ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ #Terror Attack ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ #Manjunath Rao ಅವರ ಪಾರ್ಥೀವ ಶರೀರ ಇಂದು ಬೆಳಿಗ್ಗೆ 5.30ರ ಸುಮಾರಿಗೆ ಬೆಂಗಳೂರಿನಿಂದ ಹೊರಟು 10.30ಕ್ಕೆ ಶಿವಮೊಗ್ಗದ ಅವರ ಮನೆಗೆ ತಲುಪಿತು.
ಪ್ರಾರ್ಥಿವ ಶರೀರದೊಂದಿಗೆ ಅವರ ಪುತ್ರ ಅಭಿಜೈ ಮತ್ತು ಪತ್ನಿ ಪಲ್ಲವಿ ಅಂಬ್ಯುಲೆನ್ಸ್ ನಲ್ಲಿ ಜೊತೆಗಿದ್ದರು. ಅಲ್ಲಲ್ಲಿ ಮಂಜುನಾಥ್ ಅವರ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ದೇಶ ಪ್ರೇಮವನ್ನು ಮೆರೆದರು.
ಶಿವಮೊಗ್ಗಕ್ಕೆ ಪಾರ್ಥೀವ ಶರೀರ ಪ್ರವೇಶಿಸುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಅದ್ದೂರಿ ಸ್ವಾಗತ ಮತ್ತು ಬೈಕ್ ರ್ಯಾಲಿ ಮೂಲಕ ಮಂಜುನಾಥ್ ಮನೆಯವರೆಗೆ ಘೋಷಣೆಗಳನ್ನು ಕೂಗುತ್ತ ಕರೆದೊಯ್ಯಲಾಯಿತು. ನಂತರ ಮನೆಯಲ್ಲಿ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಅವರ ತಾಯಿಯವರು ದರ್ಶನ ಮಾಡಿದ ಬಳಿಕ ಕೆಲವು ವಿಧಿ ವಿಧಾನಗಳನ್ನು ಪೂರೈಸಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಇದಕ್ಕೂ ಮೊದಲು ಮನೆಯ ಅಕ್ಕಪಕ್ಕ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಂದೋಬಸ್ತ್ನೊಂದಿಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.
ಭಯೋತ್ಪಾದಕರಿಗೆ ಮೋದಿ ಸರ್ಕಾರ ತಕ್ಕ ಪಾಠ ಕಲಿಸಲಿ
ತನ್ನ ಮಗ ದ್ವಿತೀಯ ಪಿಯುಸಿಯಲ್ಲಿ 97% ಅಂಕಪಡೆದಿದ್ದು, ಆ ಖುಷಿಯಿಂದ ಪತಿ ಮತ್ತು ಮಗನೊಂದಿಗೆ ನಾವು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದೇವು. ಈ ಘಟನೆ ನಿರೀಕ್ಷಿಸಿರಲಿಲ್ಲ. ಘಟನೆಯ ಬಳಿಕ ನನಗೆ ಆಘಾತವಾಯಿತು. ಅಲ್ಲಿನ ಸ್ಥಳಿಯರು ನನಗೆ ಸಹಕರಿಸಿದರು. ಮಗನನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋದರು. ನನಗೂ ಕೂಡ ಧೈರ್ಯ ತುಂಬುತ್ತ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಅವರು ಮುಸ್ಲಿಂರಾಗಿದ್ದರು. ಅವರಿಗೂ ಭಯೋತ್ಪಾದಕರು ಬೆದರಿಕೆ ಒಡ್ಡಿದ್ದರು. ಆದರೆ ಅವರು ಕಾಬಿಲ್ ಬಿಸ್ಮಿಲ್ಲಾ ಎಂದು ಹೇಳುತ್ತಾ ಅವರೊಂದಿಗೆ ಮಾತನಾಡಿ, ವಿನಂತಿ ಮಾಡಿದರು. ಅಲ್ಲಿ ಸ್ವಲ್ಪಮಟ್ಟಿಗೆ ಹಿಂದೂ ವಿರೋಧಿ ವಾತಾವರಣವಿದೆ. ಆದರೆ ನಮಗೆ ಅಲ್ಲಿನ ಸ್ಥಳೀಯ ಮುಸ್ಲಿಂರೇ ಸಹಾಯ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ, ಇನ್ನೂ ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು. ಆ ರೀತಿಯ ತಕ್ಕ ಪಾಠವನ್ನು ಭಯೋತ್ಪಾದಕರಿಗೆ ಮೋದಿ ಸರ್ಕಾರ ಕೈಗೊಳ್ಳಲಿ.
ಪಲ್ಲವಿ, ಮೃತ ಮಂಜುನಾಥ್ ಪತ್ನಿ
ನಗರದ ಸಹಸ್ರಾರು ಜನರು ಪಾರ್ಥಿವಶರೀರದ ದರ್ಶನಕ್ಕೆ ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಗಣ್ಯಾತಿಗಣ್ಯರು ಹಾಗೂ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಧನಂಜಯಸರ್ಜಿ, ಬಲ್ಕೀಶ್ ಭಾನು ಹಾಗೂ ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮ್ಯಾಮ್ಕೋಸ್ ಅಧ್ಯಕ್ಷರಾದ ಮಹೇಶ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರು ಮತ್ತು ಸದಸ್ಯರು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಗುರುದತ್ಹೆಗಡೆ, ಪೂರ್ವವಲಯ ಐಜಿಪಿ ರವಿಕಾಂತೇಗೌಡ, ಎಸ್.ಪಿ.ಮಿಥುನ್ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಕಾರ್ಯಪ್ಪ, ಅನಿಲ್ಕುಮಾರ್, ಉಪವಿಭಾಗಾಧಿಕಾರಿಗಳು ತಹಶೀಲ್ದಾರ್, ಆರ್ಎಸ್ಎಸ್ ಪ್ರಮುಖರಾದ ಪಟ್ಟಾಭಿರಾಮ್, ವಿಹೆಚ್ಪಿ ಅಧ್ಯಕ್ಷರಾದ ವಾಸುದೇವ್, ಬಜರಂಗದಳದ ರಾಜೇಶ್ ಗೌಡ ಸೇರಿದಂತೆ ಹಿಂದೂಪರ ಸಂಘಟನೆಗಳ ಪ್ರಮುಖರು ಎಲ್ಲಾ ಪಕ್ಷದ ಪ್ರಮುಖರು ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.
ನಂತರ ಪಾರ್ಥೀವ ಶರೀರವನ್ನು ಅಲಂಕೃತ ವಾಹನದಲ್ಲಿ ಸುಮಾರು ಒಂದು ಘಂಟೆಯ ವೇಳೆಗೆ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯಲ್ಲಿ ಭಯೋತ್ಪದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ದಿಕ್ಕಾರ, ಮುರ್ದಾಬಾದ್ ಮುರ್ದಾಬಾದ್ ಪಾಕಿಸ್ತಾನ್ ಮುರ್ದಾಬಾದ್, ಅಮರ್ ರಹೇ.. ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂಬ ಘೋಷಣೆ ಮಂಜುನಾಥ್ ಅವರ ಮನೆಯ ಮುಂದೆ ಜಮಾವಣೆಗೊಂಡ ಸಾರ್ವಜನಿಕರು ಘೋಷಣೆ ಕೂಗಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ತುಂಗ ನದಿಯ ದಡದಲ್ಲಿರುವ ರೋಟರಿ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಗಣ್ಯರು, ಜನಪ್ರತಿನಿಧಿಗಳು, ಕುಟುಂಬಸ್ಥರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post