ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
2020ರಲ್ಲಿ ಅನಿರೀಕ್ಷಿತವಾಗಿ ಎದುರಾದ ’ಕೊರೋನಾ’ ಮಹಾಮಾರಿಯ ಪ್ರಹಾರದಿಂದ ಬಹುತೇಕ ಎಲ್ಲಾ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ಇದರ ಪರಿಣಾಮ ಕನ್ನಡ ಚಿತ್ರೋದ್ಯಮಕ್ಕೂ ತಟ್ಟಿತ್ತು.
ಬಿಡುಗಡೆ ಸಿದ್ದವಾಗಿದ್ದ ಅನೇಕ ಚಿತ್ರಗಳು ಮುಂದೂಡಲ್ಪಟ್ಟವು, ಆರಂಭಗೊಂಡ ಎಷ್ಟೋ ಚಿತ್ರಗಳ ಚಿತ್ರೀಕರಣ ಸ್ಥಗಿತಗೊಳ್ಳುವಂತಾಯ್ತು. ಲಾಕ್ಡೌನ್ ತೆರವಿನ ನಂತರ ಚಿತ್ರೀಕರಣಕ್ಕೆ ಚಾಲನೆ ದೊರೆತಿರುವುದರಿಂದ ಕನ್ನಡ ಚಿತ್ರೋದ್ಯಮ ಇದೀಗ ಚೇತರಿಸಿಕೊಳ್ಳುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದ ನಡುವೆಯೂ ಅನುಭವಿ ಯುವಕರ ಬಳಗವೊಂದು ಚೊಚ್ಚಲವಾಗಿ ಸಿನಿಮಾ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದು ಪ್ರಶಂಸಾರ್ಹ ಸಂಗತಿ.
ಈ ಹಿಂದೆ ಕನ್ನಡ -ತುಳು ಚಿತ್ರರಂಗದಲ್ಲಿ ಕೆಲಸ ಮಾಡಿರಿರುವ ಅನುಭವಿ ತಂತ್ರಜ್ಞರ ಬಳಗ ನಿರ್ಮಾಣ ಮಾಡಿರುವ ಚಿತ್ರ ಸೀತಾರಾಮ್ ಬಿನೋಯ್: ಕೇಸ್ ನಂ. 18 ಸಿನಿಮಾದ ಮುಖ್ಯ ಪಾತ್ರದಾರಿಯಾಗಿ ವಿಜಯ ರಾಘವೇಂದ್ರ ಬಣ್ಣ ಹಚ್ಚಿದ್ದಾರೆ, ಇದು ವಿಜಯ ರಾಘವೇಂದ್ರರವರ 50ನೇ ಚಿತ್ರ ಅನ್ನುವುದು ವಿಶೇಷ ಸಂಗತಿ.
ತಮ್ಮ ಪ್ರತೀ ಚಿತ್ರದಲ್ಲೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ವಿಜಯ ರಾಘವೇಂದ್ರರವರು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು ಚಿತ್ರದ ಪೋಸ್ಟರ್ ಮೂಲಕ ಗೋಚರಿಸುತ್ತಿದೆ, ವಿಜಯದಶಮಿ ಹಬ್ಬದ ದಿನದಂದು ಈ ಚಿತ್ರದ ಪೋಸ್ಟರ್/ಫಸ್ಟ್ ಲುಕ್ ಬಿಡುಗಡೆ ಮಾಡುವುದರ ಮೂಲಕ ಡಾ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ಶ್ರೀಮುರುಳಿ, ನಟಿ ಭಾವನ, ಪ್ರಜ್ವಲ್ ದೇವರಾಜ್ ಮುಂತಾದ ಸಿನಿತಾರೆಯರು ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಹಿಂದೆ ತುಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ’ದೇವಿ ಪ್ರಸಾದ್ ಶೆಟ್ಟಿ’ಯವರ ಚೊಚ್ಚಲ ನಿರ್ದೇಶನದ ಕನ್ನಡ ಚಿತ್ರವಾಗಿದ್ದು ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ, ಕನ್ನಡ -ತುಳು ಚಿತ್ರಗಳಲ್ಲಿ ನಟರಾಗಿ -ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ತೀರ್ಥಹಳ್ಳಿ ಮೂಲದ ಸಾತ್ವಿಕ್ ಹೆಬ್ಬಾರ್ ರವರು ’ಸೀತಾರಾಮ್ ಬಿನೋಯ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ, ವಿಜಯ ರಾಘವೇಂದ್ರ ರವರ ಹಿಂದಿನ ಚಿತ್ರ ’ಮಾಲ್ಗುಡಿ ಡೇಸ್’ಗೆ ಸಂಗೀತ ನಿರ್ದೇಶನ ಮಾಡಿದ್ದ ಗಗನ್ ಬಡೇರಿಯಾರವರು ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ಚಿತ್ರಕ್ಕೆ ಭವಾನಿ ಶಂಕರ್ ಕಲಾ ನಿರ್ದೇಶನ ಮಾಡಿದ್ದಾರೆ. ಹಲವು ತಮಿಳು -ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿರುವ ಹೇಮಂತ್ ಈ ಚಿತ್ರಕ್ಕೆ ಕ್ಯಾಮರಾ ಕಣ್ಣಾಗಿದ್ದಾರೆ, ಕನ್ನಡದ ಮಾಲ್ಗುಡಿ ಡೇಸ್, ತಮಿಳು -ತೆಲುಗು ಭಾಷೆಗಳಲ್ಲಿ ತೆರೆಕಂಡ ’ಯೂ ಟರ್ನ್’ ಚಿತ್ರಗಳಲ್ಲಿ ನಟರಾಗಿ -ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶಿವಮೊಗ್ಗದ ನುರಿತ ಕಲಾವಿದರೂ, ತಂತ್ರಜ್ಞರೂ ಅದ ಶಶಾಂಕ್ ನಾರಾಯಣ ಈ ಚಿತ್ರಕ್ಕೆ ಪೂರ್ಣಪ್ರಮಾಣದ ಸಂಭಾಷಣೆ ರಚಿಸುವುದರ ಜೊತೆಗೆ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದು ಶಿವಮೊಗ್ಗದ ಶ್ರೀವತ್ಸ ಪಿಎಂ ಇವರೊಂದಿಗೆ ಸಂಕಲನದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಚಿತ್ರದ ಮತ್ತೊಂದು ವಿಶೇಷವೆಂದರೆ ಮುಖ್ಯಪಾತ್ರದಾರಿ ವಿಜಯ ರಾಘವೇಂದ್ರರವರನ್ನು ಹೊರತುಪಡಿಸಿ ಬಹುತೇಕ ಶಿವಮೊಗ್ಗದ ರಂಗಭೂಮಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಶಿವಮೊಗ್ಗ ರಂಗಭೂಮಿಯ ಚಿರಪರಿಚಿತ ಕಲಾವಿದರಾದ ಶ್ರೀಹರ್ಷ ಗೋಭಟ್ ನೀನಾಸಂ, ನಾಗರಾಜ್ ಶಿವಮೊಗ್ಗ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಇನ್ನುಳಿದಂತೆ ಚೇತನ್ ರಾಯನಹಳ್ಳಿ, ಮಂಜು ಭಗತ್ ಇನ್ನೂ ಅನೇಕ ಶಿವಮೊಗ್ಗ- ಮಂಗಳೂರಿನ ಸ್ಥಳೀಯ ಕಲಾವಿದರು ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.
ಒಂದು ತಿಂಗಳ ಅವಧಿಯೊಳಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ತೀರ್ಥಹಳ್ಳಿ ಹಾಗೂ ಆರ್ಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆವೇರಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದ್ದು ಇನ್ನುಳಿದಂತೆ ಚಿತ್ರದ ಬಿಡುಗಡೆ ಹಾಗೂ ಮುಂದಿನ ಬೆಳವಣಿಗೆಗಳ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಚಿತ್ರತಂಡ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post