ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಸಿಲಿನ ತಾಪಕ್ಕೆ ತಂಪು ನೀಡುವ ಜ್ಯೂಸ್ ಹೆಸರಿನಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ (Shivamogga) ತಿಲಕನಗರದಲ್ಲಿರುವ ತನು ಜ್ಯೂಸ್ ಸೆಂಟರ್ (Juice Centre) ಮೇಲೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಜ್ಯೂಸ್ ಸೆಂಟರ್ಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಹಲವು ಹಣ್ಣುಗಳು ಕೊಳೆತ ಹಾಗೂ ಹಾಳಾದ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರೇಪ್ಸ್ನಿಂದ ದಾಳಿಂಬೆಯವರೆಗೆ ಹಣ್ಣುಗಳ ಸ್ಥಿತಿ ಕಳಪೆ
ಪರಿಶೀಲನೆ ವೇಳೆ ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳ ಮೇಲೆ ಫಂಗಸ್ ಹಾಗೂ ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಹಣ್ಣುಗಳು ಸ್ಪಷ್ಟವಾಗಿ ಕೊಳೆತ ಸ್ಥಿತಿಯಲ್ಲಿದ್ದರೆ, ಇನ್ನೂ ಕೆಲವು ಹಣ್ಣುಗಳನ್ನು ಕಾಲದಿಂದ ಸಂಗ್ರಹಿಸಿಟ್ಟಿರುವಂತೆ ಕಂಡುಬಂದಿವೆ ಎನ್ನಲಾಗಿದೆ.
ಫ್ರೀಜರ್ನಲ್ಲಿಯೂ ಕಳಪೆ ಸ್ಥಿತಿಯಲ್ಲಿದ್ದ ಹಣ್ಣುಗಳು ಪತ್ತೆಯಾಗಿದ್ದು, ಇವುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿತ್ತೆಂಬ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ತಾಜಾ ಹಣ್ಣುಗಳಿಂದ ಜ್ಯೂಸ್ ತಯಾರಿಸಲಾಗುತ್ತದೆ ಎಂಬ ನಂಬಿಕೆಯಿಂದ ಗ್ರಾಹಕರು ಸೇವಿಸುತ್ತಾರೆ. ಆದರೆ ಹಣ್ಣುಗಳ ಗುಣಮಟ್ಟ ಕಳಪೆಯಾಗಿದ್ದರೆ ಅದು ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೆ
ಪತ್ತೆಯಾದ ಹಣ್ಣುಗಳನ್ನು ಎಷ್ಟು ದಿನಗಳಿಂದ ಸಂಗ್ರಹಿಸಲಾಗಿತ್ತು ಎಂಬುದನ್ನು ಕೇವಲ ಮೇಲ್ನೋಟದ ಪರಿಶೀಲನೆಯ ಆಧಾರದ ಮೇಲೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ತಿಳಿಸಿದ್ದಾರೆ.
ಹಣ್ಣುಗಳ ಗುಣಮಟ್ಟ ಹಾಗೂ ಅವುಗಳ ಸ್ಥಿತಿಯ ಕುರಿತು ಹೆಚ್ಚಿನ ಸ್ಪಷ್ಟತೆ ಪಡೆಯಲು ಅಗತ್ಯವಿರುವ ಮಾದರಿಗಳನ್ನು ವಿಶ್ಲೇಷಣೆಗೆ ಕಳುಹಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆದರೆ, ಹಲವು ಹಣ್ಣುಗಳು ಹಲವು ಅವಧಿಯಿಂದ ಸಂಗ್ರಹಿಸಿಟ್ಟಿರುವಂತೆ ಕಂಡುಬಂದಿರುವುದು ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Shivamogga : ರೋಗಿಗಳು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಆತಂಕ
ತಿಲಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಮಾತ್ರವಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರೂ ಜ್ಯೂಸ್ ಖರೀದಿಸುವ ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು ಕಳಪೆ ಗುಣಮಟ್ಟದ ಹಣ್ಣುಗಳಿಂದ ತಯಾರಿಸಲಾದ ಜ್ಯೂಸ್ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
“ಮೊದಲೇ ರೋಗಿಗಳು ದುಸ್ಥಿತಿಯಲ್ಲಿರುತ್ತಾರೆ. ಅಂತಹವರಿಗೆ ಈ ರೀತಿಯ ಜ್ಯೂಸ್ ನೀಡಿದರೆ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ” ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್ಚರಿಕೆ ನೀಡಿದ್ದಾರೆ.
ದೂರು ಬಂದ ತಕ್ಷಣ ದಿಢೀರ್ ಕಾರ್ಯಾಚರಣೆ
ಸರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಜ್ಯೂಸ್ ಸೆಂಟರ್ಗೆ ತೆರಳಿ ಪರಿಶೀಲನೆ ನಡೆಸಿರುವುದು ಗಮನರ್ಹವಾಗಿದೆ.
ಅಧಿಕಾರಿಗಳ ತಂಡವು ಜ್ಯೂಸ್ ಸೆಂಟರ್ನ ಒಳಭಾಗ, ಹಣ್ಣುಗಳ ಸಂಗ್ರಹಣೆ, ಫ್ರೀಜರ್ ಹಾಗೂ ಆಹಾರ ತಯಾರಿಕಾ ಪರಿಸ್ಥಿತಿಯನ್ನು ಪರಿಶೀಲಿಸಿತು. ಪರಿಶೀಲನೆಯ ವೇಳೆ ಕಂಡುಬಂದ ಅಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದೆ.
ಲೈಸೆನ್ಸ್ ರದ್ದುಪಡಿಸುವ ಪ್ರಕ್ರಿಯೆ; ಜ್ಯೂಸ್ ಸೆಂಟರ್ ಬಂದ್
ಪರಿಶೀಲನೆಯ ವೇಳೆ ಕಂಡುಬಂದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತನು ಜ್ಯೂಸ್ ಸೆಂಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜ್ಯೂಸ್ ಸೆಂಟರ್ನ ಲೈಸೆನ್ಸ್ ರದ್ದುಪಡಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಮಳಿಗೆಯನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕ್ರಮ ನೀಡಿದೆ.
ಮತ್ತೊಂದು ಔಟ್ಲೆಟ್ಗೂ ಪರಿಶೀಲನೆ
ತನು ಜ್ಯೂಸ್ ಸೆಂಟರ್ಗೆ ಮತ್ತೊಂದು ಔಟ್ಲೆಟ್ ಇರುವ ಕುರಿತು ಪ್ರಶ್ನಿಸಿದಾಗ, ಅಲ್ಲಿಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ತಿಳಿಸಿದ್ದಾರೆ.
ಇದಲ್ಲದೆ, ಸರ್ವಜನಿಕರಿಂದ ದೂರುಗಳು ಬಂದಿರುವ ಇತರೆ ಆಹಾರ ಮಳಿಗೆಗಳ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತಿಲಕನಗರ ಸೇರಿದಂತೆ ಸುಮಾರು 11ರಿಂದ 12 ಪ್ರದೇಶಗಳಲ್ಲಿ ಆಹಾರ ಮಳಿಗೆಗಳ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Also read>> ಸಂಸ್ಕೃತ ಕಲಿಯಿರಿ, ಸಂಸ್ಕೃತಿ ಉಳಿಸಿ: ಸಾಗರದಲ್ಲಿ 10 ದಿನಗಳ ‘ಅಂಕುರ’ ಶಿಬಿರಕ್ಕೆ ತೆರೆ
ಆಹಾರ ವ್ಯಾಪಾರಿಗಳಿಗೆ ಅಧಿಕಾರಿಗಳ ಎಚ್ಚರಿಕೆ
ಜ್ಯೂಸ್ ಸೆಂಟರ್ಗಳು, ಹೋಟೆಲ್ಗಳು, ಬೇಕರಿಗಳು ಸೇರಿದಂತೆ ಆಹಾರ ಪದರ್ಥಗಳನ್ನು ಮಾರಾಟ ಮಾಡುವವರು ತಾಜಾ ಹಾಗೂ ಗುಣಮಟ್ಟದ ಆಹಾರ ಪದರ್ಥಗಳನ್ನೇ ಬಳಸಬೇಕು. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಡಿಮೆ ಬೆಲೆಗೆ ದೊರೆಯುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ಆಹಾರದ ಗುಣಮಟ್ಟದ ಬಗ್ಗೆ ನರ್ಲಕ್ಷ್ಯ ವಹಿಸಬಾರದು. ಅದೇ ರೀತಿ ವ್ಯಾಪಾರಿಗಳು ಕೂಡ ಲಾಭಕ್ಕಿಂತ ಗ್ರಾಹಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವಿಶೇಷವಾಗಿ ವಿದ್ಯಾರ್ಥಿಗಳು, ಮಕ್ಕಳು ಹಾಗೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರದೇಶಗಳಲ್ಲಿರುವ ಆಹಾರ ಮಳಿಗೆಗಳು ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.
ಡಾ. ಮೈತ್ರಿ ತಂಡದ ಕಾರ್ಯಾಚರಣೆಗೆ ಮೆಚ್ಚುಗೆ
ಸಾರ್ವಜನಿಕರಿಂದ ಬಂದ ದೂರನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳಕ್ಕೆ ತೆರಳಿ ನೇರವಾಗಿ ಪರಿಶೀಲನೆ ನಡೆಸಿ, ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಕ್ರಮಕ್ಕೆ ಮುಂದಾದ ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿಯ ಕರ್ಯಾಚರಣೆಗೆ ಸರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಆಹಾರದ ಗುಣಮಟ್ಟದ ವಿಚಾರದಲ್ಲಿ ಇದೇ ರೀತಿಯ ಕಠಿಣ ಕ್ರಮ ಮುಂದುವರಿಯಬೇಕು. ಜ್ಯೂಸ್ ಸೆಂಟರ್ಗಳು, ಹೋಟೆಲ್ಗಳು, ಬೇಕರಿಗಳು ಹಾಗೂ ಇತರೆ ಆಹಾರ ಮಳಿಗೆಗಳಲ್ಲಿ ನಿಯಮಿತ ತಪಾಸಣೆ ನಡೆಸಬೇಕು ಎಂಬ ಒತ್ತಾಯವೂ ಸಾರ್ವಜನಿಕರಿಂದ ಕೇಳಿಬಂದಿದೆ.
ಕೊಳೆತ ಹಾಗೂ ಕಳಪೆ ಗುಣಮಟ್ಟದ ಹಣ್ಣುಗಳನ್ನು ಬಳಸಿಕೊಂಡು ಜ್ಯೂಸ್ ತಯಾರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನು ಜ್ಯೂಸ್ ಸೆಂಟರ್ ವಿರುದ್ಧ ಕೈಗೊಂಡಿರುವ ಈ ಕ್ರಮ, ಸರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







