ಕಲ್ಪ ಮೀಡಿಯಾ ಹೌಸ್ | ಉತ್ತರ ಕರ್ನಾಟಕ / ಕೊಪ್ಪಳ |
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮುಹೋತ್ಸವ ಭಾನುವಾರ ಅದ್ಧೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.
ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಜಾತ್ರೆ ನಡೆಯದೆ, ನಿರಾಶಾದಾಯಕರಾಗಿದ್ದ ಉತ್ತರ ಕರ್ನಾಟಕದ ಭಕ್ತರು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆದ ಜಾತ್ರೆಯಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಸಂಭ್ರಮಿಸಿದರು. ಅಭಿನವ ಗವಿಸಿದ್ದೇಶ್ವರ ಶ್ರೀಗಳು ಜಾತ್ರೆಗೆ ಚಾಲನೆ ನೀಡಿದರು.
ಭಾನುವಾರ ಬೆಳಿಗ್ಗೆಯಿಂದಲೇ ರಾಜ್ಯದ ನಾನಾ ಜಿಲ್ಲೆಗಳಿಂದ ಗವಿಸಿದ್ದೇಶ್ವರನ ಜಾತ್ರೆಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಧ್ಯಾಹ್ನದ ವೇಳೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಮಠದ ಆವರಣದಲ್ಲಿ ಭಕ್ತರು ಗವಿಸಿದ್ದೇಶ್ವರನ ಪಾದಸ್ಪರ್ಶ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಭಕ್ತದ ಸಾಗರದ ಜಯಘೋಷ ಮುಗಿಲು ಮುಟ್ಟಿತ್ತು. ಸರಿಯಾಗಿ ಸಂಜೆ 5:30ಕ್ಕೆ ಆಧ್ಯಾತ್ಮಿಕ ಚಿಂತಕ ಸದ್ಗುರು ಜಗ್ಗಿ ವಾಸುದೇವ ಧ್ವಜಾರೋಹಣ ಮಾಡುವ ಮೂಲಕ ರಥೋತ್ಸವವಕ್ಕೆ ಚಾಲನೆ ನೀಡಿದರು.
ಮಹಾರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಲಿಂಗೈಕರಾದ ಸಿದ್ದೇಶ್ವರ ಶ್ರೀಗಳಿಗೆ ಭಕ್ತಿಯ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ಸಿದ್ದೇಶ್ವರ ಅಪ್ಪಾಜಿ ಅವರು ಸಮಾಜದ ಒಳಿತಿಗಾಗಿ ಆರದ ದೀಪವನ್ನು ಹಚ್ಚಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಅವರ ಸಲುವಾಗಿ ಒಂದು ನಿಮಿಷ ಮೌನಾಚರಣೆ ಮಾಡುವಂತೆ ಕರೆ ನೀಡಿದರು. ಬಳಿಕ ಇಡೀ ಜನಸಾಗರವೇ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಿದರು. ರಥೋತ್ಸವದಲ್ಲಿ ಸುಮಾರು ಐದಾರು ಲಕ್ಷ ಜನ ಭಾಗಿಯಾಗಿದ್ದರು.
ಭಕ್ತ ಸಮೂಹಕ್ಕೆ ಉತ್ತರ ಕರ್ನಾಟಕದ ಶೈಲಿಯಲ್ಲೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯ ರಥೋತ್ಸವದ ದಿನ 15 ಲಕ್ಷ ಜೋಳದ ರೊಟ್ಟಿ, 7 ಲಕ್ಷ ಶೇಂಗಾ ಹೋಳಿಗೆ, 275 ಕ್ವಿಂಟಾಲ್ ಮಾದಲಿ, ಜೊತೆಗೆ ಎರಡೂ ರೀತಿ ಫಲ್ಯ ಹಾಗೂ ಅನ್ನ, ಸಾರು ಮಾಡಲಾಗಿತ್ತು.
ಈ ಬಾರಿ ಜಾತ್ರೆಗೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ ರಥೋತ್ಸವಕ್ಕೆ ಚಾಲನೆ ನೀಡಿ, ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು. ತಮ್ಮದೇ ಆದ ಶೈಲಿಯಲ್ಲಿ ಹೆಚ್ಚೆಯನ್ನು ಹಾಕುತ್ತಾ ಭಕ್ತರ ಮನ ಸೆಳೆದರು.
ಗುಡದಯ್ಯ ಗವಿಸಿದ್ದನಾದದ್ದು:
ಕಾಲ ಬದಲಾಗಲಿ. ನಂಬಿಕೆ, ಭಕ್ತಿ ಬದಲಾಗಿಲ್ಲ. ಎಲ್ಲವೂ ಆಧುನಿಕ ವ್ಯವಸ್ಥೆಯ ತೆಕ್ಕೆಯೊಳಗೆ ಸೇರಿಕೊಳ್ಳಲು ಹವಣಿಸುತ್ತಿವೆ. ಆದರೆ, ಪರಂಪರೆ, ಸಂಪ್ರದಾಯ ತತ್ವಗಳು ಅಲ್ಲ. ಅವು ಸದಾ ಸ್ಥಿರ. ಮುಂದೆಯೂ ಹೀಗೇ ಇರುತ್ತವೆ ಎನ್ನುತ್ತಾರೆ ಭಕ್ತರು.
ಗವಿಸಿದ್ದನ ಗದ್ದುಗೆಯಿಂದ…
ಶಾಲಿವಾಹನ ಶಕ 1008 ರಲ್ಲಿ ರುದ್ರಮುನಿ ಶಿವಯೋಗಿ ಅವರಿಂದ ಸಂಸ್ಥಾನ ಗವಿಮಠ ಸ್ಥಾಪನೆಯಾಯಿತು. ಇದುವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ. 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕಾಯಕ ತತ್ವ, ಪೂಜೆ, ಅನುಷ್ಠಾನ ಇಂಥ ಸಾಧನೆಗಳಿಂದ ಪ್ರಸಿದ್ಧರಾದರು. ಲಿಂಗಕ್ಕೆ ಬೆಳಗಿದ ಬೆಳಕಿನಲ್ಲೇ ಲೀನವಾದರು. ಹೀಗೆ ಸಜೀವ ಸಮಾಧಿ ಹೊಂದಿದ ಗವಿಸಿದ್ದೇಶ್ವರರ ಗದ್ದುಗೆ ಮಠದ ಹೃದಯ. ಕೊಪ್ಪಳ ಸಮೀಪದ ಮಂಗಳಾಪುರ ಗ್ರಾಮ ಗವಿಸಿದ್ದೇಶ್ವರರ ಹುಟ್ಟೂರು. ಅಲ್ಲಿನ ಹಿರೇಮಠದ ಗುರುಲಿಂಗಮ್ಮ– ಮಹಾದೇವಯ್ಯ ದಂಪತಿಯ ಪುತ್ರ. ಗುಡದಯ್ಯ ಮೂಲ ಹೆಸರು. ಕೊಪ್ಪಳ ನಗರದ ಹೊರವಲಯದಲ್ಲಿರುವ ಮಳೆಮಲ್ಲೇಶ್ವರ (ಮಳಲಮಲ್ಲೇಶ್ವರ) ಬೆಟ್ಟದಲ್ಲಿ ಗುಡದಯ್ಯ ಸದಾ ಧ್ಯಾನಾಸಕ್ತರಾಗಿರುತ್ತಿದ್ದರು.
ಅದೇ ಗುಡ್ಡದಲ್ಲಿ ಒಮ್ಮೆ ಮಾಲೀಗೌಡರ ಹಸು ಮರಣ ಹೊಂದಿತು. ಗೌಡರ ದುಃಖ ಅರಿತ ಗುಡದಯ್ಯ ತಮ್ಮ ಪವಾಡ ಶಕ್ತಿಯಿಂದ ಹಸುವನ್ನು ಬದುಕಿಸಿದರಂತೆ. ಈ ಪವಾಡವನ್ನು ಅರಿತ ಮಾಲಿಗೌಡರು ಗುಡದಯ್ಯನನ್ನು ತಮ್ಮ ಮನೆಗೆ ಕರೆತಂದರು. ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಗುಡದಯ್ಯ ಸ್ಪಂದಿಸುತ್ತಿದ್ದದ್ದು, ಪವಾಡ ತೋರುತ್ತಿದ್ದದ್ದು ನಡೆಯಿತು. ಮಾಲಿಗೌಡರ ಮನೆಯೇ ಮಠವಾಯಿತು. ಮುಂದೆ ಮಾಲಿಗೌಡರು ಗುಡದಯ್ಯರನ್ನು ಗವಿಮಠದ ಹತ್ತನೇ ಪೀಠಾಧಿಪತಿ ಚೆನ್ನಬಸವ ಸ್ವಾಮೀಜಿ ಅವರಿಗೆ ತಂದು ಒಪ್ಪಿಸಿದರು. ಗೌಡರ ಮನೆ ತೊರೆದು ಬರುವಾಗ ಗುಡದಯ್ಯ ತನ್ನ ಜಡೆಯನ್ನು ಮಾಲಿಗೌಡರ ಪತ್ನಿಗೆ ಅರ್ಪಿಸಿದರು. ಮುಂದೆ ಆ ಮನೆತನಕ್ಕೆ ಜಡೇಗೌಡರ ಮನೆತನ ಎಂಬ ಹೆಸರು ಬಂದಿತು.
ಮುಂದೆ ಚೆನ್ನಬಸವ ಸ್ವಾಮೀಜಿಯಿಂದ ಸಂಸ್ಕಾರ ಪಡೆದು ಗವಿಸಿದ್ದೇಶ್ವರ ಸ್ವಾಮೀಜಿ ಎಂದು ನಾಮಕರಣಗೊಂಡು ಮಠದ ಅಧಿಕಾರ ಪಡೆದರು. ಚೆನ್ನಬಸವ ಸ್ವಾಮೀಜಿ ಎಲ್ಲ ಜವಾಬ್ದಾರಿಯನ್ನು ಗವಿಸಿದ್ದೇಶ್ವರರಿಗೆ ಒಪ್ಪಿಸಿ ತಾವು ಲಿಂಗದೊಳಗೆ ಬೆರೆಯುವುದಾಗಿ ಹೇಳಿ ತಮ್ಮ ಸಮಾಧಿ ನಿರ.್ಮಿಸಲು ತೊಡಗಿದರು. ಆದರೆ, ಗುರುವನ್ನು ಅಗಲಲು ಒಪ್ಪದ ಗವಿಸಿದ್ದೇಶ್ವರ ಗುರುಗಳಿಗಾಗಿ ನಿರ್ಮಾಣಗೊಳ್ಳುತ್ತಿದ್ದ ಸಮಾಧಿಯ ಮೇಲೆಯೇ ಜಪ ಮಾಡುತ್ತಲೇ ಕ್ರಿ.ಶ. 1816ರಲ್ಲಿ ಲಿಂಗದೊಳಗೆ ಲೀನವಾದರು. ಚೆನ್ನಬಸವ ಸ್ವಾಮೀಜಿಯೇ ಗವಿಸಿದ್ದೇಶ್ವರರ ಸಮಾಧಿ ಕಾರ್ಯ ಮಾಡಬೇಕಾಯಿತು. ಗವಿಸಿದ್ದೇಶ್ವರರು ಕಾಲವಾದ, ಗುರುಗಳಿಂದಲೇ ಗೌರವಿಸಲ್ಪಟ್ಟ ದಿನವನ್ನೇ ಗವಿಸಿದ್ದೇಶ್ವರ ಜಾತ್ರೆಯಾಗಿ ಆಚರಿಸಲಾಗುತ್ತಿದೆ.
ಮುಂದೊಂದು ದಿನ ನಂಬಿಕೆಯ ಜತೆ ಸ್ವಪ್ರಯತ್ನದಿಂದ ಬೆಳೆದು ಮುಂದೆ ಬಂದವರು ದೇವರಿಗೊಂದು ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ.
ಸಂಸ್ಥಾನದ ಶ್ರೀ ಗವಿಮಠದ 16 ನೇ ಪೀಠಾಧಿಪತಿಗಳಾದ ಶ್ರೀ ಮರಿಶಾಂತವೀರ ಶಿವಯೋಗಿಗಳು ತಪೋನಿಷ್ಠರು, ಆಯುರ್ವೇದ ಪಂಡಿತರು ಮತ್ತು ವಾಕ್ ಸಿದ್ಧಿಯನ್ನು ಪಡೆದಂತ ಮಹಾನ ತಪಸ್ವಿಗಳು, ಒರಗಾಲದ ಬವಣೆಯ ಈ ನಾಡ ಜನತೆಯ ಬದುಕನ್ನು ಉದ್ಧರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು 1951 ರಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯನ್ನು ಆರಂಭಿಸಿದರು. 1963 ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸಿ ಶ್ರೀ ಗವಿಮಠದ ಸಮಸ್ತ ಆಸ್ತಿಯನ್ನು ಈ ಸಂಸ್ಥೆಗೆ ಧಾರೆ ಎರೆದು ತಮ್ಮ ಕೊನೆಯ ಕ್ಷಣದ ವರೆಗೂ ಸಮಸ್ತ ಭಕ್ತ ಕೋಟಿಯ ಉದ್ದಾರಕ್ಕಾಗಿ ತಮ್ಮನ್ನು ತಾವು ಶ್ರೀ ಗಂಧದಂತೆ ಸವೆಸಿಕೋಂಡ ಮಹಿಮಾಶೀಲರು ಇವರು.
ಇಂದಿನ 28 ನೇಯ ಪೀಠಾಧೀಶ್ವರರಾದ ಶ್ರೀ ಗವಿಸಿದ್ದೇಶ್ವರ ಶಿವಯೋಗಿಗಳು ವಾಗ್ಮೀಗಳು, ಪರಿಸರ ಪ್ರೇಮಿಗಳು , ವಿದ್ಯಾವಂತರು, ಹಾಗೂ ವಿದ್ಯಾ ಪ್ರೇಮಿಗಳು ಆಗಿದ್ದಾರೆ. ಪೂರ್ವದ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಾ ಅವರ ಸತ್ಯ ಸಂಕಲ್ಪವನ್ನು ನೆರೆವೇರಿಸಿತ್ತಾ ಸಾಗಿದ್ದಾರೆ ಇದು ನಮ್ಮ ಕೊಪ್ಪಳ ನಗರದ ಸಮಸ್ತ ಜನರ ಪುಣ್ಯವಾಗಿದೆ ಮತ್ತು ಭಾಗ್ಯ ವಾಗಿದೆ.
ಜಾತ್ರೆಯ ಪ್ರಮುಖ ಆರ್ಕಷಣೆ:
ಗವಿಸಿದ್ಧೇಶ್ವರರ ಪೂರ್ವನಾಮ ಗುಡದಯ್ಯವೆಂಬುದಾಗಿತ್ತು. ಚನ್ನಬಸವ ಮಹಾಸ್ವಾಮಿಗಳವರು ಸಕಲ ಸಂಸ್ಕಾರವನ್ನು ನೀಡಿ ಶ್ರೀಮಠದ 11ನೇ ಅಧಿಪತಿಯನ್ನಾಗಿ ನೇಮಿಸಿ ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳೆಂದು ಅಭಿದಾನವನ್ನಿತ್ತರು. ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಆಧ್ಯಾತ್ಮದಾಸೋಹಗಳನ್ನು ನಿತ್ಯ ನಿರಂತರ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ಬಂದವರು.
ಸಮಾಜ್ಯೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದ ಪೂಜ್ಯರು, ಗುರುಗಳ ಅಗಲಿಕೆಯ ಅನುತಾಪವನ್ನು ಕೇಳಿ ಗುರುಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳಿಗಾಗಿಯೇ ಸಿದ್ದಪಡಿಸಿದ್ದ ಸಮಾಧಿಯಲ್ಲಿ ತಾವೇ ಧ್ಯಾನಗೈಯುತ್ತಲೇ ಲಿಂಗೈಕ್ಯರಾದರು. ಹೀಗೆ ಸಜೀವ ಸಮಾಧಿಹೊಂದಿದ ಪೂಜ್ಯರನ್ನು ಗುರುಗಳು ಮುಂದಿನ ಕಾರ್ಯವನ್ನು ನೆರವೇರಿಸಿದರು. ಅಂದಿನಿಂದ ಇಂದಿನವರೆಗೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿತ್ಯ ನಿರಂತರವಾಗಿ ಸಾಗಿಬಂದಿದೆ. ಪೂಜ್ಯ ರುದ್ರಮುನಿ ಶಿವಯೋಗಿಗಳವರಿಂದಲೇ ಆರಂಭಗೊಂಡ ಶ್ರೀಮಠದ ಭವ್ಯ ಪರಂಪರೆ ಈಗಾಗಲೇ 18 ಪೀಠಾಧೀಶ್ವರರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ರಥೋತ್ಸವ ಈ ನಾಡಿನ ಬಹುದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಜ.ಮರಿಶಾಂತವೀರ ಹಾಗೂ ಜ.ಶಿವಶಾಂತವೀರ ಶಿವಯೋಗಿಗಳವರ ತಪ ಶಕ್ತಿಯಿಂದ ಶ್ರೀಮಠವು ಬಹುದೊಡ್ಡ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದಿದೆ.
ಕೈಲಾಸ ಮಂಟಪದಲ್ಲಿನ ಕಾರ್ಯಕ್ರಮಗಳು:
ನಾಡಿನ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುತ್ತದೆ. ವೇದಿಕೆಯು ನೈರ್ಸಗಿಕವಾಗಿದ್ದು ವಿಹಂಗಮವಾಗಿದೆ.
ಮದ್ದು ಸುಡುವದು ಇದಕ್ಕೆ ಕಡುಬಿನ ಕಾಳಗ ಎಂದು ಕೂಡಾ ಕರೆಯುತ್ತಾರೆ. ಜಾತ್ರೆಯ ಯಶಸ್ಸಿನ ಸಂಕೇತವಾಗಿ ಆಗಸದಲ್ಲಿ ಚಿತ್ತಾರಗಳನ್ನು ಮೂಡಿಸುವ ಈ ಕಾರ್ಯಕ್ರಮವನ್ನು ವಿಕ್ಷಿಸಲು ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದರೂ, ಪ್ರತಿವರ್ಷ ಗವಿಮಠದ ಕೆರೆಯಲ್ಲಿ ಜರುಗುವ ತೆಪ್ಪೋತ್ಸವ ಅತ್ಯಂತ ಆರ್ಕಷಣೀಯವಾಗಿತ್ತು.
ವರದಿ – ಮುರಳೀದರ್ ನಾಡಿಗೇರ್, ಹೊಸಪೇಟೆ : 9008017727
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post