ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಾಣಾಂತಿಕ ಕೊರೋನ ವೈರಸ್ ಸೋಂಕು ಹರಡದಂತೆ ಹಾಗೂ ಸಾರ್ವಜನಿಕ ಜನಜೀವನ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವಲ್ಲಿ ಹಗಲಿರುಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂಧಿಗಳ ಸೇವೆ ಸ್ಮರಣೀಯವಾದುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಹೇಳಿದರು.
ಅವರು ಇಂದು ನಗರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಕೊರೋನ ಸೋಂಕಿನಿಂದ ಆಸ್ಪತ್ರೆಯ ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಶಂಕಿತರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಸಿಬ್ಬಂದಿಗಳ ಅಹವಾಲುಗಳನ್ನು ಆಲಿಸಿದ ಅವರು, ಸೇವಾ ಅವಧಿಯಲಿ ಪಿಪಿಇ ಕಿಟ್ಗಳನ್ನು ಧರಿಸಿ, ಸತತ ಆರು ಘಂಟೆಗಳಿಗೂ ಹೆಚ್ಚು ಕಾಲ ನೀರು, ಆಹಾರ ಸೇವಿಸದೆ ಕಾರ್ಯನಿರ್ವಹಿಸುವುದು ತುಂಬಾ ತ್ರಾಸದಾಯಕವಾದುದಾಗಿದೆ ಎಂದರು.
ಈ ವಿಷಮ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲಾ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಸಿಬ್ಬಂಧಿಗಳಿಗೆ ಪೌಷ್ಠಿಕ ಆಹಾರದ ಅಗತ್ಯವಿದೆ. ಆದ್ದರಿಂದ ಇಲಾಖಾ ನೌಕರರ ಕೋರಿಕೆಯಂತೆ ಬೆಳಿಗ್ಗೆ ಮೊಳಕೆ ಕಾಳು, ಹಣ್ಣುಗಳನ್ನು ಒಳಗೊಂಡಂತೆ ಪೌಷ್ಠಿಕ ಉಪಹಾರ, ಮಧ್ಯಾಹ್ನ ರೊಟ್ಟಿ, ಚಪಾತಿ, ಮುದ್ದೆ ಮತ್ತು ಕಾಳು ಪಲ್ಯಗಳು, ಅನ್ನ ಸಾಂಬಾರ್ ಮೊಸರು ಹಾಗೂ ರಾತ್ರಿ ರೊಟ್ಟಿ, ಚಪಾತಿ, ತರಕಾರಿ ಮತ್ತು ಕಾಳುಪಲ್ಯಗಳು, ಅನ್ನಸಾಂಬಾರ್ ಮೊಸರು ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದಂತೆ ಯಾವುದೆ ಪ್ರಕರಣಗಳು ಕಂಡುಬರದಿರುವುದು ಸಮಾಧಾನದ ಸಂಗತಿಯಾಗಿದೆ. ಆದಾಗ್ಯೂ ಈ ಸೋಂಕಿನ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸದಾ ಅಭಿನಂದನಾರ್ಹರು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ, ಕಾರ್ಯಾಧ್ಯಕ್ಷ ವಿ. ಪ್ರಭಾಕರ್, ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಐ.ಪಿ. ಶಾಂತರಾಜ್, ಶ್ರೀಮತಿ ಶುಶ್ರೂಷಕರ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಮತಿ ಹೆಗಡೆ, ಕೃಷ್ಣಮೂರ್ತಿ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post