ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಣ್ಯ ಇಲಾಖೆ ವನವಾಸಿಗಳ ಪಾಲಿಗೆ ತೊಡಕಾಗಿದ್ದು, ಅರಣ್ಯ ಕಾಯಿದೆಗಳು ಯಾವಾಗ ಬದಲಾಗುತ್ತವೆಯೋ ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ತು ಶಾಸಕ ಶಾಂತರಾಂ ಸಿದ್ಧಿ ಬೇಸರ ವ್ಯಕ್ತಪಡಿಸಿದರು.
ನಗರದ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಅನ್ನಪೂರ್ಣೇಶ್ವರಿ ಮುಷ್ಠಿ ಅಕ್ಕಿ ಯೋಜನೆ ಹಾಗೂ ವನವಾಸಿ ಕಲ್ಯಾಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ನೇಹ ಮಿಲನ ಮತ್ತು 17ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅರಣ್ಯ ಕಾನೂನುಗಳನ್ನು ವಿರೋಧಿಸುವುದಿಲ್ಲ. ಆದರೆ ವನವಾಸಿಗಳಿಗೆ ಪೂರಕವಾಗುವಂತೆ ಅವುಗಳಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದರು.
ಅರಣ್ಯ ಕಾಯಿದೆಗಳ ಪರಿಣಾಮವಾಗಿ ವನವಾಸಿಗಳ ಜೀವನ ತೀವ್ರ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ರಸ್ತೆ, ವಿದ್ಯುತ್ ಸಂಪರ್ಕ, ಶಿಕ್ಷಣ ವ್ಯವಸ್ಥೆ ಮುಂತಾದವುಗಳು ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವನವಾಸಿಗಳ ಕಲ್ಯಾಣಕ್ಕಾಗಿ 1952ರಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯನ್ನು ಆರಂಭಿಸಲಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಲಕ್ಷಾಂತರ ವನವಾಸಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
Also read: ಲೋಂಡಾ ಬಳಿ 2 ರೈಲು ಸಂಚಾರ ವ್ಯತ್ಯಯ | ಕಾರಣವೇನು?
ನಗರದ ಕಾರ್ಯಕರ್ತರು ವನವಾಸಿಗಳ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗಿದ್ದು, ಅವರ ಸಮಸ್ಯೆಗಳ ಬಗ್ಗೆ ನಗರವಾಸಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ಆರಂಭವಾದ ಸಂಸ್ಥೆ ನಂತರ ಸಂಸ್ಕಾರ ಜಾಗೃತಿ, ಆರೋಗ್ಯ, ಕ್ರೀಡೆ ಮತ್ತು ಸ್ವಸಹಾಯ ಸಂಘಗಳ ಸ್ಥಾಪನೆ ಮುಂತಾದ ಕಾರ್ಯಗಳಲ್ಲಿ ತೊಡಗಿದೆ ಎಂದರು.
ವನವಾಸಿ ಕಲ್ಯಾಣ ಸಂಸ್ಥೆಯಡಿ ಹಾಸ್ಟೆಲ್ಗಳು ಮತ್ತು ಶಾಲೆಗಳ ಮೂಲಕ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೇಶದಾದ್ಯಂತ 203 ವಿದ್ಯಾರ್ಥಿ ನಿಲಯಗಳು, 10 ದೊಡ್ಡ ಆಸ್ಪತ್ರೆಗಳು ಹಾಗೂ 59 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ವನವಾಸಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿದ್ದು, ಮತಾಂತರವಾದವರು ಸಮುದಾಯದಿಂದ ದೂರವಾಗುವ ಪರಿಸ್ಥಿತಿ ಉಂಟಾಗುತ್ತದೆ. ಮತಾಂತರದಿಂದ ಬಡತನ ನಿವಾರಣೆ ಆಗುವುದಿಲ್ಲ ಎಂಬುದನ್ನು ಜನರು ಅರಿಯಬೇಕು ಎಂದು ಹೇಳಿದರು.
ಮತಾಂತರಗೊಂಡವರನ್ನು ಎಸ್ಸಿ, ಎಸ್ಟಿ ಪಟ್ಟಿಯಿಂದ ಹೊರಗಿಡುವ ಹೋರಾಟದ ಪರಿಣಾಮವಾಗಿ ಕಾನೂನು ಬದಲಾವಣೆಗಳಾಗಿವೆ. ಇದರಿಂದ ಈಗ ಮತಾಂತರಕ್ಕೆ ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ದೇಶದಾದ್ಯಂತ 17 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ 22 ಸಾವಿರಕ್ಕೂ ಹೆಚ್ಚು ಯೋಜನೆಗಳು ನಡೆಯುತ್ತಿದ್ದು, ಅವುಗಳಲ್ಲಿ ಮುಷ್ಠಿ ಅಕ್ಕಿ ಯೋಜನೆಯೂ ಒಂದು ಎಂದು ತಿಳಿಸಿದರು.
ರಾಷ್ಟ್ರ ವಿರೋಧಿ ಶಕ್ತಿಗಳು ವನವಾಸಿಗಳ ಬಳಿ ತಲುಪುವ ಮೊದಲು ನಗರವಾಸಿಗಳು ಅವರ ಬಳಿ ಹೋಗಿ, ಅವರ ಜೀವನವನ್ನು ಅರಿತುಕೊಳ್ಳಬೇಕು. ವನವಾಸಿಗಳ ಜೊತೆ ನೇರ ಸಂಪರ್ಕ ಬೆಳೆಸಿದರೆ ಅವರ ಸಮಸ್ಯೆಗಳು ಸ್ಪಷ್ಟವಾಗಿ ತಿಳಿಯುತ್ತವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಷ್ಠಿ ಅಕ್ಕಿ ಯೋಜನೆಯ ರುಕ್ಮಿಣಿ ನಾಯಕ್, ವನವಾಸಿ ಮಕ್ಕಳಿಗೆ ಆಹಾರ ಕೊರತೆ ಉಂಟಾಗದಂತೆ ಮುಷ್ಠಿ ಅಕ್ಕಿ ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸುಮಾ ಮೂರ್ತಿ ವಹಿಸಿದ್ದರು. ವನವಾಸಿ ಕಲ್ಯಾಣದ ಕ್ಷೇತ್ರೀಯ ನಗರೀಯ ಕಾರ್ಯ ಪ್ರಮುಖ್ ಗೋಪಾಲ್ ಕೇಸರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







