ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧುಸೂದನ್ ಆರ್. ನಾಯಕ್ ಅವರ ನೇತೃತ್ವದ ಆಯೋಗವು ಸಲ್ಲಿಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಬಿಡುಗಡೆ ಮಾಡಿ ಅದರಲ್ಲಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2013ರಲ್ಲಿಯೇ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಾಮಾಜಿಕ ಶೈಕ್ಷಣಿಕ ವರದಿಗಾಗಿ ಕಾಂತ್ರಾಜ್ ಆಯೋಗವನ್ನು ರಚಿಸಿ, ಮೊದಲ ಬಜೆಟ್ನಲ್ಲಿಯೇ ಹಣ ಬಿಡುಗಡೆ ಮಾಡಿದ್ದರು. 2018ಕ್ಕೆ ವರದಿ ತಯಾರಾಗಿತ್ತು. ಆಯೋಗದವರು ವರದಿಯನ್ನು ಸಲ್ಲಿಸುವುದಾಗಿ ಹೇಳಿದ್ದರೂ ಕೂಡ ಆಗ ವರದಿಯನ್ನು ಸ್ವೀಕಾರ ಮಾಡಲೇ ಇಲ್ಲ. ಆ ವರದಿ ಹಾಗೆಯೇ ಉಳಿಯಿತು. ಪುನಃ 2018ರಲ್ಲಿ ಕಾಂತರಾಜ್ ಅವರು ನಿವೃತ್ತಿಯಾದ ನಂತರ ಆ ವರದಿಯ ಅಧ್ಯಯನಕ್ಕೆ ಜಯಪ್ರಕಾಶ್ ಹೆಗಡೆಯವರನ್ನು ನೇಮಕ ಮಾಡಲಾಯಿತು. ಆಗ ಸಮಿತಿಯಲ್ಲಿ ಜಿ. ಪರಮೇಶ್ವರ್ ಹಾಗೂ ಮಧು ಬಂಗಾರಪ್ಪ ಕೂಡ ಇದ್ದರು. ಈ ವರದಿಯೂ ಕೂಡ ಸಿದ್ಧವಾಯಿತು. ಆದರೆ ಇದು ಕೂಡ ಬಿಡುಗಡೆಯಾಗದೆ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿ ವರದಿಯನ್ನೇ ತಿರಸ್ಕಾರ ಮಾಡಲಾಯಿತು. ಹಾಗೂ ಮತ್ತೊಮ್ಮೆ ಸಮೀಕ್ಷೆ ಮಾಡಲು ಮಧುಸೂದನ್ ನಾಯಕ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಯಿತು ಎಂದರು.
Also read>> ತುಂಗಾ ನದಿಯಲ್ಲಿ ತೀವ್ರ ಶೋಧ ಕಾರ್ಯ | ಸೇತುವೆ ಮೇಲೆ ಟ್ರಾಫಿಕ್ ಜಾಮ್ | ಕಾರಣವೇನು?
ಯಾವ ಶಕ್ತಿಗಳು ಈ ವರದಿಯನ್ನು ಜಾರಿಮಾಡಲು ಅಡ್ಡಿಪಡಿಸುತ್ತಿವೆ ಎಂದು ಗೊತ್ತಾಗುತ್ತಿಲ್ಲ. ಆದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುವುದನ್ನು ಯಾರೂ ತಡೆಯಲು ಆಗುವುದಿಲ್ಲ. ಜಾತಿ ಗಣತಿಯ ಉದ್ದೇಶವೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸೌಲಭ್ಯವನ್ನು ಕೊಡುವುದೇ ಆಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಳಿದವರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಈಗ ಶಾಶ್ವತ ಆಯೋಗದ ಮುಂದಿರುವ ಈ ಸಮೀಕ್ಷಾ ವರದಿಯನ್ನು ಈಗಾಗಲೇ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ತಮ್ಮ ಸ್ಥಾನವನ್ನು ಬಿಡುವ ಒಂದು ದಿನದ ಮುಂಚೆ ಸ್ವೀಕರಿಸಿದ್ದಾರೆ. ಈಗ ಅದು ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದೆ ಇದೆ. ಅವರಾದರೂ ಮನಸ್ಸು ಮಾಡಿ ಶೀಘ್ರವಾಗಿ ಮಧುಸೂದನ್ ನಾಯಕ್ ಅವರ ವರದಿಯನ್ನು ಕ್ಯಾಬಿನೆಟ್ನಲ್ಲಿ ಚರ್ಚಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟು ಹಿಂದುಳಿದ ವರ್ಗಗಳಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರುಗಳನ್ನು ನೀಡಲಾಗಿದೆ. ಹಾಗೆಯೇ ಈ ಹಿಂದೆ ಜಿಲ್ಲಾ ಮಂತ್ರಿಯಾಗಿದ್ದ ಮಧುಬಂಗಾರಪ್ಪನವರ ಗಮನಕ್ಕೂ ತರಲಾಗಿತ್ತು. ಆದರೆ ಅವರೂ ಸೇರಿದಂತೆ ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯ ತೋರಿದ ಪರಿಣಾಮ ಭವನದ ಕಾಮಗಾರಿ ಈಗಲೂ ಅಪೂರ್ಣ ಹಂತದಲ್ಲೇ ಇದೆ. ಇದು ನಾಡಿನ ಧೀಮಂತ ನಾಯಕ ದೇವರಾಜು ಅರಸು ಅವರ ವ್ಯಕ್ತಿತ್ವಕ್ಕೆ ಮಾಡಿದ ಅವಮಾನವಾಗಿದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಎಸ್.ಬಿ.ಅಶೋಕ್ ಗಾಂಧಿ ಬಸಪ್ಪ, ಡಿ.ನಿರಂಜನ್, ವೆಂಕಟೇಶ್, ಸುಮಿತ್ರಾ ರಂಗನಾಥ್, ರಾಜೇಶ್, ವಿಜಯಕುಮಾರ್, ಬಾಲಣ್ಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

