ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹರಿದಾಸ ಸಾಹಿತ್ಯ (Haridasa Sahitya) ಕ್ಷೇತ್ರದಲ್ಲಿ ಕಳೆದ ಸುಮಾರು 35 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಹರಿದಾಸ ಸಾಹಿತ್ಯಾಸಕ್ತ ಹಾಗೂ ವಿದ್ವಾಂಸ ಜಿ.ವಿ. ಶ್ರೀನಿವಾಸಮೂರ್ತಿ ಅವರಿಗೆ 2026ನೇ ಸಾಲಿನ ‘ಹರಿದಾಸ ಸಾಹಿತ್ಯ ಸೇವಾ ಧುರಂಧರ’ ಬೆಂಗಳೂರಿನಲ್ಲಿ (Bengaluru) ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣ ದಾಸ್ ಅವರ ಸ್ಮರಣಾರ್ಥ ಸೋಸಲೆ ಪ್ರಕಾಶ್ ಮತ್ತು ಕುಟುಂಬದವರು ಸ್ಥಾಪಿಸಿರುವ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಹಲವು ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ನಾಡಿನ ಹೆಸರಾಂತ ಗಾಯಕರು, ಕಲಾವಿದರು, ರಾಜಕೀಯ ಧುರೀಣರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಪ್ರಶಸ್ತಿಯನ್ನು ಈ ಹಿಂದೆ ನೀಡಲಾಗಿದೆ. ಈ ಸಾಲಿನ ಪ್ರಶಸ್ತಿಗೆ ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಜಿ.ವಿ. ಶ್ರೀನಿವಾಸಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶೇಷವೆಂದರೆ, ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಮಹತ್ವ ತಂದಿದೆ.
‘ಮಧ್ವನಾಮ ಮೂರ್ತಿ’ ಎಂದೇ ಜನಪ್ರಿಯ
ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುವ ‘ಮಧ್ವನಾಮ’ ಧ್ವನಿಸುರುಳಿಯ ಮೂಲಕ ಜಿ.ವಿ. ಶ್ರೀನಿವಾಸಮೂರ್ತಿ ಅವರು ‘ಮಧ್ವನಾಮ ಮೂರ್ತಿ’ ಎಂದೇ ಜನಪ್ರಿಯರಾಗಿದ್ದಾರೆ. ‘ದೇವರು ಕೊಟ್ಟಾನು’, ‘ಗಜೇಂದ್ರ ಮೋಕ್ಷ’ ಸೇರಿದಂತೆ 75ಕ್ಕೂ ಅಧಿಕ ಧ್ವನಿಸುರುಳಿಗಳನ್ನು ಹೊರತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದು, ಇವು ಇಂದಿಗೂ ಜನಪ್ರಿಯವಾಗಿವೆ.
ಹರಿದಾಸರ ಜೀವನ, ಸಂದೇಶ ಹಾಗೂ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅವರು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
Also read>> ಸೆ.4ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ, ಪ್ರಾಣಿವಧೆ ನಿಷೇಧ
Haridasa Sahitya : ‘ಕರ್ನಾಟಕದ ಹರಿದಾಸರು’ ಪ್ರವಚನ ಮಾಲಿಕೆ
‘ಕರ್ನಾಟಕದ ಹರಿದಾಸರು’ ಎಂಬ ಶೀರ್ಷಿಕೆಯಡಿ ಸುಮಾರು 45 ಹರಿದಾಸರ ಜೀವನ ಚರಿತ್ರೆ ಹಾಗೂ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಪ್ರವಚನಗಳನ್ನು ಆಯೋಜಿಸಿರುವುದು ಅವರ ಪ್ರಮುಖ ಸೇವೆಗಳಲ್ಲಿ ಒಂದಾಗಿದೆ.
ಹರಿದಾಸರ ಕುರಿತು ಪಿಎಚ್.ಡಿ. ಸಂಶೋಧನೆ ನಡೆಸಿರುವವರು ಹಾಗೂ ನಾಡಿನ ಹಿರಿಯ ವಿದ್ವಾಂಸರನ್ನು ಒಳಗೊಂಡು ಈ ಪ್ರವಚನಗಳನ್ನು ರೂಪಿಸಿರುವುದು ವಿಶೇಷವಾಗಿದೆ. ಇದರ ಮೂಲಕ ಹರಿದಾಸರ ಬದುಕು, ಸಾಹಿತ್ಯ ಮತ್ತು ಸಂದೇಶಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನವನ್ನು ಅವರು ನಡೆಸಿದ್ದಾರೆ.
‘ಹರಿದಾಸ ಹಬ್ಬ’ಕ್ಕೆ ಚಾಲನೆ
2001ರಲ್ಲಿ ಸ್ನೇಹಿತರೊಂದಿಗೆ ಸೇರಿ ‘ಹರಿದಾಸ ಸಂಪದ ಟ್ರಸ್ಟ್’ ಸಂಸ್ಥೆಯನ್ನು ಸ್ಥಾಪಿಸುವಲ್ಲಿಯೂ ಜಿ.ವಿ. ಶ್ರೀನಿವಾಸಮೂರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಂಸ್ಥೆಯ ಮೂಲಕ ನಗರದ ಪ್ರತಿಷ್ಠಿತ ಗಾಯನ ಸಮಾಜದಲ್ಲಿ ‘ಹರಿದಾಸ ಹಬ್ಬ’ ಎಂಬ ಶೀರ್ಷಿಕೆಯಡಿ ಏಳು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ನಾಡಿನ ಹಲವು ಪ್ರಸಿದ್ಧ ಗಾಯಕ-ಗಾಯಕಿಯರೊಂದಿಗೆ ಯುವ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಿ ಹರಿದಾಸರ ಪದಗಳನ್ನು ಹಾಡುವ ಹಾಗೂ ಪ್ರವಚನಗಳನ್ನು ನಡೆಸುವ ಅವಕಾಶ ನೀಡಲಾಗಿತ್ತು. ಈ ಕಾರ್ಯಕ್ರಮವು ಇಂದಿಗೂ ಜನಪ್ರಿಯವಾಗಿರುವುದಾಗಿ ತಿಳಿಸಲಾಗಿದೆ.
ಹರಿದಾಸರ ಸಂದೇಶವನ್ನು ವಿಭಿನ್ನ ರೀತಿಯಲ್ಲಿ ಪ್ರಚಾರ
ಹರಿದಾಸರ ಸಂದೇಶಗಳನ್ನು ಯುವಜನರಿಗೆ ತಲುಪಿಸುವ ಉದ್ದೇಶದಿಂದ ಅವರ ಸಂದೇಶಗಳನ್ನು ಒಳಗೊಂಡ ಟಿ-ಶರ್ಟ್ಗಳನ್ನು ವಿನ್ಯಾಸಗೊಳಿಸಿ ಜನಪ್ರಿಯಗೊಳಿಸಿರುವುದು ಜಿ.ವಿ. ಶ್ರೀನಿವಾಸಮೂರ್ತಿ ಅವರ ಮತ್ತೊಂದು ವಿಶಿಷ್ಟ ಪ್ರಯತ್ನವಾಗಿದೆ.
ಅಲ್ಲದೇ ಹರಿದಾಸರ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ಗಳನ್ನು ಸಿದ್ಧಪಡಿಸಿ ದೇಶ-ವಿದೇಶಗಳಲ್ಲಿರುವ ಹರಿದಾಸರ ಅಭಿಮಾನಿಗಳು, ಬಂಧುಗಳು, ಮನೆ-ಮಠಗಳಿಗೆ ತಲುಪಿಸುವ ಕಾರ್ಯವನ್ನೂ ನಡೆಸಲಾಗಿದೆ.
ಹಲವು ಸಂಸ್ಥೆಗಳ ಮೂಲಕ ನಿರಂತರ ಸೇವೆ
ಹರಿದಾಸ ಸಂಪದ ಟ್ರಸ್ಟ್, ಹರಿದಾಸ ಸೇವಾ ಸಂಘ, ದಾಸವಾಣಿ ಕರ್ನಾಟಕ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ವಿ. ಶ್ರೀನಿವಾಸಮೂರ್ತಿ ಅವರು ಕಳೆದ 35 ವರ್ಷಗಳಿಂದ ಹರಿದಾಸ ಸಾಹಿತ್ಯದ ಸಂರಕ್ಷಣೆ, ಪ್ರಸಾರ ಹಾಗೂ ಜನಪ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹರಿದಾಸ ಸಾಹಿತ್ಯವನ್ನು ಕೇವಲ ಪಾರಂಪರಿಕ ವಲಯಕ್ಕೆ ಸೀಮಿತಗೊಳಿಸದೆ, ಸಂಗೀತ, ಪ್ರವಚನ, ಧ್ವನಿಸುರುಳಿ, ಕಾರ್ಯಕ್ರಮಗಳು, ದೃಶ್ಯ ಮಾಧ್ಯಮ ಹಾಗೂ ವಿಭಿನ್ನ ಸೃಜನಾತ್ಮಕ ಪ್ರಯತ್ನಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ದೀರ್ಘಕಾಲದ ಸಾಹಿತ್ಯ ಸೇವೆಯನ್ನು ಗುರುತಿಸಿ ‘ಹರಿದಾಸ ಸಾಹಿತ್ಯ ಸೇವಾ ಧುರಂಧರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಜಿ.ವಿ. ಶ್ರೀನಿವಾಸಮೂರ್ತಿ ಅವರ ಸೇವೆಯನ್ನು ಹರಿದಾಸ ಸಾಹಿತ್ಯ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








