ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸುವರ್ಣ ಸಾಂಸ್ಕೃತಿಕ ಭವನವು ಸದಾ ನಾಟಕ ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಂದ ರಂಗ ಮತ್ತು ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದ್ದು, ಇದೀಗ ಭಿತ್ತಿಚಿತ್ರಗಳು ಮತ್ತು ಹಸೆ ಚಿತ್ತಾರಗಳಿಂದ ಲೇಪಿತವಾಗಿದ್ದು ಮಕ್ಕಳಾದಿಯಾಗಿ ಎಲ್ಲರನ್ನು ತನ್ನೆಡೆ ಆಕರ್ಷಿಸುತ್ತಿದೆ.
ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸ್ಮಾರ್ಟ್ ಸಿಟಿ ಮತ್ತು ಚಿತ್ರಕಲಾ ಪರಿಷತ್, ಬೆಂಗಳೂರು ಇವರ ಸಹಯೋಗದೊಂದಿಗೆ ಭಿತ್ತಿಚಿತ್ರಗಳ(ಮ್ಯುರಲ್)ಗ್ಯಾಲರಿ
ಒಟ್ಟು 40 ಕ್ಕೂ ಹೆಚ್ಚು ಭಿತಿಚಿತ್ರ ಕಲಾಕೃತಿಗಳನ್ನು ರಂಗಾಣದ ಆವರಣದಲ್ಲಿ ಅನಾವರಣಗೊಳಿಸಲಾಗಿದೆ. ಕನ್ನಡದ ಪ್ರಸಿಕದ್ದ ನಾಟಕಗಳಾದ ಚಾಣಕ್ಯ ಪ್ರಪಂಚ, ಸಾಹೇಬ್ರು ಬರುತ್ತಾರೆ, ಸಾಮ್ರಾಟ್ ಅಶೋಕ, ಇದಕ್ಕೆ ಕೊನೆ ಎಂದು? ಸೂತ್ರದ ಗೊಂಬೆಯಾಟದ ದೃಶ್ಯಾವಳಿಗಳು ಹಾಗೂ ಹಸೆ ಚಿತ್ತಾರ(ವರ್ಲಿ ಆರ್ಟ್) ಭಿತ್ತಿಚಿತ್ರಗಳು ಸೇರಿದಂತೆ ಇತರೆ ಅಮೂಲ್ಯ ಮತ್ತು ಆಕರ್ಷಕ ಕಲಾಕೃತಿಗಳನ್ನು ಪೇಪಿಸಿ ಅತ್ಯದ್ಭುತ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಸ್ಮಾರ್ಟ್ಸಿಟಿ ಮತ್ತು ಬೆಂಗಳೂರಿನ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಸುಮಾರು ರೂ.20 ಲಕ್ಷ ವೆಚ್ಚದಲ್ಲಿ 30 ಕ್ಕೂ ಅಧಿಕ ಕಲಾವಿಧರಿಂದ ರಚಿತವಾದ ಈ ಭಿತ್ತಿಚಿತ್ರಗಳನ್ನು ಸುವರ್ಣ ಸಾಂಸ್ಕøತಿಕ ಭವನದ ನೆಲ ಮತ್ತು ಮೊದಲನೇ ಮಹಡಿ ಗೋಡೆಗಳಿಗೆ ಲೇಪಿಸಲಾಗಿದೆ. ಬಹಳ ಅಪರೂಪವಾದ ಈ ಕಲಾಕೃತಿಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿ ನಿತ್ಯ ಅವಕಾಶ ಮಾಡಿಕೊಡಲಾಗಿದೆ.
-ಸಂದೇಶ್ ಜವಳಿ, ನಿರ್ದೇಶಕರು, ರಂಗಾಯಣ
ಭಿತ್ತಿಚಿತ್ರಗಳು ಗೋಡೆ ಅಥವಾ ಛಾವಣಿ ಮೇಲ್ಮೈಗಳ ಮೇಲೆ ನೇರವಾಗಿ ಬಿಡಿಸಿದ ಅಥವಾ ಲೇಪಿಸಿದ ಒಂದು ಬಗೆಯ ಕಲಾಕೃತಿ. ಭಿತ್ತಿಚಿತ್ರಕಲೆಯ ಒಂದು ವಿಶಿಷ್ಟ ಲಕ್ಷಣವೆಂದರೆ ನಿರ್ದಿಷ್ಟ ಸ್ಥಳದ ವಾಸ್ತುಶಾಸ್ತ್ರೀಯ ಘಟಕವನ್ನು ಚಿತ್ರದಲ್ಲಿ ಸಮರಸವಾಗಿ ಒಳಗೊಳ್ಳುತ್ತದೆ. ಕೆಲವು ಭಿತ್ತಿ ವರ್ಣಚಿತ್ರಗಳನ್ನು ಭಾರೀ ತಟ್ಟುಗಳ ಮೇಲೆ ಬಿಡಿಸಿ ನಂತರ ಗೋಡೆಗೆ ಲಗತ್ತಿಸಲಾಗುತ್ತದೆ. ಈ ತಂತ್ರವು 19 ನೇ ಶತಮಾನದ ಕೊನೆಯ ವರ್ಷಗಳಿಂದ ಸಾಮಾನ್ಯ ಬಳಕೆಯಲ್ಲಿದೆ.
ಕ್ರಿಸ್ತಪೂರ್ವ 30 ಸಾವಿರ ಇಸವಿಯಿಂದಲೂ ಭಿತ್ತಿಚಿತ್ರಗಳನ್ನು ಕಾಣಬಹುದಾಗಿದ್ದು, ಅತ್ಯಂತ ವಿಶಾಲ ಜಾಗ, ಸಮಯ ಮತ್ತು ಪರಿಣಿತಿ ಬೇಡುವ ಈ ಕಲೆ ಈಜಿಪ್ಟ್, ಪಾಂಪೇಯಿ, ಫ್ರಾನ್ಸ್ನಲ್ಲಿ ಹೆಚ್ಚಾಗಿ ಬಳಕೆಯಲ್ಲಿತ್ತು. ಪ್ರಸ್ತುತ ವಿಶ್ವದಾದ್ಯಂತ ಈ ಕಲೆಯನ್ನು ಇಷ್ಟಪಡಲಾಗುತ್ತಿದೆ. ವಿವಿಧ ಸಾಹಿತ್ಯ, ಕಲೆ, ಸಂಸ್ಕøತಿಯನ್ನು ಸಮಕಾಲೀನ ಜನತೆಗೆ ತಲುಪಿಸುವ ಮಹತ್ವದ ಕಾರ್ಯ ಮಾಡುತ್ತಿದೆ.
ಭಿತ್ತಿಚಿತ್ರಗಳಲ್ಲಿ ಅನೇಕ ಶೈಲಿಗಳಿವೆ. ಇತ್ತೀಚೆಗೆ ಪಿಓಪಿ ಜೇಡಿಮಣ್ಣು ಅಥವಾ ನೀರಿನಲ್ಲಿ ಕರಗುವ ಬಣ್ಣ ಮತ್ತು ಸುಣ್ಣದ ತಿಳಿಯನ್ನು, ತೈಲಚಿತ್ರವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಭಿತ್ತಿಚಿತ್ರಗಳು ದೊಡ್ಡದಾಗಿರುವುದರಿಂದ ಹೆಚ್ಚಿನ ಸಮಯ ಮತ್ತು ಪರಿಣಿತಿ ಅವಶ್ಯಕವಾಗಿದ್ದು ವಿಭಿನ್ನ ಚಿತ್ರಕಾರರು ತಮ್ಮ ಆಯ್ದ ಮಾಧ್ಯಮ ಹಾಗೂ ಅನ್ವಯದಲ್ಲಿ ನಿಪುಣರಾಗುವ ಸಾಧ್ಯತೆಯಿರುತ್ತದೆ. ಇವುಗಳಲ್ಲಿ ಕುಂಚ, ಉರುಳೆ ಅಥವಾ ಗಾಳಿ ಕುಂಚ/ವಾಯುದ್ರವಗಳಿಂದ ಲೇಪಿಸಿದ ತೈಲವರ್ಣಗಳು ಇಮಲ್ಶನ್ ಅಥವಾ ಅಕ್ರಿಲಿಕ್ ವರ್ಣಗಳು ಸೇರಿವೆ. ಇಂತಹ ಸುಮಾರು 40 ಭಿತ್ತಿಚಿತ್ರಗಳನ್ನು ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆವರಣದಲ್ಲಿ ಕಾಣಬಹುದು.
ಪ್ರವೇಶ ಅಂಕಣದ ಎರಡು ಸ್ತಂಭಗಳ ಮೇಲೆ ಹಸೆ ಚಿತ್ತಾರ(ವರ್ಲಿ ಆರ್ಟ್) ಮತ್ತು ಮೊದಲನೇ ಅಂಕಣಕ್ಕೆ ಪ್ರವೇಶಿಸುವ ಎರಡು ಬದಿಯ ಸ್ಟೇರ್ ಕೇಸ್ ಗೋಡೆಗಳ ಮೇಲೆ ಸುಂದರವಾದ ಹಸೆ ಚಿತ್ತಾರದ ಭಿತ್ತಿಚಿತ್ರಗಳು ಕಣ್ಮನ ಸೆಳೆಯುತ್ತವೆ. ಹಸೆ ಒಂದು ಬುಡಕಟ್ಟು ಕಲೆಯಾಗಿದ್ದು ಕೆಂಪು ಮಣ್ಣಿನ ಕುಟೀರದ ಗೋಡೆಯ ಮೇಲೆ ಜಾನಪದ ಜನ ಜೀವನದ ಚಿತ್ರಗಳನ್ನು ಕಾಣಬಹುದು.
ಭವನದ ಕಟ್ಟಡ ಮುಂಭಾಗದಲ್ಲಿನ ಸರಸ್ವತಿ, ವೀಣೆಯ ಭಿತ್ತಿಚಿತ್ರಿಗಳು ಹಾಗೂ ವಿವಿಧ ರೀತಿಯ ವಿವಿಧ ಆಕಾರ ಮತ್ತು ಬಣ್ಣಗಳ ಮುಖವಾಡಗಳು ಕಲಾವಿದರ ಕೈಯಲ್ಲಿ ರೂಪ ತಾಳಿದ್ದು ಮುಖ್ಯ ಆಕರ್ಷಣೆಗಳಾಗಿವೆ. ಒಟ್ಟಾರೆ ಕಲೆಯನ್ನೇ ಬಿಂಬಿಸುವಂತಿರುವ, ಕಲಾ ಮತ್ತು ಜಾನಪದ ಲೋಕಕ್ಕೆ ಕರೆದೊಯ್ಯುವ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನಕ್ಕೆ ನೀವು ಒಮ್ಮೆ ಭೇಟಿ ನೀಡಿ.
ಭಾಗ್ಯ ಎಂ.ಟಿ., ವಾರ್ತಾ ಸಹಾಯಕರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post