಸ್ವೀಕರಿಸಿವೆ.
ಭಾರತಕ್ಕೆ ವಿದೇಶಗಳಿಂದ ಬರುವ ಅನುದಾನಗಳ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2026ರ ವಿದೇಶಿ ಅನುದಾನ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಮುಂದಡಿ ಇರಿಸಿದೆ.
Also Read>> ಪ್ರಯಾಗರಾಜ್–ಯಶವಂತಪುರ ವಿಶೇಷ ವಾರಂತ್ಯ ಎಕ್ಸ್ಪ್ರೆಸ್ ರೈಲುಗಳ ಸಂಚರಣೆ
ಕಳೆದ ಕೆಲವು ವರ್ಷಗಳಲ್ಲಿ ವಿದೇಶಿ ಅನುದಾನವನ್ನು ಪಡೆಯುತ್ತಿರುವ ಕೆಲವು ಸಂಸ್ಥೆಗಳ ವಿರುದ್ಧ ವಿವಿಧ ತನಿಖಾ ಸಂಸ್ಥೆಗಳು ನಡೆಸಿರುವ ತನಿಖೆಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಿಧಿಗಳ ದುರ್ಬಳಕೆಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಅಗತ್ಯವಾಗಿದೆ ಎಂಬುದು ಪ್ರಮುಖ ವಾದವಾಗಿದೆ.
ವಿದೇಶಿ ಅನುದಾನಗಳ ಮೂಲಕ ದೇಶದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸುವುದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ಉಗ್ರ ಚಟುವಟಿಕೆಗಳಿಗೆ ಪರೋಕ್ಷ ಹಣಕಾಸು ನೆರವು ಒದಗಿಸುವುದು ಹಾಗೂ ಸಂಘಟಿತ ಮತಾಂತರಗಳಿಗೆ ಉತ್ತೇಜನ ನೀಡುವ ಪ್ರಯತ್ನಗಳ ಬಗ್ಗೆ ವಿವಿಧ ತನಿಖೆಗಳು ಬೆಳಕು ಚೆಲ್ಲಿವೆ. ಈ ಹಿನ್ನೆಲೆಯಲ್ಲಿ ವಿದೇಶಿ ಹಣಕಾಸಿನ ಹರಿವಿನ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅನಿವಾರ್ಯವಾಗಿದೆ.
ಸಾವಿರಾರು ಕೋಟಿ ವಿದೇಶಿ ಅನುದಾನ
ಲಭ್ಯವಿರುವ ಮಾಹಿತಿಯ ಪ್ರಕಾರ, 2019ರಿಂದ 2022ರ ಅವಧಿಯಲ್ಲಿ 13,500ಕ್ಕೂ ಹೆಚ್ಚು ಸಂಸ್ಥೆಗಳು ಸುಮಾರು ರೂ. 55,741 ಕೋಟಿ ವಿದೇಶಿ ಅನುದಾನವನ್ನು ಸ್ವೀಕರಿಸಿವೆ. ಈ ಬೃಹತ್ ಪ್ರಮಾಣದ ಹಣದ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂಬುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಂದು ರೂಪಾಯಿ ಪಾರದರ್ಶಕವಾಗಿ ಬಳಕೆಯಾಗಬೇಕು ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಬಾರದು ಎಂಬುದು ಮಸೂದೆಯ ಉದ್ದೇಶವಾಗಿದೆ.
ಆಸ್ತಿಗಳ ಮೇಲ್ವಿಚಾರಣೆಗೆ ವಿಶೇಷ ಪ್ರಾಧಿಕಾರ
ಎಫ್ಸಿಆರ್ಎ ನೋಂದಣಿ ರದ್ದಾದಾಗ, ಅವಧಿ ಮುಗಿದಾಗ ಅಥವಾ ಸಂಸ್ಥೆಯೇ ನೋಂದಣಿಯನ್ನು ಹಿಂತೆಗೆದುಕೊಂಡಾಗ ವಿದೇಶಿ ಅನುದಾನದಿಂದ ನಿರ್ಮಿತವಾದ ಆಸ್ತಿಗಳನ್ನು ಸರ್ಕಾರದ ವಶಕ್ಕೆ ಪಡೆಯಲು ವಿಶೇಷ ಅಧಿಕಾರಿಯನ್ನು ನೇಮಿಸುವ ವ್ಯವಸ್ಥೆಯನ್ನು ಮಸೂದೆ ಒಳಗೊಂಡಿದೆ.
ಇದರಿಂದ ನೋಂದಣಿ ರದ್ದಾಗುವ ಮೊದಲು ಆಸ್ತಿಗಳನ್ನು ವರ್ಗಾಯಿಸುವ ಅಥವಾ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ತಪ್ಪುತ್ತದೆ.
ಇದೇ ವೇಳೆ, ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳನ್ನು ವೈಯಕ್ತಿಕವಾಗಿ ಉತ್ತರದಾಯಿಗಳನ್ನಾಗಿ ಮಾಡುವ ಮೂಲಕ ಕಾನೂನು ಪಾಲನೆ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ಹೆಚ್ಚಿಸುವ ಪ್ರಯತ್ನವೂ ಈ ಮಸೂದೆಯಲ್ಲಿದೆ.
FCRA | “ಲ್ಯಾಪ್ಸ್ ಅಂಡ್ ಕೀಪ್” ಲೋಪದೋಷಕ್ಕೆ ತೆರೆ
ಹಿಂದೆ FCRA ನೋಂದಣಿಯ ಅವಧಿ ಮುಗಿದರೂ ಕೆಲವು ಸಂಸ್ಥೆಗಳು ವಿದೇಶಿ ನಿಧಿಯಿಂದ ಸೃಷ್ಟಿಯಾದ ಆಸ್ತಿಗಳನ್ನು ತಮ್ಮ ಬಳಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಬೆಂಬಲಿಗರು ಹೇಳುತ್ತಾರೆ. ಹೊಸ ತಿದ್ದುಪಡಿ ಈ ಲೋಪದೋಷವನ್ನು ಮುಚ್ಚಿ, ಅವಧಿ ಮುಗಿದ ನೋಂದಣಿಯನ್ನೂ ರದ್ದಾದ ನೋಂದಣಿಯಂತೆಯೇ ಪರಿಗಣಿಸುತ್ತದೆ. ಜೊತೆಗೆ, ಸಂಸ್ಥೆಯ ಪ್ರಮುಖ ಪದಾಧಿಕಾರಿಗಳನ್ನು ವಿದೇಶಿ ನಿಧಿಯ ಬಳಕೆಗೆ ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡುವ ಮೂಲಕ ಹೆಚ್ಚಿನ ಉತ್ತರದಾಯಿತ್ವವನ್ನು ಖಚಿತಪಡಿಸಲು ಪ್ರಯತ್ನಿಸುತ್ತದೆ.
ಈ ಮಸೂದೆಯ ಮೂಲ ಉದ್ದೇಶ ಯಾವುದೇ ಸಂಸ್ಥೆಯ ಚಟುವಟಿಕೆಗಳನ್ನು ನಿರ್ಬಂಧಿಸುವುದಲ್ಲ; ಬದಲಾಗಿ ಭಾರತಕ್ಕೆ ಬರುವ ಪ್ರತಿಯೊಂದು ವಿದೇಶಿ ರೂಪಾಯಿಯೂ ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಬಳಕೆಯಾಗುವುದನ್ನು ಖಚಿತಪಡಿಸುವುದಾಗಿದೆ.
ಧಾರ್ಮಿಕ ಮತಾಂತರಕ್ಕಾಗಿ ವಿದೇಶಿ ನಿಧಿಯನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದರೂ, ಧಾರ್ಮಿಕ ಶಿಕ್ಷಣ, ಧಾರ್ಮಿಕ ಉಪನ್ಯಾಸ, ಆಧ್ಯಾತ್ಮಿಕ ಶಿಬಿರಗಳು ಹಾಗೂ ಸ್ಥಳೀಯ ನಂಬಿಕೆಗಳ ಸಂರಕ್ಷಣೆಗೆ ನೀಡುವ ನೆರವಿಗೆ ಯಾವುದೇ ತಡೆ ಇರುವುದಿಲ್ಲ ಎಂದು ಮಸೂದೆ ಸ್ಪಷ್ಟಪಡಿಸುತ್ತದೆ.
ಗ್ರೀನ್ಪೀಸ್ ಇಂಡಿಯಾ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ, ಲಾಯರ್ಸ್ ಕಲೆಕ್ಟಿವ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ರಾಜೀವ್ ಗಾಂಧಿ ಫೌಂಡೇಶನ್ ಸೇರಿದಂತೆ ಕೆಲವು ಸಂಸ್ಥೆಗಳ ವಿರುದ್ಧ ಈ ಹಿಂದೆ ಎಫ್ಸಿಆರ್ಎ ಉಲ್ಲಂಘನೆ ಅಥವಾ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆರೋಪಗಳಡಿ ತನಿಖೆ ಮತ್ತು ಕ್ರಮ ಜರುಗಿರುವುದನ್ನು ಉದಾಹರಣೆಯಾಗಿ ಪರಿಗಣಿಸಲಾಗಿದೆ.
ಇಂತಹ ಪ್ರಕರಣಗಳು ವಿದೇಶಿ ಅನುದಾನಗಳ ಬಳಕೆಯ ಮೇಲೆ ಇನ್ನಷ್ಟು ಪರಿಣಾಮಕಾರಿ ನಿಯಂತ್ರಣ ಅಗತ್ಯವಿದೆ ಎಂಬುದನ್ನು ತೋರಿಸುತ್ತವೆ. ಮತ್ತೊಂದೆಡೆ, ಕೆಲವು ಸ್ವಯಂಸೇವಾ ಸಂಸ್ಥೆಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಈ ತಿದ್ದುಪಡಿಗಳು ಕಾನೂನು ಬದ್ಧವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗದಂತೆ ಮಸೂದೆ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ರಾಷ್ಟ್ರೀಯ ಹಿತಾಸಕ್ತಿಯೇ ಪ್ರಮುಖ ಉದ್ದೇಶ
FCRA ತಿದ್ದುಪಡಿ ಮಸೂದೆ–2026ರ ಮೂಲ ತತ್ವವೆಂದರೆ, ಭಾರತಕ್ಕೆ ಬರುವ ಪ್ರತಿಯೊಂದು ವಿದೇಶಿ ನಿಧಿಯೂ ಪಾರದರ್ಶಕವಾಗಿರಬೇಕು, ಜವಾಬ್ದಾರಿಯುತವಾಗಿ ಬಳಸಲ್ಪಡಬೇಕು ಮತ್ತು ಭಾರತೀಯ ಕಾನೂನುಗಳಿಗೆ ಸಂಪೂರ್ಣ ಅನುಗುಣವಾಗಿರಬೇಕು ಎಂಬುದು. ಮಸೂದೆಯ ಬೆಂಬಲಿಗರ ಅಭಿಪ್ರಾಯದಲ್ಲಿ, ಪ್ರತಿಯೊಂದು ಸಾರ್ವಭೌಮ ರಾಷ್ಟ್ರದಂತೆ ಭಾರತಕ್ಕೂ ತನ್ನ ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಆದ್ಯತೆಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ರಕ್ಷಿಸುವ ಸಲುವಾಗಿ ವಿದೇಶಿ ಪ್ರಭಾವವನ್ನು ನಿಯಂತ್ರಿಸುವ ಹಕ್ಕು ಇದೆ.
ಈ ಮಸೂದೆಯ ಮೂಲ ಉದ್ದೇಶ ಯಾವುದೇ ಸಂಸ್ಥೆಯ ಚಟುವಟಿಕೆಗಳನ್ನು ನಿರ್ಬಂಧಿಸುವುದಲ್ಲ; ಬದಲಾಗಿ ಭಾರತಕ್ಕೆ ಬರುವ ಪ್ರತಿಯೊಂದು ವಿದೇಶಿ ರೂಪಾಯಿಯೂ ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಬಳಕೆಯಾಗುವುದನ್ನು ಖಚಿತಪಡಿಸುವುದಾಗಿದೆ.
ಈ ಹಿನ್ನೆಲೆಯಲ್ಲಿ ಎಫ್ಸಿಆರ್ಎ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಮಹತ್ವದ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದ್ದು, ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕ ಸ್ವಾತಂತ್ರ್ಯದ ನಡುವಿನ ಸಮತೋಲನವೇ ಮುಂದಿನ ಚರ್ಚೆಗಳ ಕೇಂದ್ರಬಿಂದುವಾಗುವ ನಿರೀಕ್ಷೆಯಿದೆ.
